ಕಡಬ: ದೇವಸ್ಥಾನದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ
Team Udayavani, Aug 15, 2017, 7:30 AM IST
ಕಡಬ : ಇಲ್ಲಿನ ಶ್ರೀ ದುರ್ಗಾಂಬಿಕಾ ಅಮ್ಮನವರ ದೇವಸ್ಥಾನದ ವಠಾರದಲ್ಲಿ ಶ್ರೀ ದುರ್ಗಾಂಬಿಕಾ ಭಜನ ಮಂಡಳಿಯವತಿಯಿಂದ 23ನೇ ವರ್ಷದ ಶ್ರೀಕೃಷ್ಣ ಜನ್ಮಾಷ್ಟಮಿ ಉತ್ಸವವು ಜರಗಿತು.
ಬೆಳಗ್ಗೆ ದೇವಾಲಯದ ಅರ್ಚಕ ಪ್ರಶಾಂತ ಕೆದಿಲಾಯ ಅವರು ಆಟೋಟ ಸ್ಪರ್ಧೆಗಳಿಗೆ ಚಾಲನೆ ನೀಡಿದರು. ದೇವಾಲಯದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷ ಜನಾರ್ದನ ಗೌಡ ಪಣೆಮಜಲು, ಮಾಜಿ ಅಧ್ಯಕ್ಷ ಸೀತಾರಾಮ ಗೌಡ ಪೊಸವಳಿಕೆ, ಬ್ರಹ್ಮಕಲಶ ಸಮಿತಿಯ ಅಧ್ಯಕ್ಷ ಕೃಷ್ಣ ಶೆಟ್ಟಿ ಕಡಬ, ಧಾರ್ಮಿಕ ಉತ್ಸವ ಸಮಿತಿಯ ಅಧ್ಯಕ್ಷ ಸುಂದರ ಗೌಡ ಮಂಡೆಕರ, ಭಜನ ಮಂಡಳಿಯ ಅಧ್ಯಕ್ಷ ಸೋಮಪ್ಪ ನಾೖಕ್ ಕಡಬ, ಕಾರ್ಯದರ್ಶಿ ಮನೋಹರ ರೈ ಬೆದ್ರಾಜೆ, ಗಣೇಶೋತ್ಸವ ಸಮಿತಿಯ ಅಧ್ಯಕ್ಷ ಅಶೋಕ್ಕುಮಾರ್ ಪಿ., ಕಡಬ ಆರಕ್ಷಕ ಠಾಣಾ ಸಿಬಂದಿ ಸತೀಶ್, ಪ್ರಮುಖರಾದ ಪ್ರಕಾಶ್ ಎನ್.ಕೆ., ಶಿವಪ್ರಸಾದ್ ರೈ ಮೈಲೇರಿ, ಕೃಷ್ಣ ಅಲುಂಗೂರು, ಮೇದಪ್ಪ ಗೌಡ, ಸರೋಜಿನಿ ಆಚಾರ್ಯ, ರಾಜೀವಿ ಕೊರುಂದೂರು, ದಯಾನಂದ ಉಂಡಿಲ, ಕೃಷ್ಣ ಬಿ., ಭಜನ ಮಂಡಳಿಯ ಪದಾಧಿಕಾರಿಗಳಾದ ದಿನೇಶ್ ರೈ ಕಳಾರ, ವೆಂಕಟೇಶ್ ಆರಿಗ, ಯಶೋದರ ಪೂವಳ, ಸುಂದರ ಪೂಜಾರಿ ಉಪಸ್ಥಿತರಿದ್ದರು.
ಬಳಿಕ ವಿವಿಧ ಸ್ಪರ್ಧೆಗಳು ಜರಗಿದವು. ಮಧ್ಯಾಹ್ನ ಶ್ರೀದೇವಿಗೆ ಅಲಂಕಾರಯುತ ಮಹಾಪೂಜೆ, ಅನ್ನಸಂತರ್ಪಣೆ ನಡೆಯಿತು.
ಅಪರಾಹ್ನ ಶ್ರೀಕೃಷ್ಣ ವೇಷ ಸ್ಪರ್ಧೆ ನಡೆದು ಅನಂತರ ಜರಗಿದ ಧಾರ್ಮಿಕ ಸಭೆಯಲ್ಲಿ ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಿಸಲಾಯಿತು.