ವಿವಾದ ಅಭ್ಯಾಸವಾಗಿದೆ, ಎಲ್ಲವನ್ನೂ ಎದುರಿಸುತ್ತೇವೆ


Team Udayavani, Jun 29, 2017, 3:45 AM IST

Pejawara-Swamiji-650.jpg

ನಮಾಜು ಮಾಡಿದರೂ ತಪ್ಪಲ್ಲ. ಏಕೆಂದರೆ ಅದು ಕೃಷ್ಣಮಠದ ಧಾರ್ಮಿಕ ಚೌಕಟ್ಟಿನ ಅಥವಾ ಪ್ರಾಂಗಣದ ಸ್ಥಳವಲ್ಲ. ಊಟದ ಹಾಲ್‌, ಸಾರ್ವಜನಿಕ ಸ್ಥಳ. ಯಾತ್ರಾರ್ಥಿಗಳಾಗಿ ಬಂದ ಬೇರೆ ಬೇರೆ ಸಂಪ್ರದಾಯದವರು ಇಲ್ಲಿ ಅವರವರ ಕ್ರಮಕ್ಕೆ ತಕ್ಕಂತೆ ಖಾಸಗಿ ಪೂಜೆ ಸಲ್ಲಿಸುವುದಿದೆ. 

ಉಡುಪಿ ಶ್ರೀಕೃಷ್ಣ ಮಠದಲ್ಲಿ ಇತ್ತೀಚೆಗೆ ಪರ್ಯಾಯ ಪೀಠಾರೂಢ ಶ್ರೀ ಪೇಜಾವರ ಮಠದ ಶ್ರೀವಿಶ್ವೇಶತೀರ್ಥ ಶ್ರೀಪಾದರು ಮುಸ್ಲಿಮರಿಗೆ ಈದ್‌ ಉಪಾಹಾರ ಕೂಟವನ್ನು ಏರ್ಪಡಿಸಿದರು. ಇದನ್ನು ಹಲವರು ವಿರೋಧಿಸಿದ್ದಾರೆ, ಇನ್ನು ಹಲವರು ಬೆಂಬಲ ವ್ಯಕ್ತಪಡಿಸಿದ್ದಾರೆ. ಈ ವಿವಾದಕ್ಕೆ ಸಂಬಂಧಿಸಿ ‘ಉದಯವಾಣಿ’ ಜತೆಗೆ ಶ್ರೀಗಳು ನಡೆಸಿದ ನೇರಾನೇರ ಮಾತುಕತೆ ಇಲ್ಲಿದೆ.

