ಕಾರ್ನಾಡ್‌ಗೆ ಟಾಟಾ ಸಾಹಿತ್ಯ ಜೀವಮಾನ ಸಾಧನೆ ಪ್ರಶಸ್ತಿ


Team Udayavani, Nov 19, 2017, 2:57 PM IST

4.jpg

ನಾಟಕಕಾರರಾಗಿ ರಾಷ್ಟ್ರೀಯ-ಅಂತಾರಾಷ್ಟ್ರೀಯ ಖ್ಯಾತಿಯನ್ನು ಪಡೆದಂತಹ ಬಹುಮುಖ ಪ್ರತಿಭೆಯ ಕನ್ನಡಿಗರಾದ  ಗಿರೀಶ್‌ ಕಾರ್ನಾಡರಿಗೆ ಇದೀಗ ‘ಟಾಟಾ ಲಿಟೆರರಿ ಲೈವ್‌!’ ನೀಡುವ “ಟಾಟಾ ಸಾಹಿತ್ಯ ಜೀವಮಾನ  ಸಾಧನೆ ಪ್ರಶಸ್ತಿ-2017′ ಘೋಷಿಸಲಾಗಿದೆ. ಭಾರತೀಯ ಸಾಹಿತ್ಯಕ್ಷೇತ್ರದಲ್ಲಿ ಸಲ್ಲಿಸಿದ ಮಹತ್ತರ ಕೊಡುಗೆಗಾಗಿ ನೀಡಲಾಗುವ ಈ ಪ್ರಶಸ್ತಿ ಪ್ರದಾನ ಕಾರ್ಯಕ್ರಮವು  ನ. 19ರಂದು ಮುಂಬಯಿಯಲ್ಲಿರುವ ಪ್ರದರ್ಶನ ಕಲೆಗಳ ರಾಷ್ಟ್ರೀಯ ಕೇಂದ್ರ(ಎನ್‌ಸಿಪಿಎ)ದಲ್ಲಿ  ನೆರವೇರಲಿದೆ.

ಭಾರತೀಯ ಸಾಹಿತ್ಯ ಕ್ಷೇತ್ರಕ್ಕೆ ಬಹುಮೂಲ್ಯ ಕೊಡುಗೆಯನ್ನು ನೀಡಿರುವ ಸಾಹಿತಿಗಳಾದ ಮಹಾಶ್ವೇತಾದೇವಿ(2011),  ಸರ್‌ ವಿ.ಎಸ್‌. ನಾೖಪಾಲ್‌(2012),  ಖುಷ್‌ವಂತ್‌ ಸಿಂಗ್‌(2013), ಎಂ.ಟಿ. ವಾಸುದೇವನ್‌ ನಾಯರ್‌(2014), ಕಿರಣ್‌ ನಗರ್‌ಕರ್‌(2015), ಅಮಿತಾವ್‌ ಘೋಷ್‌(2016) ಇವರಿಗೆ “ಟಾಟಾ ಸಾಹಿತ್ಯ ಜೀವಮಾನ  ಸಾಧನೆ ಪ್ರಶಸಿ’¤ ದೊರಕಿದ್ದು, ಇದೀಗ ನಮ್ಮವರೇ ಆಗಿರುವ ಗಿರೀಶ್‌ ಕಾರ್ನಾಡ್‌ರಿಗೆ ಈ ಪ್ರಶಸ್ತಿ ದೊರಕಿದ್ದು, ನಾವು ಕನ್ನಡಿಗರೆಲ್ಲರೂ ಹೆಮ್ಮೆ ಪಡಬೇಕಾದ ಸಂಗತಿ.

