ಅಂತರ್ ಜಿಲ್ಲೆ ಸಂಪರ್ಕ ರಸ್ತೆ ಅಭಿವೃದ್ಧಿ ಕನಸೆ?
Team Udayavani, Nov 16, 2018, 10:57 AM IST
ಅರಂತೋಡು: ತೊಡಿಕಾನದಿಂದ-ಮಾಪಳಕಜೆ- ಕುದುರೆಪಾಯಕ್ಕೆ ಸಂಪರ್ಕಕ್ಕೆ ಸಹಕಾರಿಯಾಗಬಲ್ಲ ಮತ್ಸ್ಯ ತೀರ್ಥ ಹೊಳೆಗೆ ಕಿರು ಸೇತುವೆ ನಿರ್ಮಾಣದ ಭಾಗ್ಯ ಇನ್ನೂ ಕೂಡಿ ಬಂದಿಲ್ಲ. ಪ್ರತಿ ವರ್ಷದ ಮಳೆಗಾಲದಲ್ಲಿ ತೊಡಿಕಾನ ದೇಗುಲದ ಬಳಿಯ ಮತ್ಸ್ಯತೀರ್ಥ ಹೊಳೆಯಲ್ಲಿ ನೀರಿನ ಪ್ರಮಾಣ ಹೆಚ್ಚಿದಾಗ ದ.ಕ. ಮತ್ತು ಕೊಡಗು ಜಿಲ್ಲೆಯ ಸಂಪರ್ಕ ರಸ್ತೆಯಾದ ತೊಡಿಕಾನ- ಮಾಪಳಕಜೆ- ಕುದುರೆಪಾಯ ರಸ್ತೆಯಲ್ಲಿ ವಾಹನ ಸಂಪರ್ಕ ಕಡಿತಗೊಳ್ಳುತ್ತದೆ. ಮತ್ಸ್ಯತೀರ್ಥ ಹೊಳೆಗೆ ಸೇತುವೆ ನಿರ್ಮಾಣವಾಗದ ಪರಿಣಾಮ ಪ್ರತಿವರ್ಷ ಕೊಡಗಿನ ಚೆಂಬು, ಕುದರೆಪಾಯ, ಮಾಪಳಕಜೆ, ಮುಪ್ಪಸೇರು ಚಳ್ಳಂಗಾಯ ಭಾಗಕ್ಕೆ ತೊಡಿಕಾನದ ಮೂಲಕ ವಾಹನ ಸಂಪರ್ಕ ಸಾಧ್ಯವಾಗುತ್ತಿಲ್ಲ.
ತುರ್ತು ವ್ಯವಸ್ಥೆಗೆ ರಸ್ತೆ ಇಲ್ಲ
ಇಲ್ಲಿ ಮಳೆಗಾಲದ ನಾಲ್ಕು ತಿಂಗಳು ತೊಡಿಕಾನ ರಸ್ತೆಯ ಮೂಲಕ ಸಂಚಾರ ಮಾಡುವ ಜನರು ತಮಗೆ ಬೇಕಾದ ವಸ್ತುಗಳನ್ನು ತಲೆಹೊರೆಯಲ್ಲಿಯೇ ಹೊತ್ತುಕೊಂಡು ಹೋಗಬೇಕಾದ ಅನಿವಾರ್ಯ ಪರಿಸ್ಥಿತಿ ಇಲ್ಲಿದೆ. ತೊಡಿಕಾನ ದೇಗುಲದ ಸಮೀಪದ ಮುಪ್ಪಸೇರು, ಚಳ್ಳಂಗಾಯ ಭಾಗದಲ್ಲಿ ಮಳೆಗಾಳದಲ್ಲಿ ಯಾರಿಗಾದರೂ ತುರ್ತು ಅನಾರೋಗ್ಯ ಕಾಡಿದರೆ ಅವರನ್ನು ತೊಡಿಕಾನ ದೇಗುಲದ ತನಕ ಹೊತ್ತುಕೊಂಡು ಹೋಗಬೇಕಾಗುತ್ತದೆ.
