ಅಸ್ಸಾಂ ಎನ್‌ಆರ್‌ಸಿ: ಲಾಭ-ನಷ್ಟ ಯಾರಿಗೆ?


Team Udayavani, Aug 4, 2018, 6:00 AM IST

c-2.jpg

ಅಕ್ರಮ ಬಾಂಗ್ಲಾ ವಲಸಿಗರನ್ನು ಹೊರಹಾಕುವ ಭರವಸೆಯಿಂದಾಗಿಯೇ ಬಿಜೆಪಿಗೆ ಅಸ್ಸಾಂನಲ್ಲಿ ಹೆಚ್ಚು ಸ್ಥಾನ ಗೆಲ್ಲಲು ಸಾಧ್ಯವಾಯಿತು. ಲೋಕಸಭಾ ಚುನಾವಣೆ ಎದುರಿದ್ದು, ಕೊಟ್ಟ ಮಾತನ್ನು ಉಳಿಸಿಕೊಳ್ಳುವ ಅನಿವಾರ್ಯತೆ ಬಿಜೆಪಿಗಿದೆ. ನೆರೆಯ ಪ.ಬಂಗಾಳದಲ್ಲಿ ಶೇ.30 ರಷ್ಟು ಮತದಾರರು ಮುಸಲ್ಮಾನರೇ ಆಗಿದ್ದು ಇವರನ್ನು ಎದುರು ಹಾಕಿಕೊಳ್ಳುವುದು ಮಮತಾಗೆ ಸಾಧ್ಯವಿಲ್ಲ. ಎನ್‌ಆರ್‌ಸಿ ವಿರುದ್ಧ ಹಾಗಾಗಿಯೇ ದೊಡ್ಡ ಧ್ವನಿ ಎತ್ತಿದ್ದಾರೆ. ಕಾಂಗ್ರೆಸ್‌ ಭಾರೀ ಇಕ್ಕಟ್ಟಿನ ಪರಿಸ್ಥಿತಿಯಲ್ಲಿ ಸಿಲುಕಿಹಾಕಿಕೊಂಡಿದೆ. ಈ ಮಧ್ಯೆ ಎಡಪಕ್ಷಗಳ ಮೌನವೇ ಸೋಜಿಗ.

ನಾವು ಅಧಿಕಾರಕ್ಕೆ ಬಂದರೆ ಅಸ್ಸಾಂನಲ್ಲಿರುವ ಎಲ್ಲ ಅಕ್ರಮ ಬಾಂಗ್ಲಾದೇಶೀಯರನ್ನು ಹೊರಗೆ ಹಾಕುತ್ತೇವೆ… ಇಂಥದ್ದೊಂದು ಹೇಳಿಕೆ ಮೂಲಕವೇ ಅಸ್ಸಾಂನಲ್ಲಿ ಅಧಿಕಾರಕ್ಕೆ ಬಂದಿರುವುದು ಬಿಜೆಪಿ. 2014ಲೋಕಸಭೆ ಮತ್ತು ನಂತರದಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲೂ ಅಸ್ಸಾಂ ಜನ ಬಿಜೆಪಿ ಕೈ ಹಿಡಿದಿದ್ದಾರೆ. ಅಲ್ಲದೆ ಮೇಲಿನ ಮಾತುಗಳು 2014ರ ಲೋಕಸಭೆ ಚುನಾವಣೆ ವೇಳೆ ಮೋದಿ ಅವರು ಭಾಷಣ ಮಾಡುವಾಗ ಹೇಳಿದವುಗಳಾಗಿರುವುದರಿಂದ ಮತ್ತು ಇನ್ನೊಂದು ವರ್ಷದಲ್ಲಿ ಮತ್ತೆ ಲೋಕಸಭೆ ಚುನಾವಣೆ ಬಂದಿರುವುದರಿಂದ ಅನಿವಾರ್ಯವಾಗಿ ಆಡಿದ ಮಾತಿನಂತೆ ನಡೆದುಕೊಳ್ಳಬೇಕಾದ ಅನಿವಾರ್ಯತೆಗೆ ಬಿಜೆಪಿ ಸಿಲುಕಿದೆ. 

ಇದೀಗ ದೇಶಾದ್ಯಂತ ಸದ್ದು ಮಾಡಿರುವ ನಾಗರಿಕರ ರಾಷ್ಟ್ರೀಯ ನೋಂದಣಿ ಹಿನ್ನೆಲೆಯೂ ಇದೇ. ದೇಶಕ್ಕೆ ಸ್ವಾತಂತ್ರ್ಯ ಬಂದಾಗಿನಿಂದ ಇಲ್ಲಿವರೆಗೆ ಅಸ್ಸಾಂನಲ್ಲಿ ಈ ಸಮಸ್ಯೆ ಇದೆ. 1951ರಲ್ಲೇ ಅಸ್ಸಾಂನಲ್ಲಿರುವ ಅಕ್ರಮ ವಿದೇಶಿಯರ ಬಗ್ಗೆ ಗಣತಿ ಮಾಡಿದರೂ ಅದನ್ನು ಬಹಿರಂಗ ಮಾಡಲೇ ಇಲ್ಲ. ಇದಕ್ಕೆ ಕಾರಣ ಪಾಕಿಸ್ತಾನ ಎಲ್ಲಿ ಅಸ್ಸಾಂ ಅನ್ನು ಪೂರ್ವ ಪಾಕಿಸ್ತಾನವಾದ ಬಾಂಗ್ಲಾದೇಶಕ್ಕೆ ಸೇರಿಸಿಬಿಡಿ ಎಂದು ಒತ್ತಾಯಿಸುತ್ತದೆಯೋ ಎಂಬ ಕಾರಣಕ್ಕಾಗಿ ಆಗ ತಡೆ ಹಿಡಿಯಲಾಗಿತ್ತು. ಆದರೆ 1971ರಲ್ಲಿ ನಡೆಸಿದ ಜನಗಣತಿಯಲ್ಲಿ ಅಸ್ಸಾಂನಲ್ಲಿರುವ ಮೂಲನಿವಾಸಿಗರು ಮತ್ತು ಅಕ್ರಮ ವಲಸಿಗರ ಸಂಖ್ಯೆ ಖಚಿತವಾಗಿತ್ತು. ಆದರೆ, ನಿಜಕ್ಕೂ ಸಮಸ್ಯೆ ಶುರುವಾಗಿದ್ದು ಆ ನಂತರದಲ್ಲೇ.

ಸ್ವಾತಂತ್ರ್ಯ ಬಂದಾಗಿನಿಂದಲೂ ಅಸ್ಸಾಂ, ಪಶ್ಚಿಮ ಬಂಗಾಳ ಸೇರಿದಂತೆ ಭಾರತದ ಈಶಾನ್ಯ ಭಾಗದಲ್ಲಿ ಈ ಅಕ್ರಮ ವಲಸಿಗರ ಸಮಸ್ಯೆ ಇದ್ದೇ ಇದೆ. ಈ ಅಕ್ರಮ ವಲಸಿಗರು ಇಲ್ಲೇ ಶಾಶ್ವತವಾಗಿ ನೆಲೆಸಿ ತಮ್ಮ ಹಕ್ಕುಗಳನ್ನು ಕಿತ್ತುಕೊಳ್ಳುತ್ತಿದ್ದಾರೆ ಎಂಬ ಆರೋಪ ಸ್ಥಳೀಯರದ್ದು. ತಮ್ಮ ಭೂಮಿ ಮತ್ತು ತಮ್ಮ ಉದ್ಯೋಗಗಳನ್ನು ಹೆಚ್ಚಿನದಾಗಿ ಇವರೇ ಕಸಿದುಕೊಳ್ಳುತ್ತಿದ್ದಾರೆ ಎಂಬ ಆಕ್ರೋಶವೂ ಇದೆ. ಜನರ ಒಳಗಿನ ಈ ಆಕ್ರೋಶ ಸ್ವಾತಂತ್ರ್ಯ ನಂತರದಲ್ಲಿ ರಾಜಕೀಯ ಪಕ್ಷಗಳ ಚುನಾವಣಾ ವಿಚಾರವಾಗಿದೆಯೇ ಹೊರತು, ಅದು ಪರಿಹಾರವಾಗಿದ್ದು ಎಂದಿಗೂ ಇಲ್ಲ. 

ಹೀಗಾಗಿಯೇ ಈಗ ಕೇಂದ್ರದ ಎನ್‌ಡಿಎ ಸರ್ಕಾರ ಮತ್ತು ಅಸ್ಸಾಂನಲ್ಲಿನ ಬಿಜೆಪಿ ಸರ್ಕಾರ ಬಿಡುಗಡೆ ಮಾಡಿರುವ ನಾಗರೀಕರ ರಾಷ್ಟ್ರೀಯ ನೋಂದಣಿ ಕರಡು ಪಟ್ಟಿಗೆ ಭಾರೀ ಪರ-ವಿರೋಧ ಕೇಳಿಬಂದಿರುವುದು. ಈ ಹಿಂದೆ ಯಾರು ಅಸ್ಸಾಂ, ಪಶ್ಚಿಮ ಬಂಗಾಳದಲ್ಲಿರುವ ಅಕ್ರಮ ಬಾಂಗ್ಲಾ ವಲಸಿಗರನ್ನು ವಾಪಸ್‌ ಅಟ್ಟಬೇಕು ಎಂದಿದ್ದವರು ಈಗ ಮನಸ್ಸು ಬದಲಿಸಿ ಅವರೆಲ್ಲಿ ಹೋಗಬೇಕು ಎಂಬ ಪ್ರಶ್ನೆ ಕೇಳುತ್ತಿದ್ದಾರೆ. ಸದ್ಯಕ್ಕೆ ತೀರಾ ಕುತೂಹಲ ಘಟ್ಟಕ್ಕೆ ಬಂದು ತಲುಪಿದೆ ಈ ವಿಚಾರ. 

