ಏಳು ಸೀಟ್ ನಮಗೆ ಬೇಕಾಗಿಲ್ಲ
Team Udayavani, Mar 19, 2019, 12:30 AM IST
ಲಕ್ನೋ/ಪ್ರಯಾಗ್ರಾಜ್: ಉತ್ತರ ಪ್ರದೇಶದಲ್ಲಿ ಎಸ್ಪಿ-ಬಿಎಸ್ಪಿ ಮೈತ್ರಿಗೆ ಏಳು ಸೀಟ್ಗಳನ್ನು ಬಿಟ್ಟುಕೊಟ್ಟಿದ್ದೇವೆ ಎಂದು ಕಾಂಗ್ರೆಸ್ ಹೇಳಿರುವುದು ಮಹಾಘಟ ಬಂಧನದ ಮೈತ್ರಿ ಪಕ್ಷಗಳಿಗೆ ಸಿಟ್ಟು ತರಿಸಿದೆ. ನಿಮ್ಮ ಏಳು ಸೀಟು ನಮಗೆ ಅಗತ್ಯವಿಲ್ಲ. ಎಲ್ಲ 80 ಕ್ಷೇತ್ರಗಳಲ್ಲೂ ನೀವು ಅಭ್ಯರ್ಥಿಗಳನ್ನು ಕಣಕ್ಕಿಳಿಸಬಹುದು. ಬಿಎಸ್ಪಿ, ಎಸ್ಪಿ, ಆರ್ಎಲ್ಡಿ ಮೈತ್ರಿಗೆ ಬಿಜೆಪಿ ಸೋಲಿಸುವ ಸಾಮರ್ಥ್ಯವಿದೆ ಎಂದು ಬಿಎಸ್ಪಿ ಮುಖ್ಯಸ್ಥೆ ಮಾಯಾವತಿ ಸೋಮವಾರ ಹೇಳಿಕೊಂಡಿದ್ದಾರೆ. ಕಾಂಗ್ರೆಸ್ ಆಫರ್ ಬಗ್ಗೆ ಸರಣಿ ಟ್ವೀಟ್ ಮಾಡಿರುವ ಅವರು,ಯಾವುದೇ ರೀತಿಯ ಗೊಂದಲವನ್ನು ಕಾಂಗ್ರೆಸ್ ಸೃಷ್ಟಿಸಬಾರದು. ಕಾಂಗ್ರೆಸ್ ಜೊತೆಗೆ ನಾವು ಉತ್ತರ ಪ್ರದೇಶದಲ್ಲಾಗಲೀ ಅಥವಾ ದೇಶದ ಯಾವುದೇ ಭಾಗದಲ್ಲೂ ಮೈತ್ರಿ ಮಾಡಿಕೊಂಡಿಲ್ಲ ಎಂದೂ ತಾಕೀತು ಮಾಡಿದ್ದಾರೆ. “ಬಿಎಸ್ಪಿ ಕಾರ್ಯಕರ್ತರು ಈ ಬಗ್ಗೆ ಯಾವುದೇ ಗೊಂದಲಕ್ಕೆ ಬೀಳಬಾರದು. ಎಸ್ಪಿ-ಬಿಎಸ್ಪಿ ಮೈತ್ರಿಗೆ ಕಾಂಗ್ರೆಸ್ನ 7 ಸ್ಥಾನಗಳ ಅಗತ್ಯವಿಲ್ಲ’ ಎಂದಿದ್ದಾರೆ.
