ಪುಣೆ ತುಳುಕೂಟದ ಸಂಭ್ರಮದ 21ನೇ ವಾರ್ಷಿಕೋತ್ಸವ ಸಮಾರಂಭ
Team Udayavani, Aug 19, 2018, 5:39 PM IST
ಪುಣೆ: ಪುಣೆಯಲ್ಲಿರುವ ತುಳು ನಾಡ ಬಾಂಧವರನ್ನು ಜಾತಿ ಮತ, ಬಡವ ಬಲ್ಲಿದನೆಂಬ ಭೇದವಲ್ಲದೆ ಮಕ್ಕಳು, ಯುವಕರು, ಹಿರಿಯರು ಎಲ್ಲರನ್ನೂ ಭಾಷಾ ಬಾಂಧವ್ಯದೊಂದಿಗೆ ಬೆಸೆಯುತ್ತಾ ಇಷ್ಟೊಂದು ದೊಡ್ಡ ಉತ್ಸವವನ್ನು ಆಚರಿಸುತ್ತಿರುವ ಪುಣೆ ತುಳುಕೂಟದ ಕಾರ್ಯವೈಖರಿ ನಿಜವಾಗಿಯೂ ಅಭಿನಂದನಾರ್ಹವಾಗಿದ್ದು ಅನ್ಯ ಸಂಸ್ಥೆಗಳಿಗೆ ಮಾದರಿಯಾಗಿದೆೆ ಎಂದು ದೆಹಲಿ ಕರ್ನಾಟಕ ಸಂಘದ ಅಧ್ಯಕ್ಷರಾದ ವಸಂತ್ ಶೆಟ್ಟಿ ಬೆಳ್ಳಾರೆ ಅಭಿಪ್ರಾಯಪಟ್ಟರು.
ನಗರದ ಬಾಣೇರ್ನಲ್ಲಿರುವ ಓಣಿಮಜಲು ಜಗನ್ನಾಥ ಶೆಟ್ಟಿ ಸಾಂಸ್ಕೃತಿಕ ಬಂಟರ ಭವನದ ಗುಂಡೂರಾಜ್ ಶೆಟ್ಟಿ ಸಭಾ ಭವನದ ಲತಾ ಸುಧೀರ್ ಶೆಟ್ಟಿ ವೇದಿಕೆಯಲ್ಲಿ ನಡೆದ ಪುಣೆ ತುಳುಕೂಟದ 21ನೇ ವಾರ್ಷಿಕೋತ್ಸವದಲ್ಲಿ ದೀಪ ಪ್ರಜ್ವಲಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಸಂವಿಧಾನದ 8ನೇ ಪರಿಚ್ಛೇದಕ್ಕೆ ಸೇರುವ ಎಲ್ಲ ಆರ್ಹತೆಗಳು ನಮ್ಮ ತುಳುಭಾಷೆಗಿದ್ದರೂ ಕಾನೂನಾತ್ಮಕ ತೊಡಕುಗಳಿಂದ ಇದುವರೆಗೆ ಸಾಧ್ಯವಾಗಿಲ್ಲ. ಬಹಳಷ್ಟು ಪ್ರಯತ್ನಗಳು ಈ ಹಿಂದೆ ನಡೆದಿದ್ದರೂ ಕೂಡ ಇದು ಸಾಧ್ಯವಾಗಿಲ್ಲ. ಆದರೆ ಕಳೆದ ವರ್ಷ ನಮ್ಮ ನಿಯೋಗ ಮತ್ತೂಮ್ಮೆ ಶ್ರಮಿಸಿದ್ದರೂ ಕೂಡಾ ಕೆಲವೊಂದು ತೊಡಕುಗಳು ಎದುರಾಗಿದೆ. ಈ ಪ್ರಸ್ತಾವ ರಾಜ್ಯಮಟ್ಟದಲ್ಲಿ ಮೊದಲು ಜಾರಿಯಾದರೆ ಭವಿಷ್ಯದಲ್ಲಿ ಸಾಧ್ಯ ವಾದೀತು. ದೇಶ ಕಾಯುವ ಯೋಧನನ್ನು ಸಮ್ಮಾನಿಸುವ ಕಾರ್ಯ ಹಾಗೂ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ನಡೆದ ಇಂದಿನ ಕಾರ್ಯಕ್ರಮದಲ್ಲಿ ಭಾಗವಹಿಸಿರುವುದಕ್ಕೆ ನಿಜವಾಗಿಯೂ ಹೆಮ್ಮೆಯಾಗುತ್ತಿದೆ ಎಂದರು.
