ಕುರ್ಲಾ ಬಂಟರ ಭವನದಲ್ಲಿ ಬಿಸು ಪರ್ಬ, ಬಂಟರ ದಿನಾಚರಣೆ ಸಂಭ್ರಮ
Team Udayavani, Apr 15, 2018, 4:12 PM IST
ಮುಂಬಯಿ: ಯುಗಾದಿ, ಬಿಸು, ವಿಶು ಹೀಗೆ ವಿವಿಧ ಹೆಸರಿನಲ್ಲಿ ಕರೆಯಲ್ಪಡುವ ಈ ಹಬ್ಬವು ಪ್ರಕೃತಿಯ ಆರಾಧನಾ ಹಬ್ಬವಾಗಿದೆ. ಚೈತ್ರ ಮಾಸದ ಮೊದಲ ದಿನ, ಶಾಲಿವಾಹನ ಶಖೆಯ ಆರಂಭವೇ ಯುಗಾದಿಯಾಗಿದೆ. ನಾವು ಆಚರಣೆ ಮಾಡುವ ಪ್ರತಿಯೊಂದು ಹಬ್ಬವೂ ವೈಜ್ಞಾನಿಕ ಆಧಾರದಲ್ಲಿ ನಡೆಯುತ್ತಿದೆಯಾದರೂ ಕೆಲವರು ಇದನ್ನು ಅರ್ಥೈಸಿಕೊಳ್ಳದೆ ಇದು ನಮ್ಮ ಮೂಢನಂಬಿಕೆ ಎಂದು ಕರೆಯುತ್ತಿರುವುದು ತೀರಾ ತಪ್ಪು ಕಲ್ಪನೆಯಾಗಿದೆ. ಆದರೆ ಇದು ನಿಜವಾದ ಅರ್ಥದಲ್ಲಿ ಮೂಲನಂಬಿಕೆಯಾಗಿದೆ ಎಂದು ಬಂಟರ ಸಂಘದ ಅಧ್ಯಕ್ಷ ಪದ್ಮನಾಭ ಎಸ್. ಪಯ್ಯಡೆ ನುಡಿದರು.
ಎ. 14 ರಂದು ಬೆಳಗ್ಗೆ ಕುರ್ಲಾ ಪೂರ್ವದ ಬಂಟರ ಭವನದ ಶ್ರೀಮತಿ ರಾಧಾಬಾಯಿ ಟಿ. ಭಂಡಾರಿ ಸಭಾಗೃಹದಲ್ಲಿ ಸಂಘದ ಸಾಹಿತ್ಯ ಮತ್ತು ಸಾಂಸ್ಕೃತಿಕ ಸಮಿತಿಯ ಆಶ್ರಯದಲ್ಲಿ ಜರಗಿದ ಬಿಸುಪರ್ಬ ಹಾಗೂ ಬಂಟರ ದಿನಾಚರಣೆಯನ್ನು ಉದ್ಘಾಟಿಸಿ, ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ, ಪ್ರತಿಯೊಂದು ಹಬ್ಬಕ್ಕೂ ತನ್ನದೇ ಆದ ವಿಶೇಷ ಅರ್ಥವಿದೆ. ಕೃಷಿಕರ ಹಬ್ಬವಾದ ಯುಗಾದಿ ಹಬ್ಬದ ಸಂಭ್ರಮವೇ ವಿಶೇಷತೆಯುಳ್ಳದ್ದಾಗಿದೆ. ನಾವು ನಮ್ಮ ಕಷ್ಟವನ್ನು ಸಹಿಸಿಕೊಂಡರೆ ಮಾತ್ರ ಸುಖದ ಸಿಹಿಯನ್ನು ಆಸ್ವಾದಿಸಿಲು ಸಾಧ್ಯ. ಜೀವನದಲ್ಲಿ ಬೇವು-ಬೆಲ್ಲ, ಸಿಹಿ-ಕಹಿ, ದುಃಖ ಸಂತಸ ಇವೆಲ್ಲವನ್ನು ಸಮಾನವಾಗಿ ಹಂಚಿಕೊಂಡರೆ ಮಾತ್ರ ನಮ್ಮ ಬಾಳು ಬಂಗಾರವಾಗಲು ಸಾಧ್ಯ. ನಮ್ಮ ಸಂಸ್ಕೃತಿ, ಸಂಸ್ಕಾರ, ಆಚಾರ-ವಿಚಾರವನ್ನು ನಾವು ಎಂದಿಗೂ ಮರೆಯಬಾರದು. ಇದನ್ನು ಹೊಸ ಪೀಳಿಗೆಗೆ ಕಲಿಸಿಕೊಡುವ ಹೊಣೆಗಾರಿಕೆ ನಮ್ಮೆಲ್ಲರದ್ದಾಗಿದೆ. ಬಂಟರ ಸಂಘ ಪ್ರತೀ ವರ್ಷ ಆಚರಿಸುವ ಉದ್ದೇಶವೂ ಇದಾಗಿದೆ. ಹಬ್ಬದ ಆಚರಣೆಯನ್ನು ನಮ್ಮ ಮಕ್ಕಳ ಜೊತೆಗೆ ಆಚರಿಸಿದರೆ, ಮಾತ್ರ ಹಬ್ಬಕ್ಕೆ ನಿಜವಾದ ಅರ್ಥ ಬರಲು ಸಾಧ್ಯ. ಸಂಘದ ಸಾಹಿತ್ಯ ಮತ್ತು ಸಾಂಸ್ಕೃತಿಕ ಸಮಿತಿ ಕಳೆದ ಹತ್ತು ವರ್ಷಗಳ ಹಿಂದೆ ಕಾರ್ಯಾಧ್ಯಕ್ಷರಾಗಿದ್ದ ಆನಂದ ಪಿ. ಶೆಟ್ಟಿ ಇವರ ನೇತೃತ್ವದಲ್ಲಿ ಬಿಸುಪರ್ಬವನ್ನು ಆರಂಭಿಸಿದ್ದು, ಪ್ರತೀ ವರ್ಷ ಸಂಭ್ರಮದಿಂದ ಆಚರಿಸಲಾಗುತ್ತಿದೆ. ಸಮಿತಿಯ ಪ್ರಸ್ತುತ ಕಾರ್ಯಾಧ್ಯಕ್ಷ ಕರ್ನೂರು ಮೋಹನ್ ರೈ ಮತ್ತು ಅವರ ತಂಡದ ಯಶಸ್ವಿ ಕಾರ್ಯಕ್ರಮಕ್ಕಾಗಿ ಅವರನ್ನು ಅಭಿನಂದಿಸುತ್ತೇನೆ. ಇಂದು ಸಂಘದ ವಾರ್ಷಿಕ ಪ್ರಶಸ್ತಿ ಪುರಸ್ಕೃತರಾದ ಎಲ್ಲರನ್ನು ಅಭಿನಂದಿಸಲು ಸಂತೋಷವಾಗುತ್ತಿದೆ ಎಂದು ನುಡಿದು ಬಿಸುಹಬ್ಬದ ಶುಭಾಶಯ ಸಲ್ಲಿಸಿದರು.
ಸಾಧಕರನ್ನು ಗುರುತಿಸಿ ಪುರಸ್ಕೃರಿಸುವುದು ನಮ್ಮ ಕರ್ತವ್ಯ – ಐಕಳಮುಖ್ಯ ಅತಿಥಿಯಾಗಿ ಪಾಲ್ಗೊಂಡ ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ ಇವರು ಮಾತನಾಡಿ, ಸಂಘದ ಸಾಹಿತ್ಯ ಮತ್ತು ಸಾಂಸ್ಕೃತಿಕ ಸಮಿತಿಯು ಮನಸ್ಸಿಗೆ ಮುಟ್ಟುವಂತಹ ಅರ್ಥಪೂರ್ಣ ಕಾರ್ಯಕ್ರಮವನ್ನು ನೀಡಿದೆ. ಸಂಘವು ಆಯೋಜಿಸುವ ಯಾವುದೇ ಕಾರ್ಯಕ್ರಮ ಪೂರ್ವತಯಾರಿ ಹಾಗೂ ಶಿಸ್ತಿನಿಂದ ಕೂಡಿರುತ್ತದೆ ಎಂದು ಅವರು ಹೇಳಿದರು.
