ಕೇರಳ ಸರಕಾರದಿಂದ ಗೋಡಂಬಿಗೆ ದರ ನಿಗದಿ
Team Udayavani, Jan 23, 2019, 8:09 AM IST
ಪುತ್ತೂರು : ಕೇರಳ ಸರಕಾರ ಗೇರುಬೀಜಕ್ಕೆ ಬೋರ್ಡ್ ದರವನ್ನು ಈ ಬಾರಿಯೂ ಶೀಘ್ರ ನಿಗದಿ ಮಾಡಲಿದೆ. ಕಳೆದ ವರ್ಷ 130 ರೂ. ಬೋರ್ಡ್ ದರ ನಿಗದಿ ಮಾಡ ಲಾಗಿತ್ತು. ಇದರಿಂದ ಕರ್ನಾಟಕ ರಾಜ್ಯದ ಗೇರು ಬೆಳೆಗಾರರಿಗೂ ಸ್ಥಿರ ಧಾರಣೆ ಪಡೆ ಯಲು ನೆರವಾಗಲಿದೆ ಎಂದು ಕೇರಳ ಸರಕಾರದ ಮೀನುಗಾರಿಕೆ, ಬಂದರು ಎಂಜಿನಿ ಯರಿಂಗ್ ಹಾಗೂ ಗೋಡಂಬಿ ಉದ್ಯಮ ಸಚಿವೆ ಜೆ. ಮರ್ಸಿಕುಟ್ಟಿ ಅಮ್ಮ ಹೇಳಿದರು.
ಪುತ್ತೂರು ಗೇರು ಸಂಶೋಧನಾ ನಿರ್ದೇಶನಾಲಯದಲ್ಲಿ ಮಂಗಳವಾರ ಆಯೋಜಿಸಲಾದ ಗೇರು ದಿನದಲ್ಲಿ ಬೆಳೆಗಾರರ ಜತೆ ಸಂವಾದದಲ್ಲಿ ಮಾತನಾಡಿದರು.
ದರ ನಿಗದಿಪಡಿಸಬೇಕು
ನಿವೃತ್ತ ನಿರ್ದೇಶಕ ಪಿ.ಕೆ.ಎಸ್. ಭಟ್ ಮಾತನಾಡಿ, ಕೃಷಿಯ ವೆಚ್ಚವನ್ನು ಪರಿಗಣಿಸಿ ನಿರ್ದಿಷ್ಟ ದರ ನಿಗದಿಪಡಿಸಬೇಕು. ಇದಕ್ಕಾಗಿ ಹೋರಾಟವನ್ನೂ ಮಾಡಿದ್ದೇವೆ ಎಂದರು. ಗೇರು ಸಂಶೋಧನ ನಿರ್ದೇಶನಾಲಯದ ಕೆಲಸಗಳ ಕುರಿತು ಮೆಚ್ಚುಗೆ ವ್ಯಕ್ತಪಡಿಸಿ, ಗೇರು ಉತ್ತಮ ಆಹಾರ ಉತ್ಪನ್ನ ಆಹಾರ. ರೈತರು ದೊಡ್ಡ ವಿಜ್ಞಾನಿಗಳು ಎಂದರು.
ಗ್ರಾಮಗಳಿಗೆ ಬನ್ನಿ
ಕೃಷಿಕ ಆರ್.ಕೆ. ನಾಯಕ್ ಮಾತನಾಡಿ, ಇಲ್ಲಿನ ವಿಜ್ಞಾನಿಗಳು ಬೆಳೆಗಾರರ ಸ್ನೇಹಿ ಇದ್ದಾರೆ. ಮುಂದಕ್ಕೆ ಅವರು ಗ್ರಾಮಗಳಿಗೂ ಬರ ಬೇಕು. ಇದರಿಂದ ಬೆಳೆಗಾರರಿಗೆ ಆತ್ಮ ಸ್ತೈರ್ಯ ಸಿಗುತ್ತದೆ. ಗೇರು ಬೀಜ ಆಹಾರ ಉತ್ಪನ್ನ ಆಗಿರುವುದರಿಂದ ಪ್ರಾಕೃತಿಕ ಕೀಟ ನಾಶಕಗಳ ಬಳಕೆಗೆ ಸಂಶೋಧನೆ ನಡೆಯ ಬೇಕು ಎಂದು ಹೇಳಿದರು.