ಇದೇ ಅಭಿಪ್ರಾಯವನ್ನು ಎಸ್ಪಿ ಮುಖ್ಯಸ್ಥ ಅಖೀಲೇಶ್ ಯಾದವ್ ಕೂಡ ವ್ಯಕ್ತಪಡಿಸಿದ್ದಾರೆ. ಬಿಜೆಪಿ ಸೋಲಿಸಲು ಎಸ್ಪಿ-ಬಿಎಸ್ಪಿ-ಆರ್ಎಲ್ಡಿ ಮೈತ್ರಿ ಶಕ್ತವಾಗಿದೆ. ಕಾಂಗ್ರೆಸ್ ಯಾವುದೇ ರೀತಿಯ ಗೊಂದಲವನ್ನು ಸೃಷ್ಟಿಸಬಾರದು ಎಂದಿದ್ದಾರೆ. ಮೈತ್ರಿ ಮಾಡಿಕೊಂಡ ಸ್ವಲ್ಪ ದಿನಗಳಲ್ಲೇ ಎಸ್ಪಿ ಹಾಗೂ ಬಿಎಸ್ಪಿ ಕೇವಲ 2 ಕ್ಷೇತ್ರಗಳನ್ನು ಕಾಂಗ್ರೆಸ್ಗೆ ಬಿಟ್ಟುಕೊಟ್ಟಿದ್ದವು. ಉತ್ತರ ಪ್ರದೇಶದಲ್ಲಿ ರಾಹುಲ್ ಗಾಂಧಿ ಕ್ಷೇತ್ರ ಅಮೇಠಿ ಮತ್ತು ಸೋನಿಯಾ ಗಾಂಧಿ ಕ್ಷೇತ್ರ ರಾಯ್ಬರೇಲಿಯಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸದೇ ಕಾಂಗ್ರೆಸ್ಗೆ ಬೆಂಬಲಿಸಲು ಮೈತ್ರಿ ಪಕ್ಷಗಳು ನಿರ್ಧರಿಸಿದ್ದವು. ಇದಕ್ಕೆ ಪ್ರತಿಯಾಗಿ ಕಾಂಗ್ರೆಸ್ ಏಳು ಕ್ಷೇತ್ರಗಳನ್ನು ಬಿಟ್ಟುಕೊಡಲು ನಿರ್ಧರಿಸಿತ್ತು. ಆದರೆ ಮೈತ್ರಿ ಕಣಕ್ಕಿಳಿಸಿದ ಅಭ್ಯರ್ಥಿಗಳಿಗೆ ಉತ್ತಮ ಪೈಪೋಟಿ ನೀಡುವಂಥ ಅಭ್ಯರ್ಥಿಗಳನ್ನೇ ಕಾಂಗ್ರೆಸ್ ಹಲವು ಕ್ಷೇತ್ರಗಳಲ್ಲಿ ನಿಲ್ಲಿಸಿದೆ. ಇದು ಮಹಾಘಟಬಂಧನ ಪಕ್ಷಗಳಲ್ಲಿ ಸಿಟ್ಟಿಗೆ ಕಾರಣವಾಗಿದೆ ಎನ್ನಲಾಗಿದೆ.
ಭಯ ಅಗತ್ಯವಿಲ್ಲ
ಉತ್ತರ ಪ್ರದೇಶದ ಪ್ರಯಾಗ್ರಾಜ್ನಿಂದ ಮೂರು ದಿನಗಳ “ಗಂಗಾಯಾತ್ರೆ’ ಆರಂಭಿಸಿರುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ವಾದ್ರಾ ಬಿಎಸ್ಪಿ-ಎಸ್ಪಿ ಮುಖ್ಯಸ್ಥರ ಮಾತುಗಳಿಂದ ಪಕ್ಷದ ಕಾರ್ಯಕರ್ತರು ಗೊಂದಲ ಮತ್ತು ಕೋಪಕ್ಕೆ ಒಳಗಾಗಬೇಕಾದ ಅಗತ್ಯವಿಲ್ಲ. ನಮ್ಮ ಉದ್ದೇಶ ಏನಿದ್ದರೂ ಬಿಜೆಪಿಯನ್ನು ಸೋಲಿಸುವುದು ಎಂದಿದ್ದಾರೆ. ಮತದಾರರು ಯೋಚಿಸಿ ಹಕ್ಕು ಚಲಾವಣೆ ಮಾಡಬೇಕು. ಸಾಮಾನ್ಯ ಮತದಾರರೇ ಬಿಜೆಪಿಗೆ ಸೋಲು ಉಣಿಸಲಿದ್ದಾರೆ’ ಎಂದಿದ್ದಾರೆ.
