ಸುಬ್ರಹ್ಮಣ್ಯ: ಇಬ್ಬರು ಯುವಕರು ನೀರುಪಾಲು
Team Udayavani, Nov 15, 2018, 8:51 AM IST
ಸುಬ್ರಹ್ಮಣ್ಯ: ಮೀನು ಹಿಡಿಯಲೆಂದು ಕುಮಾರಧಾರಾ ನದಿಗಿಳಿದ ಇಬ್ಬರು ಯುವಕರು ಬುಧವಾರ ಸಂಜೆ ನೀರುಪಾಲಾಗಿದ್ದಾರೆ. ದೇವಚಳ್ಳ ಗ್ರಾಮದ ದೇವದ ನಿವಾಸಿಗಳಾದ ಕಾಡು ಹೊನ್ನಪ್ಪ ಅವರ ಮಗ ಲತೀಶ್ ಮತ್ತು ಎಲ್ಯಣ್ಣ ಅವರ ಪುತ್ರ ಲಕ್ಷಿತ್ ನೀರುಪಾಲಾದವರು.
ದೇವಚಳ್ಳ ಗ್ರಾಮದ ಐವರು ಯುವಕರು ಬೆಳಗ್ಗೆಯೇ ಕುಮಾರಧಾರೆಯ ಗಗನಕಜೆ ಎಂಬಲ್ಲಿಗೆ ಮೀನು ಹಿಡಿಯಲು ತೆರಳಿದ್ದರು. ಮಧ್ಯಾಹ್ನದ ಊಟವನ್ನೂ ಅಲ್ಲೇ ಮಾಡಿದ್ದರು. ಸಂಜೆ ಹಿಂದಿರುಗಲೆಂದು ಹೊಳೆ ದಾಟುವಾಗ ಓರ್ವ ಕಾಲುಜಾರಿ ನೀರುಪಾಲಾದ. ಆತನನ್ನು ರಕ್ಷಿಸಲೆಂದು ಹೋದ ಇನ್ನೊಬ್ಬನೂ ನೀರುಪಾಲಾದ ಎನ್ನಲಾಗಿದೆ. ಜತೆಗಿದ್ದ ಮೂವರು ಭಯದಿಂದ ಓಡಿ ಹೋದರು ಎನ್ನಲಾಗಿದೆ.
ಸಂಜೆಯಾದರೂ ಯುವಕರು ಮನೆಗೆ ಬಂದಿಲ್ಲವೆಂದು ಮನೆಯವರು ಮೊಬೈಲ್ಗೆ ಕರೆ ಮಾಡಿದಾಗ ಕರೆ ಸ್ವೀಕರಿಸಿದ ಯುವಕರು ನಡೆದ ವಿಷಯವನ್ನು ತಿಳಿಸಿದರು. ಸುಬ್ರಹ್ಮಣ್ಯ ಠಾಣೆಯ ಸಬ್ ಇನ್ಸ್ಪೆಕ್ಟರ್ ಮಾಧವ ಕೂಡಿಗಿ ಮತ್ತು ಸಿಬಂದಿ ಸ್ಥಳಕ್ಕೆ ತೆರಳಿದ್ದು, ಹೆಚ್ಚಿನ ಮಾಹಿತಿ ಇನ್ನಷ್ಟೆ ಲಭ್ಯವಾಗಬೇಕಿದೆ.