‘ಭಾಷೆ ರಕ್ಷಣೆಗೆ ಚುರುಕು ಮುಟ್ಟಿಸುವ ಕಾರ್ಯ’
Team Udayavani, Jan 17, 2019, 6:45 AM IST
ಬೆಳ್ತಂಗಡಿ (ಪಾಂಡ್ಯಪ್ಪ ಅರಸರಾದ ಕೃಷ್ಣರಾಜ ಅಜಿಲ ವೇದಿಕೆ, ಅಳದಂಗಡಿ) : ಕಾಟಾಚಾರದ ಸಂಸ್ಕೃತಿ ಸಂರಕ್ಷಣೆ ನಾಟಕದಿಂದ ಕನ್ನಡ ಭಾಷೆಯ ಬೆಳವಣಿಗೆ ಅಸಾಧ್ಯವಾಗಿದ್ದು, ಹಿರಿಯ ಸಾಹಿತಿಗಳಿಂದ ಮಾತ್ರ ಅದು ಸಾಧ್ಯವಾಗಿದೆ. ಸಾಹಿತ್ಯ ಸಮ್ಮೇಳನಗಳು ಭಾಷೆ ರಕ್ಷಣೆಗೆ ಚುರುಕು ಮುಟ್ಟಿಸುವ ಕಾರ್ಯ ಮಾಡುತ್ತಿವೆ ಎಂದು ಬಂಟ್ವಾಳದ ಸಂಚಯಗಿರಿ ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರದ ಅಧ್ಯಕ್ಷ ಪ್ರೊ| ತುಕಾರಾಮ ಪೂಜಾರಿ ಹೇಳಿದರು.
ಅವರು ಬುಧವಾರ ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಬೆಳ್ತಂಗಡಿ ತಾ| ಘಟಕದ ವತಿಯಿಂದ ಅಳದಂಗಡಿ ಶ್ರೀ ಸೋಮನಾಥೇಶ್ವರೀ ದೇವಸ್ಥಾನದ ವಠಾರದ ಅರುವ ನಾರಾಯಣ ಶೆಟ್ಟಿ ಸಭಾಂಗಣದಲ್ಲಿ ಆಯೋಜನೆಗೊಂಡಿದ್ದ ತಾ| 16ನೇ ಕನ್ನಡ ಸಾಹಿತ್ಯ ಸಮ್ಮೇಳನ ವನ್ನು ಉದ್ಘಾಟಿಸಿ ಮಾತನಾಡಿದರು.
ಬೆನ್ಯಹೂದ ಅವರು ಹಿಬ್ರು ಭಾಷೆಗೆ ಮರುಜೀವ ನೀಡಿದಂತೆ ಭಾಷೆಯನ್ನು ಬೆಳಗುವವರ ಅನಿವಾರ್ಯ ಎದುರಾಗಿದೆ. ಪಂಜೆಯವರು ಹೇಳಿದಂತೆ ಅಧ್ಯಾಪಕರ ಕೂಡುವಿಕೆಯಲ್ಲಿ ಸಮ್ಮೇಳನ ಗಳು ನಡೆದರೆ ಅದು ಸಾವಿ ರಾರು ವಿದ್ಯಾರ್ಥಿಗಳಿಗೆ ತಲು ಪುತ್ತದೆ. ಸಾಹಿತ್ಯಿಕ ಎರಡು ಸಾಲುಗಳಿಗೆ ಇಡೀ ನಾಡಿನ ಸೌಂದರ್ಯ ವರ್ಣಿಸುವ ಅಗಾಧವಾದ ಶಕ್ತಿ ಇದೆ ಎಂದು ಸಾಂಸ್ಕೃತಿಕವಾಗಿ ಅಜಿಲ ಅರಸರ ಕೊಡುಗೆಯನ್ನು ವಿವರಿಸಿದರು.