ಮೊದಲ ಹಂತಕ್ಕೆ ಅಧಿಸೂಚನೆ ಪ್ರಕಟ
ಲೋಕಸಭೆ ಚುನಾವಣೆಯ ಮೊದಲ ಹಂತದ ಮತದಾನಕ್ಕೆ ಸೋಮವಾರ ಅಧಿಸೂಚನೆ ಪ್ರಕಟಿಸಲಾಗಿದೆ. 20 ರಾಜ್ಯಗಳ 91 ಸಂಸದೀಯ ಕ್ಷೇತ್ರಗಳಲ್ಲಿ ಎಪ್ರಿಲ್ 11 ರಂದು ಮತದಾನ ನಡೆಯಲಿದೆ. ಆಂಧ್ರ ಪ್ರದೇಶದ 25, ಅರುಣಾಚಲ ಮತ್ತು ಮೇಘಾಲಯದ ತಲಾ 2, ಮಿಜೋರಾಮ್, ನಾಗಾಲ್ಯಾಂಡ್, ಸಿಕ್ಕಿಂ, ಅಂಡಮಾನ್ ನಿಕೋಬಾರ್ ಮತ್ತು ಲಕ್ಷದ್ವೀಪದ ತಲಾ 1, ತೆಲಂಗಾಣದ 17 ಮತ್ತು ಉತ್ತರಾಖಂಡದ ಐದು, ಉತ್ತರ ಪ್ರದೇಶದ ಎಂಟು, ಪಶ್ಚಿಮ ಬಂಗಾಲದ ಎರಡು ಹಾಗೂ ಬಿಹಾರದ 4 ಕ್ಷೇತ್ರಗಳಲ್ಲಿ ಮತದಾನ ನಡೆಯಲಿದೆ. ಜಮ್ಮು ಮತ್ತು ಬಾರಾಮುಲ್ಲಾದಲ್ಲೂ ಇದೇ ದಿನ ಮತದಾನ ನಡೆಯಲಿದೆ. ಅಧಿಸೂಚನೆ ಪ್ರಕಟವಾದ ಹಿನ್ನೆಲೆಯಲ್ಲಿ ನಾಮಪತ್ರ ಸ್ವೀಕರಿಸುವ ಪ್ರಕ್ರಿಯೆ ಆರಂಭವಾಗಿದೆ. ಮಾರ್ಚ್ 25ರ ವರೆಗೆ ನಾಮಪತ್ರ ಸಲ್ಲಿಕೆ ಕೊನೆಯಾಗಲಿದೆ. ಅಧಿಸೂಚನೆ ಪ್ರಕಟವಾಗುತ್ತಿದ್ದಂತೆಯೇ ಮೊದಲ ಹಂತದ ರಾಜ್ಯಗಳಲ್ಲಿ ನಾಮಪತ್ರ ಸಲ್ಲಿಕೆ ಶುರುವಾಗಿದೆ.
ಉತ್ತರ ಪ್ರದೇಶ, ಹೈದರಾಬಾದ್ಗಳಲ್ಲಿ ಪ್ರಮುಖರು ನಾಮಪತ್ರ ಸಲ್ಲಿಕೆ ಮಾಡಿದ್ದಾರೆ. ಉತ್ತರ ಪ್ರದೇಶದ 8 ಕ್ಷೇತ್ರಗಳಲ್ಲಿ, ಹೈದರಾಬಾದ್ನಲ್ಲಿಯೂ ನಾಮಪತ್ರ ಸಲ್ಲಿಕೆ ಪ್ರಗತಿಯಲ್ಲಿದೆ. ಇದರ ಜತೆಗೆ ಹಲವು ರಾಜ್ಯಗಳಲ್ಲಿಯೂ ಹಲವಾರು ಮಂದಿ ಗಣ್ಯರು ಪುನರಾಯ್ಕೆ ಬಯಸಿ ನಾಮಪತ್ರ ಸಲ್ಲಿಸಿದ್ದಾರೆ. ಅಸ್ಸಾಂನಲ್ಲಿ 1.2 ಲಕ್ಷ ಮತದಾರರು ಚುನಾ ವಣೆಯಲ್ಲಿ ಭಾಗವಹಿಸದಿರಲು ನಿರ್ಧರಿಸಿದ್ದಾರೆ.