ನೀವು ಆಗಾಗ ಸುದ್ದಿ ಆಗುತ್ತಲೇ ಇರ್ತೀರಿ, ವಿವಾದ ಗಳನ್ನು ಸೃಷ್ಟಿಸುತ್ತೀರಿ ಎಂಬ ಟೀಕೆ ಇದೆಯಲ್ಲ?
ವಿವಾದಗಳನ್ನು ಸೃಷ್ಟಿಸುವುದು ಹೋಗಲಿ, ನಮಗೆ ಅದರ ಕಲ್ಪನೆ ಕೂಡ ಇರುವುದಿಲ್ಲ. ಘಟನೆ ನಡೆದ ಬಳಿಕ ಇಷ್ಟೆಲ್ಲ ಪ್ರತಿಕ್ರಿಯೆಗಳು, ಕೋಲಾಹಲಗಳು ನಡೆಯುತ್ತವೆ ಎನ್ನುವುದು ಗೊತ್ತಿರುವುದಿಲ್ಲ. ಉದಾಹರಣೆಗೆ, 1970ರಲ್ಲಿ ನಾವು ಹರಿಜನರ ಕಾಲೋನಿಗೆ ಹೋದೆವು. ಅದಕ್ಕೂ ಮೊದಲು ಎರಡು ಬಾರಿ ಹೋಗಿದ್ದೆವು. ಮೊದಲ ಬಾರಿ ಹೋದಾಗ ಆ ಬಗ್ಗೆ ಯಾವುದೇ ವಿವಾದ ಹುಟ್ಟಿಕೊಳ್ಳಲಿಲ್ಲ. ಇದು ಸಹಜವೆಂದು ತಿಳಿದು ಎರಡನೆಯ ಬಾರಿ ಹೋದೆವು. ಆಗ ಆರೆಸ್ಸೆಸ್‌, ವಿಶ್ವ ಹಿಂದೂ ಪರಿಷತ್‌ನವರು ನೇತೃತ್ವ ವಹಿಸಿದ್ದರು. ಆಗ ಭಾರೀ ಕೋಲಾಹಲವಾಯಿತು. ವಿವಾದ ತಿಂಗಳುಗಟ್ಟಲೆ ನಡೆಯಿತು. ಮೂರ್‍ನಾಲ್ಕು ವರ್ಷಗಳ ಹಿಂದೆ ಬಾಗಲಕೋಟೆಯಲ್ಲಿ ಮಾಧ್ಯಮದವರು “ಕುರುಬರಿಗೆ ಮಂತ್ರ ದೀಕ್ಷೆ ಕೊಡುತ್ತೀರಾ?’ ಎಂದು ಕೇಳಿದರು. ಕೊಡುವುದಿಲ್ಲ ಎನ್ನುವುದು ಸರಿಯೆ? ನಾವು ಅಪೇಕ್ಷೆಪಟ್ಟ ಎಲ್ಲರಿಗೂ ಮಂತ್ರದೀಕ್ಷೆ ಕೊಡುತ್ತೇವೆ. ‘ಕುರುಬರಿಗೂ ಕೊಡುತ್ತೇವೆ’ ಎಂದೆ. ಹಿಂದೆಯೂ ಕೊಟ್ಟಿದ್ದೇವೆ, ಈಗಲೂ ಕೊಡುತ್ತಿದ್ದೇವೆ. ಆಗ ಭಾರೀ ಚರ್ಚೆಯಾಯಿತು. ಹೀಗಾಗಿ ವಿವಾದಗಳನ್ನು ನಾವಾಗಿ ತಂದುಕೊಳ್ಳುವುದಿಲ್ಲ, ಅದಾಗಿ ಆಗುತ್ತದೆ. ಈಗ ಈದ್‌ ಉಪಾಹಾರ ಕೂಟದ ಘಟನೆಯೂ ಹೀಗೆಯೇ. ಮತೀಯ ಸೌಹಾರ್ದಕ್ಕಾಗಿ ಕಾರ್ಯಕ್ರಮ ಏರ್ಪಡಿಸಿದೆ. ಅದೇ ದಿನ ಹಲವಾರು ದೂರವಾಣಿ ಕರೆಗಳು ಬಂದು ವಿರೋಧ ವ್ಯಕ್ತವಾಯಿತು. ಆಹ್ವಾನ ಕೊಟ್ಟ ಅನಂತರ ಆಗುವುದಿಲ್ಲ ಎನ್ನುವುದು ಸರಿಯಲ್ಲ. ಇದೂ ಕೂಡ ಭೋಜನ ಮಾಡುವ ಹಾಲ್‌ನ ಉಪ್ಪರಿಗೆಯಲ್ಲಿ ನಡೆದದ್ದು. ಕೃಷ್ಣಮಠದಲ್ಲಿ ಅನೇಕ ಕ್ರೈಸ್ತ ವಿದ್ಯಾರ್ಥಿಗಳು ಕೂಡ ಊಟ ಮಾಡಿಕೊಂಡು ಹೋಗುತ್ತಾರೆಂದು ವಿರೋಧಿಸುವವರನ್ನು ಸಮಾಧಾನಪಡಿಸಿದ್ದೆ.  

ನೀವು ಹರಿಜನ ಶಬ್ದ ಬಳಸಿದ್ದೀರಿ. ಇದು ನಿಷೇಧಗೊಂಡ ಪದ ಅಲ್ಲವೆ? 
ಹರಿಜನ ಪದ ಸಂವಿಧಾನದಲ್ಲಿಯೇ ಇದೆ. ಈ ಪದ ಗಾಂಧೀಜಿಯವರೇ ನೀಡಿದ್ದು. ಹರಿಜನ ಮತ್ತು ದಲಿತ- ಎರಡೂ ಶಬ್ದಗಳನ್ನು ತುಲನೆ ಮಾಡಿ ನೋಡಿ. ಯಾವುದು ಉತ್ತಮ ಭಾವನೆ ತರುತ್ತದೆ?  

ಹಿಂದೆ ಮೂರನೆಯ ಪರ್ಯಾಯದಲ್ಲಿ (1984-85) ಈದ್‌ ಸೌಹಾರ್ದ ಕೂಟ ಏರ್ಪಡಿಸಿದಾಗಲೂ ಆಕ್ಷೇಪಗಳು ಬಂದಿದ್ದವೆ?
ಆಗ ಇಷ್ಟು ವಿವಾದಗಳು ಆಗಲಿಲ್ಲ. ಅಂದಿನ ಕಾರ್ಯಕ್ರಮ ಈದ್‌ ಹಬ್ಬದ ದಿನ ನಡೆದದ್ದು. ಜನತಾದಳ ನಾಯಕ ಅಮರನಾಥ ಶೆಟ್ಟಿಯವರ ನೇತೃತ್ವದಲ್ಲಿ ಸಭೆ ನಡೆಯಿತು. ಮೊನ್ನೆ ನಡೆದ ಕಾರ್ಯಕ್ರಮಕ್ಕಿಂತ ದೊಡ್ಡ ಪ್ರಮಾಣದಲ್ಲಿ, ರಾಜಾಂಗಣದಲ್ಲಿ ನಡೆದ ಕಾರ್ಯಕ್ರಮವದು. ಹಿಂದೂಗಳು, ಮುಸ್ಲಿಮರು ಸೇರಿ ಸುಮಾರು 500-1000 ಜನರು ಸೇರಿದ್ದರು. ಆಗಲೂ ಕೆಲವರು ಸಿಟ್ಟುಗೊಂಡು ಪ್ರತಿಕ್ರಿಯಿಸಿ ಹೋಗಿದ್ದರು. ಮಾಧ್ಯಮಗಳಲ್ಲಿ ಗದ್ದಲ ಆಗಿರಲಿಲ್ಲ. 

