ವಿಮಾನದಲ್ಲಿಯೇ ಇನ್ನು ಅರೆ ಸೇನಾ ಸಿಬಂದಿ ಪ್ರಯಾಣ
Team Udayavani, Feb 22, 2019, 12:30 AM IST
ಹೊಸದಿಲ್ಲಿ: ಪುಲ್ವಾಮಾದಲ್ಲಿ ಫೆ.14ರ ಘಟನೆ ಬಳಿಕ ಜಮ್ಮು ಮತ್ತು ಕಾಶ್ಮೀರದಲ್ಲಿ ಕರ್ತವ್ಯ ನಿರ್ವಹಿಸುವ ಅರೆಸೇನಾ ಪಡೆಗಳ ಸಿಬಂದಿ ಉಚಿತವಾಗಿ ವಿಮಾನದಲ್ಲಿ ಪ್ರಯಾಣ ಮಾಡಬಹುದಾಗಿದೆ. ಅದರ ವೆಚ್ಚವನ್ನು ಕೇಂದ್ರ ಸರಕಾರವೇ ಭರಿಸಲಿದೆ. ಪುಲ್ವಾಮಾ ಘಟನೆಯ ಬಳಿಕ ಕಣಿವೆ ರಾಜ್ಯಕ್ಕೆ ರಜೆ ಮುಗಿಸಿ ಕರ್ತವ್ಯಕ್ಕಾಗಿ ತೆರಳುವ ಮತ್ತು ಕರ್ತವ್ಯದಿಂದ ರಜೆಯಲ್ಲಿ ಹೋಗುವ ಎಲ್ಲಾ ಅರೆಸೇನಾ ಸಿಬ್ಬಂದಿಗೆ ಈ ನಿಯಮ ಅನ್ವಯವಾಗಲಿದೆ ಎಂದು ಕೇಂದ್ರ ಗೃಹ ಸಚಿವಾಲಯ ಗುರುವಾರ ಹೊಸದಿಲ್ಲಿಯಲ್ಲಿ ಹೊರಡಿಸಿದ ಆದೇಶದಲ್ಲಿ ತಿಳಿಸಿದೆ. ದಿಲ್ಲಿಯಿಂದ ಶ್ರೀನಗರ ಮತ್ತು ಶ್ರೀನಗರಿಂದ ಹೊಸದಿಲ್ಲಿ ನಡುವಿನ ಪ್ರಯಾಣಕ್ಕೆ ಮಾತ್ರ ಈ ನಿಯಮ ಅನ್ವಯವಾಗಲಿದೆ.
ಸಿಆರ್ಪಿಎಫ್, ಬಿಎಸ್ಎಫ್, ಇಂಡೋ-ಟಿಬೆಟನ್ ಬಾರ್ಡರ್ ಫೋರ್ಸ್ (ಐಟಿಬಿಪಿ), ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆ (ಸಿಐಎಸ್ಎಫ್), ಸಶಸ್ತ್ರ ಸೀಮಾ ಬಲ (ಎಸ್ಎಸ್ಬಿ), ನ್ಯಾಷನಲ್ ಸೆಕ್ಯುರಿಟಿ ಗಾರ್ಡ್ಸ್ (ಎನ್ಎಸ್ಜಿ)ಯ ವಿವಿಧ ಹಂತದ 7.8 ಲಕ್ಷ ಸಿಬಂದಿ, ಅಧಿಕಾರಿಗಳು ಜಮ್ಮು ಮತ್ತು ಕಾಶ್ಮೀರದಲ್ಲಿ ಕರ್ತವ್ಯ ನಿರತರಾಗಿದ್ದಾರೆ. ತಕ್ಷಣದಿಂದ ಹೊಸ ಸೌಲಭ್ಯ ಸಿಗಲಿದೆ.