ಎರಡು ಕ್ಷೇತ್ರಗಳಿಂದ ಪಟ್ನಾಯಕ್ ಕಣಕ್ಕೆ
ಒಡಿಶಾ ವಿಧಾನಸಭೆ ಮತ್ತು ಲೋಕಸಭೆ ಚುನಾವಣೆಗೆ ಬಿಜೆಡಿ ಅಭ್ಯರ್ಥಿಗಳ ಪಟ್ಟಿಯನ್ನು ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಬಿಡುಗಡೆ ಮಾಡಿದ್ದಾರೆ.ಗಜಾಂ ಜಿಲ್ಲೆಯ ಹಿಂಜಿಲಿ ವಿಧಾನಸಭಾ ಕ್ಷೇತ್ರದ ಜತೆಗೆ, ಬರ್ಗಾಡ್ ಜಿಲ್ಲೆಯ ಬಿಜೇಪುರ್ ಕ್ಷೇತ್ರದಿಂದಲೂ ತಾವು ಸ್ಪರ್ಧಿಸುವುದಾಗಿ ಅವರು ತಿಳಿಸಿದ್ದಾರೆ. 147 ವಿಧಾನಸಭಾ ಕ್ಷೇತ್ರಗಳಿದ್ದು, ಈ ಪೈಕಿ 54 ಅಭ್ಯರ್ಥಿಗಳ ಹೆಸರುಗಳನ್ನು ಘೋಷಿಸಲಾಗಿದೆ. ಇದರ ಜತೆಗೆ, ಸದ್ಯಕ್ಕೆ 5 ಲೋಕಸಭಾ ಕ್ಷೇತ್ರಗಳ ಅಭ್ಯರ್ಥಿಗಳ ಹೆಸರುಗಳನ್ನೂ ಪ್ರಕಟಿಸಲಾಗಿದೆ. ಎ. 11, 18, 23 ಹಾಗೂ 29ರಂದು ನಾಲ್ಕು ಹಂತಗಳಲ್ಲಿ ಮತದಾನ ನಡೆಯಲಿದೆ.
ಶಾಕಂಬರಿ ದೇಗುಲದಿಂದ 25ಕ್ಕೆ ಉ.ಪ್ರ. ಸಿಎಂ ಯೋಗಿ ಪ್ರಚಾರ
ಎಸ್ಪಿ-ಬಿಎಸ್ಪಿ ಮೈತ್ರಿಕೂಟ ದೇವಬಂದ್ನ ರ್ಯಾಲಿಯಿಂದ ಚುನಾವಣಾ ಪ್ರಚಾರ ಕ್ಯಾಂಪೇನ್ ಆರಂಭಿಸುವ ಘೋಷಣೆ ಮಾಡುತ್ತಿದ್ದಂತೆಯೇ, ಸಹರಾನ್ಪುರದಲ್ಲಿರುವ ಶಾಕಂಬರಿ ದೇಗುಲದಿಂದ ಪ್ರಚಾರ ನಡೆಸಲು ಉ.ಪ್ರ ಸಿಎಂ ಯೋಗಿ ಆದಿತ್ಯನಾಥ್ ನಿರ್ಧರಿಸಿದ್ದಾರೆ. ದೇವಬಂದ್ನಲ್ಲಿ ಮುಸ್ಲಿಮರಿಗೆ ಅತ್ಯಂತ ಪವಿತ್ರವಾದ ಮಸೀದಿ ಇದ್ದು, ಇದು ಎಸ್ಪಿ ಹಾಗೂ ಬಿಎಸ್ಪಿಯ ಆದ್ಯತೆಯನ್ನು ಸೂಚಿಸುತ್ತದೆ ಎಂದು ಆದಿತ್ಯನಾಥ ಹೇಳಿದ್ದಾರೆ. ಶಾಕಂಬರಿ ದೇಗುಲವು ಉತ್ತರ ಪ್ರದೇಶದ ಮೇಲ್ವರ್ಗದವರಿಗೆ ಅತ್ಯಂತ ಪವಿತ್ರದ್ದಾಗಿದೆ. 25ರಂದು ಉ.ಪ್ರ.ಸಿಎಂ ಪ್ರಚಾರ ಶುರು ಮಾಡುವ ಸಾಧ್ಯತೆ ಇದೆ. ಶಾಕಂಬರಿ ಸುಮಾರು 100 ವರ್ಷಗಳವರೆಗೆ ಈ ಪ್ರದೇಶದಲ್ಲಿ ಧ್ಯಾನ ಮಾಡುತ್ತಿದ್ದಳು ಎಂದು ಹೇಳಲಾಗಿದೆ. ಅಲ್ಲದೆ ಈ ಅವಧಿಯಲ್ಲಿ ಸಸ್ಯಾಹಾರವನ್ನೇ ಆಕೆ ಸೇವಿಸುತ್ತಿದ್ದುದರಿಂದ ಶಾಕಂಬರಿ ಎಂದು ಕರೆಯಲಾಗಿದೆ.