ಈ ಬಗ್ಗೆ ನಿಮ್ಮೊಳಗಿನ ಅಷ್ಟಮಠಾಧೀಶರು, ನಿಮ್ಮದೇ ಶಿಷ್ಯರು, ಇತರ ಮಠಾಧೀಶರು ಏನು ಪ್ರತಿಕ್ರಿಯೆ ಕೊಟ್ಟರು? 
ನಮ್ಮ ಶಿಷ್ಯರು ಮೊನ್ನೆಯ ಕಾರ್ಯಕ್ರಮದಲ್ಲಿ ನಮ್ಮೊಂದಿಗೇ ಇದ್ದರು. ಪಲಿಮಾರು ಶ್ರೀಗಳು ನಮ್ಮನ್ನು ಬೆಂಬಲಿಸಿದ್ದಾರೆ. ಅಷ್ಟಮಠಾಧೀಶರಲ್ಲಿ ಇತರ ಯಾರೂ ಆಕ್ಷೇಪ ವ್ಯಕ್ತಪಡಿಸಲಿಲ್ಲ. ಶ್ರೀ ಮಾದಾರ ಚೆನ್ನಯ್ಯ ಸ್ವಾಮೀಜಿಯವರು ಮಾತ ನಾಡಿ ಬೆಂಬಲ ಸೂಚಿಸಿದ್ದಾರೆ. 

ರಾಜಕಾರಣಿಗಳು ಈ ಬಗ್ಗೆ ಮಾತನಾಡಿದ್ದಾರಾ ಅಥವಾ ನೀವು ಮಾತನಾಡಿಸಿದ್ದೀರಾ?
ನಾವಾಗಿ ಯಾರನ್ನೂ ಮಾತನಾಡಿಸಿಲ್ಲ. ಸಚಿವರಾದ ಯು.ಟಿ. ಖಾದರ್‌, ರಮಾನಾಥ ರೈ, ಆಂಜನೇಯ, ಜೆಡಿಎಸ್‌ನ ಎಚ್‌.ಡಿ. ಕುಮಾರಸ್ವಾಮಿ ಅವರು ಬೆಂಬಲಿಸಿ ಪತ್ರಿಕಾ ಹೇಳಿಕೆ ಕೊಟ್ಟಿದ್ದಾರೆ. ಬಿಜೆಪಿ ನಾಯಕ ಜಗದೀಶ ಶೆಟ್ಟರ್‌, ಸಂಸದ ಪ್ರತಾಪಸಿಂಹ ಬೆಂಬಲ ಕೊಟ್ಟಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಡಾ| ಜಿ.ಪರಮೇಶ್ವರ್‌ ದೂರವಾಣಿ ಮೂಲಕ ಬೆಂಬಲ ಸೂಚಿಸಿದ್ದಾರೆ. ಸಚಿವ ಡಿ.ವಿ. ಸದಾನಂದ ಗೌಡ, ಸಂಸದೆ ಶೋಭಾ ಕರಂದ್ಲಾಜೆ ವಿರೋಧ ಸೂಚಿಸಿದ್ದಾರೆ. ಸಿ.ಟಿ. ರವಿ ಮಧ್ಯಮ ಮಾರ್ಗದಲ್ಲಿ ಮಾತನಾಡಿದ್ದಾರೆ. ಉಡುಪಿಯ ಯುವ ಕಾಂಗ್ರೆಸ್‌ನವರು ಭೇಟಿಯಾಗಿ ಬೆಂಬಲ ಸೂಚಿಸಿದ್ದಾರೆ. 

