ವೋಟ್ ಗಾಗಿ ಪುಲ್ವಾಮ ದಾಳಿ, ರಾಮ್ ಗೋಪಾಲ್ ವಿವಾದದ ಹೇಳಿಕೆ, BJP ಕಿಡಿ
Team Udayavani, Mar 21, 2019, 11:59 AM IST
ನವದೆಹಲಿ: ಜಮ್ಮು-ಕಾಶ್ಮೀರದ ಪುಲ್ವಾಮ ಭಯೋತ್ಪಾದಕ ದಾಳಿಯೊಂದು ವ್ಯವಸ್ಥಿತ ಸಂಚು. 40 ಮಂದಿ ಯೋಧರು ಯೋಧರು ಹುತಾತ್ಮರಾದ ಘಟನೆ ಹಿಂದೆ ಮತ ಗಳಿಕೆಯ ಹುನ್ನಾರವಿದೆ ಎಂದು ಸಮಾಜವಾದಿ ಪಕ್ಷದ ಹಿರಿಯ ಮುಖಂಡ ರಾಮ್ ಗೋಪಾಲ್ ಯಾದವ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಉತ್ತರ ಪ್ರದೇಶ ಮಾಜಿ ಸಿಎಂ ಅಖಿಲೇಶ್ ಯಾದವ್ ಚಿಕ್ಕಪ್ಪನಾಗಿರುವ ರಾಮ್ ಗೋಪಾಲ್ ಯಾದವ್ ಗುರುವಾರ ಮಾತನಾಡುತ್ತ, ಜಮ್ಮು-ಕಾಶ್ಮೀರ ಮತ್ತು ಸಿಆರ್ ಪಿಎಫ್ ಯೋಧರು ಸಂಚರಿಸುವ ಮಾರ್ಗದಲ್ಲಿ ಯಾವುದೇ ತಪಾಸಣೆ ಇಲ್ಲ. ಅಷ್ಟೇ ಅಲ್ಲ ಅರೆಸೇನಾ ಪಡೆ ಯೋಧರು ಕೂಡಾ ಸರ್ಕಾರ ಬಗ್ಗೆ ಅಸಮಾಧಾನ ಹೊಂದಿದ್ದರು ಎಂದು ಆರೋಪಿಸಿದ್ದಾರೆ.
ಮತಗಳಿಸಲು ಯೋಧರು ಹುತಾತ್ಮರಾಗುವಂತೆ ಮಾಡಿದ್ದಾರೆ. ಜಮ್ಮು ಮತ್ತು ಶ್ರೀನಗರ್ ನಡುವೆ ಯಾವುದ ತಪಾಸಣೆ ಇಲ್ಲ. ಯೋಧರನ್ನು ಬರೇ ಬಸ್ ಗಳಲ್ಲಿ ತೆರಳುವಂತೆ ವ್ಯವಸ್ಥೆ ಮಾಡಿರುವುದು ಸರಿಯಲ್ಲ. ಇದೊಂದು ವ್ಯವಸ್ಥಿತ ಸಂಚು. ಒಂದು ವೇಳೆ ಸರ್ಕಾರ ಬದಲಾಗಿ ತನಿಖೆ ನಡೆದರೆ ಆಗ ದೊಡ್ಡ, ದೊಡ್ಡ ಹೆಸರು ಬಯಲಿಗೆ ಬರಲಿದೆ ಎಂದು ಹೇಳಿದರು.
ರಾಮ್ ಗೋಪಾಲ್ ಯಾದವ್ ಹೇಳಿಕೆ ಬಗ್ಗೆ ಭಾರತೀಯ ಜನತಾ ಪಕ್ಷ ಆಕ್ರೋಶ ವ್ಯಕ್ತಪಡಿಸಿದ್ದು, ಕೂಡಲೇ ಹೇಳಿಕೆ ಬಗ್ಗೆ ಕ್ಷಮೆಯಾಚಿಸುವಂತೆ ಆಗ್ರಹಿಸಿದೆ. ಅಲ್ಲದೇ ರಾಮ್ ಗೋಪಾಲ್ ಯಾದವ್ ಅವರನ್ನು ಪಕ್ಷದಿಂದ ವಜಾಗೊಳಿಸಬೇಕೆಂದು ಒತ್ತಾಯಿಸಿದೆ.