ಗೌರವ ಅತಿಥಿಗಳಾಗಿ ಉಪಸ್ಥಿತರಿದ್ದ ರಾಣಿ ಅಬ್ಬಕ್ಕ ಅಧ್ಯಯನ ಕೇಂದ್ರ ಬಂಟ್ವಾಳ ಇದರ ಅಧ್ಯಕ್ಷ ಪ್ರೊ| ತುಕಾರಾಮ ಪೂಜಾರಿ ಮಾತನಾಡಿ, ಪುಣೆಯಲ್ಲಿ ಹತ್ತು ಹಲವು ತುಳು-ಕನ್ನಡಿಗರ ಸಂಘಟನೆಗಳಿದ್ದರೂ ಎಲ್ಲರನ್ನೂ ಒಗ್ಗೂಡಿಸಿ ಮಾತೃಸ್ಥಾನದಲ್ಲಿ ನಿಂತು ತುಳುಕೂಟ ಮಾಡುತ್ತಿರುವ ಸಾಂಸ್ಕೃತಿಕ, ಭಾಷಿಕ ಸೇವೆ ಗುರುತರವಾಗಿದೆ. ಇಂದು 72ನೇ ಸ್ವಾತಂತ್ರೊÂàತ್ಸವದ ಸಂದರ್ಭ ದೇಶ ಕಾಯುವ ಸೈನಿಕನ ಸಮ್ಮಾನಿಸಿ ದೇಶಪ್ರೇಮ ಮೆರೆದಿರುವಂತೆಯೇ ಅಖಂಡ ಭಾರತದ ಕಲ್ಪನೆಯೊಂದಿಗೆ ಹಿಂದೂ ಧರ್ಮದ ರಕ್ಷಣೆಗಾಗಿ ಹೋರಾಡಿದ ಪುಣೆಯನ್ನು ಕರ್ಮಭೂಮಿಯನ್ನಾಗಿಸಿಕೊಂಡ ಶಿವಾಜಿ ಮಹಾರಾಜರನ್ನು ನೆನಪಿಸುವುದೂ ನಮ್ಮ ಕರ್ತವ್ಯವಾಗಿದೆ. ಅಂತೆಯೇ ಪೋರ್ಚುಗೀಸರನ್ನು ಏಕಾಂಗಿಯಾಗಿ ಸೆಣಸಿ ತುಳುನಾಡಿನ ರಕ್ಷಣೆ ಯನ್ನು ಮಾಡಿದ ರಾಣಿ ಅಬ್ಬಕ್ಕಳನ್ನು ನಾವು ಮರೆತಿದ್ದು ದುರಂತವಾಗಿದೆ. ದೇಶದ ಸ್ವಾತಂತ್ರÂ ಹೋರಾಟಕ್ಕೆ ತುಳುನಾಡಿನಿಂದಲೇ ಹೋರಾಟ ಆರಂಭವಾಗಿತ್ತು. ಅಂತಹ ಇತಿಹಾಸಗಳನ್ನು ನಾವು ನೆನಪಿಡಬೇಕಾಗಿದೆ. ಕೃಷಿ ಪ್ರಧಾನವಾದ ಸಂಪತ್ತನ್ನು ಹೊಂದಿದ್ದ ನಮ್ಮ ತುಳುನಾಡು ಇಂದು ಕೃಷಿಯಿಲ್ಲದೆ ಬರಡಾಗುತ್ತಿದೆ. ಆಧುನಿಕ ಯಾಂತ್ರೀಕೃತ ಬದುಕಿನಲ್ಲಿ ಪೂರ್ವಜರು ಪಾಲಿಸಿಕೊಂಡು ಬಂದ ನಮ್ಮ ಮೌಲಿಕ ಸಂಪ್ರದಾಯ, ಸಂಸ್ಕೃತಿಗಳನ್ನೂ ತುಳುವರು ಮರೆಯುತ್ತಿದ್ದು ಆಡಂಬರದ ಆಚರಣೆಗಳಿಗೆ ಪ್ರಾಧಾನ್ಯತೆ ನೀಡಲಾಗುತ್ತಿರುವುದು ದುರಂತವಾಗಿದೆ. ನಮ್ಮ ಹಿರಿಯರಿಂದ ಬಂದ ಸಂಪ್ರದಾಯ ಅಳಿಯದೆ ಮುಂದಿನ ಪೀಳಿಗೆಯೂ ಇದನ್ನು ನೆನಪಿಟ್ಟು ಪಾಲಿಸುವಂತೆ ಪ್ರೇರೇಪಿಸುವ ಕಾರ್ಯವನ್ನು ಪುಣೆ ತುಳುಕೂಟದಂತಹ ಸಂಸ್ಥೆಗಳು ಮಾಡಬೇಕಾಗಿದೆ ಎಂದರು.
ಪುಣೆ ಬಂಟರ ಸಂಘದ ಅಧ್ಯಕ್ಷ ಸಂತೋಷ್ ಶೆಟ್ಟಿ ಇನ್ನ ಕುರ್ಕಿಲ್ ಬೆಟ್ಟು ಮಾತನಾಡಿ, ಪುಣೆ ತುಳುಕೂಟ ಪುಣೆಯಲ್ಲಿನ ತುಳುನಾಡ ಬಾಂಧವರನ್ನು ಯಾವುದೇ ತಾರತಮ್ಯವಿಲ್ಲದೆ ಸಮಾಜದ ಕಟ್ಟಕಡೆಯ ಜನರನ್ನೂ ಒಟ್ಟುಸೇರಿಸಿ ನಮ್ಮ ನೂತನ ಭವನದಲ್ಲಿ ಉತ್ತಮ ಕಾರ್ಯಕ್ರಮವನ್ನು ಸಂಯೋಜಿಸಿದ್ದು ನಮ್ಮ ದೊಡ್ಡ ಸೌಭಾಗ್ಯವಾಗಿದ್ದು ಎಲ್ಲ ತುಳುವರನ್ನು ಇಲ್ಲಿ ಕಂಡಾಗ ಇದರಲ್ಲಿ ಭಾಗವಹಿಸಿದ ನನಗೆ ಹೃದಯ ತುಂಬಿ ಬಂದಿದೆ. ಈ ಭವನ ಸಮಸ್ತ ತುಳುವರಿಗೆ ಹೆಮ್ಮೆಯ ಭವನವಾಗಿದ್ದು ಎಲ್ಲರಿಗೂ ಇದರ ಪ್ರಯೋಜನ ಸಿಗಲಿದೆ. ಪುಣೆ ತುಳುಕೂಟ ಸಾಂಸ್ಕೃತಿಕ, ಸಮಾಜಮುಖೀ ಕಾರ್ಯಗಳನ್ನು ಮಾಡುತ್ತಿದ್ದು ಭವಿಷ್ಯದಲ್ಲಿ ಇನ್ನಷ್ಟು ಯಶಸ್ಸನ್ನು ಕಾಣಲಿ ಎಂದರು.