ಅನುದಾನ ಬಿಡುಗಡೆ
ಮತ್ಸ್ಯತೀರ್ಥ ಹೊಳೆಗೆ ಸೇತುವೆ ನಿರ್ಮಾಣಕ್ಕೆ ಸಂಸದೆ ನಿರ್ಮಲಾ ಸೀತರಾಮನ್ ಅವರು 20 ಲಕ್ಷ ಅನುದಾನ ಒದಗಿಸಿದ್ದಾರೆ. ತೊಡಿಕಾನ- ಕುದುರೆಪಾಯ-ಮಾಪಳಕಜೆ ರಸ್ತೆ ದ.ಕ. ಜಿಲ್ಲೆಯ ಗಡಿಭಾಗದ ತನಕ ಅರಂತೋಡು ಗ್ರಾ.ಪಂ.ನ ವ್ಯಾಪ್ತಿಗೆ ಒಳಪಟ್ಟಿದೆ. ಉಳಿದ ಭಾಗ ಕೊಡಗಿನ ಚೆಂಬು ಗ್ರಾ.ಪಂ. ವ್ಯಾಪ್ತಿಯಲ್ಲಿದೆ. ಕೊಡಗು ಜಿಲ್ಲೆಯ ವ್ಯಾಪ್ತಿಗೆ ಬರುವ ಮಾಪಳಕಜೆ ತನಕ ರಸ್ತೆಯನ್ನು ಸಂಪೂರ್ಣ ಕೊಡಗು ಜಿಲ್ಲೆಯವರು ಸರ್ವಋತು ರಸ್ತೆಯಾಗಿ ಅಭಿವೃದ್ಧಿ ಮಾಡಿದ್ದಾರೆ.
ಉಳಿದ ಭಾಗ ಕೊಡಗಿನ ಚೆಂಬು ಗ್ರಾ.ಪಂ. ವ್ಯಾಪ್ತಿಯಲ್ಲಿದೆ. ಕೊಡಗು ಜಿಲ್ಲೆಯ ವ್ಯಾಪ್ತಿಗೆ ಬರುವ ಮಾಪಳಕಜೆ ತನಕ ರಸ್ತೆಯನ್ನು ಸಂಪೂರ್ಣ ಕೊಡಗು ಜಿಲ್ಲೆಯವರು ಸರ್ವಋತು ರಸ್ತೆಯಾಗಿ ಅಭಿವೃದ್ಧಿ ಮಾಡಿದ್ದಾರೆ. ಅರಂತೋಡು ಗ್ರಾ.ಪಂ. ವ್ಯಾಪ್ತಿಗೆ ಒಳಪಡುವ ರಸ್ತೆಯ ಭಾಗಕ್ಕೆ ಇನ್ನು ಅಭಿವೃದ್ಧಿ ಭಾಗ್ಯ ಬಂದಿಲ್ಲ. ರಸ್ತೆ ಅಭಿವೃದ್ಧಿಯಾಗದ ಕಾರಣ ಕೊಡಗು ಜಿಲ್ಲೆಯ ವ್ಯಾಪ್ತಿಗೆ ಬರುವ ಕುದುರೆಪಾಯ ಮತ್ತು ಮಾಪಳಕಜೆ ಜಿಲ್ಲೆ ವ್ಯಾಪ್ತಿಗೆ ಬರುವ ಮುಪ್ಪಸೇರು ಚಳ್ಳಂಗಾಯ ಭಾಗದ ನಿವಾಸಿಗರು ಸಮಸ್ಯೆ ಅನುಭವಿಸುತ್ತಿದ್ದಾರೆ.
ಪತ್ರ ಬರೆದಿದ್ದೇವೆ
ತೊಡಿಕಾನ-ಮಾಪಳಲಜೆ-ಕುದುರೆಪಾಯ ರಸ್ತೆ ಗಡಿಭಾಗದ ತನಕ ಅರಂತೋಡು ಗ್ರಾ.ಪಂ. ವ್ಯಾಪ್ತಿಗೆ ಒಳಪಟ್ಟಿದೆ. ತೊಡಿಕಾನ ಮಲ್ಲಿಕಾರ್ಜುನ ದೇಗುಲದ ಸಮೀಪ ಕಿರು ಸೇತುವೆ ನಿರ್ಮಾಣ ಆಗಬೇಕೆಂದು ಅಲ್ಲಿಯ ಜನರ ಹಲವು ವರ್ಷಗಳ ಬೇಡಿಕೆ ಇದೆ. ಇದಕ್ಕೆ ಸೇತುವೆ ನಿರ್ಮಾಣ ಮಾಡಬೇಕೆಂದು ಈ ಹಿಂದೆ ಗ್ರಾ.ಪಂ. ವತಿಯಿಂದ ಶಾಸಕರಿಗೆ, ಜಿಲ್ಲಾ ಪಂಚಾಯತ್ಗೆ ಬರೆಯಲಾಗಿದೆ. ಮುಂದೆಯೂ ಪತ್ರ ಬರೆದು ನೆನಪಿಸುವ ಕೆಲಸ ಮಾಡುತ್ತೇವೆ.
-ಜಯಪ್ರಕಾಶ್, ಅರಂತೋಡು ಗ್ರಾ.ಪಂ. ಪಿಡಿಒ
ತೇಜೇಶ್ವರ್ ಕುಂದಲ್ಪಾಡಿ