“ಕಾರ್ನಾಡರ ಕೃತಿಗಳು 60ರ ದಶಕದಲ್ಲಿ ಆಧುನಿಕ ಭಾರತೀಯ ರಂಗಭೂಮಿಯ ವಿಶ್ವವನ್ನು ರೂಪಿಸಿ, ಅದನ್ನು ವಿಸ್ತರಿಸುವ ಕಾರ್ಯವನ್ನು ಮಾಡಿದೆ. ನಮ್ಮ ಪೀಳಿಗೆಯ ಮಹಾನ್‌ ವ್ಯಕ್ತಿತ್ವದ ನಾಟಕಕಾರ, ಲೇಖಕ, ನಟ ಹಾಗೂ ನಿರ್ದೇಶಕರಾಗಿ ಅವರ ಸ್ಮರಣೀಯ ಹಾಗೂ ಪ್ರಭಾವಿ ಕೊಡುಗೆಗಳನ್ನು ಪರಿಗಣಿಸಿ ಅವರಿಗೆ ಈ ಬಾರಿಯ ಟಾಟಾ ಸಾಹಿತ್ಯ ಜೀವಮಾನ  ಸಾಧನೆ ಪ್ರಶಸ್ತಿಯನ್ನು ಘೋಷಿಸಿರುವುದು ನಮ್ಮ ಪಾಲಿಗೆ ಹೆಮ್ಮೆಯ ವಿಷಯವಾಗಿದೆ’ ಎಂದು “ಟಾಟಾ ಲಿಟರರಿ ಲೈವ್‌!’ ಸಂಸ್ಥೆಯ ಸಂಸ್ಥಾಪಕ ಹಾಗೂ ನಿರ್ದೇಶಕರಾದ  ಅನಿಲ್‌ ಧಾರಕರ್‌ ಅವರು ಪತ್ರಿಕಾ ಗೋಷ್ಠಿಯಲ್ಲಿ ಹೇಳಿರುತ್ತಾರೆ.

‘ಒಬ್ಬ ಕವಿ, ಲೇಖಕನಿಗಿಂತಲೂ ನಾಟಕಕಾರನ ಜವಾಬ್ದಾರಿ ಬಹು ದೊಡ್ಡದು. ವಿಭಿನ್ನ ನೆಲೆಗಳಿಂದ ನಾಟಕ ನೋಡಲು ಬರುವ ಭಿನ್ನ ಭಿನ್ನ ಮನಸ್ಥಿತಿಯ ಅಸಂಖ್ಯ ಪ್ರೇಕ್ಷಕರನ್ನು ಏಕಕಾಲಕ್ಕೆ ಆಮೂಲಾಗ್ರವಾಗಿ ಸೆಳೆದಿಡಬಲ್ಲ ಸಾಮರ್ಥ್ಯವನ್ನು ನಾಟಕಕಾರ ತನ್ನ ಕೃತಿಯಲ್ಲಿ ಕಟ್ಟಿ ಕೊಡಬೇಕಾಗುತ್ತದೆ. ರಂಗಭೂಮಿ ಎನ್ನುವುದು ಅತ್ಯಂತ ಸಂಕೀರ್ಣವಾದ ಜಗತ್ತು.  ಶಬ್ದಜಾಲಗಳಲ್ಲಿ ಹೆಣೆಯಲಾದ ಮಾನವೀಯ ಸಂಬಂಧಗಳನ್ನು ಅಭಿವ್ಯಕ್ತಿಸುವ ವಿಧಾನ. ಅಂತಿರುವಾಗ ಕೊನೆಯಲ್ಲಿ ನೀವು ಯಶಸ್ವಿಯಾಗಿದ್ದೀರಿ ಎನ್ನುವ ಮಾತು ಕೇಳಿಬಂದಾಗ ಅತ್ಯಂತ ಅಹ್ಲಾದಕರ ಉತ್ಸಾಹಭರಿತ ಅನುಭವ
ವಾಗುತ್ತದೆ. ಆದುದರಿಂದ  ನಾಟಕಕಾರನಾಗಿ ನನಗೆ “ಟಾಟಾ ಲಿಟರೆರಿ ಲೈವ್‌!’ ಪ್ರಶಸ್ತಿ ನೀಡುತ್ತಿರುವುದು ನನ್ನನ್ನು ಭಾವುಕನನ್ನಾಗಿಸಿದೆ.  ಹಲವು ಭಾಷೆ, ಸಂಸ್ಕೃತಿ ಹಾಗೂ ಹಿಂದಿನ ತಲೆಮಾರುಗಳೆಲ್ಲವನ್ನೂ ಮೀರಿ ಪ್ರಶಂಸೆಯ ಅಲೆಗಳು ನನ್ನನ್ನು ಇಂದು ಮುತ್ತುತ್ತಿವೆ…ಇನ್ನೇನು ಬೇಕು? ಈ ಕ್ಷಣಕ್ಕಾಗಿಯೇ ನಾಟಕಕಾರ ಬದುಕುತ್ತಾನೆ’ ಎಂದು ಗಿರೀಶ್‌ ಕಾರ್ನಾಡರು ತಮ್ಮ ಭಾವನೆಗಳನ್ನು ವ್ಯಕ್ತಪಡಿಸಿರುವರು.

