ಡಿಸೆಂಬರ್ ಅಂತ್ಯಕ್ಕೆ ಪರಿಹಾರ ಕೇಂದ್ರ ತೆರವು
Team Udayavani, Dec 23, 2018, 9:05 AM IST
ಅರಂತೋಡು: ಆಗಸ್ಟ್ ತಿಂಗಳ ಮಹಾಮಳೆಯಿಂದ ನಿರಾಶ್ರಿತರಾದವರಿಗಾಗಿ ಆರಂಭಿಸಲಾಗಿದ್ದ ಪರಿಹಾರ ಕೇಂದ್ರಗಳನ್ನು ಈ ತಿಂಗಳ ಕೊನೆಗೆ ಮುಚ್ಚಲಾಗುವುದು ಎಂದು ಕೊಡಗು ಜಿಲ್ಲಾಡಳಿತ ಸಂತ್ರಸ್ತರಿಗೆ ಸೂಚನೆ ನೀಡಿದೆ. ಶಾಶ್ವತ ಪುನರ್ವಸತಿ ಇನ್ನೂ ಒದಗದೆ ನಿರಾಶ್ರಿತರು ಮತ್ತೆ ಬೀದಿಗೆ ಬೀಳುವ ಭೀತಿಯಲ್ಲಿದ್ದಾರೆ.
ಕಲ್ಲುಗುಂಡಿ ಮತ್ತು ಸಂಪಾಜೆ ಪರಿಹಾರ ಕೇಂದ್ರಗಳಲ್ಲಿರುವ ಕೆಲವು ನಿರಾಶ್ರಿತರು ಕೊಡಗು ಜಿಲ್ಲಾಧಿಕಾರಿಗಳನ್ನು ಭೇಟಿ ಮಾಡಿದ ಸಂದರ್ಭ ಈ ಮಾಹಿತಿ ಲಭಿಸಿದೆ. ಡಿಸೆಂಬರ್ ಕೊನೆಗೆ ಪರಿಹಾರ ಕೇಂದ್ರ ಮುಚ್ಚಲಾಗುವುದು. ಮನೆ ಬಾಡಿಗೆಗೆ ಎಂದು ಮಾಸಿಕ 10,000 ರೂ. ನೀಡಲಾಗುತ್ತದೆ. ಗುರುತಿಸಲಾದ ಜಾಗದಲ್ಲಿ ಮನೆ ನಿರ್ಮಾಣವಾದ ಬಳಿಕ ಅಲ್ಲಿಗೆ ಕಳುಹಿಸಿ ಕೊಡಲಾಗುತ್ತದೆ ಎಂದು ಕೊಡಗು ಜಿಲ್ಲಾಧಿಕಾರಿ ಹೇಳಿದ್ದಾರೆ ಎಂದು ನಿರಾಶ್ರಿತರು “ಉದಯವಾಣಿ’ಗೆ ತಿಳಿಸಿದ್ದಾರೆ.
ಜೋಡುಪಾಲ ಹಾಗೂ ಎರಡನೇ ಮೊಣ್ಣಂಗೇರಿಯ ನಿರಾಶ್ರಿತರಿಗೆ ಕೊಡಗು ಸಂಪಾಜೆ ಶಾಲೆ ಬಳಿ ಹಾಗೂ ಮದೆನಾಡಿನಲ್ಲಿ ಜಾಗ ಗುರುತಿಸಲಾಗಿದ್ದರೂ ಮನೆ ನಿರ್ಮಾಣ ಇನ್ನೂ ಆರಂಭ ಆಗಿಲ್ಲ. ಪರಿಹಾರ ಕೇಂದ್ರ ಮುಚ್ಚಲ್ಪಟ್ಟು ಬಾಡಿಗೆ ಮನೆಗೆ ತೆರಳಿದ ಬಳಿಕ ಸರಕಾರ ಬಾಡಿಗೆ ಹಣ ನೀಡದಿದ್ದರೆ ನಾವು ಮತ್ತೆ ಬೀದಿ ಪಾಲಾಗಬಹುದು ಎಂಬ ಭಯ ವ್ಯಕ್ತಪಡಿಸಿರುವ ನಿರಾಶ್ರಿತರು, ಇನ್ನೂ ಆರಂಭವೇ ಆಗದ ಮನೆ ಪೂರ್ಣಗೊಳ್ಳಲು ಎಷ್ಟು ಕಾಲ ಹಿಡಿಯಬಹುದು ಎಂಬ ಖಚಿತ ಮಾಹಿತಿ ಇಲ್ಲದೆ ಚಿಂತೆ ವ್ಯಕ್ತಪಡಿಸಿದ್ದಾರೆ.
ಜಿಲ್ಲಾಧಿಕಾರಿಗೆ ಮನವಿ
ದಕ್ಷಿಣ ಕನ್ನಡದ ಸಂಪಾಜೆ ಕಲ್ಲುಗುಂಡಿ ಮತ್ತು ಕೊಡಗು ಸಂಪಾಜೆಯ ಪರಿಹಾರ ಕೇಂದ್ರಗಳನ್ನು ಮನೆ ನಿರ್ಮಾಣ ಪೂರ್ಣವಾಗುವ ತನಕ ಮುಚ್ಚಬಾರದು. ನಾವು ಯಾವುದೇ ಕಾರಣಕ್ಕೂ ಪರಿಹಾರ ಕೇಂದ್ರ ಬಿಟ್ಟು ಹೋಗುವುದಿಲ್ಲ ಎಂದು ನಿರಾಶ್ರಿತರು ಜಿಲ್ಲಾಧಿಕಾರಿಗಳಿಗೆ ನೀಡಿದ ಮನವಿಯಲ್ಲಿ ವಿನಂತಿಸಿಕೊಂಡಿದ್ದಾರೆ.
