ಕೊರೆವ ಚಳಿ: ಭರ್ಜರಿ ಗೇರು ಫಸಲಿನ ನಿರೀಕ್ಷೆ
Team Udayavani, Jan 15, 2019, 5:39 AM IST
ಬಡಗನ್ನೂರು : ಈ ಬಾರಿ ಚಳಿ ಸ್ವಲ್ಪ ಜೋರಾಗಿಯೇ ಇದೆ. ಮುಂಜಾನೆಯ ಕೊರೆವ ಚಳಿ ದೇಹವನ್ನೇ ನಡುಗಿಸುತ್ತಿದೆ. ಕಳೆದ ಎರಡು ವಾರಗಳಿಂದ ಚಳಿ ಅಧಿಕವಾಗಿದೆ. ಚಳಿ ಇದ್ದರೆ ಇಳುವರಿ ಅಧಿಕವಾಗುತ್ತದೆ. ಫಲ ವಸ್ತುಗಳ ಬೆಳೆಯೂ ಅಧಿಕವಾಗುತ್ತದೆ ಎನ್ನುವ ಆಶಾಭಾವನೆ ಕೃಷಿಕರಲ್ಲಿದೆ. ಹಾಗಾಗಿ ಈ ಬಾರಿಯ ಕೊರೆವ ಚಳಿ ಗೇರು ಸಹಿತ ಇತರ ಬೆಳೆಗಳಿಗೆ ಮಾತ್ರ ಟಾನಿಕ್ನಂತಿದೆ.
ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಚಳಿ ಸ್ವಲ್ಪ ಹೆಚ್ಚೇ ಇದೆ. ಚಳಿಗಾಲ ಆರಂಭವಾಗುತ್ತಿದ್ದಂತೆಯೇ ಗಿಡ, ಮರಗಳು ಹೂ ಬಿಟ್ಟು ಫಲ ನೀಡುವ ಮುನ್ಸೂಚನೆ ಕೊಡುತ್ತಿವೆ. ಬೆಳಗ್ಗಿನ ಜಾವ ಬೀಸುವ ಗಾಳಿ ಪರಾಗ ಕ್ರಿಯೆಗೂ ನೆರವಾಗುತ್ತದೆ. ಆದರೆ ಚಳಿಗಾಲದಲ್ಲಿ ಮೋಡದ ವಾತಾವರಣ ಮೂಡಿದ ಕೂಡಲೇ ಮಾವು, ಗೇರು ಮರಗಳಲ್ಲಿ ಅರಳಿದ ಹೂವುಗಳು ಮುರುಟಿ ಹೋಗುವ ಅಪಾಯವೂ ಇದೆ. ಇದರಿಂದ ಇಳುವರಿ ಕೂಡ ಕುಸಿಯುತ್ತದೆ. ಆದರೆ ಈ ಬಾರಿ ಇಲ್ಲಿಯವರೆಗೂ ಅಂತಹ ಸಮಸ್ಯೆ ಜಿಲ್ಲೆಯಲ್ಲಿ ಕಂಡುಬಂದಿಲ್ಲ. ಆದ್ದರಿಂದ ಗೇರು ಕೃಷಿಕನ ಮೊಗದಲ್ಲಿ ನಗುವಿನ ಅಲೆ ಮೂಡಿದೆ.
ಮಾವು, ಹಲಸು ಅತ್ಯಧಿಕ ಇಳುವರಿ
ಚಳಿಯ ಕಾರಣಕ್ಕೆ ಈ ಬಾರಿ ಮಾವು ಮತ್ತು ಹಲಸು ಹೆಚ್ಚು ಇಳುವರಿ ಕೊಡುವ ಸಾಧ್ಯತೆ ಇದೆ. ಬೆಳಗ್ಗೆ ಚಳಿ ಇದ್ದು, ಸೂರ್ಯ ನೆತ್ತಿಗೇರುತ್ತಿದ್ದಂತೆಯೇ ತಂಪು ಗಾಳಿ ಬೀಸುವ ಪ್ರಕ್ರಿಯೆ ಇದೆ. ಇದರಿಂದ ಸಾಧಾರಣ ಎಲ್ಲ ಜಾತಿಯ ಹಣ್ಣಿನ ಮರಗಳು ಚಿಗುರಲು ಕಾರಣವಾಗುತ್ತದೆ. ಮರಗಳು ಚಿಗುರಿದರೆ ಹೂ ಬಿಡುವುದು ನಿಶ್ಚಿತ ಎನ್ನುವುದು ರೈತರ ನಂಬಿಕೆ. ಕಳೆದ ಬಾರಿ ಚಳಿ ಇಲ್ಲದ ಕಾರಣ ಫಲವಸ್ತುಗಳ ಇಳುವರಿಯೂ ಕಡಿಮೆಯಾಗಿತ್ತು. ಕಾಟು ಮಾವು, ಹಾಗೂ ವಾಣಿಜ್ಯ ಬೆಳೆಗಳಾದ ಕಾಳುಮೆಣಸು ಈ ಬಾರಿ ಹೆಚ್ಚು ಇಳುವರಿ ಕೊಡುವ ಸಾಧ್ಯತೆ ನಿಚ್ಚಳವಾಗಿದೆ.
