ಎನ್ಎಚ್ 66 ಯೋಜನೆ ಹೆಚ್ಚುವರಿ ಕಾಮಗಾರಿಗೆ ಮನವಿ
Team Udayavani, Feb 5, 2019, 12:30 AM IST
ನವದೆಹಲಿ: ಗೋವಾದಿಂದ ಕುಂದಾಪುರದವರೆಗೆ ರಾಷ್ಟ್ರೀಯ ಹೆದ್ದಾರಿ 66 ರ ಅಗಲೀಕರಣ ಕಾಮಗಾರಿಯಲ್ಲಿ ಹೆಚ್ಚುವರಿ ಕಾಮಗಾರಿಗೆ ಜನರಿಂದ ಬೇಡಿಕೆ ವ್ಯಕ್ತವಾಗಿದ್ದು, ಇದನ್ನು ಪೂರೈಸುವಂತೆ ಕಂದಾಯ ಸಚಿವ ಆರ್.ವಿ.ದೇಶಪಾಂಡೆ ಆಗ್ರಹಿಸಿದ್ದಾರೆ.
ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿಯವರನ್ನು ಭೇಟಿ ಮಾಡಿದ ದೇಶಪಾಂಡೆ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಈ ಯೋಜನೆಯನ್ನು ಜಾರಿಗೊಳಿಸುತ್ತಿದ್ದು, ಜನರು ಕೆಲವು ಹೆಚ್ಚುವರಿ ಕಾಮಗಾರಿಗೆ ಆಗ್ರಹಿಸಿದ್ದಾರೆ. ಸುರಕ್ಷತೆ ದೃಷ್ಟಿಯಿಂದ ಇದನ್ನು ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ. ಕುಮಟಾ ತಾಲೂಕು ದೀವಗಿ ಗ್ರಾಮದಲ್ಲಿ ಸರ್ವೀಸ್ ರಸ್ತೆ ಮತ್ತು ಪ್ರಾಕಾರ, ಧಾರೇಶ್ವರ ಗ್ರಾಮದಲ್ಲಿ ಬಸ್ ತಂಗುದಾಣ, ಮುರ್ಡೇ ಶ್ವರ ಜಂಕ್ಷನ್ ಬಳಿ ಅಂಡರ್ಪಾಸ್, ಶಮ್ಶುದ್ದೀನ್ ಸರ್ಕಲ್ನಲ್ಲಿ ಫ್ಲೈಓವರ್ ಉದ್ದ ಕಡಿಮೆ ಮಾಡುವುದು ಸೇರಿದಂತೆ ಹಲವು ಬೇಡಿಕೆಗಳನ್ನು ಸಚಿವ ಗಡ್ಕರಿಗೆ ದೇಶಪಾಂಡೆ ತಲುಪಿಸಿದ್ದಾರೆ. ಇದೇ ವೇಳೆ ವಿಮಾನಯಾನ ಸಚಿವ ಸುರೇಶ್ ಪ್ರಭು ಅವರನ್ನು ಭೇಟಿ ಮಾಡಿದ ದೇಶಪಾಂಡೆ, ರಾಜ್ಯದಲ್ಲಿ ಉಡಾನ್ ಸ್ಕೀಮ್ನ ಜಾರಿ ಬಗ್ಗೆ ಚರ್ಚಿಸಿದ್ದಾರೆ.