ಬರೆಪ್ಪಾಡಿ-ಪಳ್ಳತ್ತಾರು ರಸ್ತೆ ಅವ್ಯವಸ್ಥೆ: ಗಿಡ ನೆಟ್ಟು ಪ್ರತಿಭಟನೆ
Team Udayavani, Aug 6, 2018, 4:24 PM IST
ಬೆಳಂದೂರು : ಬರೆಪ್ಪಾಡಿ – ಪಳ್ಳತ್ತಾರು ಸಂಪರ್ಕ ರಸ್ತೆ ತೀರಾ ಹದಗೆಟ್ಟಿದ್ದು, ಸಂಪೂರ್ಣ ಕೆಸರುಮಯವಾಗಿದೆ. ಈ ರಸ್ತೆಯ ಅವ್ಯವಸ್ಥೆಯಿಂದ ನಡೆದಾಡಲೂ ಅಸಾಧ್ಯದ ಸ್ಥಿತಿ. ಬೇಸತ್ತ ಇಲ್ಲಿನ ಗ್ರಾಮಸ್ಥರು ಕೆಸರುಮಯ ರಸ್ತೆಯಲ್ಲಿ ಬಾಳೆಗಿಡ ಹಾಗೂ ಇತರ ಗಿಡಗಳನ್ನು ನೆಟ್ಟು ಆಕ್ರೋಶ ವ್ಯಕ್ತ ಪಡಿಸಿದ್ದಾರೆ.
ಮಳೆಗೆ ರಸ್ತೆ ಸಂಪೂರ್ಣ ಕೆಟ್ಟು ಹೋಗಿದ್ದು, ಶಾಲೆಯ ಮಕ್ಕಳಿಗೂ ನಡೆದು ಹೋಗಲು ಕಷ್ಟವಾಗುತ್ತಿದೆ. ಆಗಾಗ ಜಾರಿ ಬಿದ್ದು ಗಾಯ ಮಾಡಿಕೊಳ್ಳುತ್ತಿದ್ದಾರೆ, ಶಾಲೆಗೆ ತಲುಪುವ ಹೊತ್ತಿಗೆ ಬಟ್ಟೆಗಳೂ ಮಣ್ಣಾಗಿರುತ್ತವೆ. ದಿನಂಪ್ರತಿ ಹಲವಾರು ವಾಹನಗಳು ಓಡಾಟ ನಡೆಸುತ್ತಿದ್ದು, ಈ ರಸ್ತೆಯಲ್ಲಿ ಸಮರ್ಪಕ ಚರಂಡಿ ವ್ಯವಸ್ಥೆ ಇಲ್ಲದಿರುವುದರಿಂದ ಮಳೆ ನೀರು ರಸ್ತೆಯಲ್ಲೇ ಹರಿಯುತ್ತಿದೆ.
ಈ ಕುರಿತು ಮಾತನಾಡಿದ ಸ್ಥಳೀಯ ನಿವಾಸಿ ಸಲೀಂ ಬನಾರಿ, ಬೆಳಂದೂರು ಗ್ರಾ.ಪಂ. ವ್ಯಾಪ್ತಿಗೆ ಒಳಪಟ್ಟ ಪಳ್ಳತ್ತಾರು ಎಂಬಲ್ಲಿ ಸುಮಾರು 200-300 ಮನೆಗಳಿದ್ದು, ಪ್ರಾಥಮಿಕ ಶಾಲೆ, ಮಸೀದಿ ಹೊಂದಿದ್ದು, ವಾಹನದ ವ್ಯವಸ್ಥೆಗಳಿವೆ. ರಸ್ತೆಗಳ ಅಭಿವೃದ್ಧಿ ಮಾತ್ರ ಇಲ್ಲ. ಅದೇ ರಸ್ತೆಗಳ ಮೂಲಕ ಶಾಲಾ ವಾಹನಗಳು ಸಂಚರಿಸಬೇಕಾಗುತ್ತದೆ. ಈ ಗ್ರಾಮದಲ್ಲಿ ಹಲವೆಡೆ ಡಾಮರು ಕಾಣದ ರಸ್ತೆಗಳಿವೆ. ಒಂದು ದಾರಿ ದೀಪವೂ ಇಲ್ಲ. ಪಳ್ಳತ್ತಾರು ರಸ್ತೆ ಡಾಮರು ಕಂಡೇ ಇಲ್ಲ. ಸಂಬಂಧಪಟ್ಟವರು ತತ್ಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.