ಪರ್ಯಾಯ ರಸ್ತೆಯಲ್ಲಿ ಮಿನಿ ಬಸ್ ಓಡಾಟ ರದ್ದು !
Team Udayavani, Nov 13, 2018, 10:12 AM IST
ಸುಳ್ಯ: ಸಂಪಾಜೆ-ಮಡಿಕೇರಿ ರಾಷ್ಟ್ರೀಯ ಹೆದ್ದಾರಿ ಸಂಚಾರಕ್ಕೆ ಪೂರ್ಣ ಪ್ರಮಾಣದಲ್ಲಿ ಸಿದ್ಧಗೊಳ್ಳುವ ಮೊದಲೇ ಪರ್ಯಾಯ ರಸ್ತೆಯಲ್ಲಿ ಓಡಾಟ ನಡೆಸುತ್ತಿದ್ದ ಕೆಎಸ್ಆರ್ಟಿಸಿ ಮಿನಿ ಬಸ್ ಸಂಚಾರವನ್ನು ರದ್ದುಗೊಳಿಸಲಾಗಿದೆ!
ಪ್ರಯಾಣಿಕರ ಕೊರತೆ, ದೂರ ಹೆಚ್ಚಳ ಹಾಗೂ ಸಂಪಾಜೆ-ಮಡಿಕೇರಿ ರಸ್ತೆಯ ಎರಡು ದಿಕ್ಕಿನಿಂದ ಅರ್ಧ ಭಾಗದ ತನಕ ಬಸ್ ಓಡಾಟ ಆರಂಭವಾಗಿರುವುದರಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಕೆಎಸ್ಆರ್ಟಿಸಿ ತಿಳಿಸಿದೆ.
ಇದರಿಂದ ಪರ್ಯಾಯ ರಸ್ತೆ ಬಳಕೆ ಅನಿವಾರ್ಯ ಸಂದರ್ಭಕಷ್ಟೇ ಸೀಮಿತ ವಿನಾ ಇದನ್ನು ಶಾಶ್ವತವಾಗಿ ಬಳಸುವ ಚಿಂತನೆ ಇಲ್ಲ ಎಂಬ ವಾದಕ್ಕೆ ಮತ್ತೂಮ್ಮೆ ಪುಷ್ಟಿ ದೊರೆತಿದೆ. ಹೆದ್ದಾರಿ ವಾಹನ ಸಂಚಾರಕ್ಕೆ ಸಿದ್ಧಎಂದು ಇಲಾಖೆ ಪ್ರಮಾಣಪತ್ರ ನೀಡುವ ಮೊದಲೇ ಪರ್ಯಾಯ ರಸ್ತೆಯಲ್ಲಿ ಬಸ್ ಓಡಾಟ ಸ್ಥಗಿತಗೊಳಿಸಿರುವುದನ್ನು ಕೆಲವು ಪ್ರಯಾಣಿಕರು ಪ್ರಶ್ನಿಸುತ್ತಿದ್ದಾರೆ.
ಪರ್ಯಾಯ ರಸ್ತೆ ಯಾವುದು?
ಮೂರು ತಿಂಗಳ ಹಿಂದೆ ಪ್ರಾಕೃತಿಕ ವಿಕೋಪಕ್ಕೆ ಸಿಲುಕಿ ಸಂಪಾಜೆ-ಮಡಿಕೇರಿ ನಡುವೆ ಸಂಚಾರ ಸ್ಥಗಿತ ಗೊಂಡಿತ್ತು. ಇದರಿಂದ ಸುಳ್ಯ ಮೂಲಕ ಮಡಿಕೇರಿ ಹಾಗೂ ಮಡಿಕೇರಿಯಿಂದ ಸುಳ್ಯ, ಮಂಗಳೂರು ನಡುವೆ ಸಂಚಾರ ಸಾಧ್ಯವಾಗದೆ ಪ್ರಯಾಣಿಕರು ಪರ್ಯಾಯ ರಸ್ತೆಗಳತ್ತ ಮುಖ ಮಾಡಿದ್ದರು.