ಅಷ್ಟಕ್ಕೂ ಈ ಅಕ್ರಮ ವಲಸಿಗರ ವಿಚಾರ ಇಡೀ ದೇಶಕ್ಕೆ ತಲೆನೋವಾಗಿರುವುದು ಏಕೆ ಗೊತ್ತೇ? ಸರ್ಕಾರಿ ದಾಖಲೆಗಳ ಪ್ರಕಾರವೇ ಇಡೀ ದೇಶದಲ್ಲಿ ಇಂದು ಸರಿಸುಮಾರು 2 ಕೋಟಿ ಅಕ್ರಮ ವಲಸಿಗರು ಇದ್ದಾರೆ. ಎನ್‌ಆರ್‌ಸಿ ಕರಡು ವರದಿಯಂತೆ ಪುಟ್ಟ ರಾಜ್ಯವಾದ ಅಸ್ಸಾಂವೊಂದರಲ್ಲಿ 40 ಲಕ್ಷ ಅಕ್ರಮ ಬಾಂಗ್ಲಾ ವಲಸಿಗರು ಇದ್ದಾರೆ. ಇನ್ನು ಪಶ್ಚಿಮ ಬಂಗಾಳದಲ್ಲಿ 80 ಲಕ್ಷ ಇರಬಹುದು ಎಂಬ ಅನುಮಾನವಿದೆ. 2004ರಲ್ಲಿ ಆಗಿನ ಯುಪಿಎ ಸರ್ಕಾರವೇ ಹೇಳಿದ ಪ್ರಕಾರ ಪಶ್ಚಿಮ ಪಂಗಾಳದಲ್ಲಿ 60 ಲಕ್ಷ ಅಕ್ರಮ ಬಾಂಗ್ಲಾ ವಲಸಿಗರು ಇದ್ದರು. ಈ ಸಂಖ್ಯೆ ನಂತರದ ದಿನದಲ್ಲಿ ಹೆಚ್ಚಾಗಿದೆ ಎಂಬ ವಾದವಿದೆ. ಅಲ್ಲದೆ ಸರ್ಕಾರಿ ದಾಖಲೆಗಳ ಪ್ರಕಾರವೇ ವರ್ಷಕ್ಕೆ ಸುಮಾರು 3 ಲಕ್ಷ ಅಕ್ರಮ ಬಾಂಗ್ಲಾ ವಲಸಿಗರು ದೇಶ ಪ್ರವೇಶಿಸುತ್ತಿದ್ದಾರೆ. ಇದು 

ಭಾರತದ ಮಟ್ಟಿಗೆ ತಲೆನೋವಿನ ವಿಚಾರವಾಗಿದೆ. ಸದ್ಯ ಇಲ್ಲೇ ಇರುವ ಜನರಿಗೆ ಉದ್ಯೋಗ, ಆಹಾರ ಸೌಲಭ್ಯ ನೀಡುವಲ್ಲಿ ಸರ್ಕಾರಗಳು ಎಡುವುತ್ತಿವೆ. ಇಂಥದ್ದರಲ್ಲಿ ಬಾಂಗ್ಲಾದಿಂದ ಬರುತ್ತಿರುವ ಅಕ್ರಮ ವಲಸಿಗರಿಗೆ ಎಲ್ಲಿಂದ ಸೌಲಭ್ಯ ನೀಡುವುದು ಎಂಬ ಪ್ರಶ್ನೆ ಎದುರಾಗಿದೆ. 
ಇದೇ ಸಮಸ್ಯೆ ಅಸ್ಸಾಂ, ಪಶ್ಚಿಮ ಬಂಗಾಳ ರಾಜ್ಯಗಳನ್ನು ಬಹು ಹಿಂದಿನಿಂದಲೂ ಕಾಡುತ್ತಿದೆ. 1983ರ ನೀಲೇ ಹಿಂಸಾಚಾರಕ್ಕೂ ಇದೇ ಕಾರಣವಾಗಿತ್ತು. ಆಗ ಬಾಂಗ್ಲಾ ವಲಸಿಗರನ್ನು ಗುರಿಯಾಗಿಸಿ ನಡೆಸಿದ ಹಿಂಸಾಚಾರದಲ್ಲಿ ಸರಿಸುಮಾರು 2000 ಮಂದಿ ಮೃತರಾಗಿದ್ದರು. ಇದಾದ ಬಳಿಕವೇ ಅಂದಿನ ಪ್ರಧಾನಿ ರಾಜೀವ್‌ ಗಾಂಧಿ ಅವರು ಅಸ್ಸಾಂ ಒಪ್ಪಂದ ಮಾಡಿಕೊಂಡು ಅಕ್ರಮ ವಲಸಿಗರನ್ನು ಗುರುತಿಸುವ ಕೆಲಸ ಆರಂಭಿಸಿದ್ದರು. 

