ಕುಕ್ಕೆ ಪರಿಸರ ಸ್ನೇಹಿ ತ್ಯಾಜ್ಯ ಘಟಕಕ್ಕೆ ಸಿಇಒ ಭೇಟಿ
Team Udayavani, Dec 19, 2018, 2:51 PM IST
ಸುಬ್ರಹ್ಮಣ್ಯ : ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳು ಕಸ ವಿಲೇವಾರಿ ಘಟಕ ಪರಿಶೀಲಿಸಿ ಮಾಲಿನ್ಯದ ಕುರಿತು ಅಂತಿಮ ಪರೀಕ್ಷಾ ವರದಿ ನೀಡಿದ ಬಳಿಕವಷ್ಟೆ ಘಟಕ ಕಾರ್ಯಾರಂಭ ಮಾಡಲು ಅವಕಾಶ ನೀಡುವಂತೆ ಜಿ.ಪಂ ಸಿಇಒ ಡಾ| ಸೆಲ್ವಮಣಿ ಆರ್. ಸೂಚಿಸಿದರು.
ದ.ಕ.ಜಿ.ಪಂ. ಹಾಗೂ ಸುಬ್ರಹ್ಮಣ್ಯ ಗ್ರಾ.ಪಂ. ವತಿಯಿಂದ ಗ್ರಾ.ಪಂ. ವ್ಯಾಪ್ತಿಯ ಇಂಜಾಡಿ ಬಳಿ ನಿರ್ಮಾಣವಾಗುತ್ತಿರುವ ಪರಿಸರಸ್ನೇಹಿ ತ್ಯಾಜ್ಯ ಘಟಕವನ್ನು ಸೋಮವಾರ ಸಂಜೆ ಅವರು ವೀಕ್ಷಿಸಿದರು. ಮಾಲಿನ್ಯ ತಡೆಗಟ್ಟುವ ನಿಟ್ಟಿನಲ್ಲಿ ತ್ಯಾಜ್ಯ ಘಟಕ ಸಮರ್ಪಕ ಕೆಲಸ ಮಾಡಬೇಕು ಎಂದರು ಬಳಿಕ ಮೆಟ್ರಿಕ್ ಪೂರ್ವ ಹಾಸ್ಟೆಲ್ ಹಾಗೂ ಸ್ಥಳೀಯ ಅಂಗನವಾಡಿ ಕೇಂದ್ರಕ್ಕೆ ತೆರಳಿ ಪರಿಶೀಲಿಸಿದರು. ತಾ.ಪಂ. ಇಒ ಡಾ| ಮಧುಕುಮಾರ್, ಗ್ರಾ.ಪಂ. ಅಧ್ಯಕ್ಷೆ ಸುಶೀಲಾ ಹೊಸಮನೆ, ತಾ.ಪಂ. ಸದಸ್ಯ ಅಶೋಕ್ ನೆಕ್ರಾಜೆ, ಗ್ರಾ.ಪಂ. ಕಾರ್ಯದರ್ಶಿ ಮೋನಪ್ಪ ಡಿ., ಗ್ರಾ.ಪಂ. ಸದಸ್ಯರಾದ ರಾಜೇಶ್ ಎನ್.ಎಸ್., ಪ್ರಶಾಂತ ಭಟ್ ಮಾಣಿಲ, ಭವಾನಿಶಂಕರ ಪೂಂಬಳ ಉಪಸ್ಥಿತರಿದ್ದರು.
ನುಡಿದಂತೆ ನಡೆದ ಸಿಇಒ
ಕುಕ್ಕೆ ಸುಬ್ರಹ್ಮಣ್ಯದಲ್ಲಿ ಪರಿಸರ ಸ್ನೇಹಿ ಕಸ ವಿಲೇವಾರಿ ತ್ಯಾಜ್ಯ ಘಟಕ ಕಾಮಗಾರಿ ನಡೆಯುತ್ತಿರುವ ಕುರಿತು ಉದಯವಾಣಿ ಸುದಿನ ವಿಸ್ತೃತ ವರದಿ ಪ್ರಕಟಿಸಿತ್ತು. ರಾಜ್ಯದಲ್ಲೆ ಪ್ರಥಮ ಘಟಕ ಎನ್ನುವ ಅಂಶವನ್ನು ಉಲ್ಲೇಖೀಸಲಾಗಿತ್ತು. ಈ ವೇಳೆ ಜಿ.ಪಂ ಸಿಇಒ ಅವರು ಸ್ಥಳಕ್ಕೆ ಬಂದು ಪರಿಶೀಲಿಸುವುದಾಗಿ ತಿಳಿಸಿದ್ದರು. ಕಸ ವಿಲೇವಾರಿ ತ್ಯಾಜ್ಯ ಘಟಕಕ್ಕೆ ಸೋಮವಾರ ಭೇಟಿ ನೀಡಿದರು.