ಬೆಳೆ ಸಮೀಕ್ಷೆ ಆ್ಯಪ್ಗೆ ಚಾಲನೆ
Team Udayavani, Sep 5, 2020, 1:05 PM IST
ದೇವನಹಳ್ಳಿ: ರೈತರು ತಾವು ಬೆಳೆದ ಬೆಳೆಗಳ ವಿವರಗಳನ್ನು ಬೆಳೆ ಸಮೀಕ್ಷೆ ಆ್ಯಪ್ನಲ್ಲಿ ದಾಖಲಿಸಬಹುದಾಗಿದೆ ಎಂದು ತಾಲೂಕು ಕೃಷಿ ಸಹಾಯಕ ನಿರ್ದೇಶಕಿ ವೀಣಾ ತಿಳಿಸಿದರು.
ತಾಲೂಕಿನ ಕಸಬ ಹೋಬಳಿಯ ಬಿದಲೂರು ಗ್ರಾಮದಲ್ಲಿ ಕೃಷಿ ಬೆಳೆ ಸಮೀಕ್ಷೆ ಆ್ಯಪ್ಗೆ ಚಾಲನೆ ನೀಡಿ ಮಾತನಾಡಿದ ಅವರು, ರೈತರು ತಾವು ಬೆಳೆದಿರುವ ಬೆಳೆಗಳ ಬಗ್ಗೆ ಬೆಳೆ ಸಮೀಕ್ಷೆ ಮಾಡುವುದರಿಂದ ಯಾವ ರೈತರು ಯಾವ ಬೆಳೆ ಬೆಳೆದಿದ್ದಾರೆಂಬ ನಿಖರವಾದ ಮಾಹಿತಿ ಸಿಗುತ್ತದೆ. ಪ್ರಕೃತಿ ವಿಕೋಪ, ಬೆಳೆ ಹಾನಿಯಾದ ಸಂದರ್ಭದಲ್ಲಿ ಬೆಳೆ ವಿಮೆ ನೀಡಲು ಸಹಕಾರಿಯಾಗುತ್ತದೆ ಎಂದರು. ಆ್ಯಪ್ಅನ್ನು ಗೂಗಲ್ ಪ್ಲೇಸ್ಟೋರ್ನಿಂದ ಡೌನ್ಲೋಡ್ ಮಾಡಿಕೊಂಡ ನಂತರ, ವರ್ಷ ಮುಂಗಾರು, ಹಿಂಗಾರು ಬೆಳೆ, ದೂರವಾಣಿ ಸಂಖ್ಯೆ ಆರಂಭಿಸಿ, ಜಿಲ್ಲೆ, ತಾಲೂಕು, ಹೋಬಳಿ, ಗ್ರಾಮ ಸರ್ವೆ ನಂ., ಲೊಕೇಷನ್, ಮಾಲಿಕರ ವಿವರ, ಬೆಳೆ ವಿವರ, ಪ್ರದೇಶದ ಮಾಹಿತಿ, ಬೆಳೆ ವಿಧ, ನೀರಾವರಿ ವಿಧ, ಬೆಳೆ ವಿಸ್ತೀರ್ಣ ಮಾಹಿತಿ ನೀಡಿದ ನಂತರ ಮೂರು ಬೆಳೆಯ ಛಾಯಾಚಿತ್ರಗಳನ್ನು ತೆಗೆದು ಅಪ್ಲೋಡ್ ಮಾಡಬೇಕಾಗುತ್ತದೆ. ಇದರಲ್ಲಿ ಪ್ರತಿ ರೈತರು ಪಾಲ್ಗೊಳ್ಳಬೇಕು ಎಂದು ರೈತರಲ್ಲಿ ಮನವಿ ಮಾಡಿದರು. ಈ ವೇಳೆ ಕೃಷಿ ಇಲಾಖೆಯ ಪುಷ್ಪಾ ಹಾಗೂ ಸಿಬ್ಬಂದಿ ಇದ್ದರು.
……………………………………………………………………………………………………………………………………………………..
