ಉಪನೋಂದಣಿ ಕಚೇರಿಗೆ ಡಿ.ವಿ. ಭೇಟಿ
Team Udayavani, Nov 17, 2018, 2:45 PM IST
ಪುತ್ತೂರು: ನಗರಕ್ಕೆ ಶುಕ್ರವಾರ ಆಗಮಿಸಿದ್ದ ಕೇಂದ್ರ ಸಚಿವ ಡಿ.ವಿ. ಸದಾನಂದ ಗೌಡ ಅವರು ಪುತ್ತೂರು ಉಪನೋಂದಣಿ ಕಚೇರಿಗೆ ಭೇಟಿ ನೀಡಿದರು. ಡಿ.ವಿ. ಸದಾನಂದ ಗೌಡ ಅವರ ಪುತ್ತೂರು ಪಡೀಲಿನ ನಿವಾಸವನ್ನು ಮಾರಾಟ ಮಾಡಿರುವ ಕುರಿತು ಸುದ್ದಿಯಾಗಿ ಸಾರ್ವಜನಿಕ ವಲಯದಲ್ಲಿ ಚರ್ಚೆಯಾಗಿತ್ತು. ಈ ಭಾಗಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಪಡೀಲಿನ ಮನೆಯಲ್ಲಿ ತಂಗುತ್ತಿದ್ದ ಅವರು ಮನೆಯ ಕಾರಣದಿಂದ ಮತದಾನಕ್ಕೂ ಪುತ್ತೂರಿಗೆ ಆಗಮಿಸುತ್ತಿದ್ದರು. ಮನೆಯನ್ನು ಮಾರಾಟ ಮಾಡುವ ಮೂಲಕ ಅವರು ರಾಜಕೀಯ ಪ್ರವೇಶ ಮಾಡಿದ ಪುತ್ತೂರಿನ ಸಂಪರ್ಕವನ್ನು ಕಡಿದುಕೊಳ್ಳುತ್ತಿದ್ದಾರೆ ಎನ್ನುವ ಕುರಿತು ಚರ್ಚೆಯಾಗಿತ್ತು.
ತಮ್ಮ ಪಡೀಲಿನ ಮನೆಯನ್ನು ಮಾರಾಟ ಮಾಡಿದ ಬಳಿಕ ಖರೀದಿಸಿದವರಿಗೆ ಶುಕ್ರವಾರ ನೋಂದಣಿ ಮಾಡಿಸಿಕೊಡಲು ಉಪನೋಂದಣಿ ಕಚೇರಿಗೆ ಆಗಮಿಸಿದ್ದರು ಎನ್ನಲಾಗಿದೆ. ಈ ಕುರಿತು ಮಾಧ್ಯಮಗಳಿಗೆ ಯಾವುದೇ ಪ್ರತಿಕ್ರಿಯೆ ನೀಡಲು ಸಚಿವರು ನಿರಾಕರಿಸಿದ್ದಾರೆ.