ಗೇರು ಕೃಷಿಗೆ ಕಾಡುವ ಟೀ ಸೊಳ್ಳೆ
ಚಳಿ ಇದ್ದು ಮೋಡ ಮುಸುಕಿದ ತಕ್ಷಣ ಟೀ ಜಾತಿಯ ಸೊಳ್ಳೆಯ ಸಂತಾನೋತ್ಪತ್ತಿಗೆ ಅನುಕೂಲಕರ ಸನ್ನಿವೇಶವನ್ನು ಉಂಟುಮಾಡುತ್ತದೆ. ಇಡೀ ಗೇರು ಮರಕ್ಕೆ ವ್ಯಾಪಿಸುವ ಈ ಸೊಳ್ಳೆಯು ಹೂವಿನ ಕಾಂಡದ ರಸ ಹೀರುತ್ತದೆ. ಇದರಿಂದಾಗಿ ಇಡೀ ಹೂ ಗೊಂಚಲು ಒಣಗಿ ಹೋಗುತ್ತದೆ. ಮೋಡದ ವಾತಾವರಣದಲ್ಲಿ ತೇವಾಂಶ ಹೆಚ್ಚಿರುವುದರಿಂದ ಶಿಲೀಂದ್ರ ವ್ಯಾಪಿಸುವುದು ಸಾಧ್ಯವಾಗುತ್ತದೆ ಎಂದು ಕೃಷಿ ವಿಜ್ಞಾನಿಗಳು ಹೇಳುತ್ತಾರೆ.
ಕೀಟ ಬಾಧೆ ಕಡಿಮೆ
ಮುಂಜಾವಿನಲ್ಲಿ ಬೀಸುವ ತಂಪಾದ ಗಾಳಿ ಮತ್ತು ಹಿತವಾದ ಚಳಿ, ಹಗಲಿನಲ್ಲಿ ಬಿರು ಬಿಸಿಲು ಇವು ಗೇರು ಫಸಲಿಗೆ ಉತ್ತಮವಾದ ವಾತಾವರಣವಾಗಿದೆ. ಪರಾಗಸ್ಪರ್ಶ ಕ್ರಿಯೆಯೂ ಇಂತಹ ಹವಾಮಾನದಲ್ಲಿಯೇ ಹೆಚ್ಚಾಗಿ ನಡೆಯುತ್ತದೆ. ಸದ್ಯಕ್ಕೆ ಜಿÇ್ಲೆಯ ಹೆಚ್ಚಿನ ಕಡೆ ಇಂತಹ ವಾತಾವರಣ ಇದೆ. ಈ ವಾತಾವರಣದಿಂದ ಕೀಟ ಬಾಧೆ ಕೂಡ ಕಡಿಮೆ ಇರುತ್ತದೆ. ಆದ್ದರಿಂದ ಫಸಲು ಉತ್ತಮ ಬರಲು ಸಾಧ್ಯ ಎಂದು ಎನ್ನುತ್ತಾರೆ ಪ್ರಗತಿಪರ ಗೇರು ಕೃಷಿಕ ಸತೀಶ್ ರೈ ಕರ್ನೂರು ಅವರು.
ಮೋಡ ಬಂದರೆ ನಷ್ಟ!