ತಿಂಗಳ ತರಬೇತಿ
ಮೊಟ್ಟೆತ್ತಡ್ಕ ಗೇರು ಸಂಶೋಧನಾ ನಿರ್ದೇಶ ನಾಲಯದ ನಿರ್ದೇಶಕ ಡಾ| ಎಂ.ಜಿ. ನಾಯಕ್ ಮಾತನಾಡಿ, ಕೇಂದ್ರ ಸರಕಾರದ ಸ್ಕಿಲ್ ಇಂಡಿಯಾ ಯೋಜನೆಯಲ್ಲಿ ಗೇರು ಕೃಷಿಯ ಕುರಿತು 1 ತಿಂಗಳ ತರಬೇತಿಯನ್ನು ಮಾರ್ಚ್ ಅಥವಾ ಎಪ್ರಿಲ್ ತಿಂಗಳಲ್ಲಿ ನಡೆಸಲಾಗುವುದು. ಇದರಲ್ಲಿ 25 ಮಂದಿಗೆ ತರಬೇತಿ ಪಡೆಯಲು ಅವಕಾಶ ಕಲ್ಪಿಸಲಾಗುತ್ತದೆ ಎಂದರು. ಕೃಷಿಕರಾದ ಮೋನಪ್ಪ ಕರ್ಕೇರ, ದೇರಣ್ಣ ರೈ, ಅನಂತರಾಮ ಹೇರಳೆ, ದೇವಿಪ್ರಸಾದ್ ಕಲ್ಲಾಜೆ ಸಂವಾದದಲ್ಲಿ ಪಾಲ್ಗೊಂಡರು.
ಪ್ರಮುಖಾಂಶಗಳು
•ಹೊಸ ತಳಿಗಳು ಬೇರೆ ಬೇರೆ ಪ್ರದೇಶಗಳ ಮಣ್ಣು, ವಾತಾವರಣಕ್ಕೆ ಹೊಂದಿಕೊಂಡು ಫಲ ನೀಡುವುದರಿಂದ ಪ್ರಾಯೋಗಿಕ ಪರಿಶೀಲನೆ ದೃಷ್ಟಿಯಿಂದ ಬೇರೆ ಬೇರೆ ಪ್ರದೇಶಗಳಿಗೆ ನೀಡಬೇಕು.
•ಯುವ ಸಮುದಾಯ ಕೃಷಿಯಲ್ಲಿ ತೊಡಗಿಸಿಕೊಳ್ಳುವ ನಿಟ್ಟಿನಲ್ಲಿ ಪ್ರೋತ್ಸಾಹಕವಾಗಿ ಮಾಸಿಕ ಗೌರವ ಧನ ನೀಡುವ ಪ್ರಯತ್ನ ಆಗಬೇಕು.
•ಕೃಷಿಕ ಬೆಳೆದ ಬೆಳೆಗೆ ವೆಚ್ಚವನ್ನು ಪರಿಗಣಿಸಿ ಸರಿಯಾದ ದರ ಸಿಗಬೇಕು ಮೊದಲಾದವುಗಳ ಕುರಿತು ಚರ್ಚೆ ನಡೆಯಿತು.
•ಫಾರ್ಮರ್ ಪ್ರೊಡ್ಯೂಸಿಂಗ್ ಆರ್ಗನೈಸೇಶನ್ ನೋಂದಣಿ ಪ್ರಕ್ರಿಯೆ ನಡೆಯುತ್ತಿದ್ದು, ಇದಕ್ಕೆ ಬೆಳೆಗಾರರ ಕಡೆಯಿಂದ ಸಹಕಾರ ಬೇಕು.