ಸೇನೆಯ ಸಮಗ್ರ ಸುಧಾರಣೆಗೆ ರಕ್ಷಣಾ ಸಚಿವೆ ಸಮ್ಮತಿ
Team Udayavani, Mar 8, 2019, 12:30 AM IST
ಹೊಸದಿಲ್ಲಿ: ಭೂ ಸೇನೆಯ ಪ್ರಧಾನ ಕಚೇರಿಯಿಂದ 229 ಅಧಿಕಾರಿಗಳನ್ನು ವರ್ಗ ಮಾಡುವ ಪ್ರಸ್ತಾಕ್ಕೆ ಕೇಂದ್ರ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಗುರುವಾರ ಅನುಮೋದನೆ ನೀಡಿದ್ದಾರೆ. ಭೂಸೇನೆಯಲ್ಲಿ ಇದು ಭಾರಿ ಮಹತ್ವದ ನಿರ್ಧಾರ ಎಂದು ಹೇಳಲಾಗಿದೆ.
ಇದರ ಜತೆಗೆ ಸೇನಾ ಕಾರ್ಯಾಚರಣೆಗಳಿಗೆ ಸಂಬಂಧಿಸಿದಂತೆ ಉಪ ಮಹಾನಿರ್ದೇಶಕರ ಹುದ್ದೆ, ಜಾಗೃತ ದಳ, ಮಾನವ ಹಕ್ಕುಗಳ ಉಲ್ಲಂಘನೆ ವಿಚಾರಗಳ ಬಗ್ಗೆ ಪರಿಶೀಲನೆ ನಡೆಸುವ ಬಗೆಗಿನ ವಿಭಾಗಗಳನ್ನು ಸೃಜಿಸುವ ಬಗ್ಗೆಯೂ ನಿರ್ಧಾರ ಕೈಗೊಳ್ಳಲಾಗಿದೆ. ಈ ಬಗ್ಗೆ ಹನ್ನೆರಡು ಸ್ವತಂತ್ರ ಅಧ್ಯಯನ ಕೈಗೊಂಡ ಬಳಿಕ ನಿರ್ಧಾರ ಕೈಗೊಳ್ಳಲಾಗಿದೆ. ಇದು ಮೊದಲ ಹಂತದ ಸುಧಾರಣಾ ಕಾರ್ಯವಾಗಿದೆ.
ವರ್ಗಾವಣೆ ಮಾಡಲಾಗಿರುವ ಅಧಿಕಾರಿಗಳನ್ನು ಪಾಕಿಸ್ಥಾನ , ಚೀನಾ ಗಡಿ ಪ್ರದೇಶಗಳಲ್ಲಿರುವ ಮಂಚೂಣಿ ನೆಲೆಗಳಲ್ಲಿ ನಿಯೋಜಿಸಲಾಗುತ್ತದೆ. ಡೆಪ್ಯುಟಿ ಚೀಫ್ ಆಫ್ದ ಆರ್ಮಿ ಸ್ಟ್ರಾಟಜಿ ಹುದ್ದೆಯನ್ನು ಸೇನಾ ಕಾರ್ಯಾಟರಣೆ, ಗುಪ್ತಚರ ಮಾಹಿತಿ, ವ್ಯೂಹಾತ್ಮಕ ಯೋಜನೆಗಳನ್ನು ನಿರ್ವಹಿಸುವ ನಿಟ್ಟಿನಲ್ಲಿ ಸೃಷ್ಟಿಸಲಾಗಿದೆ.