ಬಂಟರೆಂಬ ಅಭಿಮಾನ ನಮ್ಮಲ್ಲಿರುವುದರಿಂದಲೇ ಇದು ಸಾಧ್ಯವಾಗಿದೆ. ಇಂದು ಸಮ್ಮಾನಿತರಾದ ಬಂಟ ಸಮಾಜದ ಕಣ್ಮಣಿಗಳು ಇಂತಹ ಸಾಧಕರನ್ನು ಗುರುತಿಸಿ ಪುರಸ್ಕೃರಿಸುವುದು ನಮ್ಮ ಕರ್ತವ್ಯವಾಗಿದೆ. ಸಾಧಕರನ್ನು ಪ್ರಶಂಸಿಸುವುದರಿಂದ ಅವರಿಗೆ ಹೆಚ್ಚಿನ ಸಂತೃಪ್ತಿ ಸಿಗುವುದಲ್ಲದೆ, ಇದರಿಂದ ಮುಂದೆಯೂ ಸ್ಫೂರ್ತಿ ದೊರೆತಂತಾಗುತ್ತದೆ. ಸಾಹಿತ್ಯ ಮತ್ತು ಸಾಂಸ್ಕೃತಿಕ ಸಮಿತಿಯ ಕಾರ್ಯಾಧ್ಯಕ್ಷ ಕರ್ನೂರು ಮೋಹನ್ ರೈ ಇವರು ತಂದೆಯಂತೆಯೇ ಅತಿ ಎತ್ತರಕ್ಕೆ ಬೆಳೆದವರು. ಸೌಮ್ಯ ಸ್ವಭಾವದ ಕರ್ನೂರು ಮುಗ್ಧ ಮಗುವಿನಂತಹ ವ್ಯಕ್ತಿಯಲ್ಲದೆ, ಉತ್ತಮ ಸಂಘಟಕರು ಆಗಿದ್ದಾರೆ ಎಂದು ನುಡಿದು ಭಾಗವಹಿಸಿದ ಎಲ್ಲರಿಗೂ ಶುಭಹಾರೈಸಿದರು.
ಸಂಘದ ವಾರ್ಷಿಕ ಪ್ರಶಸ್ತಿ ಪ್ರದಾನ
ಸಮಾರಂಭದಲ್ಲಿ ಖ್ಯಾತ ಯಕ್ಷಗಾನ ಕಲಾವಿದ ಕಣಂಜಾರು ಆನಂದ ಶೆಟ್ಟಿ ಸ್ಮರಣಾರ್ಥ ಯಕ್ಷಗಾನ ಪ್ರಶಸ್ತಿಯನ್ನು ಹಿರಿಯ ಯಕ್ಷಗಾನ ಕಲಾವಿದ, ಅರ್ಥದಾರಿ ಕೆ. ಕೆ. ಶೆಟ್ಟಿ ಇವರಿಗೆ ದಿ| ಆನಂದ ಶೆಟ್ಟಿಯವರ ಕುಟುಂಬಿಕರಾದ ಸುಧಾಕರ ಎಸ್. ಹೆಗ್ಡೆ, ರಂಜನಿ ಸುಧಾಕರ ಹೆಗ್ಡೆ, ಉದಯ್ ಶೆಟ್ಟಿ ಇವರು ಪ್ರಶಸ್ತಿಯನ್ನು ಪ್ರದಾನಿಸಿದರು. ಸಮ್ಮಾನ ಪತ್ರವನ್ನು ಸಂಘದ ಯಕ್ಷಗಾನ ಸಮಿತಿಯ ಸಂಚಾಲಕ ಬೆಳ್ಳಂಪಳ್ಳಿ ಬಾಲಕೃಷ್ಣ ಹೆಗ್ಡೆ ವಾಚಿಸಿದರು.