ಚಳಿಯ ವಾತಾವರಣದ ಮಧ್ಯೆ ಮೋಡ ಕವಿದ ವಾತಾವರಣ ಕಂಡು ಬಂದಲ್ಲಿ ಅರಳಿದ ಹೂವು ಕಮರಿ ಹೋಗುತ್ತದೆ. ಇದರಿಂದ ಬಹುತೇಕ ಕಾಡು ಉತ್ಪನ್ನಗಳು, ವಾಣಿಜ್ಯ ಬೆಳೆಗಳು ಹಾನಿಗೀಡಾಗುತ್ತವೆ. ಈ ಬಾರಿ ಇದುವರೆಗೂ ಆ ರೀತಿಯ ವಾತಾವರಣ ಕಂಡುಬಂದಿಲ್ಲವಾದ್ದರಿಂದ ಬಹುತೇಕ ಹೂ ಬಿಟ್ಟ ಮರಗಳು ಸಿಂಗಾರಗೊಂಡಂತೆ ಗೋಚರಿಸುತ್ತಿದೆ.
ಈ ಬಾರಿ ಬಂಪರ್!
ಚಳಿಯ ವಾತಾವರಣದಿಂದ ತೋಟಗಾರಿಕಾ ಬೆಳೆಗಳು, ಕಾಡು ಹಣ್ಣು ಹಂಪಲುಗಳು ಈ ಬಾರಿ ಬಂಪರ್ ಬೆಳೆ ಕೊಡುವ ಸಾಧ್ಯತೆ ಇದೆ. ಚಳಿಯ ಜತೆ ತಂಪು ಗಾಳಿ ಉತ್ತಮ ವಾತಾವರಣ ಸೃಷ್ಟಿಸಿದೆ. ಪೃಕೃತಿಗೆ ಇದರಿಂದ ತುಂಬಾ ಉಪಯೋಗವಾಗಲಿದೆ. ಬೆಳಗ್ಗೆ, ಮಧ್ಯಾಹ್ನ ಮತ್ತು ಸಂಜೆ ವೇಳೆ ಬೀಸುವ ತಂಪು ಗಾಳಿ ಪೃಕೃತಿಗೆ ದೊರೆಯುವ ದೊಡ್ಡ ಮಟ್ಟದ ಸಂಪತ್ತಾಗಿದೆ.
ನಯೀಮ್ ಹುಸೇನ್
ಸಹಾಯಕ ಕೃಷಿ ನಿರ್ದೇಶಕರು, ಪುತ್ತೂರು
ಫಸಲಿಗೆ ಒಳ್ಳೆಯದು
ನನ್ನಲ್ಲಿ 6 ಎಕರೆಯಲ್ಲಿ ಸುಮಾರು 1,200 ಗೇರು ಗಿಡ ಇದೆ. ವರ್ಷದಲ್ಲಿ ಸರಾಸರಿ 25 ಕ್ವಿಂಟಾಲ್ ಗೇರು ಬೀಜ ಪಡೆಯುತ್ತೇನೆ. ಈಗಾಗಲೇ ಫಸಲು ಬರಲು ಆರಂಭವಾಗಿದೆ. ಚಳಿಯ ವಾತಾವರಣ ಗೇರು ಫಸಲಿಗೆ ಒಳ್ಳೆಯದು. ಗೇರು ತೋಟವನ್ನುಸ್ವಚ್ಛವಾಗಿಟ್ಟುಕೊಳ್ಳುವುದು ಮುಖ್ಯ. ಬರಡುಭೂಮಿಯಲ್ಲೂ ಗೇರು ಕೃಷಿ ಮಾಡಿದರೆ ಉತ್ತಮ ಲಾಭ ಪಡೆಯಬಹುದು.
– ಶಶಿಕುಮಾರ್ ರೈ ಕರ್ನೂರು
ಗೇರು ಕೃಷಿಕ
•ದಿನೇಶ್ ಬಡಗನ್ನೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Election Commission: ಮೋದಿ, ರಾಹುಲ್ ವಿರುದ್ಧ ದೂರು: ಚುನಾವಣಾ ಆಯೋಗ ನೋಟಿಸ್
IPL: ಎಲ್ಲೆ ಮೀರಿ ವಿಕೆಟ್ ಸಂಭ್ರಮಾಚರಣೆಡೆಲ್ಲಿ ವೇಗಿ ರಸಿಕ್ ಸಲಾಂಗೆ ಛೀಮಾರಿ
IPL: ಇಂಪ್ಯಾಕ್ಟ್ ಪ್ಲೇಯರ್ ನಿಯಮಕ್ಕೆ ಅಕ್ಷರ್ ಪಟೇಲ್ ಕೂಡ ವಿರೋಧ
Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ
Sumalatha Ambareesh: ಟ್ವೀಟ್ನಲ್ಲಿ ಸಂಸದೆ ಸುಮಲತಾ ಅಂಬರೀಶ್ ವಿವೇಕದ ಪಾಠ