“ಪ್ರಗತಿ ರಕ್ಷಾ ಕವಚ’ ಅನಾವರಣ ನಾಳೆ
Team Udayavani, Oct 28, 2018, 6:00 AM IST
ಬೆಳ್ತಂಗಡಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸ್ವಸಹಾಯ ಸಂಘಗಳ ಸದಸ್ಯರಿಗೆ ಭಾರತೀಯ ಜೀವ ವಿಮಾ ನಿಗಮ (ಎಲ್ಐಸಿ)ದ ಸಹಯೋಗದೊಂದಿಗೆ ಗುಂಪು ವಿಮಾ ಯೋಜನೆ ಪ್ರಗತಿ ರಕ್ಷಾ ಕವಚದ ಅನಾವರಣ ಸಮಾರಂಭ ಅ.29ರಂದು ಸಂಜೆ 4ಕ್ಕೆ ಧರ್ಮಸ್ಥಳದ ಅಮೃತವರ್ಷಿಣಿ ಸಭಾಭವನದಲ್ಲಿ ನಡೆಯಲಿದೆ.
ವಿಮಾ ಯೋಜನೆಯನ್ನು ಕೇಂದ್ರ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಅನಾವರಣಗೊಳಿಸಲಿದ್ದಾರೆ. ಧರ್ಮಾಧಿಕಾರಿ ಡಾ| ಡಿ.ವೀರೇಂದ್ರ ಹೆಗ್ಗಡೆ ಅವರು ಅಧ್ಯಕ್ಷತೆ ವಹಿಸಲಿದ್ದು, ದ.ಕ.ಹಾಗೂ ಉಡುಪಿ ಜಿಲ್ಲಾ ಶಾಸಕರು, ವಿಧಾನ ಪರಿಷತ್ ಸದಸ್ಯರನ್ನು ಅಭಿನಂದಿಸಲಿದ್ದಾರೆ. ಅತಿಥಿಗಳಾಗಿ ಎಲ್ಐಸಿಯ ಚೇರ್ಮನ್ ವಿ.ಕೆ.ಶರ್ಮ, ಸಂಸದ ನಳಿನ್ಕುಮಾರ್ ಕಟೀಲು, ಸಚಿವ ಯು.ಟಿ.ಖಾದರ್ ಭಾಗವಹಿಸಲಿದ್ದಾರೆ.
ಶಾಸಕರಾದ ಎಸ್.ಅಂಗಾರ, ಹಾಲಾಡಿ ಶ್ರೀನಿವಾಸ ಶೆಟ್ಟಿ, ರಘುಪತಿ ಭಟ್, ವಿ.ಸುನಿಲ್ಕುಮಾರ್, ಲಾಲಾಜಿ ಆರ್.ಮೆಂಡನ್, ಹರೀಶ್ ಪೂಂಜ, ಸಂಜೀವ ಮಠಂದೂರು, ಡಾ| ಭರತ್ ಶೆಟ್ಟಿ, ಡಿ.ವೇದವ್ಯಾಸ ಕಾಮತ್, ಯು.ರಾಜೇಶ್ ನಾಯ್ಕ, ಬಿ.ಎಂ.ಸುಕುಮಾರ್ ಶೆಟ್ಟಿ, ಉಮಾನಾಥ ಕೋಟ್ಯಾನ್, ವಿಧಾನ ಪರಿಷತ್ ಸದಸ್ಯರಾದ ಹರೀಶ್ ಕುಮಾರ್, ಐವನ್ ಡಿಸೋಜಾ, ಬಿ.ಎಂ.ಫಾರೂಕ್, ಸಿ.