‘ಆತ್ಮ ಶಕ್ತಿ ಜಾಗೃತಗೊಳ್ಳಲು ಅಧ್ಯಾತ್ಮ ಅಗತ್ಯ’
Team Udayavani, Sep 19, 2018, 2:45 PM IST
ಸುಳ್ಯ : ಪ್ರತಿಯೊಬ್ಬನ ಅಂತರಾತ್ಮದಲ್ಲಿ ಭಗವಂತನ ಶಕ್ತಿ ಇದೆ. ನಾವೆಲ್ಲ ಅಧ್ಯಾತ್ಮದ ಕಿಡಿಗಳು. ನಮ್ಮಲ್ಲಿ ಆತ್ಮಸ್ಥೈರ್ಯ ಹೆಚ್ಚಿ ಕಷ್ಟಗಳನ್ನು ಎದುರಿಸುವ ಶಕ್ತಿ ಬರುತ್ತದೆ ಎಂದು ಪೊನ್ನಂಪೇಟೆ ಶ್ರೀ ರಾಮಕೃಷ್ಣ ಶಾರದಾಶ್ರಮದ ಅಧ್ಯಕ್ಷ ಶ್ರೀ ಸ್ವಾಮಿ ಬೋಧ ಸ್ವರೂಪಾನಂದಜಿ ಮಹಾರಾಜ್ ಹೇಳಿದರು.
ಶ್ರೀ ಸಿದ್ಧಿವಿನಾಯಕ ಸೇವಾ ಸಮಿತಿ, ಸಾರ್ವಜನಿಕ ಶ್ರೀ ದೇವತಾರಾಧನ ಸಮಿತಿ ಮತ್ತು ಸುವರ್ಣ ಮಹೋತ್ಸವ ಸಮಿತಿ ಆಶ್ರಯದಲ್ಲಿ ಶ್ರೀಚೆನ್ನಕೇಶವ ದೇವಸ್ಥಾನದಲ್ಲಿ ನಡೆದ 50ನೇ ವರ್ಷದ ಸಾರ್ವಜನಿಕ ಗಣೇಶೋತ್ಸವದಲ್ಲಿ ಉಪನ್ಯಾಸ ನೀಡಿದರು.
ಮಕ್ಕಳ ಚಲನ-ವಲನದತ್ತ ಗಮನ ಹರಿಸಬೇಕು. ಅವರಿಗೆ ಸಮಯ ಕೊಡಬೇಕು. ದಾರಿ ತಪ್ಪಿದಾಗ ಪ್ರೀತಿಯಿಂದ ಅವರನ್ನು ಸರಿದಾರಿಗೆ ತರಬೇಕು. ತಂದೆ ತಾಯಿಗಳೇ ಮಕ್ಕಳಿಗೆ ಆದರ್ಶಪ್ರಾಯರಾಬೇಕು ಎಂದು ಹಿತವಚನ ನೀಡಿದರು.
ಸುವರ್ಣ ಮಹೋತ್ಸವ ಸಮಿತಿ ಅಧ್ಯಕ್ಷ ಚಂದ್ರಶೇಖರ್ ಕೆ.ಎಸ್. ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ಜಿ.ಜಿ.ನಾಯಕ್ ವಂದಿಸಿದರು. ವಿನಯಕುಮಾರ್ ಕಂದಡ್ಕ ಸ್ವಾಗತಿಸಿ, ಶಶಿಧರ ಎಂ.ಜೆ. ಮತ್ತು ಸೋಮನಾಥ ಕೇರ್ಪಳ ನಿರೂಪಿಸಿದರು.
ಮಿತ್ರ ಬಳಗ ಕಾಯರ್ತೋಡಿ, ಗಾನ ನೃತ್ಯ ಅಕಾಡೆಮಿಯ ಸುಳ್ಯ ಶಾಖೆ ವಿದ್ಯಾರ್ಥಿಗಳಿಂದ ಗುರು ವಿದ್ಯಾಶ್ರೀ ರಾಧಾಕೃಷ್ಣ ಅವರ ಮಾರ್ಗದರ್ಶನದಲ್ಲಿ ನೃತ್ಯ ಸಂಗಮ, ನೃತ್ಯ ರೂಪಕ- ನವರಸ ರಾಮಾಯಣ ಪ್ರದರ್ಶನಗೊಂಡಿತು.