ಇಂಗ್ಲಿಷ್‌ನಲ್ಲಿ ಕವಿತೆ ಬರೆದು ಅಂತಾರಾಷ್ಟ್ರೀಯ ಖ್ಯಾತಿಯ ಕವಿಯಾಗಬಯಸಿದ ಕಾರ್ನಾಡರು ಸುಪ್ರಸಿದ್ಧ ನಾಟಕಕಾರರಾದರು. ಇವರು ತಮ್ಮ ನಾಟಕಗಳನ್ನೆಲ್ಲಾ ಕನ್ನಡದಲ್ಲೇ ಬರೆದರು ಎನ್ನುವುದು ನಾವು ಕನ್ನಡಿಗರೆಲ್ಲರಿಗೂ ಅತ್ಯಂತ ಅಭಿಮಾನಪಡಬೇಕಾದ ವಿಷಯ.

ವಿದೇಶದಲ್ಲಿ ವ್ಯಾಸಂಗ ಮಾಡಿ, ಅಲ್ಲಿಯ ಬದುಕನ್ನು ಹತ್ತಿರದಿಂದ ಗಮನಿಸಿದವರು ಅವರು. ಮಾತ್ರವಲ್ಲದೆ ಭಾರತಕ್ಕೆ ಹಿಂದಿರುಗಿ ಬಂದು ಹಿಂದಿ ಸಿನೆಮಾರಂಗದಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಂಡು ಸಾಕಷ್ಟು ಪ್ರಸಿದ್ಧಿಯನ್ನು ಪಡೆದವರು. ಆದರೂ ಕನ್ನಡವನ್ನೇ ತಮ್ಮ ಸಾಹಿತ್ಯದ ಅಭಿವ್ಯಕ್ತಿಯ ಮಾಧ್ಯಮವನ್ನಾಗಿ ಆಯ್ಕೆ ಮಾಡಿದರು ಎನ್ನುವುದು ಸೋಜಿಗದ ಸಂಗತಿಯೇ ಸರಿ.

