ಸಹಸ್ರಾರು ಅಭಿಮಾನಿಗಳ ಸಮ್ಮುಖದಲ್ಲಿ ಹರೀಶ್ ಪೂಂಜ ನಾಮಪತ್ರ ಸಲ್ಲಿಕೆ
Team Udayavani, Apr 24, 2018, 12:43 PM IST
ಬೆಳ್ತಂಗಡಿ: ಪ್ರಭಾವಿ ಯುವ ಮುಂದಾಳು ಹರೀಶ್ ಪೂಂಜ ಅವರು ಬೆಳ್ತಂಗಡಿ ವಿಧಾನ ಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಸೋಮವಾರ ನಾಮಪತ್ರ ಸಲ್ಲಿಸಿದ್ದಾರೆ.
ಹರೀಶ್ ಪೂಂಜ ಅವರು ಬೆಳಗ್ಗೆ ಕುತ್ಯಾರು ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಸಹಸ್ರಾರು ಸಂಖ್ಯೆಯ ಅಭಿಮಾನಿಗಳೊಂದಿಗೆ ಮೆರವಣಿಗೆಯಲ್ಲಿ ಬಂದು ನಾಮಪತ್ರ ಸಲ್ಲಿಸಿದರು.
ಬರಿಗಾಲಲ್ಲಿ ನಡೆದ ಪೂಂಜ
ಕುತ್ಯಾರು ಶ್ರೀ ಸೋಮನಾಥೇಶ್ವರ ದೇವಾಲಯದಲ್ಲಿ ಪೂಜೆ ಸಲ್ಲಿಸಿದ ಹರೀಶ್ ಪೂಂಜ ಅವರು ಬರಿಗಾಲಲ್ಲಿ ಸುಮಾರು 1 ಕಿ.ಮೀ. ದೂರ ಉರಿ ಬಿಸಿಲಿನಲ್ಲಿ ಸಾವಿರಾರು ಕಾರ್ಯಕರ್ತರ ಜತೆ ಸಾಗಿ, ಮಿನಿ ವಿಧಾನಸೌಧ ತಲುಪಿ ಚುನಾವಣಾಧಿಕಾರಿ ಎಚ್.ಆರ್. ನಾಯ್ಕ ಅವರಿಗೆ ನಾಮಪತ್ರ ಸಲ್ಲಿಸಿದರು. ಈ ವೇಳೆ ಸಾವಿರಾರು ಕಾರ್ಯಕರ್ತರು ಕೇಸರಿ ಶಾಲು ಮೇಲಕ್ಕೆತ್ತಿ ಹಾರಾಡಿಸಿ, ಕುಣಿದು ಸಂಭ್ರ ಮಿಸಿದರು. ಮಹಿಳೆಯರೂ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವ ಮೂಲಕ ಗಮನ ಸೆಳೆದರು.
ಠೇವಣಿ ನೀಡಿದ ರಿಕ್ಷಾ ಚಾಲಕರು
ತಾಲೂಕಿನ ರಿಕ್ಷಾ ಚಾಲಕರು ಹರೀಶ್ ಪೂಂಜ ಅವರ ಚುನಾವಣಾ ಠೇವಣಿ ಮೊತ್ತವನ್ನು ನೀಡಿದ್ದಾರೆ. ತಾಲೂಕಿನ ವಿವಿಧೆಡೆ ಬಿಜೆಪಿ ಕಾರ್ಯಕರ್ತರಾಗಿರುವ ರಿಕ್ಷಾ ಚಾಲಕರು ತಾವು ದುಡಿದ ಹಣದಲ್ಲಿ ಒಂದು ಪಾಲನ್ನು ಸಂಗ್ರಹಿಸಿ ನೀಡಿದ್ದನ್ನೇ ಠೇವಣಿಯಾಗಿ ಬಳಸಲಾಗಿದೆ.