ಐದು ಪರ್ಯಾಯ ರಸ್ತೆಗಳಲ್ಲಿ ಒಂದಾದ ಸುಳ್ಯ- ಆಲೆಟ್ಟಿ – ಪಾಣತ್ತೂರು – ಕರಿಕೆ- ಭಾಗಮಂಡಲ-ಮಡಿಕೇರಿ ನಡುವೆ ಮಡಿಕೇರಿ ಮತ್ತು ಸುಳ್ಯ ಕೆಎಸ್ಆರ್ಟಿಸಿ ಘಟಕಗಳು ತಾತ್ಕಾಲಿಕ ಮಿನಿ ಬಸ್ ಓಡಾಟ ಆರಂಭಿಸಿದ್ದವು. ಹೆದ್ದಾರಿ ಪೂರ್ಣ ಸಿದ್ಧವಾಗುವ ತನಕ ಓಡಾಟದ ಭರವಸೆ ನೀಡಲಾಗಿತ್ತು. ಸಂಪಾಜೆ-ಮಡಿಕೇರಿ ನೇರ ದಾರಿಗಿಂತ ಪರ್ಯಾಯ ರಸ್ತೆ 40 ಕಿ.ಮೀ. ದೂರ ಹೆಚ್ಚು. ಆದರೂ ಮಡಿಕೇರಿಗೆ ಏಕಮಾತ್ರ ರಸ್ತೆ ಇದಾಗಿದ್ದು, ಅತಿ ಹೆಚ್ಚು ಪ್ರಯಾಣಿಕರು ಈ ರಸ್ತೆಯನ್ನೇ ಬಳಸಿದ್ದರು.
ಓಡಾಟ ಸ್ಥಗಿತ!
ತಿಂಗಳ ಹಿಂದೆ ಮಡಿಕೇರಿ-ಸಂಪಾಜೆ-ಸುಳ್ಯ ನಡುವೆ ಉಭಯ ತಾಲೂಕುಗಳ ಡಿಪೋ ಬಸ್ಗಳು ಓಡಾಟ ಆರಂಭಿಸಿದ್ದವು. ಇವು ಅರ್ಧ ಹಾದಿಯನ್ನಷ್ಟೇ ಕ್ರಮಿಸಿ ಹಿಂತಿರುಗುತ್ತಿವೆ.
ಹೆದ್ದಾರಿ ಪೂರ್ಣ ಅಲ್ಲ!
ಸಂಪಾಜೆ-ಮಡಿಕೇರಿ ನಡುವೆ ಬಸ್ ಓಡಾಟ ತಾತ್ಕಾಲಿಕವಾಗಿ ಆರಂಭಗೊಂಡಿದೆ. ರಸ್ತೆ ಸಂಚಾರಕ್ಕೆ ಸಿದ್ಧ ಎಂಬ ಪರಿಶೀಲನ ವರದಿ ಬಂದ ಬಳಿಕವೇ ಎಲ್ಲ ಮಾದರಿಯ ವಾಹನಗಳ ಅಧಿಕೃತ ಓಡಾಟಕ್ಕೆ ಅವಕಾಶ ಕಲ್ಪಿಸಲಾಗುವುದು ಎಂದು ಜಿಲ್ಲಾಡಳಿತ ಹೇಳಿದೆ.
ಆದಾಗ್ಯೂ ಪರ್ಯಾಯ ರಸ್ತೆಯಲ್ಲಿ ಬಸ್ ಸಂಚಾರ ಮೊಟಕುಗೊಳಿಸಿರುವ ಬಗ್ಗೆ ಆಕ್ಷೇಪ ಕೇಳಿ ಬಂದಿದೆ. ಮುಖ್ಯ ಹೆದ್ದಾರಿಯಲ್ಲಿ ಬಸ್ ಸಂಚಾರ ಪ್ರಾರಂಭಿಸಿದ ಅನಂತರ ಮಿನಿ ಬಸ್ ಓಡಾಟ ಸ್ಥಗಿತಗೊಳಿಸಬೇಕಿತ್ತು. ಅಲ್ಲಿ ತನಕ ಒಂದೆರಡು ಬಸ್ ಆದರೂ ಸಂಚರಿಸುತ್ತಿದ್ದರೆ ಅನುಕೂಲ ಎನ್ನುವ ಅಭಿಪ್ರಾಯ ಇದೆ. ಪ್ರಸ್ತುತ ಪರ್ಯಾಯ ರಸ್ತೆ ಮಡಿಕೇರಿ-ಕರಿಕೆ-ಸುಳ್ಯ ನಡುವೆ ನೇರ ಸಂಪರ್ಕದ ಬಸ್ ಇಲ್ಲ. ಅರ್ಧ ಹಾದಿ ತನಕ ಎರಡು ಘಟಕದ ಬೆರಳೆಣಿಕೆಯ ಬಸ್ ಸಂಚರಿಸುತ್ತಿವೆ.