ನಾಟಕಗಳೇ ಅವರ ಅಭಿವ್ಯಕ್ತಿಯ ಪ್ರಧಾನ ಮಾಧ್ಯಮ. ಹಾಗೆ ನೋಡಿದರೆ ಕಳೆದೈದು ದಶಕಗಳಲ್ಲಿ ಅವರು ಬರೆದ ನಾಟಕಗಳ ಸಂಖ್ಯೆ ಕೇವಲ ಹದಿನಾಲ್ಕು. ಆದರೆ ಅವರು ಬರೆದ ಪ್ರತಿಯೊಂದು ನಾಟಕವೂ ನಾಟಕ ಸಾಹಿತ್ಯ ಪ್ರಕಾರಕ್ಕೆ ಅಂತೆಯೇ, ರಂಗಭೂಮಿಗೆ ಕೂಡ ಹೊಸತನ ನೀಡುವ ಪ್ರಯತ್ನವನ್ನು ಸತತವಾಗಿ ನಡೆಸಿವೆ. ತಮ್ಮ ನಾಟಕವನ್ನು ಸತತವಾಗಿ ತಿದ್ದಿ ಮರುಮುದ್ರಣ ಮಾಡುವ ಕಾರ್ನಾಡರು ಅತ್ಯಂತ ಪ್ರತಿಭಾಶಾಲಿ ಹಾಗೂ ಪ್ರಯೋಗಶೀಲ ನಾಟಕಕಾರ.  ಆದುದರಿಂದಲೇ  ನಟ ರಿಗೆ, ನಿರ್ದೇಶಕರಿಗೆ, ಕಾರ್ನಾಡರ ನಾಟಕಗಳನ್ನು ರಂಗಭೂಮಿಯ ಮೇಲೆ ಸಮರ್ಥವಾಗಿ ಪ್ರದರ್ಶಿಸುವುದೇ ಒಂದು ದೊಡ್ಡಸವಾಲೆನಿಸುತ್ತದೆ. ಅವರು ನಾಟಕ ಬರೆಯುವುದನ್ನೇ ಕಾತರದಿಂದ ಕಾಯುತ್ತಿರುವ ನಿರ್ದೇಶಕರಿಗೆ  ಅದರ  ರಂಗ ಪ್ರಯೋಗ ಮಾಡಿ ಮೆಚ್ಚುಗೆ ಗಳಿಸಿದರೆ ಸಿಗುವಷ್ಟು ಸಮಾಧಾನ ಯಾವ ಪ್ರಶಸ್ತಿಯಿಂದಲೂ ದಕ್ಕಲಾರದು ಎನ್ನುವುದು ನಿಜಸಂಗತಿ. “ಬೆಂದ್‌ ಕಾಳ್‌-ಆನ್‌ ಟೋಸ್ಟ್‌’ ಪ್ರಕಟಗೊಂಡ ತಿಂಗಳೊಂದರಲ್ಲೇ ಅದರ ರಂಗಪ್ರಯೋಗವೂ ನಡೆದು ಜನಮೆಚ್ಚುಗೆಯನ್ನು ಪಡೆದುದು ಇದಕ್ಕೆ ಸಾಕ್ಷಿ
1961ರಲ್ಲಿ ಬರೆದ “ಯಯಾತಿ’ ನಾಟಕದಿಂದ ಪ್ರಾರಂಭಿಸಿ ಇತ್ತೀಚೆಗೆ ಪ್ರಕಟಣೆಗೊಂಡ “ಬೆಂದ್‌ ಕಾಳ್‌-ಆನ್‌ ಟೋಸ್ಟ್‌’ ತನಕ ಅಂದರೆ ಕಳೆದ ಐದು ದಶಕಗಳಿಂದಲೂ ನಿರಂತರವಾಗಿ ನಾಟಕಗಳನ್ನೇ ಬರೆಯುತ್ತಾ ಬಂದ ಗಿರೀಶ್‌ ಕಾರ್ನಾಡ್‌ ಅವರು ನಾಟಕಸಾಹಿತ್ಯಕ್ಕಾಗಿ ಭಾರತೀಯ ಜ್ಞಾನಪೀಠ ಪ್ರಶಸ್ತಿ ಪಡೆದ ಪ್ರಥಮ ಹಾಗೂ ಏಕೈಕ ಸಾಹಿತಿ. ಜ್ಞಾನಪೀಠ ಪ್ರಶಸ್ತಿ ಪಡೆಯುವ ಮೊದಲೇ ಇವರ ನಾಟಕಗಳು ಭಾರತೀಯ ಹಾಗೂ ವಿದೇಶೀಯ ಭಾಷೆಗಳಲ್ಲಿ ಅನುವಾದಿತಗೊಂಡಿದ್ದವು. ತಮ್ಮ ಹಾಗೂ ಇತರ ಪ್ರಖ್ಯಾತ ಭಾರತೀಯ ನಾಟಕಗಳನ್ನು(ಏವಂ ಇಂದ್ರಜಿತ್‌, ಆಷಾಢ್‌ ಕೆ ಏಕ್‌ ದಿನ್‌, ಹಯವದನ )ಇಂಗ್ಲಿಷ್‌ಗೆ ಭಾಷಾಂತರಿಸಿ ಭಾರತೀಯ ನಾಟಕಗಳಿಗೆ ಅಂತಾರಾಷ್ಟ್ರೀಯ ವೇದಿಕೆಯನ್ನು ನೀಡಿದ ಹೆಗ್ಗಳಿಕೆ ಇವರದ್ದು.

