ಕಾಂತಮಂಗಲ ಸೇತುವೆ: ಅ. 25ರಿಂದ ಮುಕ್ತ
Team Udayavani, Oct 17, 2018, 12:48 PM IST
ಅಜ್ಜಾವರ : ಕಾಂತಮಂಗಲ ಸೇತುವೆ ದುರಸ್ತಿ ಕಾಮಗಾರಿ ಒಂದೂವರೆ ತಿಂಗಳಿಂದ ನಡೆಯುತ್ತಿದೆ. ಸುಳ್ಯ- ಅಜ್ಜಾವರ – ಮಂಡೆಕೋಲು ರಸ್ತೆಯನ್ನು ಮುಚ್ಚಿ ಕೆಲಸ ಮಾಡಲಾಗುತ್ತಿದ್ದು, ಕ್ಯೂರಿಂಗ್ ಹಂತದಲ್ಲಿದೆ. ಬಹುತೇಕ ಅ. 25ರಿಂದ ಸೇತುವೆ ಸಂಚಾರಕ್ಕೆ ಮುಕ್ತಗೊಳ್ಳಲಿದೆ. ಸೆ. 7ರಿಂದ ಆರಂಭವಾದ ಸೇತುವೆ ಕಾಮಗಾರಿ 25 ಲಕ್ಷ ರೂ. ವೆಚ್ಚದಲ್ಲಿ ಪೂರ್ಣಗೊಂಡಿದೆ. ಸದ್ಯ ಕ್ಯೂರಿಂಗ್ ಮಾಡುತ್ತಿದ್ದರೂ ಅಡಿಕೆ ದಬ್ಬೆಗಳನ್ನು ಅಳವಡಿಸಿ, ಜನ ನಡೆದಾಡಲು ಅವಕಾಶ ಕಲ್ಪಿಸಲಾಗಿತ್ತು.
ಸೇತುವೆ ಗುಣಮಟ್ಟವನ್ನು ಪರಿಶೀಲಿಸಿದ ಎಂಜಿನಿಯರಿಂಗ್ ಇಲಾಖೆ, ಈ ತಿಂಗಳ 25ರಿಂದ ವಾಹನಗಳು ಸಂಚರಿಸಬಹುದು ಎಂದು ತಿಳಿಸಿದೆ. ಆದರೆ ಭಾರೀ ವಾಹನಗಳಾದ ಲಾರಿ, ಟ್ಯಾಂಕರ್ ಇತ್ಯಾದಿಗಳ ಸಂಚಾರವನ್ನು ನಿರ್ಬಂಧಿಸಲಾಗಿದ್ದು, ನ. 1ರಿಂದ ಅವುಗಳಿಗೂ ಓಡಾಡಲು ಅನುವು ಮಾಡಿಕೊಡಲಾಗುವುದು ಎಂದು ಸಹಾಯಕ ಅಭಿಯಂತರ ಮಣಿಕಂಠ ತಿಳಿಸಿದ್ದಾರೆ.