ಮೇಲ್ದರ್ಜೆ ಪ್ರಸ್ತಾವನೆ ನನೆಗುದಿಗೆ
ಸಂಪಾಜೆ-ಮಡಿಕೇರಿ ರಸ್ತೆ ಕೈಕೊಟ್ಟ ವೇಳೆ ಪರ್ಯಾಯ ರಸ್ತೆ ಅಭಿವೃದ್ಧಿ ವಿಚಾರ ಜೀವ ಪಡೆದಿತ್ತು. ಕೊಡಗು ವ್ಯಾಪ್ತಿಯ 30 ಕಿ.ಮೀ. ರಸ್ತೆ ಮೇಲ್ದರ್ಜೆಗೆ ಸಲ್ಲಿಸಿರುವ 13 ಕೋ.ರೂ. ಪ್ರಸ್ತಾವನೆಗೆ ಅನುಮೋದನೆ ಆಗ್ರಹ ಕೇಳಿ ಬಂದಿತ್ತು. ಮುಖ್ಯಮಂತ್ರಿ ಗ್ರಾಮೀಣ ರಸ್ತೆ ಅಭಿವೃದ್ಧಿ ಯೋಜನೆಯಡಿ 42 ಲಕ್ಷ ರೂ., ಪ್ರಾಕೃತಿಕ ವಿಕೋಪದಡಿ 56 ಲಕ್ಷ ರೂ. ಬೇಡಿಕೆ ಸಲ್ಲಿಸಲಾಗಿತ್ತು. ಆದರೆ ಮುಖ್ಯ ಹೆದ್ದಾರಿ ಸಿದ್ಧಗೊಳ್ಳುತ್ತಿದ್ದು, ಈಗ ಪರ್ಯಾಯ ರಸ್ತೆ ಅಗತ್ಯ ಕಳೆದುಕೊಂಡಿದೆ. ಪ್ರಾಯಃ ಮುಖ್ಯ ರಸ್ತೆ ಇನ್ನೊಮ್ಮೆ ಹದಗೆಡುವ ತನಕ ಪರ್ಯಾಯ ರಸ್ತೆಯ ಅನಿವಾರ್ಯತೆ ಪ್ರಸ್ತಾಪ ನೆನೆಗುದಿಯಲ್ಲಿರಲಿದೆ!
ಪ್ರಯಾಣಿಕರ ಕೊರತೆ
ಮಡಿಕೇರಿ-ಸಂಪಾಜೆ ನಡುವೆ ಬಸ್ ಓಡಾಟ ಆರಂಭಗೊಂಡ ಬಳಿಕ ಮಡಿಕೇರಿ-ಭಾಗಮಂಡಿಲ-ಕರಿಕೆ-ಸುಳ್ಯ ನಡುವಿನ ಮಿನಿ ಬಸ್ಗೆ ಪ್ರಯಾಣಿಕರ ಕೊರತೆ ಉಂಟಾಗಿತ್ತು. ಹಾಗಾಗಿ ಬಸ್ ಸಂಚಾರ ಸ್ಥಗಿತಗೊಳಿಸಿದ್ದೇವೆ.
ಗೀತಾ, ಘಟಕಾಧಿಕಾರಿ, ಮಡಿಕೇರಿ ಡಿಪೋ
ಕಿರಣ್ ಪ್ರಸಾದ್ ಕುಂಡಡ್ಕ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Congress: ಕೈಗಾರಿಕೋದ್ಯಮದಿಂದ ನಿರುದ್ಯೋಗ ಸಮಸ್ಯೆಗೆ ಪರಿಹಾರ: ಜೆಪಿ ಹೆಗ್ಡೆ
Neha hiremath Case; ನಿಷ್ಪಕ್ಷ ತನಿಖೆ ನಡೆಸಿ ನ್ಯಾಯ ಒದಗಿಸಲಾಗುವುದು: ಹೆಬ್ಬಾಳ್ಕರ್
Congress: ಉತ್ಸಾಹದ ಉತ್ತುಂಗದಲ್ಲಿ ಕಾಂಗ್ರೆಸ್; ಕಾರ್ಕಳದಲ್ಲಿ ಜೆಪಿ ಪಡೆ ದಿಟ್ಟ ನಡೆ
Fraud: ರೈಸ್ ಪುಲ್ಲಿಂಗ್ ಹೆಸರಿನಲ್ಲಿ ವಂಚನೆಗೆ ಯತ್ನ; 3 ಸೆರೆ, 69.79 ಲಕ್ಷ ವಶ
Crime: ಸ್ನೇಹಿತನನ್ನೇ ಕೊಲೆ ಮಾಡಿದ್ದ ನಾಲ್ವರು ಆರೋಪಿಗಳ ಸೆರೆ