ದ.ಕ. ಜಿಲ್ಲೆಯ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷರಾಗುವ ಮೂಲಕ ರಾಜಕೀಯ ರಂಗ ಪ್ರವೇಶಗೈದ ಅವರು ವಿವಿಧ ಕ್ಷೇತ್ರಗಳ ಸಂಘಟನೆಗಳಲ್ಲಿ ತೊಡಗಿಕೊಂಡಿದ್ದು, ಅವರ ಚುನಾವಣಾ ರಾಜಕೀಯವನ್ನು ಪ್ರವೇಶಿಸಿದ್ದಾರೆ. ಪತ್ನಿ ಡಾ| ಸ್ವೀಕೃತಾ ಎಚ್. ಪೂಂಜ ಹಾಗೂ ಪುತ್ರ ಗಹನ್ ಪೂಂಜ ಹರೀಶ್ರ ಕುಟುಂಬ.
ಸಮಾವೇಶದಲ್ಲಿ ಉಪಸ್ಥಿತಿ
ನಾಮಪತ್ರ ಸಲ್ಲಿಕೆಯ ಬಳಿಕ ನಡೆದ ಸಮಾವೇಶದಲ್ಲಿ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್, ಮುಖಂಡ ಉದಯ್ ಶೆಟ್ಟಿ, ಬಿಜೆಪಿ ಜಿಲ್ಲಾ ಪ್ರಭಾರಿ ಪ್ರತಾಪ್ಸಿಂಹ ನಾಯಕ್, ರಾಜ್ಯ ಬಿಜೆಪಿಯ ಸುಲೋಚನಾ ಭಟ್, ಜಿಲ್ಲಾ ಬಿಜೆಪಿ ವಕ್ತಾರ ಹರಿಕೃಷ್ಣ ಬಂಟ್ವಾಳ, ಬಿಜೆಪಿ ಮಂಡಲ ಮಾಜಿ ಅಧ್ಯಕ್ಷ ಕುಶಾಲಪ್ಪ ಗೌಡ, ವಾಗ್ಮಿ ಕುಂಟಾರು ರವೀಶ್ ತಂತ್ರಿ, ಮಾಜಿ ಶಾಸಕ ಕೆ. ಪ್ರಭಾಕರ ಬಂಗೇರ, ಬಿಜೆಪಿ ಯುವ ಮೋರ್ಚಾ ತಾಲೂಕು ಅಧ್ಯಕ್ಷ ಸಂಪತ್ ಸುವರ್ಣ, ಹರೀಶ್ ಮೂಡುಶೆಡ್ಡೆ, ಜಿಲ್ಲಾ ಪ್ರಭಾರಿ ಶೈಲಜಾ ಭಟ್, ಕಸ್ತೂರಿ ಪಂಜ, ಶಾರದಾ ಆರ್. ರೈ, ಜಿಲ್ಲಾ ಉಪಾಧ್ಯಕ್ಷ ಬಾಲಚಂದ್ರ ಮುರುಳಿ, ಮಹಿಳಾ ಘಟಕದ ಅಧ್ಯಕ್ಷೆ ಧನಲಕ್ಷ್ಮೀ ಜನಾರ್ದನ್, ತಾ.ಪಂ. ಉಪಾಧ್ಯಕ್ಷೆ ವೇದಾವತಿ, ತಾ.ಪಂ. ಸದಸ್ಯ ಶಶಿಧರ ಎಂ. ಕಲ್ಮಂಜ, ಜಿ.ಪಂ. ಸದಸ್ಯರಾದ ಸೌಮ್ಯಲತಾ, ಕೆ. ಕೊರಗಪ್ಪ ನಾಯ್ಕ, ಬಿಜೆಪಿ ತಾಲೂಕು ಪ್ರಧಾನ ಕಾರ್ಯದರ್ಶಿ ಪ್ರಭಾಕರ ಶೆಟ್ಟಿ ಉಪ್ಪಡ್ಕ ಮೊದಲಾದವರು ಉಪಸ್ಥಿತರಿದ್ದರು.
