ದ.ಕ.: 56 ಸಾವಿರ ಅರ್ಜಿ ಸಲ್ಲಿಕೆ, ಪರಿಹಾರ ಸಿಗುವ ಭರವಸೆಯಿಲ್ಲ
Team Udayavani, Oct 22, 2018, 10:01 AM IST
ಪುತ್ತೂರು: ಅತಿವೃಷ್ಟಿಯಿಂದ ದಕ್ಷಿಣ ಕನ್ನಡ ಜಿಲ್ಲೆಯ ಪ್ರಮುಖ ವಾಣಿಜ್ಯ ಬೆಳೆ ಅಡಿಕೆಗೆ ಈ ವರ್ಷ ದೊಡ್ಡ ಪ್ರಮಾಣದಲ್ಲಿ ಕೊಳೆರೋಗ ಉಂಟಾಗಿದೆ. ಪರಿಹಾರ ನೀಡುವ ಸರಕಾರದ ಭರವಸೆಯನ್ನು ನಂಬಿ ಬೆಳೆಗಾರರಿಂದ 56,474 ಅರ್ಜಿಗಳು ಸಲ್ಲಿಕೆಯಾಗಿವೆ. ಆದರೆ ಪರಿಹಾರ ಸಿಗುವ ಭರವಸೆ ಕೃಷಿಕರಿಗಿಲ್ಲ.
ಕೊಳೆರೋಗ ಪರಿಹಾರಕ್ಕೆ ಸರಕಾರ ಗಳಿಂದ ಸ್ಪಷ್ಟ ನಿರ್ಧಾರ ಪ್ರಕಟವಾಗದೆ ಜಿಲ್ಲಾಡಳಿತದಿಂದ ಅರ್ಜಿ ಸಲ್ಲಿಸಲು ಸೂಚಿಸಿರುವುದೇ ಆತಂಕಕ್ಕೆ ಕಾರಣ.
ಒಟ್ಟು ಪರಿಹಾರ ಪ್ರಸ್ತಾವನೆಗೆ ಸೇರ್ಪಡೆ
ಜಿಲ್ಲೆಯಲ್ಲಿ ಪಾಕೃತಿಕ ವಿಕೋಪದಿಂದ ಉಂಟಾದ ನಷ್ಟಕ್ಕೆ ಪರಿಹಾರ ನೀಡುವ ನಿಟ್ಟಿನಲ್ಲಿ ಒಟ್ಟು 217 ಕೋಟಿ ರೂ. ಪ್ರಸ್ತಾವನೆಯನ್ನು ಜಿಲ್ಲಾಡಳಿತವು ರಾಜ್ಯ ಸರಕಾರದ ಮೂಲಕ ಕೇಂದ್ರಕ್ಕೆ ಸಲ್ಲಿಸಿದೆ. ಇದರಲ್ಲಿ ಅಡಿಕೆ ಕೊಳೆರೋಗ ಪರಿಹಾರವೂ ಒಳಗೊಂಡಿದ್ದು, ಅರ್ಜಿ ಸಲ್ಲಿಸುವಂತೆ ಬೆಳೆಗಾರರಿಗೆ ತಿಳಿಸಲಾಗಿತ್ತು. ಅಂತಿಮ ದಿನ ಮುಗಿದಿದ್ದು, ಸಮೀಕ್ಷೆ ಪ್ರಕ್ರಿಯೆ ಜಾರಿಯಲ್ಲಿದೆ. ಸಾಮಾನ್ಯವಾಗಿ ಪ್ರಾಕೃತಿಕ ವಿಕೋಪದಿಂದ ನಷ್ಟ ಉಂಟಾದ ಸಂದರ್ಭ ತೋಟವೊಂದರಲ್ಲಿ ಶೇ. 33ಕ್ಕಿಂತ ಹೆಚ್ಚು ಹಾನಿಯಾದರೆ ಹೆಕ್ಟೇರ್ಗೆ 18 ಸಾವಿರ ರೂ. ಪರಿಹಾರ ನೀಡಲಾಗುತ್ತದೆ.
ಮಂಗಳೂರು ತಾಲೂಕಿನಲ್ಲಿ 1,574, ಮೂಡಬಿದಿರೆಯಲ್ಲಿ 1,983, ಬಂಟ್ವಾಳದಲ್ಲಿ 12,979, ಪುತ್ತೂರಿನಲ್ಲಿ 9,742, ಕಡಬದಲ್ಲಿ 5,716, ಸುಳ್ಯದಲ್ಲಿ 12,312, ಬೆಳ್ತಂಗಡಿಯಲ್ಲಿ 12,168 ಅರ್ಜಿಗಳು ಸಲ್ಲಿಕೆಯಾಗಿವೆ. ಅರ್ಜಿ ಸಲ್ಲಿಕೆಗೆ ಅವಕಾಶ ಸೆ.25ಕ್ಕೆ ಮುಗಿದಿದೆ. ಆದರೆ ಇನ್ನೂ ಕೆಲವು ಗ್ರಾ.ಪಂ.ಗಳಲ್ಲಿ ಅರ್ಜಿಗಳು ಬಾಕಿಯಾಗಿವೆ.
