ಸಂಗೀತ ಭಾರತೀಯ ಸಂಸ್ಕೃತಿಯ ಪ್ರತಿಬಿಂಬ: ಡಾ| ವಾರಣಾಶಿ
Team Udayavani, Dec 25, 2017, 4:41 PM IST
ನೆಹರೂನಗರ: ಕರ್ನಾಟಕ ಶಾಸ್ತ್ರೀಯ ಸಂಗೀತ ಭಾರತೀಯ ಸಂಸ್ಕೃತಿಯನ್ನು ಪ್ರತಿಬಿಂಬಿಸುತ್ತದೆ. ಇದನ್ನು ಉಳಿಸಿ ಬೆಳೆಸುವುದು ನಮ್ಮೆಲ್ಲರ ಕರ್ತವ್ಯ ಎಂದು ಡಾ| ವಾರಣಾಶಿ ಕೃಷ್ಣಮೂರ್ತಿ ಹೇಳಿದರು.
ನೆಹರೂನಗರ ಕಾಡುಬಯಲು ರಂಗಮಂದಿರದಲ್ಲಿ ರವಿವಾರ ನಡೆದ ಗಾನಸರಸ್ವತಿ ಸಂಗೀತ ಕಲಾ ಶಾಲೆಯ 29ನೇ ವಾರ್ಷಿಕೋತ್ಸವ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು. ಕಲಾರಾಧಕರು ಸಂಗೀತದ ಸೇವೆಯನ್ನು ಮುಂದುವರಿಸಬೇಕು. ಸಂಗೀತ ಪಾಠ ನೀಡುವ ಮೂಲಕ ಅಪಾರ ಶಿಷ್ಯವರ್ಗವನ್ನು ಸಮಾಜಕ್ಕೆ ನೀಡಬೇಕು. ಈ ಕೆಲಸವನ್ನು ಗಾನಸರಸ್ವತಿ ಕಲಾಕೇಂದ್ರ ಮಾಡುತ್ತಿದೆ ಎಂದರು.
ಕಲಾ ಶಾಲೆಯ ವಿದುಷಿ ವೀಣಾ ರಾಘವೇಂದ್ರ, ವಿದುಷಿ ಶೈಲಜಾ ಶ್ರೀರಾಮ್ ಮೈಸೂರು, ಕಲಾ ಶಾಲೆಯ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಕಲಾ ಕೇಂದ್ರದ ನಿರ್ದೇಶಕ ರಾಘವೇಂದ್ರ ಎಚ್.ಎಂ. ಸ್ವಾಗತಿಸಿದರು. ಬಳಿಕ ವಿದ್ಯಾರ್ಥಿಗಳಿಂದ ಗಾಯನ ಕಾರ್ಯಕ್ರಮ ನಡೆಯಿತು. ವಯಲಿನ್ನಲ್ಲಿ ವಿದ್ವಾನ್ ಪ್ರಭಾಕರ ಕುಂಜಾರು, ಅನಿಲ್ಕೃಷ್ಣ ಕುಂಬ್ಳೆ ಹಾಗೂ ಮೃದಂಗದಲ್ಲಿ ವಿದ್ವಾನ್ ವಸಂತಕೃಷ್ಣ ಕಾಂಚನ, ಅಜೇಯಕೃಷ್ಣ ಉಪ್ಪಂಗಳ, ಶ್ರೀರಾಮ್ ಭಟ್ ಮುದ್ಲಜೆ ಸಹಕರಿಸಿದರು.
ಸಂಜೆ ಪ್ರಧಾನ ಕಾರ್ಯಕ್ರಮವಾಗಿ ನಡೆದ ಕರ್ನಾಟಕ ಶಾಸ್ತ್ರೀಯ ಸಂಗೀತದಲ್ಲಿ ವಿದುಷಿ ಮೈಸೂರು ಸಂಗೀತಾ ದಿಲೀಪ್ ಅವರ ಹಾಡುಗಾರಿಕೆಗೆ ಪಕ್ಕವಾದ್ಯದಲ್ಲಿ ವಿದ್ವಾನ್ ಕೆ.ಜೆ. ದಿಲೀಪ್ ಚೆನ್ನೈ ವಯಲಿನ್ನಲ್ಲಿ, ಸುನಾದ ಕೃಷ್ಣ ಅಮೈ ಮೃದಂಗದಲ್ಲಿ ಹಾಗೂ ವಿದ್ವಾನ್ ಬಾಲಕೃಷ್ಣ ಭಟ್ ಪುತ್ತೂರು ಮೋರ್ಸಿಂಗ್ನಲ್ಲಿ ಸಾಥ್ ನೀಡಿದರು.