ಪ್ರಾರಂಭದಲ್ಲಿ ಅವರು ಪುರಾಣ, ಇತಿಹಾಸ ಮತ್ತು ಜಾನಪದ ಕಥಾನಕಗಳೊಡನೆ ಮುಖಾಮುಖೀಯಾಗುವಷ್ಟೇ ಸಲೀಸಾಗಿ ಪ್ರಸ್ತುತ ರಾಜಕೀಯ ಹಾಗೂ ಸಾಮಾಜಿಕ ಸ್ಥಿತ್ಯಂತರ ಗಳನ್ನು ಕೂಡ ವಿಶ್ಲೇಷಿಸುತ್ತಾರೆ. ತಮ್ಮ ನಾಟಕಗಳಲ್ಲಿ ನಿರ್ಭಿಡೆಯಿಂದ ಹೆಣ್ಣು-ಗಂಡಿನ ಸಂಬಂಧಗಳನ್ನು ವ್ಯಾಖ್ಯಾನಿಸುವಲ್ಲಿ, ಧರ್ಮ ಹಾಗೂ ರಾಜಕೀಯದ ಒಳಪದರಗಳನ್ನು ಅನಾವರಣಗೊಳಿಸುವಲ್ಲಿ, ರೂಢಿಗತ ಮೌಲ್ಯಗಳನ್ನು ಪ್ರಶ್ನಿಸುವ ರೀತಿಯಲ್ಲಿ ಕಾರ್ನಾಡ್‌ ಅವರು ದರ್ಶಿಸುವ ಕಲಾತ್ಮಕತೆ ಅದ್ವಿತೀಯವಾದುದು ಮತ್ತು ಅಷ್ಟೇ ಪ್ರಭಾವಶಾಲಿಯಾದುದು. ಅವರ ನಾಟಕಗಳನ್ನು ಇಬ್ರಾಹಿಮ್‌ ಅಲ್ಕಾಝಿ, ಸತ್ಯದೇವ್‌ ದುಬೆ, ವಿಜಯಾ ಮೆಹ್ತಾ, ಅಲೀಖ್‌ ಪದಮಸಿ, ಬಿ.ವಿ.ಕಾರಂತ, ಪ್ರಸನ್ನ ಹಾಗೂ ಬಿ.ಜಯಶ್ರೀ ಯಂತಹ ಪ್ರತಿಭಾವಂತ ನಿರ್ದೇಶಕರು ನಿರ್ದೇಶಿಸಿದ್ದಾರೆ. ಚಲನಚಿತ್ರ ನಿರ್ದೇಶಕರಾಗಿಯೂ ಸಾಕಷ್ಟು ಪ್ರಸಿದ್ಧಿ ಪಡೆದಿರುವ ಗಿರೀಶ್‌ ಕಾರ್ನಾಡರು ತಮ್ಮ ‘ಒಡಕಲು ಬಿಂಬ’ ನಾಟಕವನ್ನು ಮಾತ್ರ ನಿರ್ದೇಶಿಸಿರುವರು.

ರಾಜ್ಯದ, ರಾಷ್ಟ್ರೀಯ -ಅಂತಾರಾಷ್ಟ್ರೀಯ ಪ್ರಶಸ್ತಿ ಪುರಸ್ಕಾರಗಳು ಇವರ ನಾಟಕ ಸಾಹಿತ್ಯಕ್ಕೆ, ನಾಟಕ ಪ್ರದರ್ಶನಕ್ಕೆ, ಅಭಿನಯ ಹಾಗೂ ನಿರ್ದೇಶನಕ್ಕೆ ದೊರಕಿವೆ. ಅವುಗಳಲ್ಲಿ ಪದ್ಮಶ್ರೀ (1974), ಪದ್ಮಭೂಷಣ(1992), ಕರ್ನಾಟಕ ವಿ.ವಿ.ದಿಂದ ಡಿ.ಲಿಟ್‌ ಪದವಿ, ಕರ್ನಾಟಕ ಸರಕಾರದಿಂದ ಗುಬ್ಬಿ ವೀರಣ್ಣ ಪ್ರಶಸ್ತಿ(1997), ಮಧ್ಯ ಪ್ರದೇಶ ಸರಕಾರದಿಂದ ಕಾಲಿದಾಸ್‌ ಸಮ್ಮಾನ್‌ ಪ್ರಮುಖವಾದುವು. ಅವರ ಸಾಹಿತ್ಯ ಮತ್ತು ಕಲಾಕ್ಷೇತ್ರದಲ್ಲಿ ಜಾಗತಿಕ ಪ್ರಸಿದ್ಧಿಯನ್ನು ಪಡೆದ ಕೊಡುಗೆಯನ್ನು ಗುರುತಿಸಿ 1999ರಲ್ಲಿ ಜ್ಞಾನಪೀಠ ಪ್ರಶಸ್ತಿ ನೀಡಲಾಯಿತು.

