ಧರ್ಮಸ್ಥಳ ಲಕ್ಷದೀಪೋತ್ಸವ ಸಂಪನ್ನ
Team Udayavani, Dec 8, 2018, 9:53 AM IST
ಬೆಳ್ತಂಗಡಿ: ಧರ್ಮಸ್ಥಳ ಲಕ್ಷದೀಪೋತ್ಸವದಲ್ಲಿ ಗುರುವಾರ ರಾತ್ರಿ ಗೌರಿ ಮಾರುಕಟ್ಟೆ ಉತ್ಸವ ನಡೆದು, ಶುಕ್ರವಾರ ಶ್ರೀ ಚಂದ್ರನಾಥ ಸ್ವಾಮಿ ಸಮವಸರಣ ಪೂಜೆಯೊಂದಿಗೆ ಉತ್ಸವ ಸಂಪನ್ನಗೊಂಡಿತು.
ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ ಅವರ ನೇತೃತ್ವದಲ್ಲಿ ನಡೆದ ಈ 6 ದಿನಗಳ ಉತ್ಸವಕ್ಕೆ ಲಕ್ಷಾಂತರ ಭಕ್ತರು ಸಾಕ್ಷಿಯಾದರು.
ಬೆಳ್ಳಿ ರಥ, ಸ್ವರ್ಣ ಪಲ್ಲಕ್ಕಿಯಲ್ಲಿ ಶ್ರೀ ಮಂಜುನಾಥ ಸ್ವಾಮಿಯ ಮೆರವಣಿಗೆ ಗೌರಿಮಾರುಕಟ್ಟೆ ಬಳಿ ಸಾಗಿ ಉತ್ಸವ ನೆರವೇರಿತು. ಉಡಿಕೆ ಸುತ್ತಿನ ಬಳಿಕ ಕ್ಷೇತ್ರಪಾಲನಿಗೆ ಪೂಜೆ ಸಲ್ಲಿಸಿ ಡಾ| ಹೆಗ್ಗಡೆ ಅವರು ಹಾಗೂ ದೇವಾಲಯದ ಪ್ರತಿನಿಧಿಗಳು ಸ್ವಾಮಿಗೆ ಬಿಲ್ವಪತ್ರೆ ಅರ್ಪಿಸಿದರು. ಬಳಿಕ ಸ್ವರ್ಣ ಪಲ್ಲಕ್ಕಿ, ಬೆಳ್ಳಿರಥದಲ್ಲಿ ಉತ್ಸವ ನಡೆಯಿತು.
ಶುಕ್ರವಾರ ರಾತ್ರಿ ಆಗಮಿಸಿದ್ದ ಸಾವಿರಾರು ಸಂಖ್ಯೆಯ ಭಕ್ತರಿಗೆ ಪ್ರಸಾದ ರೂಪವಾಗಿ ಉಪಾಹಾರದ ವ್ಯವಸ್ಥೆ ಮಾಡಲಾಗಿತ್ತು.