‘ಬಣ್ಣಗಾರಿಕೆಯಲ್ಲಿ ಭಾವನೆಗಳ ಅಭಿವ್ಯಕ್ತಿ ಅಡಕ’
Team Udayavani, Nov 19, 2018, 3:30 PM IST
ಉಪ್ಪಿನಂಗಡಿ: ಯಕ್ಷಗಾನದ ಬಣ್ಣ ಬದುಕಿನ ಬಣ್ಣವಾಗಿದೆ. ಅದು ನಮ್ಮ ಭಾವದ ಅಭಿವ್ಯಕ್ತಿಯೂ ಹೌದು. ಭಾವನೆಗಳ ಕಲಾತ್ಮಕ ಅಭಿವ್ಯಕ್ತಿ ಯಕ್ಷಗಾನದ ಬಣ್ಣಗಾರಿಕೆಯಲ್ಲಿ ಅಡಗಿದೆ ಎಂದು ಕರ್ನಾಟಕ ಯಕ್ಷಗಾನ ಬಯಲಾಟ ಅಕಾಡೆಮಿ ಸದಸ್ಯ ಜಬ್ಟಾರ್ ಸಮೊ ಹೇಳಿದರು.
ಅವರು ರವಿವಾರ ಯಕ್ಷನಂದನ ಕಲಾ ಸಂಘ ಗೋಕುಲ ನಗರ ಕೊಯಿಲ ಇದರ ಆಶ್ರಯದಲ್ಲಿ ಮಂಗಳೂರಿನ ಮಂಗಳಾ ಗಂಗೋತ್ರಿ ಡಾ| ಪಿ. ದಯಾನಂದ ಪೈ ಮತ್ತು ಪಿ. ಸತೀಶ್ ಪೈ ಯಕ್ಷಗಾನ ಅಧ್ಯಯನ ಕೇಂದ್ರದ ಸಹಯೋಗದಲ್ಲಿ ಉಪ್ಪಿನಂಗಡಿಯ ಸರಕಾರಿ ಮಾದರಿ ಶಾಲಾ ಸಭಾಂಗಣದಲ್ಲಿ ನಡೆದ ಯಕ್ಷಗಾನ ಬಣ್ಣಗಾರಿಕೆ ಶಿಬಿರದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.
ಯುವಜನಾಂಗಕ್ಕೆ ಹೊಣೆಗಾರಿಕೆ
ಎಳೆಯ ತಲೆಮಾರಿನ ಮಕ್ಕಳಲ್ಲಿ ಯಕ್ಷಗಾನದ ಬಗ್ಗೆ ಅಭಿರುಚಿಯನ್ನು ಮೂಡಿಸುವ ಕಾರ್ಯ ಶ್ಲಾಘನೀಯ. ಯಕ್ಷಗಾನದ ಪರಂಪರೆಯನ್ನು ಹಿರಿಯರಿಂದ ಪಡೆದು ಯಕ್ಷಗಾನವನ್ನು ಮುನ್ನಡೆಸುವ ಹೊಣೆ ಯುವ ಜನಾಂಗದ್ದಾಗಿದೆ ಎಂದರು. ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಅಲಿಮಾರ ರಘುನಾಥ ರೈ ಶಿಬಿರವನ್ನು ಉದ್ಘಾಟಿಸಿದರು.
ಪಟ್ಲ ಫೌಂಡೇಶನ್ ಉಪ್ಪಿನಂಗಡಿ ಘಟಕದ ಅಧ್ಯಕ್ಷ ಕೆ. ಜಗದೀಶ್ ಶೆಟ್ಟಿ, ನಿವೃತ್ತ ಉಪನ್ಯಾಸಕ ಮಹಲಿಂಗೇಶ್ವರ ಭಟ್, ಅಂಬಾ ಪ್ರಸಾದ್ ಪಾತಾಳ, ಲಕ್ಷ್ಮಣ್ ಆಚಾರ್, ಶಾಲಾ ಮುಖ್ಯೋಪಾಧ್ಯಾಯಿನಿ ದೇವಕಿ ಉಪಸ್ಥಿತರಿದ್ದರು. 102 ವಿದ್ಯಾರ್ಥಿಗಳು ಶಿಬಿರದಲ್ಲಿ ಭಾಗವಹಿಸಿದ್ದರು. ಡಾ| ಗೋವಿಂದ ಪ್ರಸಾದ್ ಕಜೆ, ಗುಡ್ಡಪ್ಪ ಬಲ್ಯ, ಕರುಣಾಕರ ಸುವರ್ಣ, ಗಣರಾಜ ಕುಂಬ್ಲೆ, ವೆಂಕಟ್ರಾಮ ಸುಳ್ಯ, ಬಿ.ಎನ್. ಕೊಳಂಬೆ, ಮಾಧವ ಆಚಾರ್ಯ ಭಾಗವಹಿಸಿದ್ದರು. ಮುರಳೀಕೃಷ್ಣ ಬಡಿಲ ಸ್ವಾಗತಿಸಿದರು. ಕೃಷ್ಣಮೂರ್ತಿ ಭಟ್ ಕೆಮ್ಮಾರ ಕಾರ್ಯಕ್ರಮವನ್ನು ನಿರೂಪಿಸಿ, ವಂದಿಸಿದರು.