ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿಯಿಂದ ಸಿಎಂ ಭೇಟಿ
Team Udayavani, Jan 14, 2019, 7:50 AM IST
ಬೆಳ್ತಂಗಡಿ: ಆದಿವಾಸಿ ಅಧಿಕಾರ್ ರಾಷ್ಟ್ರೀಯ ಮಂಚ್ನ ರಾಷ್ಟ್ರೀಯ ಸಂಚಾಲಕ, ತ್ರಿಪುರ ಸಂಸದ ಜಿತೇಂದ್ರ ಚೌಧರಿ ಅವರ ನೇತೃತ್ವದಲ್ಲಿ ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿಯು ಜ. 11 ರಂದು ಬೆಂಗಳೂರು ವಿಧಾನಸೌಧದಲ್ಲಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರನ್ನು ಭೇಟಿಯಾಗಿ ವಿವಿಧ ಬೇಡಿಕೆಗಳ ಕುರಿತು ಚರ್ಚಿಸಿದೆ.
ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿಯ ಸಂಚಾಲಕ ವೈ.ಕೆ. ಗಣೇಶ್, ಸಹ ಸಂಚಾಲಕರಾದ ಎಸ್.ವೈ. ಗುರುಶಾಂತ್, ಡಾ| ಕೃಷ್ಣಪ್ಪ ಕೊಂಚಾಡಿ, ಬೆಳ್ತಂಗಡಿ ತಾ| ಅಧ್ಯಕ್ಷ ವಸಂತ ನಡ, ಪ್ರ. ಕಾರ್ಯದರ್ಶಿ ಜಯಾನಂದ ಪಿಲಿಕಲ, ಸಂಚಾಲಕ ಶೇಖರ್ ಲಾೖಲ, ಉಪಾಧ್ಯಕ್ಷ ಸದಾಶಿವ ಧರ್ಮಸ್ಥಳ, ಜತೆ ಕಾರ್ಯದರ್ಶಿ ಲಕ್ಷ್ಮಣ ಆಲಂಗಾಯಿ, ಸುಂದರ ಮಲೆಕುಡಿಯ ಕಾಟಾಜೆ, ಸದಸ್ಯರಾದ ನಾರಾಯಣ ಮಲೆಕುಡಿಯ ಆಲಂಗಾಯಿ, ಯೋಗೀಶ್ ಬಾಂಜಾರು, ಕಿರಣ್ ಬಾಂಜಾರು ಭಾಗವಹಿಸಿದ್ದರು.
ಬೇಡಿಕೆ ಈಡೇರಿಕೆಗೆ ಚರ್ಚೆ
ಸಭೆಯಲ್ಲಿ ಬೆಳ್ತಂಗಡಿ ತಾಲೂಕಿನ ವಿಟ್ಠಲ್ ಮಲೆಕುಡಿಯ ಪ್ರಕರಣ ವಾಪಸ್, ಸುಂದರ ಮಲೆಕುಡಿಯ ಪ್ರಕರಣದಲ್ಲಿ ಪ. ಜಾತಿ/ಪಂಗಡಗಳ ದೌರ್ಜನ್ಯ ತಡೆ ಕಾಯ್ದೆ ಸೇರ್ಪಡೆ, ಜಮೀನಿನ ಹಕ್ಕುಪತ್ರ, ಕುದುರೆಮುಖ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯಲ್ಲಿ ರಸ್ತೆ, ವಿದ್ಯುತ್ ಸಂಪರ್ಕ, ಬಾಂಜಾರು ಮಲೆಕುಡಿಯ ಕಾಲನಿಗೆ ಪರ್ಯಾಯ ರಸ್ತೆ, ಆಶ್ರಮ ಶಾಲೆಗಳ ಉನ್ನತೀಕರಣ, ಅಧ್ಯಾಪಕ, ಸಿಬಂದಿಯ ಖಾಯಂ, ಉಚಿತ ನರ್ಸಿಂಗ್ ತರಬೇತಿಗೆ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಹಾಸ್ಟೆಲ್ ವ್ಯವಸ್ಥೆ ಮೊದಲಾದ 27 ಬೇಡಿಕೆಗಳ ಈಡೇರಿಕೆಗೆ ಚರ್ಚೆ ನಡೆಸಲಾಗಿದೆ.