ನಿಡ್ಪಳ್ಳಿ : ತಂಬುತ್ತಡ್ಕ ಬಸ್ ತಂಗುದಾಣದ ಹಿಂದೆ ಕಸದ ರಾಶಿ
Team Udayavani, Jul 30, 2018, 12:57 PM IST
ನಿಡ್ಪಳ್ಳಿ : ಇಲ್ಲಿಯ ತಂಬುತ್ತಡ್ಕ ಬಸ್ಸು ತಂಗುದಾಣದ ಹಿಂದೆ ತ್ಯಾಜ್ಯ ಎಸೆಯುವವರನ್ನು ಪತ್ತೆ ಹಚ್ಚಿ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ. ಬಸ್ ನಿಲ್ದಾಣದ ಹಿಂದೆ ಅನೇಕ ತಿಂಗಳಿಂದ ಕೊಳೆತ ತರಕಾರಿ, ಮೊಟ್ಟೆ ಸಿಪ್ಪೆ, ಮಕ್ಕಳು ಧರಿಸುವ ಪ್ಯಾಡ್, ಮಾಂಸ ತ್ಯಾಜ್ಯಗಳು ಹಾಗೂ ದಿನಸಿ ತಂದ ಪ್ಲಾಸ್ಟಿಕ್ ಚೀಲಗಳನ್ನು ತಂದು ಹಾಕುತ್ತಿದ್ದಾರೆ. ನಾಯಿಗಳು ಇವುಗಳನ್ನು ಎಳೆದು ತಂದು ರಸ್ತೆಯಲ್ಲಿ ಚೆಲ್ಲುತ್ತಿವೆ. ಮಳೆಗಾಲದಲ್ಲಿ ಇವು ಕೊಳೆತು ದುರ್ನಾತ ಬೀರುತ್ತಿದ್ದು, ಬಸ್ ನಿಲ್ದಾಣದಲ್ಲಿ ಮೂಗು ಮುಚ್ಚಿ ಕುಳಿತುಕೊಳ್ಳಬೇಕಾಗಿದೆ. ಶಾಲಾ ಮಕ್ಕಳು, ಕೂಲಿ ಕಾರ್ಮಿಕರು, ಉದ್ಯೋಗಸ್ಥರು ಇಲ್ಲಿ ಬಸ್ಸಿಗೆ ಕಾಯುತ್ತಾರೆ. ದುರ್ನಾತದಿಂದಾಗಿ ನಿಲ್ಲುವುದೂ ಕಷ್ಟ ಎಂದು ಜನ ಹೇಳುತ್ತಿದ್ದಾರೆ.
ಆಸುಪಾಸಿನ ನಿವಾಸಿಗಳೇ ಇಲ್ಲಿ ಕಸ ಎಸೆಯುತ್ತಿರುವ ಶಂಕೆಯಿದೆ. ದೂರದಿಂದ ತಂದು ಹಾಕಲು ಸಾಧ್ಯವಿಲ್ಲ. ರೋಗ ಹರಡುವ ಮುನ್ನ ಇದನ್ನು ತೆರವುಗೊಳಿಸಿ, ಮತ್ತೆ ಕಸ ಹಾಕದಂತೆ ವ್ಯವಸ್ಥೆ ಮಾಡಬೇಕೆಂದು ಪ್ರಯಾಣಿಕರು ಆಗ್ರಹಿಸಿದ್ದಾರೆ.