11 ಸ್ಥಾನಕ್ಕೆ ಜೆಡಿಎಸ್ ಅಭ್ಯರ್ಥಿಗಳು
ಅರುಣಾಚಲ ಪ್ರದೇಶ ವಿಧಾನಸಭೆ ಚುನಾವಣಾ ಕಣಕ್ಕೆ ಮೊದಲ ಬಾರಿಗೆ ಲಗ್ಗೆಯಿಟ್ಟಿರುವ ಜೆಡಿಎಸ್, ತನ್ನ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಒಟ್ಟು 60 ವಿಧಾನಸಭಾ ಕ್ಷೇತ್ರಗಳಿದ್ದು, ಸದ್ಯಕ್ಕೆ 11 ಕ್ಷೇತ್ರಗಳಿಗೆ ತನ್ನ ಅಭ್ಯರ್ಥಿಗಳನ್ನು ಜೆಡಿಎಸ್ ಪ್ರಕಟಿಸಿದೆ. ಜತೆಗೆ, ಎರಡು ಲೋಕಸಭಾ ಕ್ಷೇತ್ರಗಳಲ್ಲಿ ಒಂದಕ್ಕೆ ತನ್ನ ಅಭ್ಯರ್ಥಿಯನ್ನು ಹೆಸರಿಸಿದೆ. ಈಶಾನ್ಯ ರಾಜ್ಯಗಳಿಗೆ ಜೆಡಿಎಸ್ ಸಂಚಾಲಕರಾಗಿರುವ ಅವರು ಅಪ್ಪರ್ ಸಿಯಾಂಗ್ ಜಿಲ್ಲೆಯ ಟುಟಿಂಗ್-ಯಿಂಗ್ಕಿಯಾಂಗ್ನಿಂದ ಸ್ಪರ್ಧಿಸಲಿದ್ದಾರೆ. ಸಿಎಂ ಪೇಮಾ ಖಂಡು ಕಣಕ್ಕಿಳಿಯಲಿರುವ ಮುಕೊ¤à ಕ್ಷೇತ್ರದಲ್ಲಿ 39 ವರ್ಷದ ಬುದ್ಧ ಸನ್ಯಾಸಿ ಲಾಮಾ ಲೊಬ್ಸಂಗ್ ಗ್ಯಸ್ಟೊಗೆ ಟಿಕೆಟ್ ಘೋಷಿಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Vote: ದಾಖಲೆ ಸಂಖ್ಯೆಯಲ್ಲಿ ಮತ ಚಲಾಯಿಸಿ…: ಮತದಾರರಲ್ಲಿ ಮನವಿ ಮಾಡಿದ ಪ್ರಧಾನಿ ಮೋದಿ
Polls: ಇಂದು 102 ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ, ಮತದಾರರ ಕೈಯಲ್ಲಿ ಅಭ್ಯರ್ಥಿಗಳ ಭವಿಷ್ಯ
Loksabha Election; ದೇಶದಲ್ಲಿ ಹಂತ-1: ಮತ ಇಂದು
EVM ಯಾವ ಗುಂಡಿ ಒತ್ತಿದರೂ ಬಿಜೆಪಿಗೆ ಮತ: ಭಾರೀ ಚರ್ಚೆ
Cerelac ಶಿಶು ಆಹಾರದಲ್ಲಿ ಹೆಚ್ಚುವರಿ ಸಕ್ಕರೆ ಬೆರೆತಿದೆ: ಗಂಭೀರ ಆರೋಪ
MUST WATCH
ಹೊಸ ಸೇರ್ಪಡೆ
Gadaga ಹತ್ಯೆ ಪ್ರಕರಣ; ಆರೋಪಿಗಳ ಪತ್ತೆಗೆ ಪರಿಶೀಲನೆ ಮುಂದುವರೆದಿದೆ: ಗದಗ ಎಸ್ಪಿ
Vote: ದಾಖಲೆ ಸಂಖ್ಯೆಯಲ್ಲಿ ಮತ ಚಲಾಯಿಸಿ…: ಮತದಾರರಲ್ಲಿ ಮನವಿ ಮಾಡಿದ ಪ್ರಧಾನಿ ಮೋದಿ
Gadaga: ಒಂದೇ ಕುಟುಂಬದ ನಾಲ್ವರ ಭೀಕರ ಹತ್ಯೆ; ದುಷ್ಕರ್ಮಿಗಳು ಪರಾರಿ
Polls: ಇಂದು 102 ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ, ಮತದಾರರ ಕೈಯಲ್ಲಿ ಅಭ್ಯರ್ಥಿಗಳ ಭವಿಷ್ಯ
Hunsur: ನಾಗರಹೊಳೆಯಲ್ಲಿ ದುಷ್ಕರ್ಮಿಗಳ ಗುಂಡೇಟಿಗೆ ಕಾಡುಕೋಣ ಬಲಿ