‘ತುಳುನಾಡಿನ ವೈಭವಕ್ಕೆ ತುಳುವರ ಹೋರಾಟ ಅಗತ್ಯ’
Team Udayavani, Nov 2, 2018, 12:08 PM IST
ಬೆಳ್ತಂಗಡಿ : ತಮ್ಮ ಸಾಂಪ್ರದಾಯಿಕ ಆಚರಣೆಗಳಿಗೆ ವಿಶೇಷ ಒತ್ತನ್ನು ನೀಡಿ ಒಂದಾಗಿದ್ದ ತುಳುವರು ಇಂದು ಬೇರೆ ಬೇರೆ ಕಾರಣಗಳಿಂದ ವಿಮುಖರಾಗುತ್ತಿದ್ದಾರೆ. ಹೀಗಾಗಿಯೇ ನಮ್ಮ ಭಾಷೆ, ಸಂಸ್ಕೃತಿ, ಆಚಾರ-ವಿಚಾರಗಳು ವಿನಾಶದ ಅಂಚಿಗೆ ತಲುಪಿದ್ದು, ಅದನ್ನು ಮತ್ತೆ ವೈಭವಕ್ಕೆ ತರುವ ನಿಟ್ಟಿನಲ್ಲಿ ತುಳುವರು ಹೋರಾಡಬೇಕಿದೆ ಎಂದು ಉಡುಪಿ ಜಿಲ್ಲಾ ತುಳುನಾಡು ಒಕ್ಕೂಟದ ಅಧ್ಯಕ್ಷ ಐಕಳಭಾವ ಚಿತ್ತರಂಜನ್ ಶೆಟ್ಟಿ ಹೇಳಿದರು.
ಅವರು ಗುರುವಾರ ಇಲ್ಲಿನ ಲಯನ್ಸ್ ಭವನದಲ್ಲಿ ಬೆಳ್ತಂಗಡಿ ತುಳುನಾಡು ಒಕ್ಕೂಟ ಆಯೋಜಿಸಿದ್ದ ಭಾರತೊಡು ಒಂಜಿ ತುಳುರಾಜ್ಯೊ ಒಂಜಿ ಚಿಂತನೆ ಎಂಬ ವಿಚಾರಗೋಷ್ಠಿಯಲ್ಲಿ ಮಾತನಾಡಿದರು. ತುಳುನಾಡು ಒಕ್ಕೂಟದ ಸ್ಥಾಪಕಾಧ್ಯಕ್ಷ ಶೈಲೇಶ್ ಆರ್.ಜೆ. ಉದ್ಘಾಟಿಸಿದರು. ವಿಚಾರಗೋಷ್ಠಿಯಲ್ಲಿ ಪುತ್ತೂರು ಜಿಲ್ಲಾ ತುಳುನಾಡು ಒಕ್ಕೂಟದ ಅಧ್ಯಕ್ಷ ನವೀನ್ ಬಿ.ಕೆ. ಭಾಷಾವಾರು ಪ್ರಾಂತ ಮತ್ತು ತುಳುನಾಡು, ಉಡುಪಿ ಜಿಲ್ಲಾ ಮಹಿಳಾ ಕೂಟದ ಅಧ್ಯಕ್ಷೆ ಸುಕನ್ಯಾ ಪ್ರಭಾಕರ್ ತುಳು ಚಳವಳಿಯಲ್ಲಿ ಮಹಿಳೆಯರ ಪಾತ್ರ, ಪತ್ರಕರ್ತ ಸಂಜೀವ ಎನ್.ಸಿ. ತುಳು ಬುಲೆಚ್ಚಿಲ್ಡ್ ಮಾಧ್ಯಮ ಪಾತ್ರ, ಪುತ್ತೂರು ತಾಲೂಕು ಅಧ್ಯಕ್ಷ ಶೇಖರ್ ಪೂಜಾರಿ ಕೌಡಂತ್ತಿಗೆ ತುಳುನಾಡ್ ರಾಜ್ಯ ಪೊರಂಬಾಟದ ದುಂಬುದು ಪಜ್ಯ, ಕಾನೂನು ಘಟಕದ ಅಧ್ಯಕ್ಷ ಪ್ರಶಾಂತ್ ಎಂ. ತುಳು ಚಳವಳಿ ಬೊಕ್ಕ ರಾಜಕೀಯ ಪಕ್ಷ ಎಂಬ ವಿಷಯದ ಕುರಿತು ವಿಚಾರ ಮಂಡಿಸಿದರು.
ಒಕ್ಕೂಟದ ಮೂಡಬಿದಿರೆ ತಾಲೂಕಿನ ಸತೀಶ್ ಕೋಟ್ಯಾನ್, ಮಂಗಳೂರಿನ ಅರವಿಂದ್ ಪಂಡಿತ್, ಕಾರ್ಕಳದ ರವಿಚಂದ್ರ ಆಚಾರ್ ಮೊದಲಾದವರು ಉಪಸ್ಥಿತರಿದ್ದರು. ಬೆಳ್ತಂಗಡಿ ತಾಲೂಕು ಅಧ್ಯಕ್ಷ ವಿನ್ಸೆಂಟ್ ಲೋಬೋ ಪ್ರಸ್ತಾವಿಸಿದರು. ಉಪಾಧ್ಯಕ್ಷ ನವೀನ್ ಪೂಜಾರಿ ಸ್ವಾಗತಿಸಿ, ಕಾರ್ಯದರ್ಶಿ ಜಿ.ವಿ. ಹರೀಶ್ ಸವಣಾಲ್ ವಂದಿಸಿದರು. ಬೆಳ್ತಂಗಡಿ ನಗರ ಅಧ್ಯಕ್ಷ ರಾಜು ಬಿ.ಎಚ್. ಕಾರ್ಯಕ್ರಮ ನಿರೂಪಿಸಿದರು.
ಅಸ್ತಿತ್ವದ ಉಳಿವಿಗೆ ಹೋರಾಟ
ತುಳು ಭಾಷೆಯನ್ನು ಸಂವಿಧಾನದ 8ನೇ ಪರಿಚ್ಚೇಧಕ್ಕೆ ಸೇರಿಸಬೇಕು ಎಂಬ ಕೂಗು ಜೋರಾಗಿದ್ದರೂ ಅದಕ್ಕೆ ಮನ್ನಣೆ ಇಲ್ಲದಂತಾಗಿದೆ. ಭಾಷಾವಾರು ಪ್ರಾಂತಗಳ ರಚನೆಯ ಸಂದರ್ಭ ತುಳುನಾಡು ಹರಿದು ಹಂಚಿಹೋಗಿದೆ. ನಮ್ಮ ಅಸ್ತಿತ್ವದ ಉಳಿವಿಗಾಗಿ ಹೋರಾಟ ಅನಿವಾರ್ಯ.
-ಐಕಳಬಾವ ಚಿತ್ತರಂಜನ್ ಶೆಟ್ಟಿ,
ಉಡುಪಿ ಜಿಲ್ಲಾ ತುಳುನಾಡು ಒಕ್ಕೂಟದ ಅಧ್ಯಕ್ಷರು