ನಿಮ್ಮನ್ನು ಸದಾಕಾಲ ಮೂಲಭೂತವಾದಿಗಳೆಂದು ಕರೆಯುವವರು ಈಗ ನಿಮ್ಮನ್ನು ಬೆಂಬಲಿಸಿದ್ದಾರಾ?
ಜಾತ್ಯತೀತವಾದಿಗಳು, ಸಾಹಿತಿಗಳು, ಪ್ರಗತಿಪರರು ಬೆಂಬಲ ನೀಡಿದ್ದಾರೆ. ದಲಿತ ಸಾಹಿತಿಗಳಾದ ಡಾ| ಸಿದ್ದಲಿಂಗಯ್ಯ, ಸಿದ್ದಯ್ಯನವರು ದೂರವಾಣಿ ಕರೆ ಮಾಡಿ ಬೆಂಬಲ ಸೂಚಿಸಿದ್ದಾರೆ. ಕೆಲವರು ಈ ಬಗೆಗಿನ ಟಿವಿ ಚರ್ಚೆಯ ಸಂದರ್ಭ ದಲ್ಲಿ ‘ಬೇರೆ ವಿಷಯಗಳಲ್ಲಿ ಶ್ರೀಗಳ ಜತೆಗೆ ಭಿನ್ನಾಭಿಪ್ರಾಯವಿದ್ದರೂ ಈ ವಿಷಯದಲ್ಲಿ ಬೆಂಬಲಕ್ಕೆ ಇದ್ದೇವೆ’ ಎಂದು ಹೇಳಿದ್ದಾರಂತೆ. (ಈ ಸಂದರ್ಶನ ನಡೆಯುವ ಹೊತ್ತಿಗೆ ಶ್ರೀಕೃಷ್ಣಮಠಕ್ಕೆ ಸಾಮಾಜಿಕ ಚಿಂತಕ ಡಾ| ರಾಜಾರಾಮ್‌ ತೋಳ್ಪಾಡಿಯವರ ದೂರವಾಣಿ ಕರೆ ಬಂತು. ‘ನಾನು ನಿಮ್ಮ ಬೆಂಬಲಕ್ಕೆ ಇದ್ದೇನೆ. ಪ್ರತಿಭಟನೆ ನಡೆಯುವ ದಿನ ನಾನು ಬಂದು ಬೆಂಬಲ ಕೊಡುತ್ತೇನೆ. ನಮ್ಮ ಸ್ನೇಹಿತರೂ ಬೆಂಬಲಕ್ಕಿದ್ದಾರೆ’ ಎಂದು ತೋಳ್ಪಾಡಿ ಹೇಳಿದರು.)

ಚಿಂತಕರು, ಪ್ರಗತಿಪರರು, ಸಾಹಿತಿಗಳು ನಿಮಗೆ ಕಟ್ಟಾ ವಿರೋಧಿಗಳಾದದ್ದು ಯಾವಾಗ? 
ಮಾಸ್ತಿ ವೆಂಕಟೇಶ ಅಯ್ಯಂಗಾರ್‌, ಡಿ.ವಿ. ಗುಂಡಪ್ಪ, ದ.ರಾ. ಬೇಂದ್ರೆ, ತರಾಸು, ಸಿದ್ದವನಹಳ್ಳಿ ಕೃಷ್ಣಶರ್ಮ, ಅನಕೃರಂತಹ ಸಾಹಿತಿಗಳ ಜತೆಗೆ ಬಹಳ ಸಂಪರ್ಕವಿತ್ತು. ‘ನಾನು ಕಾಂಚಿ ಪರಮಾಚಾರ್ಯರು ಮತ್ತು ಪೇಜಾವರ ಶ್ರೀಗಳವರಿಗೆ ಮಾತ್ರ ಗೌರವ ಕೊಡುತ್ತೇನೆ’ ಎಂದು ಮಾಸ್ತಿಯವರು ಹೇಳಿದ್ದರು. ಆಗ ನಮಗೆ ಬಹಳ ಚಿಕ್ಕ ವಯಸ್ಸು, ಆದರೂ ಮಾಸ್ತಿಯವರು ಹೀಗೆ ಹೇಳಿದ್ದರು. ಜಿ.ಕೆ. ಗೋವಿಂದ ರಾವ್‌ ನಮ್ಮ ಎರಡನೆಯ ಪರ್ಯಾಯ ಕಾಲದಲ್ಲಿ ಉಪನ್ಯಾಸ ನೀಡಲು ಬಂದಿದ್ದರು. ರಾಮಜನ್ಮಭೂಮಿ ಘಟನೆಯ ಬಳಿಕ ಪ್ರಗತಿಪರರು ನಮ್ಮನ್ನು ಬಹಳ ವಿರೋಧಿಸಲು ಆರಂಭಿಸಿದರು. ಮೊದಲು ವಿರೋಧಿಸಿ ಆ ಬಳಿಕ ನಿಲುವು ಬದಲಾಯಿಸಿಕೊಂಡವರೂ ಇದ್ದಾರೆ. ಉದಾಹರಣೆಗೆ, ದಲಿತ ಕವಿ ಡಾ| ಸಿದ್ದಲಿಂಗಯ್ಯನವರು ಯುವಕರಾಗಿದ್ದಾಗ ಉಡುಪಿ ಎಂಜಿಎಂ ಕಾಲೇಜಿನಲ್ಲಿ ನಡೆದ ಸಭೆಯಲ್ಲಿ, ನಾವಿರುವಾಗಲೇ, “ಹರಿಜನ ಕಾಲೋನಿಗೆ ಹೋಗುವುದು ಬೂಟಾಟಿಕೆ’ ಎಂದು ಟೀಕಿಸಿದರು. ನಾನೂ ಉತ್ತರ ಕೊಟ್ಟೆ. ಆದರೆ ಕೆಲವು ವರ್ಷಗಳ ಅನಂತರ ತಮ್ಮ ಪುಸ್ತಕದಲ್ಲಿ ಅವರು “ಆಗ ಹೇಳಿದ್ದು ತಪ್ಪು ಅಂತ ಅನಿಸುತ್ತಿದೆ’ ಎಂದು ಬರೆದುಕೊಂಡರು. ಸಿದ್ದಯ್ಯನವರು ಹಿಂದೆ ವಿರೋಧಿಯಾಗಿದ್ದರು; ಬಳಿಕ ಬದಲಾಯಿಸಿದರು. ಪಿ. ಲಂಕೇಶ್‌ ಇರುವಾಗ ಒಮ್ಮೆ ಅವರ ಪತ್ರಿಕಾಲಯಕ್ಕೆ ಹೋಗಿದ್ದೆ. ಅನಂತರ ಅವರು ನಮ್ಮ ಪರವಾಗಿ ಒಂದು ಲೇಖನ ಬರೆದಾಗ ಜಿ.ಕೆ. ಗೋವಿಂದ ರಾವ್‌, ಮರಳುಸಿದ್ದಪ್ಪನವರು ವಿರೋಧಿಸಿ ಪತ್ರ ಬರೆದರು. ಅದನ್ನೂ ಲಂಕೇಶ್‌ ಪ್ರಕಟಿಸಿದ್ದರು. ಗೌರಿ ಲಂಕೇಶ್‌ ಕೂಡ ನಮ್ಮನ್ನು ಭೇಟಿಯಾಗುತ್ತಿದ್ದರು, ಅನಂತರ ಟೀಕಾಕಾರರಾದರು.  
ಹಿಂದೂ ಸಂಘಟನೆಗಳ ಪೈಕಿ ಈದ್‌ ಉಪಾಹಾರ ಕೂಟಕ್ಕೆ ಯಾರು ಬೆಂಬಲ ಕೊಟ್ಟರು? ಯಾರು ವಿರೋಧಿಸಿದರು? 
ಯುವಬ್ರಿಗೇಡ್‌ನ‌ ಚಕ್ರವರ್ತಿ ಸೂಲಿಬೆಲೆ, ಹಿಂದೂ ಜಾಗ ರಣ ವೇದಿಕೆಯವರು ಭೇಟಿಯಾಗಿ ಬೆಂಬಲ ಸೂಚಿಸಿದ್ದಾರೆ. ಶ್ರೀರಾಮಸೇನೆಯ ಪ್ರಮೋದ್‌ ಮುತಾಲಿಕ್‌ ವಿರೋಧ ಸೂಚಿಸಿದ್ದಾರೆ. ಆರೆಸ್ಸೆಸ್‌ನವರು ತಟಸ್ಥರಾಗಿದ್ದಾರೆ.
 
