ದಿನಸಿ ಸಾಮಗ್ರಿ ಇದ್ದರೂ ಪಡೆಯದೆ ತೆರಳಿದರು!
Team Udayavani, Jun 17, 2018, 6:00 AM IST
ಸುಬ್ರಹ್ಮಣ್ಯ: ಗಡಿಭಾಗದ ಕಿಲಾರ್ಮಲೆ ಮೀಸಲು ಅರಣ್ಯದ ಮಡಪ್ಪಾಡಿ ಗ್ರಾಮದ ಹಾಡಿಕಲ್ಲು ಜಯರಾಮ ಎಚ್.ಬಿ. ಅವರಿಗೆ ಸೇರಿದ ತೋಟದ ಮನೆಯ ಶೆಡ್ ಬಳಿ ಶುಕ್ರವಾರ ಶಂಕಿತ ನಕ್ಸಲರು ಕಂಡು ಬಂದ ಬಳಿಕ ಈ ಭಾಗದಲ್ಲಿ ಎಎನ್ಎಫ್ ಹಾಗೂ ಎಎನ್ಎಸ್ ಪಡೆ ಜಂಟಿಯಾಗಿ ಶೋಧ ಕಾರ್ಯಾಚರಣೆ ಆರಂಭಿಸಿವೆ.
ಕಾರ್ಕಳ ಮತ್ತು ಭಾಗಮಂಡಲ ಬೆಟಾಲಿಯನ್ ನಕ್ಸಲ್ ನಿಗ್ರಹ ಪಡೆ ಮತ್ತು ಎಎನ್ಎಸ್ನ ಒಟ್ಟು ನಾಲ್ಕು ತಂಡ ಕಾರ್ಯಾಚರಣೆಗೆ ಇಳಿದಿದೆ. ಎಎನ್ಎಫ್ನ ಮೂರು ತಂಡ ಹಾಗೂ ಎಎನ್ಎಸ್ನ ಒಂದು ತಂಡ ರಚಿಸಲಾಗಿದ್ದು, 70 ಮಂದಿ ಯೋಧರು ಇದ್ದಾರೆ. ಮಡಿಕೇರಿ-ದ.ಕ. ಗಡಿಭಾಗದ ಅರಣ್ಯಗಳಲ್ಲಿ ತಂಡ ಕಾರ್ಯಾಚರಣೆ ನಡೆಸುತ್ತಿದ್ದು, ಕೋಟೆಗುಡ್ಡೆ, ಅರೆಕಲ್ಲು ಸಂಪಾಜೆ, ಕಡಮಕಲ್ಲು ಅರಣ್ಯದಲ್ಲಿ ಶನಿವಾರ ತೀವ್ರ ಶೋಧ ನಡೆಸಿದರು. ನಕ್ಸಲರ ಸಂಚಲನದ ಕುರಿತು ಯಾವುದೇ ಕುರುಹು ಲಭ್ಯವಾಗಿಲ್ಲ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಪಲಾಯನ ಸಾಧ್ಯತೆ
ಶಂಕಿತ ನಕ್ಸಲರು ಕಡಮಕಲ್ಲು, ಸುಬ್ರಹ್ಮಣ್ಯ-ಗಾಳಿಬೀಡು ಮೀಸಲು ಅರಣ್ಯದೊಳಗೆ ಸಂಚಾರ ಮಾಡಿ ಪಲಾಯನ ಮಾಡಿರುವ ಸಾಧ್ಯತೆ ಇದ್ದು, ಈ ಅರಣ್ಯ ಭಾಗವನ್ನು ನಾಲ್ಕು ದಿಕ್ಕುಗಳಿಂದ ಎಎನ್ಎಫ್ ಪಡೆ ಸುತ್ತುವರಿದಿದೆ. ಶಂಕಿತ ನಕ್ಸಲರು ಗಡಿಭಾಗದ ಅರಣ್ಯ ಮಾರ್ಗದ ಮೂಲಕ ಕೊಡಗು-ಕೇರಳ ಭಾಗಕ್ಕೆ ಕಾಲ್ಕಿತ್ತಿರುವ ಸಾಧ್ಯತೆ ಇದೆ.
