ಮದುವೆಯಾಗಲು ನಿರಾಕರಿಸಿದ್ದಕ್ಕೆ ತರಗತಿಯೊಳಗೆ ಶಿಕ್ಷಕಿಯನ್ನು ಕೊಂದ!
Team Udayavani, Feb 22, 2019, 1:02 PM IST
ಚೆನ್ನೈ: ಮದುವೆಯಾಗಲು ನಿರಾಕರಿಸಿದ್ದಕ್ಕೆ ಆಕ್ರೋಶಗೊಂಡ ಯುವಕನೊಬ್ಬ ಕ್ಲಾಸ್ ರೂಂನಲ್ಲಿಯೇ 23ರ ಹರೆಯದ ಶಿಕ್ಷಕಿಯನ್ನು ಹತ್ಯೆಗೈದಿರುವ ಘಟನೆ ತಮಿಳುನಾಡಿನ ಕಡಲೂರು ಜಿಲ್ಲೆಯಲ್ಲಿ ನಡೆದಿದೆ.
ಚೆನ್ನೈನಿಂದ ಸುಮಾರು 200 ಕಿಲೋ ಮೀಟರ್ ದೂರದಲ್ಲಿರುವ ಕಡಲೂರಿನ ಗಾಯತ್ರಿ ಮೆಟ್ರಿಕ್ಯೂಲೇಷನ್ ಶಾಲೆಯ 5ನೇ ತರಗತಿಯಲ್ಲಿ ಎಸ್.ರಮ್ಯಾ(23) ವಿದ್ಯಾರ್ಥಿಗಳಿಗೆ ಗಣಿತ ಪಾಠ ಕಲಿಸುತ್ತಿದ್ದರು.
ಗಾಯತ್ರಿ ಮನೆ ಶಾಲೆಯ ಸಮೀಪವೇ ಇರುವುದರಿಂದ ಆಕೆ ಶಾಲೆಗೆ ಬೇಗನೆ ಬಂದಿದ್ದರು. ಈ ಸಮಯದಲ್ಲಿ ಬೇರೆ ಶಿಕ್ಷಕರು, ಮಕ್ಕಳು ಬಂದಿರಲಿಲ್ಲವಾಗಿತ್ತು ಆಗ ಸಂದರ್ಭದಲ್ಲಿ ರಾಜಶೇಖರ್ ಎಂಬಾತ ದಿಢೀರನೆ ಒಳನುಗ್ಗಿ ಚೂರಿಯಿಂದ ಇರಿದು ಹತ್ಯೆಗೈದಿರುವುದಾಗಿ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಟೀಚರ್ ಆಗಿ ಕಾರ್ಯನಿರ್ವಹಿಸುತ್ತಿರುವ ರಮ್ಯಾಳ ಪರಿಚಯ ರಾಜಶೇಖರನಿಗೆ ಕಾಲೇಜು ದಿನಗಳಲ್ಲಿಯೇ ಇದ್ದಿದ್ದು, ಕಳೆದ ಆರು ತಿಂಗಳ ಹಿಂದೆ ಮಗಳು ರಮ್ಯಾಳನ್ನು ತನಗೆ ಮದುವೆ ಮಾಡಿ ಕೊಡಿ ಎಂದು ಆಕೆಯ ಪೋಷಕರಲ್ಲಿ ಕೇಳಿದ್ದ. ಆದರೆ ಪೋಷಕರು ಆತನ ಬೇಡಿಕೆಯನ್ನು ತಿರಸ್ಕರಿಸಿದ್ದರು. ಈ ಅಸಮಾಧಾನದ ಹಿನ್ನೆಲೆಯಲ್ಲಿ ಆತ ಶಿಕ್ಷಕಿಯನ್ನು ಕೊಂದಿರುವುದಾಗಿ ಹಿರಿಯ ಪೊಲೀಸ್ ಅಧಿಕಾರಿಗಳು ವಿವರಿಸಿದ್ದಾರೆ.
ಆರೋಪಿ ರಾಜಶೇಖರ್ ತಾನು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ತನ್ನ ತಂಗಿಗೆ ಮೊಬೈಲ್ ನಿಂದ ಸಂದೇಶ ಕಳುಹಿಸಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆತನಿಗಾಗಿ ಶೋಧ ಕಾರ್ಯ ನಡೆಸುತ್ತಿದ್ದಾರೆ ಎಂದು ತಿಳಿಸಿದ್ದಾರೆ.