ಮುಸ್ಲಿಮರ ಪ್ರತಿಕ್ರಿಯೆ ಏನಿದೆ?
ಅನೇಕರು ಸಂತಸ ವ್ಯಕ್ತಪಡಿಸಿದ್ದಾರೆ. ಬಿಜಾಪುರದಿಂದ ಒಬ್ಬರು ಧರ್ಮಗುರು ದೂರವಾಣಿ ಕರೆ ನೀಡಿ ಸಂತೋಷ ವ್ಯಕ್ತಪಡಿಸಿದ್ದಾರೆ. 

ನಿಮ್ಮ ಈ ಸೌಹಾರ್ದ ಕ್ರಮಕ್ಕೆ ಪ್ರತಿಯಾಗಿ ಮುಸ್ಲಿಮ್‌ ಸಮಾಜದಿಂದ ನೀವು ಏನನ್ನು ನಿರೀಕ್ಷಿಸುತ್ತೀರಿ?
ನಿರ್ದಿಷ್ಟವಾಗಿ ಇಂಥದ್ದೇ ಎಂದು ಹೇಳುವುದಿಲ್ಲ. ಆದರೆ ಹಿಂದೂ ಮತ್ತು ಮುಸ್ಲಿಮರಲ್ಲಿ ಸೌಹಾರ್ದ ಬೆಳೆದರೆ ಗೋ ಹತ್ಯೆಯಂತಹ ಅನೇಕ ಸಮಸ್ಯೆಗಳು ಬಗೆಹರಿಯುತ್ತವೆ.

ನಿಮಗೆ ಈದ್‌ ಉಪಾಹಾರದ ವೇಳೆ ನಮಾಜು ಮಾಡುವುದು ಗೊತ್ತಿರಲಿಲ್ಲವಂತೆ, ಹೌದೆ?
ಹೌದು, ಗೊತ್ತಿರಲಿಲ್ಲ. ಒಂದು ವೇಳೆ ನಮಾಜು ಮಾಡಿದರೂ ತಪ್ಪಲ್ಲ. ಏಕೆಂದರೆ ಅದು ಕೃಷ್ಣಮಠದ ಧಾರ್ಮಿಕ ಚೌಕಟ್ಟಿನ ಅಥವಾ ಪ್ರಾಂಗಣದ ಸ್ಥಳವಲ್ಲ. ಊಟದ ಹಾಲ್‌, ಸಾರ್ವಜನಿಕ ಸ್ಥಳ. ಹಾಗೆ ಹೇಳುವುದಾದರೆ ಯಾತ್ರಾರ್ಥಿಗಳಾಗಿ ಬಂದ ಬೇರೆ ಬೇರೆ ಸಂಪ್ರದಾಯದವರು ಇಲ್ಲಿ ಅವರವರ ಕ್ರಮಕ್ಕೆ ತಕ್ಕಂತೆ ಖಾಸಗಿ ಪೂಜೆ ಸಲ್ಲಿಸುವುದಿದೆ. ಅದಕ್ಕೆ ನಾವೇನೂ ಆಕ್ಷೇಪ ಸಲ್ಲಿಸುವುದಿಲ್ಲ. ಅಂದು ಮುಸ್ಲಿಮರು ಉಪವಾಸ ಮುಗಿಸಿ, ಉಪಾಹಾರ ಸ್ವೀಕರಿಸುವುದಕ್ಕೆ ಮುನ್ನ ಪ್ರಾರ್ಥನೆ ಮಾಡಬೇಕೆಂದರು. ಅದೂ ಕೂಡ ಉಪ್ಪರಿಗೆಯಲ್ಲಿ. ನಾನೂ ಅಲ್ಲಿರಲಿಲ್ಲ; ಪೂಜೆಗೆ ತೆರಳಿದ್ದೆ. 

