ಇಬ್ಬರು ಮಹಿಳೆಯರ ಪ್ರವೇಶಕ್ಕೆ ಭಕ್ತರ ತಡೆ
Team Udayavani, Jan 17, 2019, 12:30 AM IST
ತಿರುವನಂತಪುರ: ಶಬರಿಮಲೆಯಲ್ಲಿ ಮಕರ ಜ್ಯೋತಿ ದರ್ಶನ ಮುಕ್ತಾಯವಾದರೂ, ಬುಧವಾರ ಇಬ್ಬರು ಮಹಿಳೆಯರು ದೇಗುಲ ಪ್ರವೇಶ ಯತ್ನ ಮಾಡಿದ್ದಾರೆ. ಅವರನ್ನು ಭಕ್ತರು ತಡೆದಿದ್ದಾರೆ. ಕಣ್ಣೂರು ಮೂಲದ ರೇಷ್ಮಾ ನಿಶಾಂತ್ ಮತ್ತು ಶನಿಲಾ ಬುಧವಾರ ಬೆಳಗ್ಗೆ ಪೊಲೀಸರ ಭದ್ರತೆಯಲ್ಲಿ ನೀಲಿಮಲಕ್ಕೆ ತಲುಪಿದ್ದರು. ನವೋತನ ಕೇರಳಂ ಶಬರಿಮಲಯಿಲೆಕು ಎಂಬ ಫೇಸ್ಬುಕ್ ಗ್ರೂಪ್ನ ಐವರು ಪುರುಷರೂ ಇವರೊಂದಿಗಿದ್ದರು. ಆದರೆ ನೀಲಿಮಲಕ್ಕೆ ತಲುಪುತ್ತಿದ್ದಂತೆ ಭಕ್ತರಿಗೆ ಮಹಿಳೆಯರು ಎಂದು ತಿಳಿದುಬಂದು ಪ್ರತಿಭಟನೆ ನಡೆಸಿದರು. ಪ್ರತಿಭಟನೆ ನಡೆಸಿದವರನ್ನು ತಕ್ಷಣ ಪೊಲೀಸರು ಬಂಧಿಸಿದ್ದಾರೆ. ಪ್ರತಿಭಟನಾಕಾರರ ಪೈಕಿ ಕರ್ನಾಟಕ, ಆಂಧ್ರಪ್ರದೇಶ ಹಾಗೂ ತಮಿಳುನಾಡಿನ ಅಯ್ಯಪ್ಪ ಭಕ್ತರೂ ಇದ್ದರು ಎಂದು ಹೇಳಲಾಗಿದೆ.
ಆದರೆ ಸ್ವಲ್ಪ ಮುಂದೆ ಮಹಿಳೆಯರು ತೆರಳುತ್ತಿದ್ದಂತೆಯೇ ಇನ್ನಷ್ಟು ಭಕ್ತರು ಪ್ರತಿಭಟನೆಗೆ ತೊಡಗಿದರು. ಇದರಿಂದಾಗಿ ಮುಂದೆ ಸಾಗಲು ಸಾಧ್ಯವಾಗದಂತಾ ಯಿತು. ನಾವು ಅಯ್ಯಪ್ಪನ ಭಕ್ತರು. ನಮಗೆ ದೇಗುಲ ಪ್ರವೇಶಕ್ಕೆ ಅವಕಾಶ ನೀಡಬೇಕೆಂದು ಕೇಳಿಕೊಂಡರಾದರೂ, ಗಲಭೆ ಉಂಟಾಗುವ ಭೀತಿಯಿಂದ ಮಹಿಳೆಯರನ್ನು ಪೊಲೀಸರು ವಾಪಸು ಕರೆದುಕೊಂಡು ಬಂದಿದ್ದಾರೆ. ಒಂದು ವೇಳೆ ಎಲ್ಲ ಪ್ರತಿಭಟನಾಕಾರರ ಮೇಲೆ ಕ್ರಮ ಕೈಗೊಂಡರೆ ಕಾನೂನು ಸುವ್ಯವಸ್ಥೆ ಸಮಸ್ಯೆ ಉಂಟಾಗಬಹುದು ಎಂಬ ಕಾರಣಕ್ಕೆ ಪೊಲೀಸರು ಮಹಿಳೆಯರನ್ನು ವಾಪಸ್ ಪಂಪ ಪೊಲೀಸ್ ಸ್ಟೇಷನ್ಗೆ ಕರೆದುಕೊಂಡು ಬಂದಿದ್ದಾರೆ. ಪೊಲೀಸರಿಗೆ ನಿಜವಾಗಿ ನಮ್ಮನ್ನು ಕರೆದುಕೊಂಡು ಹೋಗುವ ಮನಸಿದ್ದರೆ, ಪ್ರತಿಭಟನಾಕಾ ರರನ್ನು ತಡೆದು ತೆರಳುತ್ತಿದ್ದರು ಎಂದು ರೇಷ್ಮಾ ಹಾಗೂ ಶನಿಲಾ ಹೇಳಿದ್ದಾರೆ.
ಸಮಿತಿ ಆಕ್ಷೇಪ: ಇದೇ ವೇಳೆ ಇಬ್ಬರು ಮಹಿಳಾ ಭಕ್ತರ ಪ್ರವೇಶದ ವೇಳೆ ಅವರನ್ನು ಅತಿ ಗಣ್ಯರ ಆದ್ಯತೆ ನೀಡಲಾಗಿತ್ತು. ಕೇರಳ ಪೊಲೀಸರ ಈ ಕ್ರಮ ಪ್ರಶ್ನಾರ್ಹ ಎಂದು ಕೇರಳ ಹೈಕೋರ್ಟ್ ಸಮಿತಿಯೊಂದು ಪೊಲೀಸರ ಕ್ರಮವನ್ನು ಟೀಕಿಸಿದೆ.