ವಿಟ್ಲದಲ್ಲಿ ಸರಣಿ ಕಳವು
Team Udayavani, Jan 23, 2018, 10:46 AM IST
ವಿಟ್ಲ: ವಿಟ್ಲ ಮಹತೋಭಾರ ಶ್ರೀ ಪಂಚ ಲಿಂಗೇಶ್ವರ ದೇವರ ಮಹಾರಥೋತ್ಸವದ ದಿನವಾದ ರವಿವಾರ ತಡರಾತ್ರಿ ವಿಟ್ಲದ ವಕೀಲರ ಕಚೇರಿ, ಹೊಟೇಲ್, ಅಂಗಡಿ ಹಾಗೂ ರೂಮ್ಗಳಿಂದ ಸರಣಿ ಕಳ್ಳತನ ಮಾಡಿದ ಹಾಗೂ ಮಹಿಳೆಯೊಬ್ಬರ ಕುತ್ತಿಗೆಯಿಂದ ಸರ ಎಗರಿಸಿದ ಘಟನೆ ಸಂಭವಿಸಿದೆ.
ವಿಟ್ಲದ ವಿ.ಎಚ್. ಕಾಂಪ್ಲೆಕ್ಸ್ನಲ್ಲಿರುವ ನ್ಯಾಯವಾದಿ ಉಮ್ಮರ್ ಅವರ ಕಚೇರಿಯ ಶಟರ್ ಮುರಿದು ಒಳನುಗ್ಗಿದ ಕಳ್ಳರು ಸೊತ್ತುಗಳಿಗಾಗಿ ತಡಕಾಡಿದ್ದಾರೆ. ಅಲ್ಲಿಂದ ಏನೂ ಸಿಗದೆ ಬರಿಗೈಯಲ್ಲಿ ತೆರಳಿ ಪಕ್ಕದಲ್ಲಿರುವ ಪ್ಯಾರಡೈಸ್ ಹೊಟೇಲ್ನಿಂದ ನಗದು ದೋಚಿದ್ದಾರೆ. ಬಳಿಕ ಸ್ಪೈಸಿ ಹೊಟೇಲ್ ನೌಕರರು ಮಲಗುವ ಕೋಣೆಯಿಂದ ನಾಲ್ಕು ಮೊಬೈಲ್ಫೋನ್ ಕದ್ದೊಯ್ದಿದ್ದಾರೆ. ಈ ಘಟನೆ ಸೋಮವಾರ ಬೆಳಗ್ಗೆ ಬೆಳಕಿಗೆ ಬಂದಿದ್ದು, ವಿಟ್ಲ ಪೊಲೀಸರಿಗೆ ಮಾಹಿತಿ ನೀಡಲಾಗಿದೆ. ಸ್ಥಳಕ್ಕೆ ಭೇಟಿ ನೀಡಿದಾಗ ಸ್ಥಳದಲ್ಲಿ ಕಳ್ಳತನಕ್ಕೆ ಬಳಸಿದ ಪಿಕ್ಕಾಸು ಮತ್ತಿತರ ಆಯುಧಗಳು ಪತ್ತೆಯಾಗಿದ್ದು, ಅವುಗಳನ್ನು ಪೊಲೀಸರು ವಶಕ್ಕೆ ಪಡೆದು ತನಿಖೆ ನಡೆಸುತ್ತಿದ್ದಾರೆ.
ಸರ ಲಪಟಾವಣೆ: ಈ ನಡುವೆ ಜಾತ್ರೆಗೆ ಆಗಮಿಸಿದ್ದ ಕೇಪು ಗ್ರಾಮದ ಮಹಿಳೆ ಕುತ್ತಿಗೆಯಿಂದ ಮೂರೂವರೆ ಪವನ್ ತೂಕದ ಚಿನ್ನದ ಸರವನ್ನೂ ಎಗರಿಸಲಾಗಿದೆ. ಚೈನನ್ನು ಎಳೆಯುವ ಸಂದರ್ಭ ಮಹಿಳೆಯ ಕುತ್ತಿಗೆಗೆ ಗಾಯವಾಗಿದೆ.