ಪರಿಸರ ಸಂರಕ್ಷಣೆ, ವೃಕ್ಷ ದಾಸೋಹಕ್ಕೆ ಚಾಲನೆ : ವಿಜಯಪುರ: ಪರಿಸರವನ್ನು ಬೆಳೆಸುವ, ಉಳಿಸುವ ಹಾಗೂ ಸಂರಕ್ಷಿಸುವ ಮಹಾನ್ ಕಾರ್ಯ ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದು ಕರ್ನಾಟಕ ಗಾಂಧಿ ಸ್ಮಾರಕ ನಿಧಿ ಗೌರವ ಕಾರ್ಯದರ್ಶಿ ಇಂದಿರಾ ಕೃಷ್ಣಪ್ಪ ಹೇಳಿದರು. ಪಟ್ಟಣದ ಅಯ್ಯಪ್ಪ ನಗರದಲ್ಲಿರುವ ಕೆರೆ ಕೋಡಿ ಆವರಣದ ಅಯ್ಯಪ್ಪಸ್ವಾಮಿ ದೇವಾಲಯದಲ್ಲಿ ಕರ್ನಾಟಕ ಗಾಂಧಿ ಸ್ಮಾರಕ ನಿಧಿ ಗಾಂಧಿ ಭವನ ಬೆಂಗಳೂರು, ಸುಮಂಗಲಿ ಸೇವಾಶ್ರಮ ಬೆಂಗಳೂರು, ರಾಷ್ಟ್ರೀಯ ಸೇವಾ ಯೋಜನೆ ಹಾಗೂ ಶ್ರೀ ಧರ್ಮಶಾಸ್ತ್ರ ಅಯ್ಯಪ್ಪ ಸೇವಾ ಸಮಿತಿ ವಿಜಯಪುರ ಇವರುಗಳ ಆಶ್ರಯದಲ್ಲಿ ನಡೆದ ವೃಕ್ಷ ದಾಸೋಹ ಯೋಜನೆಗೆ ಚಾಲನೆ ನೀಡಿ ಮಾತನಾಡಿದರು.
ಯೋಜನೆಗೆ ಕೈಜೋಡಿಸಬೇಕು: ಇಂದು ಪರಿಸರ, ವಾಯುಮಾಲಿನ್ಯ, ಜಲಮಾಲಿನ್ಯ, ಶಬ್ದಮಾಲಿನ್ಯ, ಉಷ್ಣಾಂಶ ಮಾಲಿನ್ಯ ಹಾಗೂ ವಿಕಿರಣ ಮಾಲಿನ್ಯ ಈ ಆರು ಕಾರಣಗಳಿಂದ ಪರಿಸರ ಮಾಲಿನ್ಯವಾಗುತ್ತದೆ ಎಂದರು. ಹಿರಿಯ ಸಾಮಾಜಿಕ ಕಾರ್ಯಕರ್ತ ವಿ.ಎನ್.ಸೂರ್ಯ ಪ್ರಕಾಶ್ ವಿವಿಧ ಸಂಘ ಸಂಸ್ಥೆ ಗಳ ಸದಸ್ಯರಿಗೆ, ಶಾಲಾ ಮಕ್ಕಳಿಗೆ, ಎನ್ಎಸ್ಎಸ್ ಸ್ವಯಂ ಸೇವಕರಿಗೆ ಹಾಗೂ ಪ್ರಗತಿಪರ ರೈತರಿಗೆ ನೇರಳೆ, ಹೊಂಗೆ, ಮಾವು,ಬೇವು, ಅಶೋಕ ಮುಂತಾದ ಉಪಯುಕ್ತ ಸಸಿಗಳನ್ನು ವಿತರಿಸಿದರು.
ಕರ್ನಾಟಕ ಅಂಚೆ ನೌಕರರ ಸಾಹಿತ್ಯ ಬಳಗದ ಅಧ್ಯಕ್ಷ ಬಿಜ್ಜವಾರ ಸುಬ್ರಹ್ಮಣಿ, ಅಯ್ಯಪ್ಪ ಸ್ವಾಮಿ ದೇವಾಲಯದ ಧರ್ಮದರ್ಶಿ ಜೆ.ವಿ ಮುನಿ ರಾಜು, ಪ್ರಗತಿಪರ ರೈತರಾದ ಆನಂದ್, ಶ್ರೀ ಸಾಯಿ ಟ್ರಾವೆಲ್ಸ್ ನ ರವಿ, ಹಿರಿಯ ಸಮಾಜ ಸೇವಕ ಜೆ.ವೆಂಕಟಾಪುರ ಗ್ರಾಮದ ಶಿವಣ್ಣ, ವೃಕ್ಷ ಯೋಜನೆಯ ನಿರೀಕ್ಷಕರಾದ ಗೀತಾ ಹಾಗೂ ಸುಮಂಗಲಿ ಸೇವಾಶ್ರಮ ಪಾರ್ವತಿ ಇದ್ದರು.