ಆದರೆ, ಇಂದಿಗೂ ಈ ಸಮಸ್ಯೆ ಬಗೆಹರಿದೇ ಇಲ್ಲ. ಹೀಗಾಗಿಯೇ ಅಸ್ಸಾಂನ ಹಿಂದಿನ ಮುಖ್ಯಮಂತ್ರಿ ಕಾಂಗ್ರೆಸ್‌ನ ತರುಣ್‌ ಗೋಗೋಯ್‌ ಅವರೇ ಎನ್‌ಆರ್‌ಸಿ ಕುರಿತಂತೆ ಒಂದು ಐಡಿಯಾ ಹೊರಹಾಕಿದ್ದರು. ಈ ಬಗ್ಗೆ ಸ್ವತಃ ಅವರೇ ಹೇಳಿಕೊಂಡಿದ್ದಾರೆ. ಈ ಮೂಲಕ ನಿಜವಾದ ಭಾರತೀಯರನ್ನು ಗುರುತಿಸುವ ಕೆಲಸವಾಗುತ್ತದೆ ಎಂದೇ ಇದಕ್ಕೆ ಕೈ ಹಾಕಿದ್ದರು. ಮುಂದಿನ ದಿನಗಳಲ್ಲಿ ಇದನ್ನು ಸಂಪೂರ್ಣವಾಗಿ ಜಾರಿಗೆ ತಂದಿದ್ದು ಹಾಲಿ ಸರ್ಕಾರ. 

ಇಷ್ಟೆಲ್ಲಾ ಸಮಸ್ಯೆಗಳ ನಡುವೆಯೂ ಅಸ್ಸಾಂನಲ್ಲಿನ ಅಕ್ರಮ ವಲಸಿಗರ ಸಮಸ್ಯೆ ರಾಜಕೀಯಕರಣಗೊಂಡಿದ್ದೂ ಹೌದು. 2014ರ ಲೋಕಸಭೆ ಮತ್ತು ನಂತರದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಹೆಚ್ಚು ಸ್ಥಾನ ಗೆಲ್ಲಲು ನೆರವಾಗಿದ್ದು ಇದೇ ಭರವಸೆ. ದಶಕಗಳ ಕಾಲದಿಂದಲೂ ಅಸ್ಸಾಂನ ಮೂಲನಿವಾಸಿಗರಿಗೆ ಇದರಿಂದ ತೊಂದರೆಯಾಗುತ್ತಿದ್ದು, ಇಲ್ಲಿನವರಿಗೇ ಉದ್ಯೋಗ ಮತ್ತು ನೆಲ ನೀಡುವ ಅವಕಾಶ ಮಾಡಿಕೊಡಲಾಗುತ್ತದೆ ಎಂದೇ ಬಿಜೆಪಿ ಭರವಸೆ ನೀಡಿತ್ತು. ಸದ್ಯ ಅದಕ್ಕನುಗುಣವಾಗಿಯೇ ಈ ಪಕ್ಷ ನಡೆದುಕೊಳ್ಳುತ್ತಿದೆ. ಇದಕ್ಕೆ ಕಾರಣವೂ ಇದೆ. ಇನ್ನೊಂದು ವರ್ಷದಲ್ಲಿ ಮತ್ತೆ ಲೋಕಸಭೆ ಚುನಾವಣೆ ನಡೆಯಲಿದೆ. ಅಸ್ಸಾಂನಲ್ಲಿ ಒಟ್ಟು 14 ಲೋಕಸಭೆ ಕ್ಷೇತ್ರಗಳಿವೆ. 2019ರಲ್ಲೂ ಹೆಚ್ಚಿನ ಸ್ಥಾನ ಗೆಲ್ಲಬೇಕಾದರೆ ಬಿಜೆಪಿಗೆ ಎನ್‌ಆರ್‌ಸಿ ವರದಿಯಂತೆ ಕ್ರಮ ತೆಗೆದುಕೊಳ್ಳುವುದು ಅನಿವಾರ್ಯವಾಗಲಿದೆ. 

