‘ಶಾಂತಿ, ಸಾಮರಸ್ಯ ಅನಿವಾರ್ಯ’
Team Udayavani, Jan 31, 2018, 1:45 PM IST
ಸುಳ್ಯ : ಸೌಹಾರ್ದಕ್ಕಾಗಿ ಕರ್ನಾಟಕ ಮಾನವ ಸರಪಳಿ ಕಾರ್ಯಕ್ರಮ ಸುಳ್ಯ ನಗರದಲ್ಲಿ ಮಂಗಳವಾರ ನಡೆಯಿತು. ಬಸ್ ನಿಲ್ದಾಣದ ಬಳಿ ಸುಳ್ಯ ಚರ್ಚ್ ಧರ್ಮಗುರು ಫಾ| ವಿನ್ಸೆಂಟ್ ಡಿಸೋಜ ಉದ್ಘಾಟಿಸಿ, ಶಾಂತಿ, ಸಾಮರಸ್ಯದಿಂದ ಸಹಬಾಳ್ವೆ ಸಾಧ್ಯವಾಗುತ್ತದೆ. ಪರಸ್ಪರ ವಿಶ್ವಾಸದಿಂದ ಬದುಕಿ, ಜಾತಿ, ಮತ, ಧರ್ಮ ಮೀರಿ ಒಂದುಗೂಡಬೇಕು ಎಂದರು.
ಉಪನ್ಯಾಸಕ ಡಾ| ಪೂವಪ್ಪ ಕಣಿಯೂರು ಮಾತನಾಡಿ, ಸಮಾನತೆ, ಸೌಹಾರ್ದದಿಂದ ದೇಶ ಕಟ್ಟಬಹುದು. ಗಾಂಧಿ ಕನಸಿನ ಅಹಿಂಸೆ ತತ್ವದಲ್ಲಿ ಸಾಗೋಣ ಎಂದರು. ಮಾಜಿ ಶಾಸಕ ಕುಶಲ ಮಾತನಾಡಿ, 1992ರಲ್ಲಿ ಸುಳ್ಯದಲ್ಲಿ ನಡೆದ ಕೋಮುಗಲಭೆಯಿಂದಾದ ತೊಂದರೆಗಳ ಬಗ್ಗೆ ಇಲ್ಲಿನ ಜನರಿಗೆ ಮನವರಿಕೆ ಆಗಿದೆ. ಆಮೇಲೆ ಅಂತಹ ಘಟನೆ ಇಲ್ಲಿ ನಡೆದಿಲ್ಲ. ಧರ್ಮಗಳ ಮಧ್ಯೆ ಸಾಮರಸ್ಯ ಕದಡುವವರನ್ನು ತಿರಸ್ಕರಿಸಿ, ಶಾಂತಿ, ಸಾಮರಸ್ಯ ಕಾಪಾಡಿಕೊಳ್ಳಬೇಕು ಎಂದರು. ಗೋಪಾಲ ಪೆರಾಜೆ ಮಾತನಾಡಿ, ಎಲ್ಲ ಧರ್ಮಗಳೂ ಶಾಂತಿ, ತ್ಯಾಗ, ಸೌಹಾರ್ದವನ್ನು ಪ್ರತಿಪಾದಿಸಿವೆ ಎಂದರು.
ಸಂಘಟನ ಸಮಿತಿ ಸದಸ್ಯ ಎಂ.ಬಿ. ಸದಾಶಿವ ಪ್ರತಿಜ್ಞಾವಿಧಿ ಬೋಧಿಸಿದರು. ಸೇರಿದ್ದ ನೂರಾರು ಮಂದಿ ಪರಸ್ಪರ ಕೈ ಜೋಡಿಸಿ ಮಾನವ ಸರಪಳಿ ನಿರ್ಮಿಸಿ, ಶಾಂತಿ, ಸಾಮರಸ್ಯದ ಸಂದೇಶ ಸಾರಿದರು. ಕೆ.ಪಿ. ಜಾನಿ, ನಾರಾಯಣ ಕಿಲಂಗೋಡಿ, ಪ್ರಕಾಶ್ ಬಂಗ್ಲೆಗುಡ್ಡೆ,, ಹರಿಶ್ಚಂದ್ರ ಪಂಡಿತ್, ಗೋಕುಲ್ದಾಸ್, ಸಿದ್ದಿಕ್, ಜಿ.ಕೆ. ಹಮೀದ್, ಗೀತಾ ಕೋಲ್ಚಾರು, ಪ್ರವೀಣಾ ರೈ ಮರುವಂಜ, ಆಶೋಕ್ ನೆಕ್ರಾಜೆ, ಪಿ.ಎಸ್. ಗಂಗಾಧರ, ಆರ್.ಕೆ. ಮಹಮ್ಮದ್, ಧರ್ಮಪಾಲ ಕೊಯಿಂಗಾಜೆ, ಆನಂದ ಬೆಳ್ಳಾರೆ, ಅಚ್ಯುತ ಮೆಲ್ಕಾಜೆ, ರಿಯಾಝ್, ಪಿ.ಎ. ಮಹಮ್ಮದ್, ಜೂಲಿಯಾನ ಕ್ರಾಸ್ತಾ, ಕಾಂತಿ ಮೋಹನ್, ಜಯಂತಿ ಸಂಪಾಜೆ, ಬಿಜು ಅಗಸ್ಟಿನ್ ಉಪಸ್ಥಿತರಿದ್ದರು.