ಪರ್ಯಾಯ ಮುಗಿಯುವುದರೊಳಗೆ ಇನ್ನೇನಾದರೂ ವಿವಾದ ಸೃಷ್ಟಿಯಾಗುವ ಸಾಧ್ಯತೆ ಇದೆಯೆ?
ನನ್ನ ಕೈಯಲ್ಲಿಲ್ಲ. ಎಲ್ಲವೂ ತನ್ನಷ್ಟಕ್ಕೆ ತಾನೇ ಆಗುತ್ತದೆ. 

ಒಂದೆಡೆ ಗುರು, ಇನ್ನೊಂದೆಡೆ ಗಾಂಧಿ, ಮತ್ತೂಂದೆಡೆ ಗುರೂಜಿ (ಆರೆಸ್ಸೆಸ್‌ ಸರಸಂಘ ಚಾಲಕರಾಗಿದ್ದ ಗುರೂಜಿ ಗೋಳ್ವಲ್ಕರ್‌) ಪ್ರಭಾವ ನಿಮ್ಮ ಮೇಲೆ ಬಿದ್ದಿದೆ. ಇವು ಒಂದಕ್ಕೊಂದು ವಿರುದ್ಧ ವಲ್ಲದಿದ್ದರೂ ನಿಭಾಯಿಸಲು ಕಷ್ಟವಾಗಲಿಲ್ಲವೆ? 
ಇನ್ನೊಬ್ಬರಿದ್ದಾರೆ, ಜಯಪ್ರಕಾಶ್‌ ನಾರಾಯಣ್‌. ಸಮಾಜವಾದ, ಗಾಂಧೀವಾದ, ಹಿಂದೂತ್ವವಾದ. ಆರ್ಥಿಕ ಸಮಾ ನತೆಯ ವಿಚಾರಕ್ಕೆ ಬಂದಾಗ ನಾವು ಸಮಾಜವಾದಿಗಳೇ. ಕೇವಲ ಜೆಪಿ ಮಾತ್ರವಲ್ಲದೆ ರಾಮಮನೋಹರ ಲೋಹಿಯಾ, ನರೇಂದ್ರದೇವ್‌ ಅವರ ಕಾಲದ ಚರಿತ್ರೆಗಳನ್ನು ಓದಿ ಪ್ರಭಾವಿತನಾಗಿದ್ದೇನೆ. ಇನ್ನೊಂದೆಡೆ ಗಾಂಧೀಜಿ, ವಿನೋಬಾಭಾವೆ, ‘ಹರಿಜನ’ ಪತ್ರಿಕೆಯ ಸಂಪಾದಕರಾಗಿದ್ದ ಕಿಶೋರ್‌ಲಾಲ್‌ ಘನಶ್ಯಾಮ ಮಶ್ರುವಾಲ – ಹೀಗೆ ಅನೇಕರ ಪ್ರಭಾವ ನಮ್ಮ ಮೇಲೆ ಆಗಿದೆ. ಆರೆಸ್ಸೆಸ್‌, ಹಿಂದೂ ಸಂಘಟನೆಗಳ ಸಂಪರ್ಕ ಮೊದಲಿನಿಂದಲೂ ಇದೆ. ಇವುಗಳಲ್ಲಿ ಯಾವುದನ್ನು ಅನುಸರಣೆಗೆ ತರಲು ಸಾಧ್ಯವೋ ಅದನ್ನು, ಬೇಕಾದ ಅಂಶವನ್ನು ಎತ್ತಿಕೊಳ್ಳುತ್ತೇವೆ, ಸಾಧ್ಯವಾಗದ್ದನ್ನು ಬಿಟ್ಟುಬಿಡುತ್ತೇವೆ. 