ಶನಿವಾರ ಎಎನ್ಎಫ್ ತಂಡದ ಇನ್ಸ್ಪೆಕ್ಟರ್ ಗಣೇಶ್ ಹಾಗೂ ಗುಪ್ತ ಮಾಹಿತಿದಾರ ರಮೇಶ್ ಅವರು ಘಟನೆ ನಡೆದ ಸ್ಥಳಕ್ಕೆ ಭೇಟಿ ನೀಡಿ ಮತ್ತಷ್ಟು ಮಾಹಿತಿ ಕಲೆ ಹಾಕಿದರು. ಈ ಭಾಗದ ನಾಗರಿಕರಲ್ಲಿ ಧೈರ್ಯ ತುಂಬಿದರು.ಶುಕ್ರವಾರ ರಾತ್ರಿ ಎಎನ್ಎಫ್ ಪಡೆಯ ಎಸ್ಪಿ ಲಕ್ಷ್ಮೀಪ್ರಸಾದ್, ಪುತ್ತೂರು ಡಿವೈಎಸ್ಪಿ ಶ್ರೀನಿವಾಸ್ ಹಾಗೂ ಸುಳ್ಯ ಎಸ್ಐ ಸತೀಶ್ ಕುಮಾರ್ ಶಂಕಿತ ನಕ್ಸಲರು ಬಂದಿದ್ದ ಸ್ಥಳಕ್ಕೆ ತೆರಳಿ ಪ್ರತ್ಯಕ್ಷದರ್ಶಿ ಥಾಮಸ್ ಅವರಿಂದ ಘಟನೆ ಕುರಿತು ಮಾಹಿತಿ ಪಡೆದರು.
ಗುಡ್ಡಕ್ಕೆ ಮೂಟೆ ಹೊತ್ತೂಯ್ದವ ಯಾರು?
ಹಾಡಿಕಲ್ಲಿನ ಜೀರುಖೀ ಎಂಬಲ್ಲಿ ಅಪರಿಚಿತ ವ್ಯಕ್ತಿ ವಾರದ ಹಿಂದೆ ಕಾಡು ಮಾರ್ಗದ ಮೂಲಕ ಗುಡ್ಡದ ಕಡೆಗೆ ಗೋಣಿ ಚೀಲದಲ್ಲಿ ಮೂಟೆ ಒಯ್ಯುವುದನ್ನು ಸ್ಥಳೀಯ ಸುಂದರ ನೋಂಡ ಎನ್ನುವವರು ಕಂಡಿದ್ದರು. ಬೆಳಗ್ಗೆ ಗುಡ್ಡ ಕಡೆ ತೆರಳಿದ ವ್ಯಕ್ತಿ ಸಂಜೆ ಅದೇ ಕಾಡು ದಾರಿಯ ಮೂಲಕ ವಾಪಸಾಗಿದ್ದರು. ಮರಳಿ ಬರುವಾಗ ಆತನ ಬಳಿ ಸಣ್ಣ ಪೊಟ್ಟಣ ಇದ್ದದ್ದು ಬಿಟ್ಟರೆ ಬೇರೆ ಏನಿರಲಿಲ್ಲ. ಆತನಿಗೆ ಕನ್ನಡ ಹಾಗೂ ಸ್ಥಳೀಯ ಭಾಷೆ ತಿಳಿದಿರಲಿಲ್ಲ ಎಂದು ಸ್ಥಳೀಯರು ತಿಳಿಸಿದ್ದಾರೆ. ಈ ಭಾಗದ ಅರಣ್ಯದಂಚಿನಲ್ಲಿ ನಕ್ಸಲರು ಈ ಹಿಂದೆಯೇ ಟೆಂಟ್ ಹಾಕಿ ವಾಸ್ತವ್ಯ ಹೂಡಿದ್ದರೇ ಎಂಬ ಸಂಶಯ ಕೂಡ ಇದ್ದು, ನಕ್ಸಲರ ಚಟುವಟಿಕೆ ಗಟ್ಟಿಯಾಗಿ ಬೇರೂರುವ ಪ್ರಯತ್ನ ನಡೆದಿದೆ ಎನ್ನಲಾಗುತ್ತಿದೆ.