ಪುಣೆ ತುಳುಕೂಟದ ಅಧ್ಯಕ್ಷ ತಾರಾನಾಥ ಕೆ. ರೈ ತನ್ನ ಅಧ್ಯಕ್ಷತೆ ವಹಿಸಿ ಮಾತನಾಡಿ, ನಮ್ಮ 21ನೇ ವಾರ್ಷಿಕೋತ್ಸವವನ್ನು ಸದಾ ಸ್ಮರಣೀಯವಾಗಿಸುವಲ್ಲಿ ಸಾಧಕರ ಸಮ್ಮಾನ ಕಾರ್ಯಕ್ರಮ ಮುಖ್ಯವಾಗಿದೆ. ಮುಖ್ಯವಾಗಿ ದೇಶದ ರಕ್ಷಣೆಗೋಸ್ಕರ ತನ್ನ ಜೀವನವನ್ನೇ ಮುಡಿಪಾಗಿಸಿಕೊಂಡ ವೀರ ತುಳುನಾಡ ಯೋಧನನ್ನು ನಮ್ಮ ಸಂಘದಿಂದ ಸಮ್ಮಾನಿಸಿರುವುದು ತುಳುಕೂಟದ ಇತಿಹಾಸದಲ್ಲಿ ಸದಾ ನೆನಪಿಡುವಂತಹ ಕಾರ್ಯವಾಗಿದ್ದು ಅಪಾರ ಮಾನಸಿಕ ಸಂತೃಪ್ತಿಯನ್ನು ನೀಡಿದೆ. ಅದೇ ರೀತಿ ಇಂದಿನ ಕಾರ್ಯಕ್ರಮ ಯಶಸ್ವಿಯಾಗಲು ಕಾರಣರಾದ ಕಡಿಮೆ ವೆಚ್ಚದಲ್ಲಿ ಭವನ ಒದಗಿಸಿದ ಪುಣೆ ಬಂಟರ ಸಂಘ, ಇಂದಿನ ಗಣ್ಯ ಅತಿಥಿಗಳು, ಸಂಘದ ಕಾರ್ಯಕ್ರಮಕ್ಕೆ ದೊಡ್ಡ ಪ್ರೋತ್ಸಾಹ ನೀಡಿದ ಮಹಾದಾನಿ ಜಗನ್ನಾಥ ಶೆಟ್ಟಿ ಹಾಗೂ ಸಹಕಾರ ನೀಡಿದ ದಾನಿಗಳು, ಸಂಘದ ಪದಾಧಿಕಾರಿಗಳು, ಮಹಿಳಾ ವಿಭಾಗ, ಯುವ ವಿಭಾಗ, ಪಿಂಪ್ರಿ-ಚಿಂಚಾÌಡ್ ಪ್ರಾದೇಶಿಕ ಸಮಿತಿ ಹಾಗೂ ಸೇರಿದ್ದ ಪುಣೆಯ ಸರ್ವ ತುಳು-ಕನ್ನಡಿಗರಿಗೆ ಹೃದಯಪೂರ್ವಕ ಕೃತಜ್ಞತೆಗಳು. ತುಳು ಭಾಷೆ, ಸಂಸ್ಕೃತಿಯನ್ನು ಪೋಷಿಸುವ ತುಳುಕೂಟಕ್ಕೆ ಸದಾ ಬೆಂಬಲಿಸುವ ಸರ್ವ ತುಳುನಾಡ ಬಂಧುಗಳ ಪ್ರೀತಿ-ವಿಶ್ವಾಸಗಳಿಗೆ ಚಿರಋಣಿಯಾಗಿದ್ದೇವೆ. ಮುಂದೆಯೂ ನಿಮ್ಮೆಲ್ಲರ ಸಹಕಾರ ಸಂಘದ ಮೇಲಿರಲಿ ಎಂದರು.