ನೀವು ಒಂದೆಡೆ ತೀರಾ ಸಂಪ್ರದಾಯವಾದಿಗಳು, ಮತ್ತೂಂದೆಡೆ ಪ್ರಗತಿಪರರು. ಇವು ಒಂದಕ್ಕೊಂದು ವಿರುದ್ಧವಲ್ಲವೆ?
ಪೂಜೆಯ ಹೊತ್ತಿಗೆ ಸಂಪ್ರದಾಯವನ್ನು ಕಟ್ಟುನಿಟ್ಟಾಗಿ ಪಾಲಿಸುತ್ತೇವೆ. ಆಹಾರ ಸ್ವೀಕಾರವೂ ಹೀಗೆಯೇ. ಉದಾಹರಣೆಗೆ, ಚಾತುರ್ಮಾಸ್ಯವ್ರತದ ಸಂದರ್ಭ ಆಹಾರ ಸ್ವೀಕಾರ ವಿಚಾರದಲ್ಲಿ ಸಂಪ್ರದಾಯವನ್ನು ಕಟ್ಟುನಿಟ್ಟಾಗಿ ಪಾಲಿಸುತ್ತೇವೆ. ಶಾಸ್ತ್ರಪಾಠವನ್ನು ಬಿಡುವುದಿಲ್ಲ. ಪೂಜೆ ಮುಗಿದ ಬಳಿಕ ಎಲ್ಲರೊಂದಿಗೆ ಸಮನಾಗಿ ಇರುತ್ತೇವೆ. ಹೀಗೆ ಸಮನ್ವಯ ಮಾಡಿಕೊಳ್ಳುತ್ತೇವೆ. 

ನಿಮಗೀಗ 86 ವರ್ಷ ವಯಸ್ಸು. ಇಂತಹ ಸಂದಿಗ್ಧಗಳು, ವಿವಾದಗಳು ನಿಮ್ಮನ್ನು ಅಧೀರರಾಗಿ ಮಾಡುವುದಿಲ್ಲವೆ?
ಇಲ್ಲ. ನಮಗೆ ಇದು ಅಭ್ಯಾಸವಾಗಿ ಹೋಗಿದೆ. ಹರಿಜನ ಕಾಲೋನಿಗೆ ಹೋದಾಗ ಎದ್ದ ವಿವಾದದ ಸಂದರ್ಭ ಧೈರ್ಯ ಮಾಡಿಕೊಂಡೆ. ಹಿಂದೆ ಸರಿಯಲಿಲ್ಲ. ಟೀಕೆಗೆ ಹೆದರಿ ಎಲ್ಲಿ ಹಿಂದೆ ಸರಿಯುತ್ತಾರೋ ಎಂದು ಆರೆಸ್ಸೆಸ್‌ನವರಿಗೆ ಹೆದರಿಕೆ ಇತ್ತು. ಟೀಕೆಗೆ ಹೆದರಿ ಹಿಂಜರಿದ ಸ್ವಾಮಿಗಳೂ ಇದ್ದರು. ಕನಕನ ಕಿಂಡಿಯ ಸಮಯದಲ್ಲಿಯೂ ವಿವಾದ ಉಂಟಾಗಿತ್ತು. ಇದೆಲ್ಲವನ್ನೂ ಎದುರಿಸುತ್ತೇವೆ. 

ಧೈರ್ಯದ ಗುಟ್ಟೇನು?
ಮಹಾತ್ಮಾ ಗಾಂಧೀಜಿ ಅವರ ಚರಿತ್ರೆಯನ್ನು, ಆಗಿನ ಸತ್ಯಾಗ್ರಹಿಗಳ ಹೋರಾಟದ ಇತಿಹಾಸವನ್ನು ನಾನು ಹಿಂದೆ ಓದಿದ್ದೆ. ಅದು ಸ್ವಾತಂತ್ರ್ಯಪೂರ್ವದಲ್ಲಿ ಬಾರಕೂರು ಭಂಡಾರಕೇರಿ ಮಠದಲ್ಲಿ ಕಲಿಯುತ್ತಿರುವಾಗ. ಸತ್ಯಾಗ್ರಹಿಗಳ ಹೋರಾಟದ ದಾರಿ, ಧ್ಯೇಯ, ನಿಷ್ಠೆ ನಮಗೆ ಸ್ಫೂರ್ತಿ ನೀಡಿದೆ.
– ಶ್ರೀ ವಿಶ್ವೇಶತೀರ್ಥರು‌ ಪೇಜಾವರ ಮಠಾಧೀಶರು 

