‘ಅನ್ಯೋನ್ಯತೆಗೆ ಕಾಂಗ್ರೆಸ್ ಬೆಂಬಲಿಸಿ’
Team Udayavani, Apr 24, 2018, 12:54 PM IST
ಪುತ್ತೂರು : ಐದು ವರ್ಷಗಳಲ್ಲಿ ತಿಳಿದು ತಪ್ಪು ಮಾಡಿಲ್ಲ. ಮಾಡಿದ್ದರೆ ಕ್ಷಮಿಸಿ. ಹಿಂದಿನ ಐದು ವರ್ಷ ಕೈ ಹಿಡಿದು ಮುನ್ನಡೆಸಿದ್ದೀರಿ. ಮುಂದಿನ ಐದು ವರ್ಷವೂ ನಿಮ್ಮ ಆಶೀರ್ವಾದ ಬೇಕಾಗಿದೆ. ಸಹೋದರತೆ, ಅನ್ಯೋನ್ಯತೆ, ಶಾಂತಿಯಿಂದ ಆಡಳಿತ ನಡೆಸಿದ್ದು, ಮುಂದೆಯೂ ಇದಕ್ಕೆ ಅವಕಾಶ ನೀಡಬೇಕು ಎಂದು ಪುತ್ತೂರು ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಶಕುಂತಳಾ ಟಿ. ಶೆಟ್ಟಿ ಅವರು ಹೇಳಿದರು. ನಾಮಪತ್ರ ಸಲ್ಲಿಸಿದ ಬಳಿಕ ಟೌನ್ ಬ್ಯಾಂಕ್ ಸಭಾಭವನದಲ್ಲಿ ನಡೆದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದರು.
ಅಭಿವೃದ್ಧಿ ದಿಸೆಯಲ್ಲಿ ಕೆಲಸ ಮಾಡಿ, ಜನರಿಗಾಗಿ ಹಲವು ಕೊಡುಗೆ ನೀಡಿದವರನ್ನು ಹಿಂದಿನಿಂದ ಬಯ್ಯುವುದು ಬೇಡ. ಸರಕಾರ ನೀಡಿದ ಸಾಕಷ್ಟು ಯೋಜನೆಗಳ ಸದುಪಯೋಗ ಪಡೆದುಕೊಂಡೂ ತನಗೇನೂ ಸಿಕ್ಕಿಯೇ ಇಲ್ಲ ಎಂದು ಹಲವರು ಹೇಳು ತ್ತಾರೆ. ಮಕ್ಕಳ ಹಾಲಿಗೆ ವಿಷ ಹಾಕುವ ಕೆಲಸವನ್ನೂ ಮಾಡುತ್ತಾರೆ. ಇದು ಭಾರತದ ಸಂಸ್ಕೃತಿ ಅಲ್ಲ. ಭಾರತದ ಸಂಸ್ಕೃತಿಗೆ ತಕ್ಕಂತೆ ಪ್ರತಿಯೊಬ್ಬರೂ ವರ್ತಿಸಬೇಕಾಗಿದೆ ಎಂದರು.
ತೃಪ್ತಿ ಇದೆ
ನನಗೆ ನಾನೇ ಮತ ಚಲಾಯಿಸುತ್ತಿಲ್ಲ. ಹಾಗಿದ್ದೂ ಗೆದ್ದಿದ್ದೇನೆ ಎಂದರೆ ಅದಕ್ಕೆ ಕಾರ್ಯಕರ್ತರ ಶ್ರಮ, ಮತದಾರರ ಒಲವು ಕಾರಣ. ಇಷ್ಟು ಗೌರವ ನೀಡಿದ್ದಕ್ಕೆ ಸಮನಾಗಿ ಕೆಲಸ ಮಾಡಿದ್ದೇನೆ ಎಂಬ ತೃಪ್ತಿ ತನಗಿದೆ. ಹಿಂದಿನ ಬಾರಿ ಚುನಾವಣೆಗೆ ಸ್ಪರ್ಧಿಸಿದಾಗ ಜನಾರ್ದನ ಪೂಜಾರಿ ಅವರಿಗೂ ಅಪನಂಬಿಕೆ ಇತ್ತು. ಆದರೆ ಈಗ ಕಾಂಗ್ರೆಸ್ಗೆ ಬಂದು ಉತ್ತಮ ಕೆಲಸ ಮಾಡಿದ್ರು ಎಂದು ಹೇಳಿದ್ದಾರೆ. ರಾಮ ಭಟ್ಟರ ಸಹಿತ ಸ್ವಾಭಿಮಾನಿಗಳು ಕಾಂಗ್ರೆಸ್ ಗೆ ಹೋಗುವುದು ಒಳಿತು ಎಂದು ಹೇಳಿದ ಬಳಿಕ ಕಾಂಗ್ರೆಸ್ನಲ್ಲಿ ಸ್ಪರ್ಧೆಗೆ ಮುಂದಾದೆ. ಯಾವುದೇ ರೀತಿಯ ಅಪಪ್ರಚಾರಕ್ಕೆ ಕಿವಿಗೊಡಬೇಡಿ ಎಂದರು.
ಕಣ್ಣೀರು ಒರೆಸುವ ಕೆಲಸ
ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಯು.ಬಿ. ವೆಂಕಟೇಶ್ ಮಾತನಾಡಿ, ಪುತ್ತೂರು ಕಾಂಗ್ರೆಸ್ ಅಭ್ಯರ್ಥಿ ಶಕುಂತಳಾ ಶೆಟ್ಟಿ ಶಾಸಕರಾಗಿ ವಿಧಾನಸಭೆ ಪ್ರವೇಶಿಸುವುದು ನಿಶ್ಚಿತ. ಹಾಗೆಯೇ 130ಕ್ಕೂ ಹೆಚ್ಚು ಸ್ಥಾನಗಳಲ್ಲಿ ಕಾಂಗ್ರೆಸ್ ಗೆಲುವು ಸಾ ಧಿಸಲಿದೆ. ಪುತ್ತೂರು ವಿಧಾನಸಭಾ ಕ್ಷೇತ್ರಕ್ಕೆ ತರಿಸಿದ ಅನುದಾನಗಳನ್ನು ಇಲ್ಲಿನ ಜನರು ಮರೆಯಲಾರರು. ಮುಖ್ಯಮಂತ್ರಿ ಸಿದ್ದರಾಮಯ್ಯ ಬಡವರ ಕಣ್ಣೇರು ಒರೆಸುವ ಕೆಲಸ ಮಾಡಿದ್ದಾರೆ ಎಂದು ಹೇಳಿದರು.
ಭಾಷಣ ನಿಲ್ಲಿಸಿದರು
ಶಕುಂತಳಾ ಶೆಟ್ಟಿ ಭಾಷಣ ಮಾಡುತ್ತಿದ್ದ ವೇಳೆ ಸಮೀಪದ ಮಸೀದಿಯಿಂದ ಆಜಾನ್ ಕೇಳಿಬಂದಿತು. ತಕ್ಷಣ ಭಾಷಣವನ್ನು ಅರ್ಧಕ್ಕೆ ನಿಲ್ಲಿಸಿದ ಶಕುಂತಳಾ ಶೆಟ್ಟಿ, ಆಜಾನ್
ಮುಗಿದ ಬಳಿಕ ಮಾತು ಮುಂದುವರಿಸಿದರು.