ಉತ್ತರಪ್ರದೇಶ; ಕಾರ್ಪೆಟ್ ಕಾರ್ಖಾನೆಯಲ್ಲಿ ಭಾರೀ ಸ್ಫೋಟ, 10 ಮಂದಿ ಬಲಿ
Team Udayavani, Feb 23, 2019, 11:13 AM IST
ಅಹಮದಾಬಾದ್: ಉತ್ತರಪ್ರದೇಶದ ಭಾದೋಹಿ ಜಿಲ್ಲೆಯಲ್ಲಿ ಶನಿವಾರ ಕಾರ್ಪೆಟ್ ತಯಾರಿಸುವ ಕಾರ್ಖಾನೆಯಲ್ಲಿ ಸಂಭವಿಸಿದ ಸ್ಫೋಟದಲ್ಲಿ 10 ಮಂದಿ ಸಾವನ್ನಪ್ಪಿದ್ದು, ಆರು ಜನರು ಗಾಯಗೊಂಡಿರುವ ಘಟನೆ ನಡೆದಿದೆ.
ಇಲ್ಲಿನ ರೋಹ್ಟಾ ಬಾಝಾರ್ ಎಂಬಲ್ಲಿನ ಕಾರ್ಪೆಟ್ ತಯಾರಿಕಾ ಕಾರ್ಖಾನೆಯಲ್ಲಿ ಈ ಸ್ಫೋಟ ಸಂಭವಿಸಿದ್ದು, ಕೆಲವು ಜನರು ಅವಶೇಷಗಳಡಿ ಸಿಲುಕಿಕೊಂಡಿರುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸ್ಫೋಟದ ತೀವ್ರತೆಗೆ ಇಡೀ ಕಟ್ಟಡ ಕುಸಿದು ಬಿದ್ದಿದ್ದು, ಸಮೀಪದ ಮೂರು ಮನೆಗಳು ಧರಾಶಾಹಿಯಾಗಿರುವುದಾಗಿ ವರದಿ ವಿವರಿಸಿದೆ.
ಕಾರ್ಪೆಟ್ ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕರು ಅವಶೇಷಗಳಡಿ ಸಿಲುಕಿರುವುದಾಗಿ ಜಿಲ್ಲಾಧಿಕಾರಿ ರಾಜೇಂದ್ರ ಪ್ರಸಾದ್ ತಿಳಿಸಿದ್ದಾರೆ. ಕಾಲಿಯಾರ್ ಮನ್ಸೂರಿ ಎಂಬಾತ ಈ ಫ್ಯಾಕ್ಟರಿ ನಡೆಸುತ್ತಿದ್ದು, ಆತ ಅಕ್ರಮವಾಗಿ ಪಟಾಕಿ ತಯಾರಿಸುತ್ತಿರುವುದಾಗಿ ಸ್ಥಳೀಯರು ಆರೋಪಿಸಿದ್ದಾರೆ.
ಸಾವನ್ನಪ್ಪಿದವರಲ್ಲಿ ಫ್ಯಾಕ್ಟರಿ ಮಾಲೀಕ ಕಾಲಿಯೂರ್ ಮನ್ಸೂರ್, ಇರ್ಫಾನ್ ಮನ್ಸೂರಿ, ಅಬಿಡ್ ಮನ್ಸೂರಿ ಹಾಗೂ ಚಂದು ಎಂದು ಗುರುತಿಸಲಾಗಿದ್ದು, ಉಳಿದವರ ಗುರುತನ್ನು ಇನ್ನಷ್ಟೇ ಪತ್ತೆ ಹಚ್ಚಬೇಕಾಗಿದೆ. ಘಟನೆಯಲ್ಲಿ ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.