“ಸಹಕಾರವಿದ್ದರೆ ಮಾತ್ರ ಪ್ರಾಮಾಣಿಕ ಸೇವೆ ಸಲ್ಲಿಸಲು ಸಾಧ್ಯ’
Team Udayavani, Jul 21, 2017, 5:10 AM IST
ಆಲಂಕಾರು: ಜನತೆಯ ಹಾಗೂ ಸಹೋದ್ಯೋಗಿ ಮೇಲಧಿಕಾರಿಗಳ ಸಹಕಾರವಿದ್ದರೆ ಮಾತ್ರ ಯಾವುದೇ ಸರಕಾರಿ ಸೇವೆಯನ್ನು ಪ್ರಾಮಾಣಿಕವಾಗಿ ನೀಡಲು ಸಾಧ್ಯ ಎಂದು ಪುಣಚ ಗ್ರಾಮ ಪಂಚಾಯತ್ನ ಅಭಿವೃದ್ದಿ ಅಧಿಕಾರಿ ಭಾರತಿ ನುಡಿದರು. ಅವರು ಸೋಮವಾರ ಆಲಂಕಾರು ಗ್ರಾಮ ಪಂಚಾಯತ್ನಲ್ಲಿ ಬೀಳ್ಕೊಡುಗೆಯನ್ನು ಸ್ವೀಕರಿಸಿ ಮಾತನಾಡಿದರು.
ಆಲಂಕಾರು ಗ್ರಾಮ ಪಂಚಾಯತ್ನಲ್ಲಿ ಕಳೆದ ಎರಡು ವರ್ಷದಲ್ಲಿ ನಾನು ಪ್ರಾಮಾಣಿಕ ಸೇವೆ ನೀಡಿದ್ದೇನೆ ಎಂಬ ಆತ್ಮವಿಶ್ವಾಸ ನನಗಿದೆ. ನನ್ನ ಎರಡು ವರ್ಷದ ಕಿರು ಅವಧಿಯಲ್ಲಿ ಗ್ರಾಮದ ಜನತೆಗೆ ನನ್ನ ಅಳಿಲ ಸೇವೆಯನ್ನು ಮಾತ್ರ ನೀಡಿದ್ದೇನೆ ಎಂದರು.
ಪಂಚಾಯತ್ ಅಧ್ಯಕ್ಷೆ ಸುನಂದ ಬಾರ್ಕುಲಿ ಅವರ ಅಧ್ಯಕ್ಷತೆಯಲ್ಲಿ ಬೀಳ್ಕೊಡುಗೆ ಸಮಾರಂಭ ನಡೆಯಿತು.
ಈ ಸಂದರ್ಭದಲ್ಲಿ ಆಲಂಕಾರು ಸರಕಾರಿ ಹಿರಿಯ ಪ್ರಾಥಮಿಕ ಶಾಲಾಭಿವೃದ್ಧಿ ಸಮಿತಿಯ ನಿಕಟ ಪೂರ್ವ ಅಧ್ಯಕ್ಷ ಅಬೂಬಕ್ಕರ್ ಮಾತನಾಡಿ, ಗ್ರಾಮೀಣ ಜನತೆಗೆ ಕ್ಲಪ್ತ ಸಮಯಕ್ಕೆ ಪ್ರಾಮಾಣಿಕ ಸೇವೆ ಅಗತ್ಯವಾಗಿದೆ. ಇಂತಹ ಸೇವೆಯನ್ನು ನೀಡುವುದರಲ್ಲಿ ಆಲಂ ಕಾರಿನಲ್ಲಿ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿರುವ ಭಾರತಿ ಅವರು ಇತರರಿಗೆ ಮಾದರಿಯಾಗಿದ್ದಾರೆ. ನಿಮ್ಮ ಸೇವೆಯು ಜನ ಮಾನಸದಲ್ಲಿ ಅಚ್ಚಳಿಯದಂತೆ ಮಾಡಿಕೊಳ್ಳಿ ಎಂದು ಕರೆ ನೀಡಿದರು.
ಮಾಜಿ ತಾ.ಪಂ. ಸದಸ್ಯ ದಯಾನಂದ ಗೌಡ ಆಲಡ್ಕ ಮಾತನಾಡಿ, ಭಾರತಿ ಅವರು ಆಲಂಕಾರಿನ ಬಡವರ ಪಾಲಿನ ಆಪದಾºಂಧವನಾಗಿದ್ದರು ಎಂದು ನುಡಿದರು.
ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಮುಖ್ಯಶಿಕ್ಷಕ ಕೆ.ಪಿ. ನಿಂಗರಾಜು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು. ಇದೇ ಸಂದರ್ಭದಲ್ಲಿ ಗ್ರಾಮ ಪಂಚಾಯತ್ನ ಆಡಳಿತ ಮಂಡಳಿಯ ಪರವಾಗಿ ಶಾಲು ಹೊಧಿಸಿ, ಫಲಪುಷ್ಪ ಮತ್ತು ನೆನಪಿನ ಕಾಣಿಕೆ ನೀಡಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ತಾ.ಪಂ.ಸದಸ್ಯೆ ತಾರಾ ತಿಮ್ಮಪ್ಪ, ಪಂಚಾಯತ್ ಉಪಾಧ್ಯಕ್ಷ ಸುಧಾಕರ ಪೂಜಾರಿ ಕಲ್ಲೇರಿ, ಎಲ್ಲಾ ಆಡಳಿತ ಮಂಡಳಿಯ ಸದಸ್ಯರು ಉಪಸ್ಥಿತರಿದ್ದರು. ಪಂಚಾಯತ್ ಅಭಿವೃದ್ದಿ ಅಧಿಕಾರಿ ಸ್ವಾಗತಿಸಿ, ನಿರೂಪಿಸಿದರು. ಸಿಬಂದಿ ಗೋಪಾಲ ಕೃಷ್ಣ ವಂದಿಸಿದರು.