ಎಚ್ಚರ..! ಮತ್ತೆ ಕುಸಿಯುತ್ತಿದೆ ಶಿರಾಡಿ
Team Udayavani, Aug 14, 2018, 1:28 PM IST
ಶಿರಾಡಿ: ಮಲೆನಾಡು, ಕರಾವಳಿಯಾದ್ಯಂತ ಸುರಿಯುತ್ತಿರುವ ಕುಂಭದ್ರೋಣಾ ಮಳೆಗೆ ಶಿರಾಡಿ ಘಾಟಿ ಮತ್ತೆ ಕುಸಿಯಲಾರಂಭಿಸಿದೆ. ಕಳೆದ ಕೆಲವು ದಿನಗಳ ವರುಣ ನರ್ತನಕ್ಕೆ ಶಿರಾಡಿ ಘಾಟಿಯ ಹಲವು ಕಡೆ ಗುಡ್ಡ ಕುಸಿತಗಳು ಸಂಭವಿಸುತ್ತಿವೆ. ಸತತ ಗುಡ್ಡ ಕುಸಿತದ ಪರಿಣಾಮ ಹೆದ್ದಾರಿಯಲ್ಲಿ ಸಂಚಾರ ಸಂಪೂರ್ಣ ಅಸ್ತವ್ಯಸ್ಥವಾಗಿದೆ.
ಶಿರಾಡಿ ಘಾಟಿಯ ಮಾರನಹಳ್ಳಿ ಸಮೀಪದ ದೊಡ್ಡತೊಪ್ಪ್ಲೆ ಯಲ್ಲಿ ಗುಡ್ಡ ಕುಸಿತ ಉಂಟಾಗಿದೆ. ನಿನ್ನೆ ಸಂಜೆಯಿಂದಲೇ ಹಲವು ಬಾರಿ ಕುಸಿತವುಂಟಾಗಿದೆ. ಅದನ್ನು ರಾತ್ರೆ ವೇಳೆ ತೆರವು ಗೊಳಿಸಲಾಗಿದ್ದು ಇಂದು ಬೆಳಗ್ಗಿನ ಜಾವ ಸುಮಾರು ಮುನ್ನೂರಕ್ಕೂ ಹೆಚ್ಚು ವಾಹನಗಳು ಶಿರಾಡಿ ಕಡೆಗೆ ಬಂದಿದೆ. ಶಿರಾಡಿ ಘಾಟಿಯ ಗುಂಡ್ಯ ಗಡಿ ದೇವಳದ ಸಮೀಪದಿಂದ ಮೇಲ್ಗಡೆಗೆ ಸುಮಾರು ಮೂರು ಕಡೆಗಳಲ್ಲಿ ಗುಡ್ಡ ಕುಸಿತ ಇಂದು ಬೆಳಗ್ಗೆ ಉಂಟಾಗಿದ್ದ ಪರಿಣಾಮ ವಾಹನಗಳು ಘಾಟಿಯಲ್ಲೇ ಉಳಿಯುವಂತಾಗಿದೆ.
ಈ ಗುಡ್ಡ ಕುಸಿತದ ಮಣ್ಣನ್ನು ಮತ್ತು ಮರಗಳನ್ನು ತೆರವು ಗೊಳಿಸಲು ಓಷಿಯನ್ ಕನ್ಸ್ಟ್ರಕ್ಷನ್ ನ ಸಿಬ್ಬಂದಿಗಳು ಆಗಮಿಸಿದ್ದು ಇವುಗಳನ್ನು ತೆರವು ಗೊಳಿಸುತ್ತಿದ್ದ ವೇಳೆಯಲ್ಲೇ ಮತ್ತೆ ಎರಡು ಕಡೆಗಳಲ್ಲಿ ಬೇರೆಯೇ ಗುಡ್ಡೆ ಕುಸಿತ ಉಂಟಾಗಿದೆ. ನಿನ್ನೆ ರಾತ್ರೆಯಿಂದ ದಾರಿ ಮದ್ಯೆ ಸಿಲುಕಿಕೊಂಡಿರುವ ವಾಹನಗಳ ಪ್ರಯಾಣಿಕ ರು ನೆಟ್ ರ್ಕ್ ಕೂಡಾ ಸಿಗದೇ ಪರದಾಟ ಪಡುತ್ತಿದ್ದಾರೆ.
ಜಿಲ್ಲಾಡಳಿತ ಮತ್ತು ಸಂಬಂಧಪಟ್ಟ ಇಲಾಖೆಯವರು ತುರ್ತು ಕ್ರಮ ಕೈಗೊಂಡು ಸಮಸ್ಯೆ ಬಗೆಹರಿಸಬೇಕೆಂದು ಪ್ರಯಾಣಿಕರು ಆಗ್ರಹಿಸುತ್ತಿದ್ದಾರೆ.