ಆದರೆ, ಎನ್‌ಆರ್‌ಸಿ ಕರಡು ವರದಿ ಬಿಡುಗಡೆಯಾದ ಮೇಲೆ ಇಡೀ ದೇಶಾದ್ಯಂತ ಅತಿ ಹೆಚ್ಚು ಸದ್ದು ಮಾಡುತ್ತಿರುವುದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ತೃಣಮೂಲ ಕಾಂಗ್ರೆಸ್‌. ಅಸ್ಸಾಂ ಮತ್ತು ಪಶ್ಚಿಮ ಬಂಗಾಳ ರಾಜ್ಯಗಳು ಪರಸ್ಪರ ಹೊಂದಿಕೊಂಡಿವೆ. ಇದಷ್ಟೇ ಅಲ್ಲ, ಈ ಎರಡೂ ರಾಜ್ಯಗಳ ಜತೆಯಲ್ಲೇ ಬಾಂಗ್ಲಾ ಗಡಿ ಹಂಚಿಕೊಂಡಿದೆ. ವಿಚಿತ್ರವೆಂದರೆ 2005ರಲ್ಲಿ ಇದೇ ಮಮತಾ ಬ್ಯಾನರ್ಜಿ ಅವರು, ಬಾಂಗ್ಲಾದ ಅಕ್ರಮ ವಲಸಿಗರ ಬಗ್ಗೆ ಕೆರಳಿ ಕೆಂಡವಾಗಿದ್ದರು. ಲೋಕಸಭೆಯಲ್ಲಿ ಈ ಬಗ್ಗೆ ಭಾರೀ ಧ್ವನಿ ಎತ್ತಿದ್ದ ಅವರು, ಅಕ್ರಮ ವಲಸಿಗರನ್ನು ದೇಶದಿಂದ ಬಿಟ್ಟು ಓಡಿಸಲೇಬೇಕು ಎಂದು ಪಟ್ಟು ಹಿಡಿದಿದ್ದರು. ಪಶ್ಚಿಮ ಬಂಗಾಳದಲ್ಲಿ ಫ‌ಲಿತಾಂಶವನ್ನೇ ನಿರ್ಧರಿಸುವಷ್ಟೇ ಸಂಖ್ಯೆಯಲ್ಲಿ ಬಾಂಗ್ಲಾದ ಅಕ್ರಮ ವಲಸಿಗರಿದ್ದಾರೆ. ಅವರನ್ನು ವೋಟ್‌ ಬ್ಯಾಂಕ್‌ ಮಾಡಿಕೊಂಡಿರುವ ಸಿಪಿಎಂ ಸರ್ಕಾರ(ಆಗಿನ) ರಾಜ್ಯದಿಂದ ಹೊರಗೆ ಹಾಕುತ್ತಿಲ್ಲ. ಈ ಬಗ್ಗೆ ಕೇಂದ್ರ ಸರ್ಕಾರ ಕಠಿಣ ಕಾನೂನು ತರಬೇಕು ಎಂದು ಒತ್ತಾಯಿಸಿದ್ದರು. ಆಗ ತೃಣಮೂಲ ಕಾಂಗ್ರೆಸ್‌ನಿಂದ ಆರಿಸಿ ಬಂದು ಏಕಾಂಗಿಯಾಗಿ ಸದ್ದು ಮಾಡಿದ್ದ ಮಮತಾ ಬ್ಯಾನರ್ಜಿ, ಲೋಕಸಭೆ ಸದಸ್ಯ ಸ್ಥಾನಕ್ಕೇ ರಾಜೀನಾಮೆ ನೀಡಿ, ಸದನದಲ್ಲೇ ರೌದ್ರಾವತಾರ ತಾಳಿದ್ದರು. ಒಂದು ಲೆಕ್ಕಾಚಾರದ ಪ್ರಕಾರ ಅಸ್ಸಾಂ ಮತ್ತು ಪಶ್ಚಿಮ ಬಂಗಾಳದಲ್ಲಿನ ಬಾಂಗ್ಲಾದ ಅಕ್ರಮ ವಲಸಿಗರನ್ನು ಹೊರಗೆ ಹಾಕುವ ಅಧಿಕೃತ ಕೆಲಸವೂ ಆಗಿನಿಂದಲೇ ಶುರುವಾಗಿತ್ತು. 