ಸಂಘದ ಮಹಿಳಾ ವಿಭಾಗದ ಸದಸ್ಯೆ ಜ್ಯೋತಿ ಆರ್. ಎನ್. ಶೆಟ್ಟಿ ಮಹಿಳಾ ವಿಭಾಗದ ಮೂಲಕ ಪ್ರತಿವರ್ಷ ನೀಡುವ ಅತ್ಯುತ್ತಮ ಮಹಿಳಾ ಸಾಧಕಿ ಪ್ರೇಮಾ ನಾರಾಯಣ ರೈ ಪ್ರಶಸ್ತಿಯನ್ನು ಈ ಬಾರಿ ಮುಂಬಯಿಯ ಪ್ರತಿಭಾನ್ವಿತ ರಂಗಕಲಾವಿದೆ, ಸಾಧಕಿ ಸುಧಾ ಶೆಟ್ಟಿ ಅವರಿಗೆ ಜ್ಯೋತಿ ಆರ್. ಎನ್. ಶೆಟ್ಟಿ, ರಂಜನಿ ಸುಧಾಕರ ಹೆಗ್ಡೆ, ಡಾ| ಸುನೀತಾ ಎಂ. ಶೆಟ್ಟಿ ಪ್ರಶಸ್ತಿಯನ್ನು ಪ್ರದಾನಿಸಿದರು. ಸಮ್ಮಾನ ಪತ್ರವನ್ನು ಸಂಘದ ಮಹಿಳಾ ವಿಭಾಗದ ಉಪ ಕಾರ್ಯಾಧ್ಯಕ್ಷೆ ಉಮಾಕೃಷ್ಣ ಶೆಟ್ಟಿ ವಾಚಿಸಿದರು.
ಪ್ರತಿಷ್ಠಿತ ರಾಧಾಬಾಯಿ ಟಿ. ಭಂಡಾರಿ ಸ್ಮರಣಾರ್ಥ ಪ್ರಶಸ್ತಿಯನ್ನು ಈ ಬಾರಿ ಮಹಿಳಾ ವಿಭಾಗದ ಮಾಜಿ ಕಾರ್ಯಾಧ್ಯಕ್ಷೆ, ಸಮಾಜ ಸೇವಕಿ ಲತಾ ಪ್ರಭಾಕರ ಶೆಟ್ಟಿ ಅವರಿಗೆ ಪ್ರಶಸ್ತಿ ಆಯ್ಕೆ ಸಮಿತಿಯ ಕಾರ್ಯಾಧ್ಯಕ್ಷ, ಹಿರಿಯ ಮುತ್ಸದ್ಧಿ ಎಂ. ಡಿ. ಶೆಟ್ಟಿ, ಡಾ| ಸುನೀತಾ ಎಂ. ಶೆಟ್ಟಿ, ಭಂಡಾರಿ ಕುಟುಂಬದ ಲತಾ ಪಿ. ಭಂಡಾರಿ ಹಾಗೂ ಕುಟುಂಬಸ್ಥರು ಪ್ರದಾನಿಸಿದರು. ಪ್ರಶಸ್ತಿ ಪತ್ರವನ್ನು ಮಹಿಳಾ ವಿಭಾಗದ ಕೋಶಾಧಿಕಾರಿ ಆಶಾ ವಿ. ರೈ ವಾಚಿಸಿದರು. ಪ್ರಶಸ್ತಿ ಪುರಸ್ಕೃತರನ್ನು ಶಾಲು ಹೊದೆಸಿ, ಫಲಪುಷ್ಪ, ಸ್ಮರಣಿಕೆ, ಸಮ್ಮಾನ ಪತ್ರ, ಕಿರುಕಾಣಿಕೆಯನ್ನು ಗೌರವಿಸಲಾಯಿತು. ಪ್ರಶಸ್ತಿ ಪುರಸ್ಕೃತರು ಸಂದಭೋìಚಿತವಾಗಿ ಮಾತನಾಡಿದರು.
ಇದೇ ಸಂದರ್ಭದಲ್ಲಿ ಜಯರಾಮ ಶೆಟ್ಟಿ ಸಂಪಾದಕತ್ವದ ಯಶಸ್ವಿ ಮಾಸಿಕದ ವಿಶೇಷ ಪುರವಣಿಗೆಯನ್ನು ಅಧ್ಯಕ್ಷ ಪದ್ಮನಾಭ ಎಸ್. ಪಯ್ಯಡೆ, ಐಕಳ ಹರೀಶ್ ಶೆಟ್ಟಿ ಇವರು ಬಿಡುಗಡೆಗೊಳಿಸಿದರು. ಆರಂಭದಲ್ಲಿ ಸರೋಜಿನಿ ಬಿ. ಶೆಟ್ಟಿ ಪ್ರಾರ್ಥನೆಗೈದರು. ಸಂಘದ ಸಾಹಿತ್ಯ ಮತ್ತು ಸಾಂಸ್ಕೃತಿಕ ಸಮಿತಿಯ ಕಾರ್ಯಾಧ್ಯಕ್ಷ ಕರ್ನೂರು ಮೋಹನ್ ರೈ ಅತಿಥಿ-ಗಣ್ಯರುಗಳನ್ನು ಸ್ವಾಗತಿಸಿದರು.
