ಕುರುಂಜಿ ವೆಂಕಟರಮಣ ಗೌಡ ಪುತ್ಥಳಿ ಅನಾವರಣ
Team Udayavani, Dec 12, 2018, 11:10 AM IST
ಸುಳ್ಯ : ಸಮಾಜ ಕಾರ್ಯದ ಸಂಕಲ್ಪದೊಂದಿಗೆ ಕುರುಂಜಿ ವೆಂಕಟರಮಣ ಗೌಡ ಅವರು ನೀಡಿದ ಕೊಡುಗೆ ಅನನ್ಯ. ಬದುಕಿನಲ್ಲಿ ಸವಾಲು ಸ್ವೀಕರಿಸಿ ಸಾಧಿಸಬಹುದು ಎನ್ನುವುದಕ್ಕೆ ಅವರು ಉತ್ತಮ ಉದಾಹರಣೆ ಎಂದು ಕೇಂದ್ರ ವಾಣಿಜ್ಯ ಸಚಿವ ಸುರೇಶ್ ಪ್ರಭು ಹೇಳಿದರು.
ಡಾ| ಕುರುಂಜಿ ವೆಂಕಟರಮಣ ಗೌಡ ಸ್ಮಾರಕ ನಿರ್ಮಾಣ ಸಮಿತಿ ಆಶ್ರಯದಲ್ಲಿ ಮಂಗಳವಾರ ನಗರದ ಖಾಸಗಿ ಬಸ್ ನಿಲ್ದಾಣದ ಬಳಿ ಕುರುಂಜಿ ವೆಂಕಟರಮಣ ಗೌಡ ಅವರ ಪುತ್ಥಳಿ ಉದ್ಘಾಟಿಸಿದ ಬಳಿಕ ಕೆವಿಜಿ ಆಯುರ್ವೇದ ಕಾಲೇಜು ಸಭಾಂಗಣದಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಅಧಿಕಾರದ ಪದವಿ ಇಲ್ಲದಿದ್ದರೂ ಸಾಧನೆಗೆ ಅಡ್ಡಿಯಿಲ್ಲ ಎನ್ನುವ ಕೆವಿಜಿ ಅವರ ಅಚಲ ನಂಬಿಕೆಯಿಂದ ಇಂತಹ ಅಪೂರ್ವ ಕಾರ್ಯ ಸಾಕಾರಗೊಂಡಿದೆ. ಅವರನ್ನು ಪುತ್ಥಳಿ ರೂಪದಲ್ಲಿ ಭವಿಷ್ಯದ ಪೀಳಿಗೆಗೆ ನೆನಪಿಸುವ ಕಾರ್ಯ ನಡೆದಿರುವುದು ಶ್ಲಾಘನೀಯ ಎಂದರು.
ಸಂಸದ ನಳಿನ್ ಕುಮಾರ್ ಕಟೀಲು, ವೆಂಕಟರಮಣ ಗೌಡರು ಶಿಕ್ಷಣ ಕ್ಷೇತ್ರದ ನಕ್ಷತ್ರ. ಹಳ್ಳಿ ಮಕ್ಕಳು ಡಾಕ್ಟರ್, ಎಂಜಿನಿಯರ್ ಆಗಿದ್ದರೆ ಅದಕ್ಕೆ ಕಾರಣ ಕರ್ತರು. ಅವರ ನೆನಪು ಶಾಶ್ವತ ಎಂದರು. ಶಾಸಕ ಎಸ್. ಅಂಗಾರ ಕುರುಂಜಿ ಅವರ ಕುರಿತು ಮಾತನಾಡಿದರು. ತಾ.ಪಂ. ಅಧ್ಯಕ್ಷ ಚನಿಯ ಕಲ್ತಡ್ಕ, ನ.ಪಂ. ಅಧ್ಯಕ್ಷೆ ಶೀಲಾವತಿ ಮಾಧವ, ಕ್ಯಾಂಪ್ಕೋ ಅಧ್ಯಕ್ಷ ಎಸ್. ಆರ್. ಸತೀಶ್ಚಂದ್ರ, ಅಕಾಡೆಮಿ ಆಫ್ ಲಿಬರಲ್ ಎಜುಕೇಶನ್ ಅಧ್ಯಕ್ಷ ಡಾ| ಕೆ.ವಿ. ಚಿದಾನಂದ, ಕಾರ್ಯದರ್ಶಿ ಡಾ| ರೇಣುಕಾ ಪ್ರಸಾದ್ ಉಪಸ್ಥಿತರಿದ್ದರು. ಸಚಿವರನ್ನು ಸಮ್ಮಾನಿಸಲಾಯಿತು.