ಚಾರುಮುಡಿ ಸಂಚಿಕೆ ಬಿಡುಗಡೆ
ಚಾರುಮುಡಿ ಸಂಚಿಕೆಯನ್ನು ಬಿಡುಗಡೆಗೊಳಿಸಿದ ತಾ.ಪಂ. ಅಧ್ಯಕ್ಷೆ ದಿವ್ಯಜ್ಯೋತಿ ಮಾತನಾಡಿ, ಹಿರಿಯ ಸಾಹಿತಿಗಳು ಕನ್ನಡದ ಸಾಹಿತ್ಯವನ್ನು ಮುಂದಿನ ಜನಾಂಗಕ್ಕೆ ತಿಳಿಯಪಡಿಸುವ ಕಾರ್ಯವನ್ನು ಮಾಡಬೇಕಿದೆ ಎಂದರು.
ಹಿರಿಯ ಸಾಹಿತಿ ಪ. ರಾಮಕೃಷ್ಣ ಶಾಸ್ತ್ರಿ ಅವರು ಸಮ್ಮೇಳನಾಧ್ಯಕ್ಷರಾಗಿದ್ದರು. ಕಸಾಪ ಜಿಲ್ಲಾಧ್ಯಕ್ಷ ಪ್ರದೀಪಕುಮಾರ್ ಕಲ್ಕೂರ ಆಶಯದ ನುಡಿಗಳನ್ನಾಡಿದರು. ನಿಕಟಪೂರ್ವ ಸಮ್ಮೇಳನಾಧ್ಯಕ್ಷ ಎಂ ಬಾಬು ಶೆಟ್ಟಿ ನಾರಾವಿ, ಕಸಾಪ ಜಿಲ್ಲಾ ಗೌರವ ಕಾರ್ಯದರ್ಶಿಗಳಾದ ಡಾ| ಎಂ.ಪಿ. ಶ್ರೀನಾಥ್, ಬಿ. ತಮ್ಮಯ್ಯ, ಬಂಟ್ವಾಳ ಘಟಕದ ಅಧ್ಯಕ್ಷ ಕೆ. ಮೋಹನ ರಾವ್, ಪುತ್ತೂರು ಘಟಕದ ಅಧ್ಯಕ್ಷ ಬಿ. ಐತಪ್ಪ ನಾಯ್ಕ, ಸ್ವಾಗತ ಸಮಿತಿ ಅಧ್ಯಕ್ಷ ಶಿವಪ್ರಸಾದ್ ಅಜಿಲ ಮೊದಲಾದವರಿದ್ದರು.
ಅಳದಂಗಡಿ ಗ್ರಾ.ಪಂ. ಅಧ್ಯಕ್ಷ ಸತೀಶ ಮಿತ್ತಮಾರು ಧ್ವಜಾರೋಹಣ ನೆರವೇರಿಸಿದರು. ಅಳದಂಗಡಿ ಅರಮನೆಯ ತಿಮ್ಮಣ್ಣರಸರಾದ ಡಾ| ಪದ್ಮಪ್ರಸಾದ ಅಜಿಲ ಅವರು ಸ್ವಾಗತಿಸಿ, ಕಸಾಪ ತಾಲೂಕು ಘಟಕದ ಅಧ್ಯಕ್ಷ ಡಾ| ಬಿ. ಯಶೋವರ್ಮ ಪ್ರಸ್ತಾವಿಸಿದರು.
ಡಾ| ಕೃಷ್ಣಾನಂದ ಗರ್ಡಾಡಿ ಅವರು ಅಧ್ಯಕ್ಷರನ್ನು ಪರಿಚಯಿಸಿದರು. ಘಟಕದ ಕಾರ್ಯದರ್ಶಿ ರಾಮಕೃಷ್ಣ ಭಟ್ ಬೆಳಾಲು ವಂದಿಸಿದರು. ಸ್ವಾಗತ ಸಮಿತಿಯ ಕೋಶಾಧ್ಯಕ್ಷ ಪ್ರಕಾಶ್ ಶೆಟ್ಟಿ ನೊಚ್ಚ ನಿರೂಪಿಸಿದರು.