ವೇದಿಕೆಯಲ್ಲಿ ಗಣ್ಯರುಗಳನ್ನು ಗೌರವಿಸಲಾಯಿತು. ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದ ಮಹಾನೀಯರನ್ನು, ಮಹಿಳೆಯರನ್ನು ಗೌರವಿಸಲಾಯಿತು. ಬಂಟರವಾಣಿಯ ಗೌರವ ಸಂಪಾದಕ ಅಶೋಕ್ ಪಕ್ಕಳ ಕಾರ್ಯಕ್ರಮ ನಿರ್ವಹಿಸಿದರು. ಸಂಘದ ಗೌರವ ಪ್ರಧಾನ ಕಾರ್ಯದರ್ಶಿ ಸಿಎ ಸಂಜೀವ ಶೆಟ್ಟಿ ವಂದಿಸಿದರು.
ವೇದಿಕೆಯಲ್ಲಿ ಸಂಘದ ಉಪಾಧ್ಯಕ್ಷ ಚಂದ್ರಹಾಸ್ ಕೆ. ಶೆಟ್ಟಿ, ಗೌರವ ಪ್ರಧಾನ ಕಾರ್ಯದರ್ಶಿ ಸಿಎ ಸಂಜೀವ ಶೆಟ್ಟಿ, ಗೌರವ ಕೋಶಾಧಿಕಾರಿ ಪ್ರವೀಣ್ ಬಿ. ಶೆಟ್ಟಿ, ಜತೆ ಕಾರ್ಯದರ್ಶಿ ಮಹೇಶ್ ಎಸ್. ಶೆಟ್ಟಿ, ಜತೆ ಕೋಶಾಧಿಕಾರಿ ಗುಣಪಾಲ್ ಶೆಟ್ಟಿ ಐಕಳ, ಸಾಹಿತ್ಯ ಮತ್ತು ಸಾಂಸ್ಕೃತಿಕ ಸಮಿತಿಯ ಕಾರ್ಯಾಧ್ಯಕ್ಷ ಕರ್ನೂರು ಮೋಹನ್ ರೈ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ರಂಜನಿ ಎಸ್. ಹೆಗ್ಡೆ, ಯುವ ವಿಭಾಗದ ಕಾರ್ಯಾಧ್ಯಕ್ಷ ಶರತ್ ವಿ. ಶೆಟ್ಟಿ ಉಪಸ್ಥಿತರಿದ್ದರು. ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಿತು.
ಬಂಟರ ವ್ಯವಸಾಯ ಸಂಘ ಸ್ಥಾಪಿಸಬೇಕು: ಕುಶಲ್ ಸಿ. ಭಂಡಾರಿ
ಗೌರವ ಅತಿಥಿಯಾಗಿ ಪಾಲ್ಗೊಂಡ ಥಾಣೆ ಬಂಟ್ಸ್ ಅಸೋಸಿಯೇಶನ್ ಅಧ್ಯಕ್ಷ ಕುಶಲ್ ಸಿ. ಭಂಡಾರಿ ಇವರು ಮಾತನಾಡಿ, ಕೃಷಿ ಕಾಯಕದಲ್ಲಿ ತೊಡಗಿ ಭೂಮಿತಾಯಿಯನ್ನು ಪೂಜಿಸಿದವರು ನಾವು. ನಾವು ಆಚರಿಸುವ ಹಬ್ಬ ಹರಿದಿನಗಳು ಧಾರ್ಮಿಕ ನೆಲೆಯಲ್ಲಿ ರೂಪುಗೊಂಡವುಗಳು. ಅದನ್ನೆಂದೂ ನಾವು ಮರೆಯಬಾರದು. ಇಂದು ಸಂಘವು ನನ್ನನ್ನು ಗೌರವಿಸಿದ ಈ ಶ್ರೇಯಸ್ಸು ಥಾಣೆ ಬಂಟ್ಸ್ ಅಸೋಸಿಯೇಶನ್ಗೆ ಸಲ್ಲುತ್ತದೆ. ತುಳುನಾಡ ಮಣ್ಣಿನಲ್ಲಿ ಇಂದು ಕೃಷಿಯಾಗದೆ ಪಾಳು ಬಿದ್ದ ಭೂಮಿಯನ್ನು ಲೀಸ್ನಲ್ಲಿ ಪಡೆದು ಬಂಟರ ವ್ಯವಸಾಯ ಸಂಘವನ್ನು ಸ್ಥಾಪಿಸಲು ಮುಂದಾಗಬೇಕು ಎಂದು ಐಕಳ ಹರೀಶ್ ಶೆಟ್ಟಿ ಅವರಲ್ಲಿ ವಿನಂತಿಸಿದರು.
