ಚಾರ್ಮಾಡಿ ಹಳ್ಳ ಸೇತುವೆ ತಡೆಗೋಡೆಗೆ ಹಾನಿ
Team Udayavani, Jul 1, 2018, 10:36 AM IST
ಬೆಳ್ತಂಗಡಿ : ಬಿ.ಸಿ. ರೋಡ್- ಚಾರ್ಮಾಡಿ ಹೆದ್ದಾರಿಯ ಚಾರ್ಮಾಡಿ ಹಳ್ಳದಲ್ಲಿ ಕಿರುಸೇತುವೆಯೊಂದಿದ್ದು, ಕಳೆದ ಕೆಲವು ದಿನಗಳ ಹಿಂದೆ ರಾತ್ರಿವೇಳೆ ಯಾವುದೋ ವಾಹನ ಸೇತುವೆಯ ಕಬ್ಬಿಣದ ತಡೆಗೆ ಢಿಕ್ಕಿ ಹೊಡೆದು ಅಪಾಯದ ಸ್ಥಿತಿ ನಿರ್ಮಾಣವಾಗಿದೆ. ಪ್ರಸ್ತುತ ಹೆದ್ದಾರಿ ಇಲಾಖೆಯು ಈ ಭಾಗದಲ್ಲಿ ಬ್ಯಾರಿಕೇಡ್ ಇಟ್ಟು, ಅಪಾಯವನ್ನು ಸೂಚಿಸುವ ರೀತಿಯಲ್ಲಿ ಪ್ಲಾಸ್ಟಿಕ್ ರಿಬ್ಬನನ್ನು ಕಟ್ಟಿದೆ. ಆದರೂ ವಾಹನಗಳು ಸೇತುವೆಯ ಬದಿಗೆ ಬಂದದ್ದೇ ಆದಲ್ಲಿ ಅಪಾಯದ ಸಾಧ್ಯತೆ ಹೆಚ್ಚಿದೆ. ಈ ಹಿಂದೆಯೂ ಇಲ್ಲಿ ಹತ್ತಿರದ ತೋಡಿಗೆ ವಾಹನ ಬಿದ್ದ ಘಟನೆ ಸಂಭವಿಸಿತ್ತು.
ಶಿರಾಡಿ ಘಾಟಿ ರಸ್ತೆ ಮುಚ್ಚಿರುವ ಪರಿಣಾಮ ಹಾಸನ-ಬೆಂಗಳೂರು ಕಡೆಗೆ ಸಾಗುವ ವಾಹನಗಳು ಇದೇ ರಸ್ತೆಯಲ್ಲಿ ಸಂಚರಿಸುತ್ತವೆ. ಹೀಗಾಗಿ ಹೆದ್ದಾರಿಯಲ್ಲಿ ವಾಹನಗಳ ಒತ್ತಡ ಹೆಚ್ಚಿದ್ದು, ರಸ್ತೆ ಬದಿ ಕುಸಿತ ಆರಂಭಗೊಂಡರೆ ಹೆದ್ದಾರಿ ಸಂಚಾರ ಮೊಟಕುಗೊಳ್ಳುವ ಅಪಾಯವೂ ಇದೆ. ಪ್ರಸ್ತುತ ಚಾರ್ಮಾಡಿ ಹಳ್ಳಕ್ಕೆ ಹೊಸ ಸೇತುವೆ ಮಂಜೂರುಗೊಂಡಿದ್ದರೂ ಈ ವರೆಗೆ ನಿರ್ಮಾಣಗೊಂಡಿಲ್ಲ.
ದುರಸ್ತಿಗೆ ಆಗ್ರಹ
ಇಲಾಖೆ ಈ ಕುರಿತು ಎಚ್ಚೆತ್ತುಕೊಂಡು ಅಪಾಯ ಸಂಭವಿಸುವ ಮೊದಲು ತಡೆಗೋಡೆಯ ದುರಸ್ತಿಗೆ ಮುಂದಾಗಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.