ದಾಳಿಗೆ ಖಂಡನೆ; ಹುತಾತ್ಮ ಯೋಧರಿಗೆ ಶ್ರದ್ಧಾಂಜಲಿ
Team Udayavani, Feb 16, 2019, 5:33 AM IST
ಪುತ್ತೂರು: ಜಮ್ಮು- ಕಾಶ್ಮೀರದ ಅವಂತಿಪೊರಾದಲ್ಲಿ ಹುತಾತ್ಮರಾದ ಯೋಧರಿಗೆ ಪುತ್ತೂರಿನ ಮಿನಿ ವಿಧಾನಸೌಧದ ಎದುರು ಇರುವ ಅಮರ್ ಜವಾನ್ ಜ್ಯೋತಿ ಸ್ಮಾರಕದ ಬಳಿ ಶ್ರದ್ಧಾಂಜಲಿ ಕಾರ್ಯಕ್ರಮ ಆಯೋಜಿಸಲಾಯಿತು.
ಮಾಜಿ ಸೈನಿಕರು, ವಿದ್ಯಾರ್ಥಿಗಳು, ಜನಪ್ರತಿನಿಧಿಗಳು, ಶಿಕ್ಷಕರು, ದೇಶಪ್ರೇಮಿ ಸಾರ್ವಜನಿಕರನ್ನು ಒಳಗೊಂಡ ಸಾವಿರಾರು ಮಂದಿ ಒಂದುಗೂಡಿದ ಕಾರ್ಯಕ್ರಮದಲ್ಲಿ ಉಗ್ರರ ಪೈಶಾಚಿಕ ಕೃತ್ಯಕ್ಕೆ ಆಕ್ರೋಶ, ಖಂಡನೆ ವ್ಯಕ್ತವಾಯಿತು. ಹುತಾತ್ಮ ಯೋಧರ ಸೇವೆಯನ್ನು ಕೊಂಡಾಡುವ ಘೋಷಣೆಗಳನ್ನು ಕೂಗಲಾಯಿತು. ಸರಕಾರದ ಕಡೆಯಿಂದ ಸೂಕ್ತ ಕ್ರಮ ಕೈಗೊಳ್ಳುವಂತೆ ಆಗ್ರಹ ವ್ಯಕ್ತವಾಯಿತು. ಅಮರ್ ಜವಾನ್ ಜ್ಯೋತಿ ಸಂರಕ್ಷಣ ಸಮಿತಿಯಿಂದ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಪಾಠ ಕಲಿಯದವರು
ಮುಖ್ಯ ಭಾಷಣ ಮಾಡಿದ ನಿವೃತ್ತ ಏರ್ ವೈಸ್ ಮಾರ್ಷಲ್ ಬ್ರಿ| ಇತಿಹಾಸದಿಂದ ಪಾಠ ಕಲಿಯದವರು ಮತ್ತೆ ಇತಿಹಾಸವನ್ನು ಮರುಕಳಿಸುವಂತೆ ಮಾಡುತ್ತಾರೆ. ಇತಿಹಾಸದಿಂದ ಪಾಠ ಕಲಿಯಬೇಕೇ ವಿನಾ ಮರೆಯಬಾರದು ಎಂದು ಹೇಳಿದರು.
ಪಾಕಿಸ್ಥಾನದ ಮನಸ್ಥಿತಿ
ಜಮ್ಮು ಕಾಶ್ಮೀರವನ್ನು ಭಾರತಕ್ಕೆ ಸಂಪೂರ್ಣ ಏರಿಸಿಕೊಳ್ಳುವ ನಿಟ್ಟಿನಲ್ಲಿ ಸರ್ದಾರ್ ವಲ್ಲಭಬಾಯ್ ಪಟೇಲ್, ಮೆನನ್ ಅವರು ನಡೆಸಿದ ಪ್ರಾಮಾಣಿಕ ಪ್ರಯತ್ನ ಕೈಗೂಡುವಂತೆ ಮಾಡುವಲ್ಲಿ ವಿಫಲವಾಗಿದ್ದು ಇಷ್ಟೆಲ್ಲ ಸಮಸ್ಯೆಗಳಿಗೆ ಕಾರಣವಾಗಿದೆ. ಗಝವಾ ಎ ಹಿಂದ್ ಸಾಕಾರಗೊಳಿಸಲು ಸಾಧ್ಯವಾಗಿಲ್ಲ ಎನ್ನುವ ಪಾಕಿಸ್ಥಾನೀಯರ ಮನಸ್ಥಿತಿ ಉಗ್ರ ಕೃತ್ಯಗಳಿಗೆ ಪ್ರೇರೇಪಿಸುತ್ತಿದೆ ಎಂದರು.
