‘ವಿದ್ಯುತ್ ಸಮಸ್ಯೆ ನಿವಾರಣೆಯಾಗಲಿ’
Team Udayavani, Jun 13, 2018, 10:33 AM IST
ವಿಟ್ಲ : ಮೆಸ್ಕಾಂ ಇಲಾಖೆ ಖಾಲಿ ಹುದ್ದೆ ಭರ್ತಿ ಮಾಡಬೇಕು. ತಾತ್ಕಾಲಿಕ ಹೊರಗುತ್ತಿಗೆ ನೌಕರರನ್ನು ಬಳಸಿಕೊಳ್ಳಲು ಸೂಕ್ತ ವ್ಯವಸ್ಥೆ ಮಾಡಿಕೊಳ್ಳಬೇಕು. ರಾತ್ರಿ ಪಾಳಿಯಲ್ಲಿ ಕಾರ್ಯ ನಿರ್ವಹಿಸಲು ಬೇಕಾದ ವ್ಯವಸ್ಥೆ ಮಾಡಿಕೊಳ್ಳಬೇಕು. ದೂರವಾಣಿ ಕರೆಗಳಿಗೆ ಸ್ಪಂದಿಸಬೇಕು. ಹಿರಿಯ ಅಧಿಕಾರಿಗಳು ಮಳೆಗಾಲ ಮುಗಿಯುವವರೆಗೆ ಸ್ವಸ್ಥಾನ ಬಿಟ್ಟು ಹೊರ ಹೋಗಬಾರದು. ವಿದ್ಯುತ್ ಸಮಸ್ಯೆ ಸಂಪೂರ್ಣ ನಿವಾರಣೆಯಾಗಬೇಕೆಂದು ಪುತ್ತೂರು ಶಾಸಕ ಸಂಜೀವ ಮಠಂದೂರು ಸೂಚಿಸಿದರು.
ಅವರು ಮಂಗಳವಾರ ವಿಟ್ಲ ಅತಿಥಿ ಗೃಹದಲ್ಲಿ ಮೆಸ್ಕಾಂ ಅಧಿಕಾರಿಗಳ ಸಭೆ ನಡೆಸಿ ಮಳೆಗಾಲದಲ್ಲಿ ಇಲಾಖೆಯಿಂದ ಜನರಿಗೆ ಉತ್ತಮ ಸೇವೆ ಹೇಗೆ ನೀಡಬಹುದೆಂಬ ಬಗ್ಗೆ ಚರ್ಚೆ ನಡೆಸಿದರು. ನಿರಂತರ ವಿದ್ಯುತ್ ಸಂಪರ್ಕ ಕಲ್ಪಿಸುವ ನಿಟ್ಟಿನಲ್ಲಿ ಹೆಚ್ಚುವರಿಯಾಗಿ ಯಾವ ವ್ಯವಸ್ಥೆಗಳು ಅಗತ್ಯವಿದೆ ಎಂದು ತತ್ಕ್ಷಣ ಪಟ್ಟಿ ನೀಡುವಂತೆ ಸೂಚಿಸಿದರು. ವಿಟ್ಲ ಪಟ್ಟಣ ಪಂಚಾಯತ್ ಅಧ್ಯಕ್ಷ ಅರುಣ ಎಂ. ವಿಟ್ಲ ಮಾತನಾಡಿ, ವಿಟ್ಲ ಪೇಟೆಯ ಕಂಬ ಸ್ಥಳಾಂತರಿಸಲು ಹಲವು ಸಭೆ ನಡೆಸಲಾಗಿದೆ. ಲೋಕೋಪಯೋಗಿ ಇಲಾಖೆ ಅವಶ್ಯ ಮೊತ್ತ ಪಾವತಿಸಿದೆ. ಆದರೂ ಇದಕ್ಕೆ ಸೂಕ್ತ ವ್ಯವಸ್ಥೆ ಮಾಡಲಾಗಿಲ್ಲ. ಅಧಿಕಾರಿಗಳು
ಇದನ್ನು ಗಂಭೀರವಾಗಿ ಪರಿಗಣಿಸಬೇಕೆಂದು ಆಗ್ರಹಿಸಿದರು.