ವೇದಿಕೆಯಲ್ಲಿ ಸಂಘದ ವಾರ್ಷಿಕ ಸಮ್ಮಾನ ಪಿಂಪ್ರಿ-ಚಿಂಚಾÌಡ್ ಬಂಟರ ಸಂಘದ ಮಾಜಿ ಅಧ್ಯಕ್ಷರಾದ ವಿಶ್ವನಾಥ ಡಿ. ಶೆಟ್ಟಿ, ಕಾರ್ಗಿಲ್ ಯುದ್ಧದಲ್ಲಿ ಹೋರಾಡಿ ಅಂಗ ವೈಫಲ್ಯವನ್ನು ಹೊಂದಿದ ನಿವೃತ್ತ ಯೋಧರಾದ ಶ್ಯಾಮರಾಜ್ ಎಡನೀರು, ಸಂಘದ ಸ್ಥಾಪಕಾಧ್ಯಕ್ಷ ಜಯ ಕೆ. ಶೆಟ್ಟಿ, ಗೌರವಾಧ್ಯಕ್ಷ ಮಿಯ್ನಾರು ರಾಜ್ ಕುಮಾರ್ ಎಂ. ಶೆಟ್ಟಿ, ಉಪಾಧ್ಯಕ್ಷರಾದ ಮೋಹನ್ ಶೆಟ್ಟಿ ಎಣ್ಣೆಹೊಳೆ, ಪ್ರಧಾನ ಕಾರ್ಯದರ್ಶಿ ಕಿರಣ್ ಬಿ. ರೈ ಕರ್ನೂರು, ಕೋಶಾಧಿಕಾರಿ ಸಂತೋಷ್ ಶೆಟ್ಟಿ ಎಣ್ಣೆಹೊಳೆ, ಪಿಂಪ್ರಿ-ಚಿಂಚಾÌಡ್ ಪ್ರಾದೇಶಿಕ ಸಮಿತಿ ಕಾರ್ಯಾಧ್ಯಕ್ಷ ಶ್ಯಾಮ್ ಸುವರ್ಣ, ಮಹಿಳಾ ವಿಭಾಗದ ಉಪ ಕಾರ್ಯಾಧ್ಯಕ್ಷೆ ಸುಜಾತಾ ಡಿ. ಶೆಟ್ಟಿ, ಯುವ ವಿಭಾಗದ ಕಾರ್ಯಾಧ್ಯಕ್ಷ ಅಡ್ವೊಕೇಟ್ ರೋಹನ್ ಪಿ. ಶೆಟ್ಟಿ, ಪಿಂಪ್ರಿ-ಚಿಂಚಾÌಡ್ ಪ್ರಾದೇಶಿಕ ಸಮಿತಿ ಕಾರ್ಯಾಧ್ಯಕ್ಷ ಶ್ಯಾಮ್ ಸುವರ್ಣ ಉಪಸ್ಥಿತರಿದ್ದರು. ಈ ಸಂದರ್ಭ ವರ್ಷದ ಶ್ರೇಷ್ಠ ಸಾಧಕನನ್ನಾಗಿ ಗುರುತಿಸಿ ಪುಣೆಯ ಹಿರಿಯ ಹೊಟೇಲ್ ಉದ್ಯಮಿ, ಸಮಾಜ ಸೇವಕ ವಿಶ್ವನಾಥ ಡಿ. ಶೆಟ್ಟಿ ಹಾಗೂ ವೀರಯೋಧ ಶ್ಯಾಮ್ರಾಜ್ ಎಡನೀರು ಇವರುಗಳನ್ನು ಸಂಘದ ವತಿಯಿಂದ ಸಮ್ಮಾನಿಸಲಾಯಿತು.
ಪ್ರತಿಭಾವಂತ ವಿದ್ಯಾರ್ಥಿಗಳನ್ನು ಹಾಗೂ ವಿವಿಧ ಕ್ಷೇತ್ರಗಳ ಸಾಧಕರನ್ನು ಸತ್ಕರಿಸಲಾಯಿತು. ಅತಿಥಿಗಳನ್ನು ಗೌರವಿಸಲಾಯಿತು. ಪುಣೆಯ ವಿವಿಧ ಸಂಘ ಸಂಸ್ಥೆಗಳ ಅಧ್ಯಕ್ಷರುಗಳನ್ನು, ಕಾರ್ಯಕ್ರಮದ ಪ್ರಾಯೋಜಕರುಗಳನ್ನು ನೀಡಿ ಗೌರವಿಸಲಾಯಿತು. ಅತಿಥಿ-ಗಣ್ಯರು ದೀಪ ಪ್ರಜ್ವಲಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ನವಿತಾ ಎಸ್. ಪೂಜಾರಿ, ಗೀತಾ ಡಿ. ಪೂಜಾರಿ, ಸರಸ್ವತಿ ಸಿ. ಕುಲಾಲ್ ಪ್ರಾರ್ಥಿಸಿದರು. ಸಂತೋಷ್ ಶೆಟ್ಟಿ ಎಣ್ಣೆಹೊಳೆ, ವಿಕೇಶ್ ರೈ ಶೇಣಿ ಅತಿಥಿಗಳನ್ನು ಪರಿಚಯಿಸಿದರು. ಶರತ್ ಶೆಟ್ಟಿ ಉಳೆಪಾಡಿ, ಪ್ರಿಯಾ ಎಚ್. ದೇವಾಡಿಗ ಸಮ್ಮಾನ ಪತ್ರ ವಾಚಿಸಿದರು. ಕಾಂತಿ ಸೀತಾರಾಮ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಣ ಮತ್ತು ಸಾಮಾಜಿಕ ಸಮಿತಿ ಕಾರ್ಯಾಧ್ಯಕ್ಷ ದಿವಾಕರ ಶೆಟ್ಟಿ ಮಾಣಿಬೆಟ್ಟು ಪ್ರವೀಣ್ ಶೆಟ್ಟಿ ಪುತ್ತೂರು ಪ್ರಾಯೋಜಿತ ವಿದ್ಯಾರ್ಥಿಗಳ ಸತ್ಕಾರವನ್ನು ನಡೆಸಿಕೊಟ್ಟರು.
ಸಂಘದ ಸಾಂಸ್ಕೃತಿಕ ಸಮಿತಿ ಕಾರ್ಯಾಧ್ಯಕ್ಷ ಶ್ರೀಧರ ಶೆಟ್ಟಿ ಕÇÉಾಡಿ, ಶಿಕ್ಷಣ ಮತ್ತು ಸಾಮಾಜಿಕ ಸಮಿತಿ ಕಾರ್ಯಾಧ್ಯಕ್ಷ ದಿವಾಕರ ಶೆಟ್ಟಿ ಮಾಣಿಬೆಟ್ಟು, ಪದಾಧಿಕಾರಿಗಳಾದ ಯಶವಂತ್ ಶೆಟ್ಟಿ ತಾಮಾರು, ವಿಶ್ವನಾಥ ಶೆಟ್ಟಿ, ಶರತ್ ಶೆಟ್ಟಿ ಉಳೆಪಾಡಿ, ಹರಿಶ್ಚಂದ್ರ ಆಚಾರ್ಯ, ಪ್ರಶಾಂತ್ ನಾಯಕ್, ಮಹಿಳಾ ವಿಭಾಗದ ಸುಜಾತಾ ಡಿ. ಶೆಟ್ಟಿ, ಉಮಾ ಎಸ್. ಶೆಟ್ಟಿ, ಶಶಿಕಲಾ ಎ. ಶೆಟ್ಟಿ, ಪ್ರಿಯಾ ಎಚ್. ದೇವಾಡಿಗ, ರಂಜಿತಾ ಆರ್. ಶೆಟ್ಟಿ, ರಮಾ ಎಸ್. ಶೆಟ್ಟಿ, ಆಶಾ ಆರ್. ಪೂಜಾರಿ, ನವಿತಾ ಎಸ್. ಪೂಜಾರಿ, ಗೀತಾ ಡಿ. ಪೂಜಾರಿ, ಸರಸ್ವತಿ ಸಿ. ಕುಲಾಲ್, ಸರಿತಾ ವೈ. ಶೆಟ್ಟಿ, ಸರಿತಾ ಟಿ. ಶೆಟ್ಟಿ, ಮಾಜಿ ಕಾರ್ಯಾಧ್ಯಕ್ಷೆಯರಾದ ಶಕುಂತಲಾ ಆರ್. ಶೆಟ್ಟಿ, ನಯನಾ ಸಿ. ಶೆಟ್ಟಿ ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.