ಸಂಘದಿಂದ ಸಮಾಜದೆಡೆಗೆ
ವಿದ್ಯಾರ್ಥಿ ದೆಸೆಯಲ್ಲೇ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕಾರ್ಯ ಕರ್ತರಾಗಿ ಶಿಸ್ತಿನ ಸಿಪಾಯಿಯಾಗಿ ಬೆಳೆ ದವರು. ಶಾಲಾ ದಿನಗಳಲ್ಲಿ ಶಾಖೆಗಳಲ್ಲಿ ಭಾಗವಹಿಸಿ ಎಲ್ಲರೊಂದಿಗೆ ಸಮಾನವಾಗಿ ಬೆರೆಯುವ ವ್ಯಕ್ತಿತ್ವ ರೂಢಿಸಿಕೊಂಡವರು. ಎಲ್ಲರನ್ನೂ ಪ್ರೀತಿ-ವಿಶ್ವಾಸದಿಂದ ಕಾಣುವವರು. ಪ್ರಶ್ನಾತೀತ ಪಕ್ಷ ಬದ್ಧತೆ ಹೊಂದಿರುವ ಅವರು, ತಳಮಟ್ಟದ ಕಾರ್ಯಕರ್ತರನ್ನು ಗೌರವದಿಂದ ಕಾಣುವ ಸರಳ ಸಜ್ಜನಿಕೆಯ ವ್ಯಕ್ತಿ ಎನ್ನುತ್ತಾರೆ ಅವರ ಅಭಿಮಾನಿಗಳು.
ಧಾರ್ಮಿಕ ಕ್ಷೇತ್ರದ ಕೈಂಕರ್ಯಕ್ಕೆ ಅಡಿಯಿಟ್ಟ ಅವರು ಬೆಳ್ತಂಗಡಿ ತಾಲೂಕಿನ ಹಲವು ದೇವಸ್ಥಾನಗಳ ಬ್ರಹ್ಮಕಲಶ ಸಮಿತಿ ಅಧ್ಯಕ್ಷರಾಗಿ, ಗೌರವಾಧ್ಯಕ್ಷರಾಗಿ ಸೇವೆ ಸಲ್ಲಿಸಿ ದೇವಸ್ಥಾನಗಳ ಜೀರ್ಣೋದ್ಧಾರ ಹಾಗೂ ಬ್ರಹ್ಮಕಲಶವನ್ನು ಯಶಸ್ವಿಯಾಗಿ ನಿಭಾಯಿಸಿದ್ದರು. ಯುವಕರನ್ನೂ ಒಟ್ಟುಗೂಡಿಸಿಕೊಂಡು ಬೆಳ್ತಂಗಡಿ ನಗರದಲ್ಲಿ ಕೃಷ್ಣೋತ್ಸವ ಆಯೋಜನೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.
ಎತ್ತಿನಹೊಳೆ, ಎಂಡೋ ಹೋರಾಟ
ದ.ಕ. ಜಿಲ್ಲೆಯ ಜೀವನದಿ ನೇತ್ರಾವತಿ ಉಳಿವಿನ ಹೋರಾಟದಲ್ಲಿಯೂ ಪಾಲ್ಗೊಂಡಿದ್ದಲ್ಲದೆ ಎಂಡೋಸಲ್ಫಾನ್ ಸಂತ್ರಸ್ತರ ಪರವಾಗಿ ಹೋರಾಟ ನಡೆಸಿದ್ದರು. ಬೆಂಗಳೂರು ಫ್ರೀಡಂ ಪಾರ್ಕ್ನಲ್ಲಿ ಬೃಹತ್ ಪ್ರತಿಭಟನೆ ಆಯೋಜಿಸಿ ಸರಕಾರದ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Aranthodu: ಜೀಪ್-ಬೈಕ್ ಅಪಘಾತ; ಗಂಭೀರ ಗಾಯಗೊಂಡಿದ್ದ ಬೈಕ್ ಸವಾರ ಸಾವು
LS Polls: ಬೆಳ್ತಂಗಡಿ ತಾಲೂಕಿನ ಉಜಿರೆಯ ಮಸ್ಟರಿಂಗ್ ಕೇಂದ್ರಕ್ಕೆ ದ.ಕ. ಜಿಲ್ಲಾಧಿಕಾರಿ ಭೇಟಿ
Bantwala: ಬಾಲಕಿಯೊಂದಿಗೆ ಅನುಚಿತ ವರ್ತನೆ; ಆರೋಪಿ ವಿರುದ್ಧ ಪ್ರಕರಣ ದಾಖಲು
Uppinangady ಬಸ್ಸಿನಲ್ಲಿ ಲೈಂಗಿಕ ಕಿರುಕುಳ: ಪ್ರತಿರೋಧಿಸಿದ ವಿದ್ಯಾರ್ಥಿನಿಯ ನಡೆಗೆ ಶ್ಲಾಘನೆ
ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