ಎಡಕುಮೇರಿ ಬಳಿ ರೈಲ್ವೇ ಹಳಿಗೆ ಗುಡ್ಡ ಕುಸಿತ
Team Udayavani, Aug 30, 2017, 9:00 AM IST
ಪುತ್ತೂರು/ಮಂಗಳೂರು: ಸಕಲೇಶಪುರ-ಸುಬ್ರಹ್ಮಣ್ಯ ರೈಲ್ವೇ ನಿಲ್ದಾಣದ ಮಧ್ಯೆ ಎಡಕುಮೇರಿನಲ್ಲಿ ಭಾರೀ ಮಳೆಯಿಂದಾಗಿ ಭೂಕುಸಿತ ಸಂಭವಿಸಿ ರೈಲ್ವೇ ಹಳಿ ಮೇಲೆ ಮಣ್ಣು ಕುಸಿದಿರುವ ಹಿನ್ನೆಲೆಯಲ್ಲಿ ಮಂಗಳೂರು- ಬೆಂಗಳೂರು ರೈಲು ಸಂಚಾರದಲ್ಲಿ ವ್ಯತ್ಯಯಗೊಂಡಿತು.
ರೈಲು ನಂಬರ್ 16575 ಯಶವಂತಪುರ -ಮಂಗಳೂರು ರೈಲುಗಾಡಿ ಸಿರಿಬಾಗಿಲು ರೈಲ್ವೇ ನಿಲ್ದಾಣದಲ್ಲಿ ನಿಲುಗಡೆಯಾಗಿದೆ. ರೈಲ್ವೇ ಪ್ರಯಾಣಿಕರಿಗೆ ರೈಲ್ವೇ ವತಿಯಿಂದ ಉಪಾಹಾರ ಹಾಗೂ ಚಹಾ, ಕಾಫಿ ವ್ಯವಸ್ಥೆ ಮಾಡಲಾಯಿತು. ಅಲ್ಲಿಂದ ಬೇರೆ ವ್ಯವಸ್ಥೆ ಮೂಲಕ ಪ್ರಯಾಣಿಸಲಿಚ್ಛಿಸುವ ಪ್ರಯಾಣಿಕರಿಗೆ ಪ್ರಯಾಣ ದರವನ್ನು ಹಿಂದಿರುಗಿಸುವ ವ್ಯವಸ್ಥೆ ಮಾಡಲಾಯಿತು.
ರೈಲು ನಂಬರ್ 16516 ಕಾರವಾರ-ಯಶವಂತಪುರ ರೈಲುಗಾಡಿಯನ್ನು ಸುಬ್ರಹ್ಮಣ್ಯದಲ್ಲಿ ನಿಲುಗಡೆ ಮಾಡಲಾಗಿತ್ತು. ಬಳಿಕ ಸಂಜೆ 4.55ಕ್ಕೆ ಅಲ್ಲಿಂದ ರೈಲುಗಾಡಿಯನ್ನು ಮಂಗಳೂರಿಗೆ ತಿರುಗಿಸಿ ಕಣ್ಣೂರು, ಪಾಲಾ^ಟ್, ಕೊಯ ಮತ್ತೂರು, ಈರೋಡ್ ಮಾರ್ಗವಾಗಿ ಯಶವಂತಪುರಕ್ಕೆ ಸಂಚರಿಸಿತು.
ಮಣ್ಣು ತೆರವು ಕಾರ್ಯಾಚರಣೆ
ಎಡಕುಮೇರಿಯಲ್ಲಿ ರೈಲ್ವೇ ಹಳಿಗಳ ಮೇಲೆ ಸುಮಾರು 6 ಅಡಿ ಮಣ್ಣು ಕುಸಿದಿದ್ದು ಇದನ್ನು ತೆರವುಗೊಳಿಸುವ ಕಾರ್ಯ ಭರದಿಂದ ಸಾಗುತ್ತಿದೆ. ನೈಋತ್ಯ ರೈಲ್ವೇಯ ಮೈಸೂರು ವಿಭಾಗದ ವಿಭಾಗೀಯ ಪ್ರಬಂಧಕ ಅತುಲ್ ಗುಪ್ತ ಅವರು ಸ್ಥಳದಲ್ಲಿದ್ದು ಕಾರ್ಯಾಚರಣೆ ಉಸ್ತುವಾರಿ ವಹಿಸಿದ್ದಾರೆ.