ಮನೋರಂಜನೆಯಂಗವಾಗಿ ಸಂಘದ ಸದಸ್ಯರಿಂದ ಸಾಂಸ್ಕೃತಿಕ ಸಮಿತಿಯ ಸದಸ್ಯರಾದ ಸರಿತಾ ತುಷಾರ್ ಶೆಟ್ಟಿ ಮತ್ತು ಸರಿತಾ ವೈ ಶೆಟ್ಟಿಯವರ ನೇತೃತ್ವದಲ್ಲಿ ಸಂಘದ ಸದಸ್ಯರಿಂದ ವಿವಿಧ ಸಾಂಸ್ಕೃತಿಕ ನೃತ್ಯ ವೈವಿಧ್ಯಗಳು, ಖ್ಯಾತ ಸಂಗೀತ ವಿದುಷಿ ನಂದಿನಿ ರಾವ್ ಗುಜರ್ ಅವರಿಂದ ಸಂಗೀತ ಕಾರ್ಯಕ್ರಮ, ಬಂಟರ ಯುವ ವೇದಿಕೆ ಮುಲ್ಕಿ ಹಾಗೂ ಬಂಟರ ಮಹಿಳಾ ವಿಭಾಗ ಮುಲ್ಕಿ ಕಲಾವಿದರಿಂದ ಖ್ಯಾತ ರಂಗ ನಿರ್ದೇಶಕ ಜಗದೀಶ್ ಶೆಟ್ಟಿ ಕೆಂಚನಕೆರೆ ಇವರ ದಕ್ಷ ನಿರ್ದೇಶನದಲ್ಲಿ ತುಳು ಜಾನಪದ ಐತಿಹಾಸಿಕ, ಕ್ರಾಂತಿಕಾರಿ ತುಳು ನಾಟಕ ಸತ್ಯದ ಸಿರಿ ಪ್ರದರ್ಶನಗೊಂಡಿತು. ಕೊನೆಯಲ್ಲಿ ಭೋಜನದ ವ್ಯವಸ್ಥೆಯನ್ನು ಆಯೋಜಿಸಲಾಗಿತ್ತು.