 ಸಂದರ್ಶನ: ಮಟಪಾಡಿ ಕುಮಾರಸ್ವಾಮಿ

ಟಾಪ್ ನ್ಯೂಸ್

Rahul Gandhi 3

BJP ಮಾಧ್ಯಮಗಳಿಂದ ನನಗೆ ನಿತ್ಯ ನಿಂದನೆ: ರಾಹುಲ್‌ ಗಾಂಧಿ ಆರೋಪ

1-qewqeqwe

TIME; ವಿಶ್ವದ 100 ಪ್ರಭಾವಿಗಳ ಪೈಕಿ ಆಲಿಯಾ, ಪ್ರಿಯಂವದ

1-aewr

DRDO; ನಿರ್ಭಯ್‌ ಪರೀಕ್ಷಾರ್ಥ ಉಡಾವಣೆ ಯಶಸ್ವಿ

1eewqe

Iran ವಶದಲ್ಲಿದ್ದ ಹಡಗಿನ ಮಹಿಳಾ ಸಿಬಂದಿ ವಾಪಸ್‌

vachanananda

Panchamasali ಎಂಬ ಕಾರಣಕ್ಕೆ ಯತ್ನಾಳ್‌ಗೆ ಸಿಎಂ ಅವಕಾಶ ನಿರಾಕರಣೆ: ವಚನಾನಂದ ಶ್ರೀ

police crime

Chitradurga: ಅನ್ಯಕೋಮಿನ ಯುವತಿಗೆ ಡ್ರಾಪ್ ನೀಡಿದ್ದಕ್ಕೆ ಹಲ್ಲೆ

1-wewq-eqwe

IPL; ರೋಚಕ ಪಂದ್ಯದಲ್ಲಿ ಪಂಜಾಬ್‌ ಎದುರು 9 ರನ್ ಜಯ ಸಾಧಿಸಿದ ಮುಂಬೈ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಉಳಿದ ಕಡೆ ಸಚಿವರ ಕುಟುಂಬಕ್ಕೆ ಟಿಕೆಟ್‌ ಕೊಟ್ಟರು, ಕೋಲಾರದಲ್ಲಿ ಮಾತ್ರ ಏಕೆ ಹೀಗೆ?

Kolar:ಉಳಿದ ಕಡೆ ಸಚಿವರ ಕುಟುಂಬಕ್ಕೆ ಟಿಕೆಟ್‌ ಕೊಟ್ಟರು, ಕೋಲಾರದಲ್ಲಿ ಮಾತ್ರ ಏಕೆ ಹೀಗೆ?

Elections ಹೊಸದಲ್ಲ, ಸ್ಪರ್ಧೆ ಮಾತ್ರ ಹೊಸದು: ಮೃಣಾಲ್‌ ಹೆಬ್ಬಾಳ್ಕರ್

Elections ಹೊಸದಲ್ಲ, ಸ್ಪರ್ಧೆ ಮಾತ್ರ ಹೊಸದು: ಮೃಣಾಲ್‌ ಹೆಬ್ಬಾಳ್ಕರ್

ಡೌಟೇ ಬೇಡ, ಜೋಡೆತ್ತುಗಳ ಹಾಗೆ ನಾನು, ಅನಂತ ಹೆಗಡೆ ಇಬ್ಬರೂ ಕೆಲಸ ಮಾಡುತ್ತೇವೆ…

ಡೌಟೇ ಬೇಡ, ಜೋಡೆತ್ತುಗಳ ಹಾಗೆ ನಾನು, ಅನಂತ ಹೆಗಡೆ ಇಬ್ಬರೂ ಕೆಲಸ ಮಾಡುತ್ತೇವೆ…

ಪ್ರತೀ ಊರಲ್ಲೂ ಗುಣಮುಖರಾದ 10ರಿಂದ 20 ಹೃದ್ರೋಗಿ ಕುಟುಂಬಗಳಿವೆ, ಅವರೇ ಕಾರ್ಯಕರ್ತರು

ಪ್ರತೀ ಊರಲ್ಲೂ ಗುಣಮುಖರಾದ 10ರಿಂದ 20 ಹೃದ್ರೋಗಿ ಕುಟುಂಬಗಳಿವೆ, ಅವರೇ ಕಾರ್ಯಕರ್ತರು

S. T. Somashekhar; ಇಷ್ಟೆಲ್ಲ ಅವಮಾನ ಆದ ಮೇಲೆ ಅಲ್ಲಿದ್ದು ಏನು ಮಾಡಲಿ?

S. T. Somashekhar; ಇಷ್ಟೆಲ್ಲ ಅವಮಾನ ಆದ ಮೇಲೆ ಅಲ್ಲಿದ್ದು ಏನು ಮಾಡಲಿ?

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

30

CET Exam: ಮೊದಲ ದಿನ ಸುಸೂತ್ರವಾಗಿ ನಡೆದ ಸಿಇಟಿ

1-wqeqwe

Maharashtra; ರತ್ನಾಗಿರಿ- ಸಿಂಧುದುರ್ಗದಲ್ಲಿ ರಾಣೆ vs ಠಾಕ್ರೆ ಕಾದಾಟ

1-HM

Mathura ನನ್ನನ್ನು ಗೋಪಿಕೆಯೆಂದು ಭಾವಿಸುವೆ: ಬಿಜೆಪಿ ಅಭ್ಯರ್ಥಿ ಹೇಮಾ

Rahul Gandhi 3

BJP ಮಾಧ್ಯಮಗಳಿಂದ ನನಗೆ ನಿತ್ಯ ನಿಂದನೆ: ರಾಹುಲ್‌ ಗಾಂಧಿ ಆರೋಪ

1-qewqeqwe

TIME; ವಿಶ್ವದ 100 ಪ್ರಭಾವಿಗಳ ಪೈಕಿ ಆಲಿಯಾ, ಪ್ರಿಯಂವದ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.