ಈಗ ಮಮತಾ ವರಸೆಯೇ ಬದಲಾಗಿದೆ. ಆಗ ಈ ಅಕ್ರಮ ವಲಸಿಗರೆಲ್ಲರೂ ಭಾರತದಿಂದ ಹೊರಗೆ ಹೋಗಲಿ ಎಂದಿದ್ದ ಮಮತಾ ಬ್ಯಾನರ್ಜಿ, ಈಗ ಉಲ್ಟಾ ಹೊಡೆದಿದ್ದಾರೆ. ಎನ್‌ಆರ್‌ಸಿ ಕರಡು ವರದಿ ಬಹಿರಂಗ ಮಾಡಿ ಕೇಂದ್ರ ಸರ್ಕಾರ ದೇಶವನ್ನೇ ಇಬ್ಭಾಗ ಮಾಡುತ್ತಿದೆ. ದೇಶದಲ್ಲಿ ಆಂತರಿಕ ಕ್ಷೋಭೆಗಳು ಉಂಟಾಗಲಿದ್ದು, ರಕ್ತಪಾತವೇ ಆಗಲಿದೆ ಎಂಬ ಎಚ್ಚರಿಕೆಯನ್ನೂ ನೀಡಿದ್ದಾರೆ. ಹೌದು, ಮಮತಾ ಅವರ ಈಗಿನ ವರ್ತನೆಗೆ ರಾಜಕೀಯ ಕಾರಣವಿದೆ. ಹಿಂದಿನಿಂದಲೂ ಹೇಗೆ ಅಸ್ಸಾಂನಲ್ಲಿನ ಅಕ್ರಮ ವಲಸಿಗರ ವಿಚಾರ ರಾಜಕೀಯಗೊಂಡಿತ್ತೋ, ಹಾಗೆಯೇ ಈಗ ಮಮತಾ ಈ ವಿಚಾರದಲ್ಲಿ ರಾಜಕೀಯ ಲಾಭ ನೋಡುತ್ತಿದ್ದಾರೆ. 2016ರಲ್ಲಿ ಕೇಂದ್ರ ಸರ್ಕಾರ ನೀಡಿದ ಅಂಕಿ ಅಂಶಗಳ ಪ್ರಕಾರ ಪಶ್ಚಿಮ ಬಂಗಾಳದಲ್ಲಿ ಸರಿಸುಮಾರು 80 ಲಕ್ಷ ಅಕ್ರಮ ವಲಸಿಗರಿದ್ದಾರೆ. ಇವರಲ್ಲಿ ಹೆಚ್ಚಿನವರು ಬಾಂಗ್ಲಾದಿಂದ ಬಂದಿರುವ ಮುಸಲ್ಮಾನರೇ ಆಗಿದ್ದಾರೆ. ಅಲ್ಲದೆ ಪಶ್ಚಿಮ ಬಂಗಾಳದಲ್ಲಿ ಶೇ.30 ರಷ್ಟು ಮತದಾರರು ಮುಸಲ್ಮಾನರೇ ಆಗಿದ್ದು ಇವರನ್ನು ಎದುರು ಹಾಕಿಕೊಳ್ಳುವುದು ಮಮತಾಗೆ ಸಾಧ್ಯವಿಲ್ಲ. ಬಿಜೆಪಿಯನ್ನು ಭಾರೀ ವಿರೋಧಿಸಿಕೊಂಡು ಬಂದಿರುವ ಮಮತಾ ಬೆನ್ನಿಂದೆಯೇ ಈ ಎಲ್ಲ ಮತದಾರರು ನಿಂತಿದ್ದಾರೆ. ಹೀಗಾಗಿ ಇಂದು ಅಸ್ಸಾಂನಲ್ಲಿ ಆಗಿರುವ ಈ ನೋಂದಣಿ ನಾಳೆ ಪಶ್ಚಿಮ ಬಂಗಾಳಕ್ಕೆ ಕಾಲಿಟ್ಟರೆ ಎಂಬ ಆತಂಕ ಮಮತಾ ಬ್ಯಾನರ್ಜಿ ಅವರಲ್ಲಿದೆ. ಜತೆಗೆ ತೃಣಮೂಲ ಕಾಂಗ್ರೆಸ್‌ನ ಅಸ್ಸಾಂ ಘಟಕದ ಅಧ್ಯಕ್ಷ ಮತ್ತು ಇಬ್ಬರು ಪದಾಧಿಕಾರಿಗಳು ರಾಜೀನಾಮೆ ಕೊಟ್ಟಿರುವ ಉದ್ದೇಶದ ಹಿಂದೆಯೂ ದೊಡ್ಡ ಕಾರಣವಿದೆ. ಮಮತಾ ಬ್ಯಾನರ್ಜಿ ಪಶ್ಚಿಮ ಬಂಗಾಳದ ದೃಷಿcಯಲ್ಲಿ ಮಾತನಾಡುತ್ತಿದ್ದರೆ, ಇತ್ತ ಅಸ್ಸಾಂ ಘಟಕ ಎನ್‌ಆರ್‌ಸಿಯನ್ನು ವಿರೋಧಿಸಲಾಗದ ಇಕ್ಕಟ್ಟಿಗೆ ಸಿಲುಕಿದೆ. ಒಂದೊಮ್ಮೆ ಮಮತಾರಂತೆಯೇ ಮಾತನಾಡಿದರೆ ಸ್ಥಳೀಯ ಜನರ ವಿರೋಧ ಕಟ್ಟಿಕೊಳ್ಳಬೇಕಾಗುತ್ತದೆ. ಹೀಗಾಗಿಯೇ ಅವರು ರಾಜೀನಾಮೆ ಕೊಟ್ಟಿದ್ದಾರೆ.

ಇದೆಲ್ಲದರ ಜತೆಗೆ ಮಮತಾಗೆ ಇರುವ ಇನ್ನೊಂದು ಆತಂಕ ಬಿಜೆಪಿ. ಅಸ್ಸಾಂನಲ್ಲಿ ಅಕ್ರಮ ವಲಸಿಗರ ಹೊರಹಾಕುತ್ತೇವೆ ಎಂದು ಹೇಳಿ ಕಾಂಗ್ರೆಸ್‌ ಭದ್ರಕೋಟೆಯನ್ನೇ ಛಿದ್ರ ಮಾಡಿದ ಬಿಜೆಪಿ, ಪಶ್ಚಿಮ ಬಂಗಾಳಕ್ಕೂ ಇದೇ ಕಾರಣವೊಡ್ಡಿ ಬಂದು ಬಿಟ್ಟರೆ? ಈಗಾಗಲೇ ಪಶ್ಚಿಮ ಬಂಗಾಳದ ಬಿಜೆಪಿ ಅಧ್ಯಕ್ಷ ಈ ಬಗ್ಗೆ ಸುಳಿವು ಕೊಟ್ಟಾಗಿದೆ. ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ, ಇಲ್ಲಿರುವ ಅಕ್ರಮ ವಲಸಿಗರನ್ನು ರಾಜ್ಯದಿಂದ ಹೊರಗೆ ಕಳುಹಿಸುತ್ತೇವೆ ಎಂದು ಹೇಳಿದ್ದಾರೆ. ಇದು ಮಮತಾಗೆ ಇಕ್ಕಟ್ಟಿಗೆ ಸಿಲುಕಿಸಿದೆ. ಬಿಜೆಪಿಯ ಈ ತಂತ್ರ ಮಮತಾಗೆ ಇಕ್ಕಟ್ಟಿಗೆ ಸಿಲುಕಿಸುವಂತೆ ಮಾಡಿದೆ. ಶೇ.30 ರಷ್ಟು ಮುಸ್ಲಿಂ ಮತದಾರರಿಗಾಗಿ ಅಕ್ರಮ ವಲಸಿಗರ ಪರ ನಿಂತರೆ, ಉಳಿದ ಜನ ಬಾಂಗ್ಲಾ ಅಕ್ರಮ ವಲಸಿಗರ ಕಾರಣದಿಂದಲೇ ಪಕ್ಷ ಬಿಟ್ಟು ಹೋದರೆ ಎಂಬ ಆತಂಕವಿದೆ. ಏಕೆಂದರೆ, 80 ಲಕ್ಷ ಅಕ್ರಮ ವಲಸಿಗರು ಸ್ಥಳೀಯ ಮೂಲನಿವಾಸಿಗಳ ಕೆಲಸ ಕಿತ್ತುಕೊಂಡಿದ್ದಾರೆ ಎಂಬ ಆರೋಪವೂ ಏಳುವ ಸಾಧ್ಯತೆಯೂ ಇದೆ. ಹೀಗಾಗಿ ಶತಾಯಗತಾಯ ಎನ್‌ಆರ್‌ಸಿ ಪ್ರಕ್ರಿಯೆಯನ್ನೇ ರದ್ದು ಮಾಡಿಸಬೇಕು ಎಂಬ ಪಣ ತೊಟ್ಟಿದ್ದಾರೆ ಮಮತಾ ಬ್ಯಾನರ್ಜಿ. 