ಆಡ್ಕಾರು ವಿವೇಕಾನಂದ ವಿದ್ಯಾ ಸಂಸ್ಥೆಯ ವಿದ್ಯಾರ್ಥಿಗಳು ವಂದೇ ಮಾತರಂ ಗೀತೆ ಹಾಡಿದರು. ಡಾ| ಕುರುಂಜಿ ವೆಂಕಟರಮಣ ಗೌಡ ಸ್ಮಾರಕ ನಿರ್ಮಾಣ ಸಮಿತಿ ಕಾರ್ಯದರ್ಶಿ ಕೃಷ್ಣಪ್ರಸಾದ್ ಮಡ್ತಿಲ ಸ್ವಾಗತಿಸಿದರು. ಸುದರ್ಶನ ಪಾತಿಕಲ್ಲು ವಂದಿಸಿದರು. ಉಪನ್ಯಾಸಕಿ ಬೇಬಿ ವಿದ್ಯಾ ಮತ್ತು ಡಾ| ಗೀತಾ ದೊಪ ನಿರೂಪಿಸಿದರು.
ಸಚಿವರಿಗೆ ಸ್ವಾಗತ
ಹೆಲಿಕಾಪ್ಟರ್ ಮೂಲಕ ಆಗಮಿಸಿದ ಸಚಿವರನ್ನು ಬೆಳಗ್ಗೆ 10.15ಕ್ಕೆ ಕೆವಿಜಿ ಕ್ರೀಡಾಂಗಣದಲ್ಲಿ ನಿರ್ಮಿಸಲಾದ ಹೆಲಿಪ್ಯಾಡ್ನಲ್ಲಿ ಸ್ವಾಗತಿಸಲಾಯಿತು. ಅಲ್ಲಿಂದ ನೇರವಾಗಿ ಖಾಸಗಿ ಬಸ್ ನಿಲ್ದಾಣಕ್ಕೆ ಆಗಮಿಸಿ, ಕೆವಿಜಿ ಅವರ ಪುತ್ಥಳಿ ಲೋಕಾರ್ಪಣೆ ಮತ್ತು ಶಾಶ್ವತ ಕುಡಿಯುವ ನೀರಿನ ಯೋಜನೆ ಉದ್ಘಾಟಿಸಿದರು.
ಸಚಿವ ಸುರೇಶ್ ಪ್ರಭು ಅವರ ಪತ್ನಿ ಉಮಾ ಪ್ರಭು, ಸಂಸದ ನಳಿನ್ ಕುಮಾರ್ ಕಟೀಲು, ಶಾಸಕ ಎಸ್. ಅಂಗಾರ., ತಾ.ಪಂ. ಅಧ್ಯಕ್ಷ ಚಿನಿಯ ಕಲ್ತಡ್ಕ, ಡಾ| ಕೆ.ವಿ. ಚಿದಾನಂದ, ಡಾ| ರೇಣುಕಾಪ್ರಸಾದ್ ಕೆ.ವಿ., ತಹಶೀಲ್ದಾರ್ ಕುಂಞಮ್ಮ, ಶೋಭಾ ಚಿದಾನಂದ, ಕೃಷ್ಣಪ್ರಸಾದ್ ಮಡ್ತಿಲ, ಎಪಿಎಂಸಿ ಅಧ್ಯಕ್ಷ ಅಡ್ಡಂತ್ತಡ್ಕ ದೇರಣ್ಣ ಗೌಡ, ಅಕ್ಷಯ್ ಕೆ.ಸಿ., ಎಂಪಿ ಉಮೇಶ್ ಉಪಸ್ಥಿತರಿದ್ದರು.
ಸವಾಲು ಎದುರಿಸಿ
ಜೀವನದ ಪ್ರತಿ ಸವಾಲನ್ನು ಎದುರಿಸಿ ಮುನ್ನುಗ್ಗಬೇಕು. ದೇಶಕ್ಕೆ ಉತ್ತಮ ಪ್ರಜೆಗಳಾಗಿ ಭಾರತ ಮಾತೆಯ ಮಕ್ಕಳಾಗಿ ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದ ಸಚಿವ ಸುರೇಶ್ ಪ್ರಭು, ಕುರುಂಜಿ ವೆಂಕಟರಮಣ ಗೌಡ ಅವರಂತಹ ಆದರ್ಶ ವ್ಯಕ್ತಿಗಳು ಇನ್ನಷ್ಟು ಮಂದಿ ಸಮಾಜಕ್ಕೆ ಸಿಗುವಂತಾಗಲಿ ಎಂದು ಕೇಂದ್ರ ವಾಣಿಜ್ಯ ಸಚಿವ ಸುರೇಶ್ ಪ್ರಭು ಅವರು ಹೇಳಿದರು.