ಸಿಆರ್ಪಿಎಫ್ನ 40 ಮಂದಿ ಯೋಧರು ಜೈಶ್-ಎ-ಮೊಹಮ್ಮದ್ ಉಗ್ರ ಸಂಘಟನೆಯ ಆತ್ಮಾಹುತಿ ಬಾಂಬರ್ಗೆ ಬಲಿಯಾದ ಬಳಿಕ ಯೋಧರಿಗೇಕೆ ವಿಮಾನ ಯಾನ ಸೌಲಭ್ಯವಿಲ್ಲ ಎಂಬ ಪ್ರಶ್ನೆ ಮೂಡಿದ್ದ ಹಿನ್ನೆಲೆಯಲ್ಲಿ ಕೇಂದ್ರ ಕ್ಷಿಪ್ರವಾಗಿ ಈ ಕ್ರಮ ಕೈಗೊಂಡಿದೆ. ಕಾನ್ಸ್ಟೆàಬಲ್, ಹೆಡ್-ಕಾನ್ಸ್ಟೆಬಲ್, ಸಹಾಯಕ ಸಬ್-ಇನ್ಸೆ$³ಕ್ಟರ್ ರ್ಯಾಂಕ್ ಸೇರಿದಂತೆ ಎಲ್ಲರೂ ವಿಮಾನ ಯಾನ ಟಿಕೆಟ್ ಬುಕ್ ಮಾಡಿ, ಅದನ್ನು ತಮ್ಮ ಸೇನಾ ಪಡೆಯಿಂದ ಕ್ಲೇಮಿಗೆ ಅವಕಾಶವಿದೆ.
ಟಾಸ್ಕ್ ಫೋರ್ಸ್ಗೆ ಮುಖ್ಯಸ್ಥರಾಗಿ ಹೂಡಾ
ಸೇನೆಯ ನಿವೃತ್ತ ಕಮಾಂಡರ್ ಮತ್ತು 2016ರಲ್ಲಿ ನಡೆದಿದ್ದ ಸರ್ಜಿಕಲ್ ಸ್ಟ್ರೈಕ್ನ ರೂವಾರಿ ಡಿ.ಎಸ್. ಹೂಡಾ, ಸದ್ಯದಲ್ಲೇ ಕಾಂಗ್ರೆಸ್ ರಚಿಸಲಿರುವ ರಾಷ್ಟ್ರೀಯ ಸುರಕ್ಷಾ ಟಾಸ್ಕ್ ಫೋರ್ಸ್ನ ನೇತೃತ್ವ ವಹಿಸಲಿದ್ದಾರೆ. “ಭಾರತದ ಸುರಕ್ಷತೆಗಾಗಿ ಕೈಗೊಳ್ಳಬಹುದಾದ ಭದ್ರತಾ ವ್ಯವಸ್ಥೆಗಳನ್ನು ಪಟ್ಟಿ ಮಾಡಲು ಈ ಟಾಸ್ಕ್ ಫೋರ್ಸ್ ರಚಿಸಲಾಗುತ್ತಿದೆ. ಗುರುವಾರ, ಹೂಡಾ ಅವರನ್ನು ಭೇಟಿ ಮಾಡಿದ ರಾಹುಲ್ ಗಾಂಧಿ, ಟಾಸ್ಕ್ ಫೋರ್ಸ್ನ ನಡಾವಳಿ ಗಳನ್ನು ವಿವರಿಸಿದ್ದಾರೆ. ಟಾಸ್ಕ್ ಫೋರ್ಸ್ ರೂಪುಗೊಂಡ ನಂತರ ಹಲವಾರು ತಜ್ಞರನ್ನು ಭೇಟಿ ಮಾಡಿ ಮಾಹಿತಿ ಸಂಗ್ರಹಿಸಲಿರುವ ಹೂಡಾ ನೇತೃತ್ವದ ತಂಡ, ರಾಷ್ಟ್ರೀಯ ಸುರಕ್ಷತೆಯ ಬಗ್ಗೆ ವರದಿ ಸಿದ್ಧಪಡಿಸಲಿದೆ. ಹೂಡಾ ಅವರ ಅಗಾಧ ಅನುಭವ ತಂಡದ ಕೆಲಸಕ್ಕೆ ಅನುಕೂಲ ಕಲ್ಪಿಸಲಿದೆ ಎಂದು ಕಾಂಗ್ರೆಸ್ನ ವಕ್ತಾರ ಪ್ರಿಯಾಂಕಾ ಚತುರ್ವೇದಿ ತಿಳಿಸಿದ್ದಾರೆ.
ಕೇಂದ್ರ ಸರಕಾರದಿಂದ ಹೊಸ ಕೊಡುಗೆ
ತಕ್ಷಣದಿಂದಲೇ ಹೊಸ ನಿಯಮ ಅನ್ವಯ