ಹಳದಿ ರೋಗವೂ ಇದೆ
ಪುತ್ತೂರು ಹಾಗೂ ಸುಳ್ಯ ತಾಲೂಕುಗಳಲ್ಲಿ ಅಡಿಕೆಗೆ ಹಳದಿ ರೋಗವೂ ಕಾಣಿಸಿಕೊಂಡಿದೆ. ಪುತ್ತೂರು ತಾಲೂಕಿನ ಬಡಗನ್ನೂರು, ನರಿಮೊಗರು, ಕೊಲ ಪ್ರದೇಶಗಳಲ್ಲಿ ಹಳದಿ ರೋಗ ಕಾಣಿಸಿ ಕೊಂಡಿರುವ ಕುರಿತು ತೋಟಗಾರಿಕೆ ಇಲಾಖೆಗೆ ಮಾಹಿತಿ ಬಂದಿದೆ. ಆದರೆ ಇದಕ್ಕೆ ಕಾರಣ ಅಧಿಕ ಮಳೆ; ಸುಳ್ಯ ತಾಲೂಕಿನ ಸಂಪಾಜೆ ಭಾಗದಲ್ಲಿ ಇರುವ ಮಾದರಿಯ ಹಳದಿ ರೋಗ ಇದಲ್ಲ ಎಂದು ಇಲಾಖೆ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
ದೊಡ್ಡ ಪ್ರಮಾಣದ ನಷ್ಟ
ಪ್ರಥಮ ಹಂತದಲ್ಲಿ ಶೇ.10ರಷ್ಟು ಪ್ರದೇಶಗಳ ಸಮೀಕ್ಷೆ ನಡೆಸಲಾಗಿದೆ. ಉಳಿದ ಪ್ರದೇಶಗಳಲ್ಲಿ ಗ್ರಾಮ ಕರಣಿಕರು ಸಮೀಕ್ಷೆ ನಡೆಸುತ್ತಿದ್ದಾರೆ. ಪುತ್ತೂರು ತಾ| ವ್ಯಾಪ್ತಿಯ ಪ್ರಾಥಮಿಕ ಸಮೀಕ್ಷೆಯಲ್ಲಿ ಶೇ.33ರಿಂದ ಶೇ. 55ರಷ್ಟು ನಷ್ಟ ಕಂಡುಬಂದಿದೆ. ನದಿ, ಹೊಳೆ ಸಮೀಪದ ತೋಟಗಳಲ್ಲಿ ಹಾನಿ ಪ್ರಮಾಣ ಶೇ.80ರ ವರೆಗೂ ಇದೆ ಎನ್ನುವುದು ಪುತ್ತೂರು ಸಹಾಯಕ ತೋಟಗಾರಿಕೆ ಅಧಿಕಾರಿ ಹೊಳೇಬಸಪ್ಪ ಮಾಹಿತಿ ನೀಡಿದ್ದಾರೆ.
ಕಳೆದ ಬಾರಿ ಕೊಳೆರೋಗ ಉಂಟಾ ದಾಗ ರಾಜ್ಯ ಸರಕಾರ ಪರಿಹಾರ ನೀಡಿತ್ತು. ಆದರೆ ಈ ಬಾರಿ ಪ್ರಾಕೃತಿಕ ವಿಕೋಪ ದಿಂದ ಸಾಕಷ್ಟು ಹಾನಿ ಉಂಟಾ ಗಿರುವುದರಿಂದ ಒಟ್ಟು ಪ್ರಾಕೃತಿಕ ವಿಕೋಪ ಪರಿಹಾರಕ್ಕಾಗಿ ಕೇಂದ್ರಕ್ಕೆ ಸಲ್ಲಿಸಿರುವ ಪ್ರಸ್ತಾವನೆಯ ಜತೆಯಲ್ಲಿ ಕೊಳೆ ರೋಗ ಪರಿಹಾರವನ್ನೂ ಸೇರಿಸಲಾಗಿದೆ.
ನಷ್ಟ ಪರಿಹಾರಕ್ಕೆ ಪ್ರಸ್ತಾವನೆ
ಪ್ರಾಕೃತಿಕ ವಿಕೋಪದಡಿ ಜಿಲ್ಲೆಯಲ್ಲಿ ಉಂಟಾಗಿರುವ ನಷ್ಟದ ಪರಿಹಾರಕ್ಕೆ 217 ಕೋಟಿ ರೂ. ಪ್ರಸ್ತಾವನೆಯನ್ನು ಕಳುಹಿಸಲಾಗಿದೆ. ಜಿಲ್ಲೆಯಲ್ಲಿ ಅಡಿಕೆ ಕೊಳೆರೋಗ ತೀವ್ರವಾಗಿದ್ದು, ಸಮೀಕ್ಷೆ ನಡೆಸಲಾಗುತ್ತಿದೆ. ಶೀಘ್ರ ಪರಿಹಾರ ಲಭಿಸುವ ವಿಶ್ವಾಸವಿದೆ.
ಶಶಿಕಾಂತ ಸೆಂಥಿಲ್, ದ.ಕ. ಜಿಲ್ಲಾಧಿಕಾರಿ
ರಾಜೇಶ್ ಪಟ್ಟೆ