ಇನ್ನು ಕಾಂಗ್ರೆಸ್‌ನಲ್ಲೂ ಭಾರೀ ಇಕ್ಕಟ್ಟಿನ ಪರಿಸ್ಥಿತಿ. 
ಅಸ್ಸಾಂನಲ್ಲಿನ ಈ ಅಕ್ರಮ ವಲಸಿಗರು ಮತ್ತು ಮೂಲನಿವಾಸಿಗಳ ನಡುವಿನ ಜಗಳ ನೋಡಿರುವ ಕಾಂಗ್ರೆಸ್‌ ರಾಜೀವ್‌ ಕಾಲದಲ್ಲೇ ಅಸ್ಸಾಂ ಒಪ್ಪಂದವನ್ನೂ ಮಾಡಿಕೊಂಡಿದೆ. ಇದೀಗ ಎನ್‌ಆರ್‌ಸಿ ಪರ ನಿಂತರೆ ಮುಸ್ಲಿಮರ ವಿರೋಧ ಕಟ್ಟಿಕೊಳ್ಳಬೇಕಾದೀತು ಎಂಬ ಆತಂಕ. ವಿರೋಧಿಸಿದರೆ ಮೂಲ ನಿವಾಸಿಗಳು ಕೈತಪ್ಪಿ ಹೋಗಬಹುದು ಎಂಬ ಭಯ. ಹೀಗಾಗಿ ಎಚ್ಚರಿಕೆಯ ಹೆಜ್ಜೆ ಇಡುತ್ತಿದೆ. ಇವೆಲ್ಲಾ ಬೆಳವಣಿಗೆಗಳ ನಡುವೆಯೇ ಎಡಪಕ್ಷಗಳು ಮಾತ್ರ ಸದ್ದು ಗದ್ದಲವಿಲ್ಲದೇ ಕುಳಿತಿರುವುದು ಮಾತ್ರ ಸೋಜಿಗದ ಸಂಗತಿ. 

ಸೋಮಶೇಖರ ಸಿ.ಜೆ.

ಟಾಪ್ ನ್ಯೂಸ್

Arunachal Village: ಕೇವಲ ಒಂದು ಮತಕ್ಕಾಗಿ ಚುನಾವಣಾ ಅಧಿಕಾರಿಗಳ 40 ಕಿ.ಮೀ ಕಾಲ್ನಡಿಗೆ!

Arunachal Village: ಕೇವಲ ಒಂದು ಮತಕ್ಕಾಗಿ ಚುನಾವಣಾ ಅಧಿಕಾರಿಗಳ 40 ಕಿ.ಮೀ ಕಾಲ್ನಡಿಗೆ!