ಪ್ರತಾಪ್ಚಂದ್ರ ಶೆಟ್ಟಿ, ಕೋಟ ಶ್ರೀನಿವಾಸ ಪೂಜಾರಿ ಅಭಿನಂದನೆ ಸ್ವೀಕರಿಸಲಿದ್ದಾರೆ ಎಂದು ಎಸ್ಕೆಡಿಆರ್ಡಿಪಿಯ ಕಾರ್ಯನಿರ್ವಾಹಕ ನಿರ್ದೇಶಕ ಡಾ|ಎಲ್.ಎಚ್. ಮಂಜುನಾಥ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ರಕ್ಷಣಾ ಸಚಿವರ ಪ್ರವಾಸ ಪಟ್ಟಿ:
ಅ.29ರಂದು ಮಧ್ಯಾಹ್ನ 12ಕ್ಕೆ ಬೆಂಗಳೂರಿನಿಂದ ಹೊರಟು 12.45ಕ್ಕೆ ಮಂಗಳೂರು ವಿಮಾನ ನಿಲ್ದಾಣ ತಲುಪಲಿದ್ದಾರೆ. ಬಳಿಕ, ಮಂಗಳೂರಿನ ಖಾಸಗಿ ಹೋಟೆಲೊಂದಕ್ಕೆ ತೆರಳಿ, 2.30ಕ್ಕೆ ಹೊರಟು ಸಂಜೆ 4ಕ್ಕೆ ಧರ್ಮಸ್ಥಳ ತಲುಪಲಿದ್ದಾರೆ. ಧರ್ಮಸ್ಥಳದ ಕಾರ್ಯಕ್ರಮದ ಬಳಿಕ 5.45ಕ್ಕೆ ದೇವರ ದರ್ಶನ ಪಡೆದು, 7.15ಕ್ಕೆ ಹೊರಟು ಮಂಗಳೂರಿನ ಖಾಸಗಿ ಹೋಟೆಲೊಂದರಲ್ಲಿ ವಾಸ್ತವ್ಯ ಹೂಡಲಿದ್ದಾರೆ. ಅ.30ರಂದು ಬೆಳಗ್ಗೆ 7.25ಕ್ಕೆ ಮಂಗಳೂರು ವಿಮಾನ ನಿಲ್ದಾಣದಿಂದ ಹೊಸದಿಲ್ಲಿಗೆ ತೆರಳಲಿದ್ದಾರೆ ಎಂದು ಸಚಿವರ ಕಚೇರಿಯ ಪ್ರಕಟಣೆ ತಿಳಿಸಿದೆ.
ಏನಿದು ಪ್ರಗತಿ ರಕ್ಷಾ ಕವಚ?
ರಾಜ್ಯದಲ್ಲಿ 4,30,000 ಯೋಜನೆಯ ಸ್ವಸಹಾಯ ಗುಂಪುಗಳಿದ್ದು, ಅನಿರೀಕ್ಷಿತವಾಗಿ ಸಂಘದ ಸದಸ್ಯರು ಸಾವನ್ನಪ್ಪಿದಾಗ ಸ್ವಸಹಾಯ ಸಂಘ ಹಾಗೂ ಸದಸ್ಯರಿಗೆ ಸಾಲದ ಹೊರೆಯಿಂದ ರಕ್ಷಣೆ ನೀಡುವುದಕ್ಕಾಗಿ ಎಸ್ಐಸಿಯ ಸಹಯೋಗದೊಂದಿಗೆ ರೂಪಿಸಿದ ಕಾರ್ಯಕ್ರಮ ಪ್ರಗತಿ ರಕ್ಷಾ ಕವಚ. ಸಾವನ್ನಪ್ಪಿದ ಸದಸ್ಯನ ನಾಮ ನಿರ್ದೇಶಿತ ಉತ್ತರಾಧಿಕಾರಿಗೆ ಪೂರ್ಣ ವಿಮಾ ಮೊತ್ತ ಪಾವತಿಸುವುದರ ಜೊತೆಗೆ ಸಾಲದ ಮೊತ್ತವನ್ನೂ ಎಲ್ಐಸಿ ಭರಿಸಲಿದೆ.