ಚಿತ್ರ-ವರದಿ : ಪ್ರೇಮನಾಥ ಶೆಟ್ಟಿ ಮುಂಡ್ಕೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ನಮ್ಮ ಆರಾಧನ ಪದ್ಧತಿ ಯುವ ಪೀಳಿಗೆಗೆ ಪರಿಚಯಿಸುವ ಅಗತ್ಯವಿದೆ: ರಾಕೇಶ್ ಶೆಟ್ಟಿ ಬೆಳ್ಳಾರೆ
Desi Swara: ಕನ್ನಡ ಕಲಾವಿದನ ಅಪ್ರತಿಮ ಕಲೆ :ಕುಂಚದಲ್ಲಿ ಅರಳಿದ ಅದ್ಭುತ ಚಿತ್ತಾರ
Desi Swara-ಜಗದೋದ್ಧಾರಕ ವಸುದೇವ ಸುತ…..: ಅವತಾರ ಪುರುಷನ ಜನ್ಮ ವೃತ್ತಾಂತ
Desi Swara: ಶಿಶಿರದ ಸಂಗೀತ ಯಾನ- “ಗಮಭನ’ ಸಂಸ್ಥೆಯ “ಸ್ವರ ಆನಂದ್’
ವಿಂಶತಿಯ ವಿಜೃಂಭಣೆಯಲ್ಲಿ ಯುಎಇ ಬ್ರಾಹ್ಮಣ ಸಮಾಜ: 20ನೇ ವರ್ಷದಲ್ಲಿ 20 ಕಾರ್ಯಕ್ರಮಗಳ ದಾಖಲೆ
MUST WATCH
ಹೊಸ ಸೇರ್ಪಡೆ
Jamie Dimon: ಮೋದಿ ಆರ್ಥಿಕ ನೀತಿ ಅದ್ಭುತ, ಅಮೆರಿಕದಲ್ಲೂ ಜಾರಿ ಮಾಡಿ: ಜೇಮಿ
Sunita Williams: ಮೇ 6ರಂದು 3ನೇ ಬಾರಿಗೆ ಸುನಿತಾ ವಿಲಿಯಮ್ಸ್ ಗಗನ ಯಾತ್ರೆ
Rajveer Diler: ಹೃದಯಾಘಾತದಿಂದ ಬಿಜೆಪಿ ಸಂಸದ ರಾಜ್ವೀರ್ ದಿಲೇರ್ ನಿಧನ
Scam: 25,000 ಕೋಟಿ ಬ್ಯಾಂಕ್ ಹಗರಣ ಪ್ರಕರಣ: ಅಜಿತ್ ಪವಾರ್ ಪತ್ನಿ ಸುನೇತ್ರಾಗೆ ಕ್ಲೀನ್ ಚಿಟ್
OTT Release: ವಿಜಯ್ ದೇವರಕೊಂಡ ʼಫ್ಯಾಮಿಲಿ ಸ್ಟಾರ್ʼ ಓಟಿಟಿ ರಿಲೀಸ್ಗೆ ಡೇಟ್ ಫಿಕ್ಸ್