ಪುತ್ತೂರು ಶಾಸಕ ಸಂಜೀವ ಮಠಂದೂರು ಮಾತನಾಡಿ, ಇಂದು ಇಡೀ ದೇಶವೇ ದುಃಖತಪ್ತವಾಗಿದೆ. ನಿಮ್ಮ ಜತೆ ನಾವಿದ್ದೇವೆ ಎಂದು ಧೈರ್ಯ ತುಂಬುವ ಜತೆಗೆ ಭಯೋತ್ಪಾದನೆಯನ್ನು ದೂರಮಾಡುವ ಸಂಕಲ್ಪ ಮಾಡುವ ದಿನ ಇದು. ಒಬ್ಬ ಭಯೋತ್ಪಾದಕನಿಗೆ ಸಾವಿರಾರು ದೇಶಪ್ರೇಮಿಗಳು ಹುಟ್ಟಿಕೊಳ್ಳುತ್ತಾರೆ ಎನ್ನುವ ಸಂದೇಶವನ್ನು ನಾವೆಲ್ಲರೂ ನೀಡಬೇಕು ಎಂದು ಅವರು ಹೇಳಿದರು.
ಪುಷ್ಪಾರ್ಚನೆ
ಸೈನಿಕ ಆತ್ಮಕ್ಕೆ ಶಾಂತಿ ಕೋರಿ ಮೌನ ಪ್ರಾರ್ಥನೆ ಸಲ್ಲಿಸಲಾಯಿತು. ನಿವೃತ್ತ ಸೈನಿಕರು, ಸಾರ್ವಜನಿಕರು, ನೂರಾರು ಮಂದಿ ವಿದ್ಯಾರ್ಥಿಗಳು ಅಮರ್ ಜವಾನ್ ಜ್ಯೋತಿ ಹುತಾತ್ಮ ಸೈನಿಕರ ಸ್ಮಾರಕಕ್ಕೆ ಪುಷ್ಪಾರ್ಚನೆ ಮಾಡಿ ಗೌರವ ಸಲ್ಲಿಸಿದರು. ಪ್ರಸ್ತಾವಿಸಿ, ಸ್ವಾಗತಿಸಿದ ಅಂಬಿಕಾ ವಿದ್ಯಾಲಯದ ಸಂಚಾಲಕ ಸುಬ್ರಹ್ಮಣ್ಯ ನಟ್ಟೋಜ, ಉಗ್ರರ ದುಷ್ಕೃತ್ಯಕ್ಕೆ ತಕ್ಕ ಪಾಠ ಕಲಿಸುವ ನಿಟ್ಟಿನಲ್ಲಿ ಜಾತಿ, ಮತ ಭೇದ ಮರೆತು ಪ್ರಧಾನಿಯವರ ಶಕ್ತಿ ಬಲಪಡಿಸಬೇಕಿದೆ ಎಂದು ಹೇಳಿದರು. ನಿವೃತ್ತ ಪ್ರಾಧ್ಯಾಪಕ ಸುರೇಶ್ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು.
ನಮ್ಮ ಜವಾಬ್ದಾರಿ
ದೇಶಕ್ಕೆ ಸಮರ್ಥ ನಾಯಕ, ಸರಕಾರವನ್ನು ಕೊಡಬೇಕಾಗಿರುವುದು ಜನತೆಯ ಜವಾಬ್ದಾರಿ ಎಂದು ಹೇಳಿದ ರಮೇಶ್ ಕಾರ್ಣಿಕ್, ಯುದ್ಧಾಸ್ತ್ರಗಳನ್ನು ಆಮದು ಮಾಡಿ ಕೊಳ್ಳಬೇಕಾಗಿರುವುದು, ಯುದ್ಧ ಸಾಮಗ್ರಿಗಳ ಖರೀದಿ ಸಾರ್ವಜನಿಕ ಚರ್ಚೆಗೆ ಒಳ ಪಟ್ಟು ಕೆಸರೆರಚಾಟಕ್ಕೆ ಕಾರಣವಾಗುವುದು ಸೈನಿಕರಿಗೆ ದುಃಖ ತರುವ ವಿಚಾರ. ಯೋಧರಿಗೆ ಹಾನಿಯಾಗುವುದನ್ನು ಮರೆತವರಿಂದ ಮಾತ್ರ ಅವ್ಯವಹಾರ ಸಾಧ್ಯ ಎಂದರು.
ಧೈರ್ಯ ತುಂಬೋಣ
ಮಾಜಿ ಶಾಸಕಿ ಶಕುಂತಳಾ ಟಿ. ಶೆಟ್ಟಿ ಮಾತನಾಡಿ, ಬಲಿದಾನ ಮಾಡಿದ ಸೈನಿಕರ ಆತ್ಮಶಕ್ತಿಗೆ ಚಿರಶಾಂತಿ ಕೋರುವುದರ ಜತೆಗೆ ಅವರ ಕುಟುಂಬಿಕರಿಗೆ ಧೈರ್ಯ ತುಂಬುವ ಕೆಲಸವನ್ನು ನಾವೆಲ್ಲರೂ ಮಾಡಬೇಕಿದೆ ಎಂದರು. ಪುತ್ತೂರು ತಹಶೀಲ್ದಾರ್ ಡಾ| ಪ್ರದೀಪ್ ಕುಮಾರ್, ನಗರಸಭಾ ಪೌರಾಯುಕ್ತೆ ರೂಪಾ ಟಿ. ಶೆಟ್ಟಿ ಸೈನಿಕರಿಗೆ ನುಡಿನಮನ ಸಲ್ಲಿಸಿದರು.