ಭಾರತೀಯ ರಂಗಭೂಮಿಗೆ ಹೊಸ ಆಯಾಮವನ್ನು ನೀಡಿ ಹೊಸ ಸಾಧ್ಯತೆಗಳನ್ನು ಮನಗಾಣಿಸಿ ಚೈತನ್ಯವನ್ನು ತುಂಬಿದ ಅತ್ಯಂತ ಪ್ರತಿಭಾಶಾಲಿ ಗಿರೀಶ್‌ ಕಾರ್ನಾಡರಿಗೆ ಅಭಿನಂದನೆಗಳು.

ಡಾ. ಮಮತಾ ರಾವ್‌

ಟಾಪ್ ನ್ಯೂಸ್

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!

Sagara: ರಾತ್ರೋ ರಾತ್ರಿ ಅತಿಕ್ರಮ ಮನೆ ನಿರ್ಮಾಣ… ತಹಶೀಲ್ದಾರ್‌ರಿಂದ ಪರಿಶೀಲನೆ

Sagara: ರಾತ್ರೋ ರಾತ್ರಿ ಅತಿಕ್ರಮ ಮನೆ ನಿರ್ಮಾಣ… ತಹಶೀಲ್ದಾರ್‌ರಿಂದ ಪರಿಶೀಲನೆ

Nagaland Poll: ಬೇಡಿಕೆ ಈಡೇರಿಸಿ- ಆರು ಜಿಲ್ಲೆಗಳಲ್ಲಿ ಒಂದೇ ಒಂದು ಮತದಾನ ನಡೆದಿಲ್ಲ!

Nagaland Poll: ಬೇಡಿಕೆ ಈಡೇರಿಸಿ- ಆರು ಜಿಲ್ಲೆಗಳಲ್ಲಿ ಒಂದೇ ಒಂದು ಮತದಾನ ನಡೆದಿಲ್ಲ!

Manipura: ಮತಗಟ್ಟೆ ಮೇಲೆ ಗುಂಡಿನ ದಾಳಿ… ದಿಕ್ಕಾ ಪಾಲಾಗಿ ಓಡಿದ ಮತದಾರರು

Manipura: ಮತಗಟ್ಟೆ ಮೇಲೆ ಗುಂಡಿನ ದಾಳಿ… ದಿಕ್ಕಾ ಪಾಲಾಗಿ ಓಡಿದ ಮತದಾರರು

Hamsalekha ಸಂಗೀತದಿಂದ ದೂರವಾಗುತ್ತಿರುವುದು ಯಾಕೆ?ಯಾರಿಗೆ ಬರೆಯಲಿ ಸಾಹಿತ್ಯ ಎಂದ ನಾದಬ್ರಹ್ಮ

Hamsalekha ಸಂಗೀತದಿಂದ ದೂರವಾಗುತ್ತಿರುವುದು ಯಾಕೆ?ಯಾರಿಗೆ ಬರೆಯಲಿ ಸಾಹಿತ್ಯ ಎಂದ ನಾದಬ್ರಹ್ಮ

Kalaburagi; ಬಿಜೆಪಿ ತೊರೆದು ಮರಳಿ ಕಾಂಗ್ರೆಸ್ ಸೇರಿದ ಮಾಲೀಕಯ್ಯ ಗುತ್ತೇದಾರ

Kalaburagi; ಬಿಜೆಪಿ ತೊರೆದು ಮರಳಿ ಕಾಂಗ್ರೆಸ್ ಸೇರಿದ ಮಾಲೀಕಯ್ಯ ಗುತ್ತೇದಾರ

Tour: 9 ದಿನ 4,800 ಕಿ.ಮೀ ಪ್ರಯಾಣ-ಅಡ್ವೆಂಚರ್‌ ಬೈಕ್‌ನಲ್ಲಿ 64ರ ಹಿರಿಯರ ಸಾಹಸ ಯಾನ

Tour: 9 ದಿನ 4,800 ಕಿ.ಮೀ ಪ್ರಯಾಣ-ಅಡ್ವೆಂಚರ್‌ ಬೈಕ್‌ನಲ್ಲಿ 64ರ ಹಿರಿಯರ ಸಾಹಸ ಯಾನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Desi Swara: ಕನ್ನಡ ಕಲಾವಿದನ ಅಪ್ರತಿಮ ಕಲೆ :ಕುಂಚದಲ್ಲಿ ಅರಳಿದ ಅದ್ಭುತ ಚಿತ್ತಾರ