SSLC ಪರೀಕ್ಷೆ ವೇಳೆ ಉತ್ತರ ತೋರಿಸಲಿಲ್ಲ ಎಂದು ಸಹಪಾಠಿಗೆ ಚಾಕು ಇರಿದ ವಿದ್ಯಾರ್ಥಿಗಳು

SSLC ಪರೀಕ್ಷೆ ವೇಳೆ ಉತ್ತರ ತೋರಿಸಲಿಲ್ಲ ಎಂದು ಸಹಪಾಠಿಗೆ ಚಾಕು ಇರಿದ ವಿದ್ಯಾರ್ಥಿಗಳು

Shocking: ಮುಸುಧಾರಿಗಳಿಂದ ಗುರುದ್ವಾರದ ಸಿಬಂದಿಯ ಗುಂಡಿಕ್ಕಿ ಹತ್ಯೆ… ಭಯಾನಕ ದೃಶ್ಯ ಸೆರೆ

Shocking: ಮುಸುಧಾರಿಗಳಿಂದ ಗುರುದ್ವಾರದ ಸಿಬ್ಬಂದಿಯ ಗುಂಡಿಕ್ಕಿ ಹತ್ಯೆ.. ಭಯಾನಕ ದೃಶ್ಯ ಸೆರೆ

6-bng

Bengaluru: ಪೇಂಟರ್‌ ಕೊಂದು ಪೊಲೀಸ್‌ ಠಾಣೆಗೆ ಬಂದು ಸಿಕ್ಕಿಬಿದ್ದ ಸ್ನೇಹಿತರು

Loksabha Poll: ತಮಿಳುನಾಡು ಮಾಜಿ ಕಾಂಗ್ರೆಸ್‌ ನಾಯಕ ಈಗ ಬಿಜೆಪಿ ರಾಷ್ಟ್ರೀಯ ವಕ್ತಾರ

Loksabha Poll: ತಮಿಳುನಾಡು ಮಾಜಿ ಕಾಂಗ್ರೆಸ್‌ ನಾಯಕ ಈಗ ಬಿಜೆಪಿ ರಾಷ್ಟ್ರೀಯ ವಕ್ತಾರ

5-bng

Bengaluru: ಪ್ರೀತಿಸಿ ಮದುವೆ ಆಗುವುದಾಗಿ ಅಂಗವಿಕಲ ಯುವತಿಗೆ ವಂಚನೆ

ಕಾಂಗ್ರೆಸ್ ನವರು ಕೇಸರಿ ಶಾಲು ಹಾಕಿದಾಕ್ಷಣ ಮನಸ್ಥಿತಿ ಬದಲಾಗಲ್ಲ… ಶೆಟ್ಟರ್ ಆರೋಪ

ಕಾಂಗ್ರೆಸ್ ನವರು ಕೇಸರಿ ಶಾಲು ಹಾಕಿದಾಕ್ಷಣ ಮನಸ್ಥಿತಿ ಬದಲಾಗಲ್ಲ… ಶೆಟ್ಟರ್ ಆರೋಪ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

PM Mod

2024 Election; ಲೋಕಸಭೆ ಚುನಾವಣೆಗೆ ಮುನ್ನುಡಿಯೇ ಈ ಫ‌ಲಿತಾಂಶ?

Jaishankar

Foreign policy; ಬದಲಾದ ವಿದೇಶಾಂಗ ನೀತಿಯ ಪರಿಭಾಷೆ

ED

Chhattisgarh ‘ಮಹಾದೇವ’ ಅಸ್ತ್ರಕ್ಕೆ ಬಲಿಯಾಗುವವರು ಯಾರು?

1-qwewew

Congress ಅಸಮಾಧಾನದ ಜ್ವಾಲೆ: ಸಮ್ಮಿಶ್ರ ವೈಖರಿಯಲ್ಲಿ ಸರಕಾರ‌?

1-VR-AG

ರಾಜಸ್ಥಾನದ ರಾಜಪಟ್ಟದ ಮೇಲೆ ಎಲ್ಲರ ಕಣ್ಣು; ‘ಕೈ’ ಹಿಡಿಯುತ್ತಾ ಗ್ಯಾರಂಟಿ?

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

Arunachal Village: ಕೇವಲ ಒಂದು ಮತಕ್ಕಾಗಿ ಚುನಾವಣಾ ಅಧಿಕಾರಿಗಳ 40 ಕಿ.ಮೀ ಕಾಲ್ನಡಿಗೆ!

Arunachal Village: ಕೇವಲ ಒಂದು ಮತಕ್ಕಾಗಿ ಚುನಾವಣಾ ಅಧಿಕಾರಿಗಳ 40 ಕಿ.ಮೀ ಕಾಲ್ನಡಿಗೆ!

SSLC ಪರೀಕ್ಷೆ ವೇಳೆ ಉತ್ತರ ತೋರಿಸಲಿಲ್ಲ ಎಂದು ಸಹಪಾಠಿಗೆ ಚಾಕು ಇರಿದ ವಿದ್ಯಾರ್ಥಿಗಳು

SSLC ಪರೀಕ್ಷೆ ವೇಳೆ ಉತ್ತರ ತೋರಿಸಲಿಲ್ಲ ಎಂದು ಸಹಪಾಠಿಗೆ ಚಾಕು ಇರಿದ ವಿದ್ಯಾರ್ಥಿಗಳು

7-bng

Bengaluru: ಸಾಲ ವಸೂಲಿ ಹೆಸರಲ್ಲಿ ಆಟೋ ವಶ, ಧರ್ಮ ನಿಂದನೆ: ಬಂಧನ

Shocking: ಮುಸುಧಾರಿಗಳಿಂದ ಗುರುದ್ವಾರದ ಸಿಬಂದಿಯ ಗುಂಡಿಕ್ಕಿ ಹತ್ಯೆ… ಭಯಾನಕ ದೃಶ್ಯ ಸೆರೆ

Shocking: ಮುಸುಧಾರಿಗಳಿಂದ ಗುರುದ್ವಾರದ ಸಿಬ್ಬಂದಿಯ ಗುಂಡಿಕ್ಕಿ ಹತ್ಯೆ.. ಭಯಾನಕ ದೃಶ್ಯ ಸೆರೆ

6-bng

Bengaluru: ಪೇಂಟರ್‌ ಕೊಂದು ಪೊಲೀಸ್‌ ಠಾಣೆಗೆ ಬಂದು ಸಿಕ್ಕಿಬಿದ್ದ ಸ್ನೇಹಿತರು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.