ಮೆರವಣಿಗೆ
ಸಮ್ಮೇಳನದ ಆರಂಭದಲ್ಲಿ ಶ್ರೀ ಸೋಮನಾಥೇಶ್ವರೀ ದೇವಸ್ಥಾನದಿಂದ ಮೆರವಣಿಗೆ ನಡೆಯಿತು. ಬೆಳಗ್ಗೆ ಉಪಾಹಾರ, ಮಧ್ಯಾಹ್ನ ಊಟ, ಸಂಜೆ ಚಹಾದ ವ್ಯವಸ್ಥೆ ಇತ್ತು.
ಮುದ ನೀಡಿದ ಊಟೋಪಚಾರ
ಸಾಹಿತ್ಯ ಸಮ್ಮೇಳನದಲ್ಲಿ ಸಾಹಿತ್ಯಾಭಿಮಾನಿಗಳಿಗೆ ಬೆಳಗ್ಗೆ, ಮಧ್ಯಾಹ್ನ, ಸಂಜೆ ಆಯೋಜಿಸಿದ್ದ ಊಟೋಪಚಾರ ಬಗ್ಗೆ ಮೆಚ್ಚುಗೆಯ ಮಾತುಗಳು ಕೇಳಿಬಂದಿವೆ. ಜತೆಗೆ ಸ್ವಯಂಸೇವಕರು ಆಗಾಗ ಸಭಾಂಗಣದೊಳಗಿನ ಸಭಿಕರಿಗೆ ನೀಡುತ್ತಿದ್ದ ಮಜ್ಜಿಗೆ ಮುದ ನೀಡಿದೆ. ಬೆಳಗ್ಗೆ ಉಪ್ಪಿಟ್ಟು, ಅವಲಕ್ಕಿ, ಶಿರಾ, ಚಾ ಹಾಗೂ ಕಾಫಿ, ಮಧ್ಯಾಹ್ನ ಊಟಕ್ಕೆ ಉಪ್ಪಿನಕಾಯಿ, ಕಡ್ಲೆ-ತೊಂಡೆ ಪಲ್ಯ, ಟೊಮೆಟೋ ಸಾರು, ಬದನೆ ಸಾಂಬಾರು, ಸೌತೆಕಾಯಿ ಹುಳಿ, ಅನ್ನ, ಕಡ್ಲೆಬೇಳೆ-ಸಾಗಕ್ಕಿ ಪಾಯಸ, ಕಡಿ, ಮಜ್ಜಿಗೆ, ಸಂಜೆಯ ವೇಳೆ ಚಟ್ಟಂಬಡೆ, ಚಾ, ಕಾಫಿ ನೀಡಲಾಯಿತು.
ಸರಕಾರದಿಂದ ಭಾಷೆ ರಕ್ಷಣೆಯ ನಾಟಕ
ಪ್ರಸ್ತುತ ದಿನಗಳಲ್ಲಿ ಸರಕಾರವೇ ಸಾವಿರಾರು ಆಂಗ್ಲ ಮಾಧ್ಯಮ ಶಾಲೆ ಗಳಿಗೆ ಅನುಮತಿ ಕೊಟ್ಟು ಭಾಷೆಯ ರಕ್ಷಣೆಯ ನಾಟಕವಾಡುತ್ತಿದೆ. ಹೀಗಾಗಿ ರಾಜಕಾರಣಿಗಳಿಂದ ಭಾಷೆಯ ಕುರಿತು ಹೆಚ್ಚಿನ ನಿರೀಕ್ಷೆ ಇಟ್ಟುಕೊಳ್ಳುವುದು ಕಷ್ಟ. ಕನ್ನಡವು ಶಾಸ್ತ್ರೀಯ ಭಾಷೆಯಾಗಿದ್ದು, ಆಗ ಇತ್ತೀಚೆಗೆ ಬಂದ ಭಾಷೆಗಳು ಅದಕ್ಕೆ ಸವಾಲಾಗಿ ಪರಿಣಮಿಸಿವೆ.
– ಪ್ರೊ| ತುಕಾರಾಮ ಪೂಜಾರಿ, ಅಧ್ಯಕ್ಷರು
ಸಂಚಯಗಿರಿ ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರ, ಬಂಟ್ವಾಳ