Desi Swara: ಕನ್ನಡ ಕಲಾವಿದನ ಅಪ್ರತಿಮ ಕಲೆ :ಕುಂಚದಲ್ಲಿ ಅರಳಿದ ಅದ್ಭುತ ಚಿತ್ತಾರ

Desi Swara-ಜಗದೋದ್ಧಾರಕ ವಸುದೇವ ಸುತ…..: ಅವತಾರ ಪುರುಷನ ಜನ್ಮ ವೃತ್ತಾಂತ

Desi Swara-ಜಗದೋದ್ಧಾರಕ ವಸುದೇವ ಸುತ…..: ಅವತಾರ ಪುರುಷನ ಜನ್ಮ ವೃತ್ತಾಂತ

Desi Swara: ಶಿಶಿರದ ಸಂಗೀತ ಯಾನ: “ಗಮಭನ’ ಸಂಸ್ಥೆಯ “ಸ್ವರ ಆನಂದ್‌’

Desi Swara: ಶಿಶಿರದ ಸಂಗೀತ ಯಾನ- “ಗಮಭನ’ ಸಂಸ್ಥೆಯ “ಸ್ವರ ಆನಂದ್‌’

ವಿಂಶತಿಯ ವಿಜೃಂಭಣೆಯಲ್ಲಿ ಯುಎಇ ಬ್ರಾಹ್ಮಣ ಸಮಾಜ: 20ನೇ ವರ್ಷದಲ್ಲಿ 20 ಕಾರ್ಯಕ್ರಮಗಳ ದಾಖಲೆ

ವಿಂಶತಿಯ ವಿಜೃಂಭಣೆಯಲ್ಲಿ ಯುಎಇ ಬ್ರಾಹ್ಮಣ ಸಮಾಜ: 20ನೇ ವರ್ಷದಲ್ಲಿ 20 ಕಾರ್ಯಕ್ರಮಗಳ ದಾಖಲೆ

ಎದುರಾರೈ ನಿನಗೆ ಸಮನಾರೈ ?: ಸಾಮ್ಯತೆ ಹಾಗೂ ವ್ಯತ್ಯಾಸದೊಳಗಿನ ಅರಿವು

ಎದುರಾರೈ ನಿನಗೆ ಸಮನಾರೈ ?: ಸಾಮ್ಯತೆ ಹಾಗೂ ವ್ಯತ್ಯಾಸದೊಳಗಿನ ಅರಿವು

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!

19-kushtagi

Kushtagi:ವಿದ್ಯುತ್‌ದೀಪದ ಕಂಬಗಳಿಗೆ ಬಲ್ಬ್ ಅಳವಡಿಸುವ ವೇಳೆ ಅವಘಡ; ಪುರಸಭೆ ಸಿಬ್ಬಂದಿಗೆ ಗಾಯ

18=

Festivals: ಹಬ್ಬಗಳು ಮರೆಯಾಗುತ್ತಿವೆಯೇ?

Sagara: ರಾತ್ರೋ ರಾತ್ರಿ ಅತಿಕ್ರಮ ಮನೆ ನಿರ್ಮಾಣ… ತಹಶೀಲ್ದಾರ್‌ರಿಂದ ಪರಿಶೀಲನೆ

Sagara: ರಾತ್ರೋ ರಾತ್ರಿ ಅತಿಕ್ರಮ ಮನೆ ನಿರ್ಮಾಣ… ತಹಶೀಲ್ದಾರ್‌ರಿಂದ ಪರಿಶೀಲನೆ

Nagaland Poll: ಬೇಡಿಕೆ ಈಡೇರಿಸಿ- ಆರು ಜಿಲ್ಲೆಗಳಲ್ಲಿ ಒಂದೇ ಒಂದು ಮತದಾನ ನಡೆದಿಲ್ಲ!

Nagaland Poll: ಬೇಡಿಕೆ ಈಡೇರಿಸಿ- ಆರು ಜಿಲ್ಲೆಗಳಲ್ಲಿ ಒಂದೇ ಒಂದು ಮತದಾನ ನಡೆದಿಲ್ಲ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.