ದಿನಸಿ ಸಾಮಗ್ರಿ ಕಂಡೂ ಬಿಟ್ಟು ಹೋದರು
ದಟ್ಟ ಕಾಡಿನ ದುರ್ಗಮ ಪ್ರದೇಶ ಹಾಡಿಕಲ್ಲಿಗೆ ಶನಿವಾರ ತೆರಳಿದ್ದ “ಉದಯವಾಣಿ’ ಪ್ರತಿನಿಧಿ ಜತೆ ಮಾತನಾಡಿದ ಥಾಮಸ್ ಘಟನೆಯ ಕುರಿತು ಮತ್ತಷ್ಟು ವಿವರಗಳನ್ನು ಬಿಚ್ಚಿಟ್ಟರು. ಕಾಣಿಸಿಕೊಂಡಿದ್ದ ಮೂವರಲ್ಲಿ ಮೂರು ನಾಡಬಂದೂಕು ಹಾಗೂ ಮೂರು ಪಿಸ್ತೂಲು ಇದ್ದವು. ಬಾಗಿಲಲ್ಲಿ ನಿಂತಿದ್ದ ಯುವಕನ ಬೆನ್ನ ಹಿಂದೆ ನಾಡಕೋವಿ ಮತ್ತು ಸೊಂಟದಲ್ಲಿ ಎರಡು ಪಿಸ್ತೂಲು ಇತ್ತು. ಸೊಂಟದಿಂದ ಭುಜಕ್ಕೆ ಧರಿಸಿದ್ದ ಸಾðಪ್ನಲ್ಲಿ ಬಂದೂಕಿನ ಮದ್ದು ಜೋಡಿಸಿತ್ತು. ಹಸಿರು ಬಣ್ಣದ ಡ್ರೆಸ್ ಧರಿಸಿದ್ದ ಇಬ್ಬರು ಯುವತಿಯರು ತಲೆಗೆ ಪಟ್ಟಿ ಕಟ್ಟಿಕೊಂಡಿದ್ದರು. ಅವರ ಸೊಂಟದಲ್ಲಿ ಪಿಸ್ತೂಲು ಮತ್ತು ಬೆನ್ನ ಹಿಂದೆ ಕೋವಿ ಇತ್ತು. ಮೊದಲಿಗೆ ಒಳ ಪ್ರವೇಶಿಸಿದ ಯುವತಿ ತಲೆಪಟ್ಟಿ ತೆಗೆದು ಪ್ರವೇಶಿಸಿದ್ದಳು. ಜತೆಯಲ್ಲಿ ಇದ್ದಾಕೆ ಊಟ, ತಟ್ಟೆ ಪಡೆಯುವ ವರೆಗೂ ತನ್ನ ತಲೆಗೆ ಬಂದೂಕು ಗುರಿ ಮಾಡಿ ಮಾತನಾಡದಂತೆ ತಡೆದಳು ಎಂದಿದ್ದಾರೆ. ಯುವತಿಯರು ಚಪ್ಪಲಿ ಹಾಗೂ ಯುವಕ ಶೂ ಧರಿಸಿದ್ದ. ಶೆಡ್ನ ಒಳಗೆ ಅಕ್ಕಿ, ಸಾಂಬಾರು ಸಾಮಗ್ರಿ ಇದ್ದರೂ ಕೊಂಡು ಹೋಗದೆ ಇರುವುದು ಅಚ್ಚರಿ ಮೂಡಿಸಿದೆ.
ಬಾಲಕೃಷ್ಣ ಭೀಮಗುಳಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Drama: ಪ್ರೇಕ್ಷಕರ ಮನಗೆದ್ದ “ಸೀತಾರಾಮ ಚರಿತಾ”
Puttur: ಶ್ರೀ ಮಹಾಲಿಂಗೇಶ್ವರ ದೇವರ ಅವಭೃಥ ಸವಾರಿ
Neha Hiremath Case; ಕೊಲೆಗಡುಕನನ್ನು ಎನ್ ಕೌಂಟರ್ ಮಾಡಿ: ಪ್ರಮೋದ್ ಮುತಾಲಿಕ್ ಆಗ್ರಹ
Neha Hiremath Case: ಹಂತಕನ ಊರಿನಲ್ಲಿ ಪ್ರತಿಭಟನೆ, ಮುಸ್ಲಿಂ ಸಮುದಾಯದ ಸಾಥ್
Belagavi; ಕಾಂಗ್ರೆಸ್ ಸರ್ಕಾರದ ಓಲೈಕೆಯಿಂದ ಜಿಹಾದಿ ಕೃತ್ಯಗಳು ಹೆಚ್ಚುತ್ತಿದೆ: ಶೆಟ್ಟರ್