ಮೊಬೈಲ್ ನೆಟ್ವರ್ಕ್ ಸಮಸ್ಯೆ: ಮೋದಿ ಆ್ಯಪ್ನಲ್ಲಿ ದೂರು
Team Udayavani, Jul 29, 2018, 9:57 AM IST
ಕಡಬ: ತನ್ನೂರಿನ ದುರ್ಬಲ ಮೊಬೈಲ್ ನೆಟ್ವರ್ಕ್ ಸಮಸ್ಯೆ ಕುರಿತು ಮೋದಿ ಆ್ಯಪ್ನಲ್ಲಿ ದೂರು ದಾಖಲಿಸಿದ್ದ ಪುತ್ತೂರು ತಾಲೂಕಿನ ಇಚಿಲಂಪಾಡಿಯ ಕುಡಾಲ ನಿವಾಸಿ ರಕ್ಷಿತ್ ಅವರನ್ನು ಪ್ರಧಾನಿ ಕಾರ್ಯಾಲಯದ ಅಧಿಕಾರಿಗಳು ದೂರವಾಣಿ ಮೂಲಕ ಸಂಪರ್ಕಿಸಿ ಮಾಹಿತಿ ಪಡೆದಿದ್ದಾರೆ. ಈ ಮೂಲಕ ಜನಸಾಮಾನ್ಯರ ಸಮಸ್ಯೆ ಗಳಿಗೆ ಸ್ಪಂದಿಸುವ ಮೋದಿ ಸರಕಾರದ ಕಾರ್ಯವೈಖರಿಯನ್ನು ಮತ್ತೂಮ್ಮೆ ರುಜುವಾತುಪಡಿಸಿದ್ದಾರೆ.
1 ತಿಂಗಳ ಹಿಂದೆ ಮೋದಿ ಆ್ಯಪ್ ನಲ್ಲಿ ದೂರು ದಾಖಲಿಸಿದ್ದ ರಕ್ಷಿತ್ ಗ್ರಾಮದಲ್ಲಿ ಮೊಬೈಲ್ ನೆಟ್ವರ್ಕ್ ಹಾಗೂ ಇಂಟರ್ನೆಟ್ ಸೇವೆ ಸಮರ್ಪಕವಾಗಿ ಸಿಗದಿರುವ ಬಗ್ಗೆ ಪ್ರಸ್ತಾವಿಸಿದ್ದರು. ಗ್ರಾಮ ಗ್ರಾಮಗಳಲ್ಲಿ ದೂರಸಂಪರ್ಕ ವ್ಯವಸ್ಥೆ ಬಲಗೊಂಡರೆ ಮಾತ್ರ ಪ್ರಧಾನಿಯವರ ಡಿಜಿಟಲ್ ಇಂಡಿಯಾ ಪರಿಕಲ್ಪನೆ ಸಾಕಾರಗೊಳ್ಳಬಹುದು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದರು. ಜು. 26ರಂದು ರಕ್ಷಿತ್ ಅವ ರನ್ನು ಸಂಪರ್ಕಿಸಿದ್ದ ಪ್ರಧಾನಿ ಕಾರ್ಯಾಲಯದ ಅಧಿಕಾರಿಗಳು ಗ್ರಾಮದಲ್ಲಿರುವ ಮೊಬೈಲ್ ಸೇವೆ ಇತ್ಯಾದಿ ವಿಚಾರಗಳ ಕುರಿತು ಮಾಹಿತಿ ಪಡೆದು ಈಗಾಗಲೇ ನಿಮ್ಮ ಸಂಪರ್ಕ ಸಂಖ್ಯೆಯನ್ನು ಮೊಬೈಲ್ ಕಂಪೆನಿಗಳಿಗೆ ನೀಡಲಾಗಿದ್ದು ನಿಮ್ಮನ್ನು ಸಂಪರ್ಕಿಸಿ ಸಮಸ್ಯೆ ಬಗೆಹರಿಸುವಲ್ಲಿ ಶೀಘ್ರ ಕ್ರಮ ಕೈಗೊಳ್ಳುವಂತೆ ಸೂಚಿಸಲಾಗಿದೆ ಎಂದಿದ್ದರು.ಅದರಂತೆ ಮರುದಿನ (ಜು. 27) ರಕ್ಷಿತ್ ಅವರನ್ನು ಸಂಪರ್ಕಿಸಿರುವ ಬಿಎಸ್ಸೆನ್ನೆಲ್ ಹಾಗೂ ಡೊಕೋಮೋ ಮೊಬೈಲ್ ಕಂಪೆನಿಗಳ ಅಧಿಕಾರಿಗಳು ಶೀಘ್ರದಲ್ಲಿ ಕಂಪೆನಿಯ ತಾಂತ್ರಿಕ ಅಧಿಕಾರಿಗಳು ಇಚಿಲಂಪಾಡಿಗೆ ಭೇಟಿ ನೀಡಿ ಅಗತ್ಯ ಸಮೀಕ್ಷೆ ನಡೆಸಲಿದ್ದಾರೆ. ಆ ಸಂದರ್ಭದಲ್ಲಿ ತಮ್ಮ ಸಹಕಾರ ಅಗತ್ಯವಿದ್ದಲ್ಲಿ ಸಂಪರ್ಕಿಸುತ್ತೇವೆ ಎಂದು ಹೇಳಿದ್ದಾರೆ.
ಪಂಚಾಯತ್ ಮಟ್ಟದಲ್ಲಿಯೂ ಸಾರ್ವಜನಿಕರ ದೂರಿಗೆ ಇಂತಹ ಸ್ಪಂದನೆ ಸಿಗುವುದು ಕಷ್ಟ ಎನ್ನುವ ಕಾಲಘಟ್ಟದಲ್ಲಿ ಪ್ರಧಾನಿ ಕಾರ್ಯಾಲಯದಿಂದ ಕರೆ ಬಂದಿರುವುದು ತುಂಬಾ ಖುಷಿ ಕೊಟ್ಟಿದೆ. ಮೊಬೈಲ್ ಕಂಪೆನಿಗಳಿಗೆ ಸೂಚನೆ ಹೋಗಿರುವುದು ಒಳ್ಳೆಯ ಬೆಳವಣಿಗೆ. ಭಾರತ ಬದಲಾಗುತ್ತಿದೆ ಎನ್ನುವುದಂತೂ ಸತ್ಯ. ಪ್ರಧಾನಿಯವರ ಕಳಕಳಿಯ ಕಾರ್ಯಗಳಲ್ಲಿ ನಾವು ಕೂಡ ಪೂರ್ಣ ಪ್ರಮಾಣದಲ್ಲಿ ಕೈಜೋಡಿಸುವುದು ಅಗತ್ಯ.
– ರಕ್ಷಿತ್ ಕುಡಾಲ, ಇಚಿಲಂಪಾಡಿ