ನಿರಾಶ್ರಿತರಿಗೆ ಹಾಗೂ ವಿದ್ಯಾರ್ಥಿಗಳಿಗೆ ಕೆಎಸ್ಆರ್ಟಿಸಿ ಬಸ್ಗಳಲ್ಲಿ ಪ್ರಯಾಣಿಸಲು ಉಚಿತ ಪಾಸ್ ನೀಡಲಾಗಿತ್ತು. ಅದನ್ನು ನವೀಕರಣ ಮಾಡದೆ ಅಧಿಕಾರಿಗಳು ಸತಾಯಿಸುತ್ತಿದ್ದರು. ಈ ಬಗ್ಗೆ “ಉದಯವಾಣಿ’ಯಲ್ಲಿ ವರದಿ ಪ್ರಕಟವಾದ ಬಳಿಕ ಕೆಎಸ್ಸಾರ್ಟಿಸಿ ಪಾಸ್ ನವೀಕರಿಸಿತ್ತು. ಈಗ ಪಾಸ್ ಅವಧಿ ಮುಗಿದಿದ್ದು, ಮತ್ತೆ ನವೀಕರಿಸಿಲ್ಲ.
ಡಿಸೆಂಬರ್ ಕೊನೆಯ ವೇಳೆಗೆ ಪರಿಹಾರ ಕೇಂದ್ರ ತೆರವುಗೊಳಿಸುತ್ತೇವೆ, ಪ್ರತಿ ಕುಟುಂಬಕ್ಕೆ ತಿಂಗಳಿಗೆ 10 ಸಾವಿರ ರೂ. ಮನೆ ಬಾಡಿಗೆಯಾಗಿ ನೀಡುತ್ತೇವೆ ಎಂದು ಜಿಲ್ಲಾಧಿಕಾರಿ ಹೇಳಿದ್ದಾರೆ. ಆದರೆ ಈ ತನಕ ಕೆಲವರಿಗೆ 3,800 ರೂ. ಬಿಟ್ಟರೆ ಬೇರೇನೂ ಪರಿಹಾರ ನೀಡಿಲ್ಲ. ಈ ಕಾರಣದಿಂದ ಭರವಸೆಯ ಮೇಲೆ ನಂಬಿಕೆ ಇಲ್ಲ. ಮನೆ ನಿರ್ಮಾಣ ಮಾಡಿಕೊಡುವ ತನಕ ನಾವು ಎಲ್ಲಿಗೂ ಹೋಗುವುದಿಲ್ಲ.
ಭುವನೇಶ್ವರಿ ಸಂತ್ರಸ್ತೆ, ಜೋಡುಪಾಲ
ಪರಿಹಾರ ಕೇಂದ್ರಗಳಲ್ಲಿ ಇರುವ ಸಂತ್ರಸ್ತರಿಗೆ ಬಾಡಿಗೆ ಮನೆ ಹುಡುಕಲು ಡಿಸೆಂಬರ್ ಕೊನೆಯ ವಾರದವರೆಗೆ ಸಮಯಾವಕಾಶ ನೀಡಲಾಗುವುದು. ಆ ಬಳಿಕ ಅರ್ಹರಿಗೆ ಬಾಡಿಗೆಯಾಗಿ ಮಾಸಿಕ 10,000ರೂ.ಒದಗಿಸಲಾಗುವುದು.
ಶ್ರೀ ವಿದ್ಯಾ ಜಿಲ್ಲಾಧಿಕಾರಿ, ಕೊಡಗು
ತೇಜೇಶ್ವರ್ ಕುಂದಲ್ಪಾಡಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Aranthodu: ಜೀಪ್-ಬೈಕ್ ಅಪಘಾತ; ಗಂಭೀರ ಗಾಯಗೊಂಡಿದ್ದ ಬೈಕ್ ಸವಾರ ಸಾವು
LS Polls: ಬೆಳ್ತಂಗಡಿ ತಾಲೂಕಿನ ಉಜಿರೆಯ ಮಸ್ಟರಿಂಗ್ ಕೇಂದ್ರಕ್ಕೆ ದ.ಕ. ಜಿಲ್ಲಾಧಿಕಾರಿ ಭೇಟಿ
Bantwala: ಬಾಲಕಿಯೊಂದಿಗೆ ಅನುಚಿತ ವರ್ತನೆ; ಆರೋಪಿ ವಿರುದ್ಧ ಪ್ರಕರಣ ದಾಖಲು
Uppinangady ಬಸ್ಸಿನಲ್ಲಿ ಲೈಂಗಿಕ ಕಿರುಕುಳ: ಪ್ರತಿರೋಧಿಸಿದ ವಿದ್ಯಾರ್ಥಿನಿಯ ನಡೆಗೆ ಶ್ಲಾಘನೆ
ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