ತುಳುಕೂಟ ಪುಣೆ ತುಳುಭಾಷೆ, ಸಂಸ್ಕೃತಿಯ ಸೇವೆ ಮಾಡುತ್ತಿದ್ದು ತುಳುವರೆಲ್ಲರ ಹೃದಯವನ್ನು ಗೆದ್ದಿದೆ ಎನ್ನಲು ಹೆಮ್ಮೆಯಾಗುತ್ತಿದೆ. ಪ್ರತಿಯೊಬ್ಬರೂ ನಮ್ಮ ಭಾಷೆ, ಸಂಸ್ಕೃತಿಯ ಬಗ್ಗೆ ಅಭಿಮಾನ ಬೆಳೆಸಿಕೊಳ್ಳುವ ಅಗತ್ಯವಿದೆ
ವಿಶ್ವನಾಥ ಡಿ. ಶೆಟ್ಟಿ , ಸಮ್ಮಾನಿತರು
ಇಂದು ನನ್ನನ್ನು ಗುರುತಿಸಿ ತುಳುಕೂಟದ ಈ ಗೌರವ ಸಿಕ್ಕಿರುವುದು ದೇಶದ ಎಲ್ಲ ಯೋಧರಿಗೆ ಸಿಕ್ಕಿದ ಗೌರವವೆಂದು ಸ್ವೀಕರಿಸುತ್ತೇನೆ. ಯಾವುದೇ ಕಷ್ಟದ ಸಂದರ್ಭದಲ್ಲಿಯೂ ಧೃತಿಗೆಡದೆ ಆತ್ಮವಿಶ್ವಾಸದೊಂದಿಗೆ ಮುನ್ನಡೆದರೆ ಜೀವನದಲ್ಲಿ ಏನನ್ನಾದರೂ ಸಾ ಧಿಸಬಹುದಾಗಿದೆ.
ಯೋಧ ಶ್ಯಾಮರಾಜ್, ಸಮ್ಮಾನಿತರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Desi Swara: ವಿಷಯ ಚಿಕ್ಕದಾದರೂ ಅದರೊಳಗಿನ ವಿಚಾರ ದೊಡ್ಡದು : ಅರಿವಿನ ಬೇಕು-ಬೇಡಗಳ ನಡುವೆ
Desi Swara: ಟ್ರೆಂಟ್ ತೀರದಲ್ಲಿ ಲಾಸ್ಯ ಮತ್ತು ಕಿಂಕಿಣಿ ಮೇಳೈಸಿದಾಗ …
Desi Swara: ಬಸ್ ಪ್ರವಾಸ ಮತ್ತು ಮಹಿಳಾ ದಿನಾಚರಣೆ: ಹೆಮ್ಮೆಯ ದುಬೈ ಕನ್ನಡಿಗ ಸಂಘ
Desi Swara: ಕನ್ನಡಿಗಾಸ್ ಸ್ಟಾರ್ ಅವಾರ್ಡ್ 2024 ಪ್ರದಾನ
Desi Swara: ಪ್ಯಾಸೇಜು ಟು ಇಂಡಿಯಾ: ಭಾರತ ಪರಂಪರೆಯ ಅನಾವರಣ, ಸಾಂಸ್ಕೃತಿಕ ವೈಭವ
MUST WATCH
ಹೊಸ ಸೇರ್ಪಡೆ
Ex-IPS officer ಸಂಜೀವ್ ಭಟ್ಗೆ 1996 ರ ಡ್ರಗ್ಸ್ ಕೇಸ್ ನಲ್ಲಿ 20 ವರ್ಷ ಜೈಲು ಶಿಕ್ಷೆ
Kejriwal; ಏಪ್ರಿಲ್ 1 ರವರೆಗೆ ಇಡಿ ಕಸ್ಟಡಿಗೆ: ಸಾರ್ವಜನಿಕರು ತಕ್ಕ ಉತ್ತರ ನೀಡುತ್ತಾರೆ
Congress candidate: ನಾನು ಹುಟ್ಟಿದಾಗ ಒಕ್ಕಲಿಗ, ಬೆಳೆಯುತ್ತ ವಿಶ್ವಮಾನವ: ಲಕ್ಷ್ಮಣ್
Kejriwal ಕುರಿತು ಅಮೆರಿಕದ ಹೇಳಿಕೆ ಸ್ವೀಕಾರಾರ್ಹವಲ್ಲ ಎಂದ ಭಾರತದ ವಿದೇಶಾಂಗ ಇಲಾಖೆ
Dinesh Gundu Rao: ಕ್ಷಯ ರೋಗ ನಿಯಂತ್ರಣ ಔಷಧ ಪೂರೈಕೆಗೆ ಕೇಂದ್ರಕ್ಕೆ ಮನವಿ; ದಿನೇಶ್