ಕೈಗಾರಿಕೆ-ಉದಾರ ನೀತಿಗಳಿಂದ ಕೃಷಿ ಕ್ಷೇತ್ರ ಅತಂತ್ರ
Team Udayavani, Mar 12, 2018, 4:43 PM IST
ರಾಯಚೂರು: ಸರ್ಕಾರಗಳ ಕೈಗಾರಿಕೆ ನೀತಿ, ಉದಾರವಾದಿ ನೀತಿಗಳಿಂದಾಗಿ ದೇಶದ ಕೃಷಿ ವಲಯವು ಅತಂತ್ರಕ್ಕೆ ಸಿಲುಕುತ್ತಿದೆ ಎಂದು ಅಖೀಲ ಭಾರತೀಯ ಕ್ರಾಂತಿಕಾರಿ ಕಿಸಾನ್ ಸಭಾ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಪ್ರದೀಪಸಿಂಗ್ ಠಾಕೂರ್ ಕಳವಳ ವ್ಯಕ್ತಪಡಿಸಿದರು.
ನಗರದ ರಾಜೇಂದ್ರ ಗಂಜ್ ಆವರಣದ ಎಂ.ಎಂ.ಕಲಬುರ್ಗಿ ಹಾಗೂ ಗೌರಿ ಲಂಕೇಶ ವೇದಿಕೆಯಲ್ಲಿ ಆಯೋಜಿಸಿದ್ದ ಎಐಕೆಕೆಎಸ್ ಎರಡನೇ ರಾಷ್ಟ್ರೀಯ ಸಮ್ಮೇಳನ ಬಹಿರಂಗ ಸಭೆಯಲ್ಲಿ ಅವರು ಮಾತನಾಡಿದರು. ದೊಡ್ಡ ಮಟ್ಟದ ಹೋರಾಟಗಳಿಂದ ಪರ್ಯಾಯ ಕೃಷಿ ನೀತಿ ಜಾರಿಗೆ ಒತ್ತಡ ಹೇರಬೇಕಿದೆ. ಹಾಗೆಯೇ ಕೊಲೆಗಡುಕ ವಿಧ್ವಂಸಕಾರಿ, ಛಿದ್ರಕಾರಿ ಆರ್ಎಸ್ಎಸ್, ವಿಎಚ್ಪಿ ಸಂಘ ಪರಿವಾರ ಶಕ್ತಿಗಳನ್ನು ಹಿಮ್ಮೆಟ್ಟಿಸಲು ದೇಶದ ಜನ ಬೀದಿಗಿಳಿದು
ಹೋರಾಡಬೇಕಿದೆ. ದೇಶದಲ್ಲಿ ರೈತರ ಬದುಕು ದಿನೇದಿನೆ ಸಂಕಷ್ಟಕ್ಕೆ ಸಿಲುಕುತಿದ್ದು, ಇದಕ್ಕೆ ಸರ್ಕಾರಗಳ ನೀತಿ ಕಾರಣವಾಗಿದೆ. ಅಂಥ ನೀತಿಗಳ ವಿರುದ್ಧ ಸಂಘಟಿತ ಹೋರಾಟ ಅಗತ್ಯವಿದೆ ಎಂದರು.
ರೈತ ಸಂಘದ ರಾಜ್ಯ ಗೌರವಾಧ್ಯಕ್ಷ ಚಾಮರಸ ಮಾಲಿಪಾಟೀಲ ಮಾತನಾಡಿ, ದುಡಿಯುವ ವರ್ಗದ ಅಸಂತೋಷಕ್ಕೆ ಆಳುವ ದಲ್ಲಾಳಿ ವರ್ಗವೇ ನೇರ ಕಾರಣ. ರೈತರ ಎಲ್ಲ ರೀತಿಯ ಸಾಲದ ಹೊಣೆಯನ್ನು ಸರ್ಕಾರವೇ ಹೊರಬೇಕು. ರೈತರ ಬದುಕು ಸುಧಾರಣೆ ಆಗಬೇಕಾದರೆ ಸ್ವಾಮಿನಾಥನ್ ವರದಿ ಜಾರಿ ಆಗಲೇಬೇಕು. ಅದಕ್ಕೆ ಇಡೀ ದೇಶದ ರೈತರು ಒಗ್ಗೂಡುವ ಕಾಲ ಕೂಡಿ ಬಂದಿದೆ ಎಂದರು.
ಟಿಯುಸಿಐ ರಾಜ್ಯಾಧ್ಯಕ್ಷ ಆರ್.ಮಾನಸಯ್ಯ ಮಾತನಾಡಿ, ರೈತ ಕಾರ್ಮಿಕರ ಮೇಲೆ ಪ್ರಪಂಚ ನಿಂತಿದೆ. ಊಳುವವರಿಗೆ ಭೂಮಿ ಇಲ್ಲದೇ ವ್ಯವಸಾಯ ಎಂದೂ ಸ್ವಾವಲಂಬಿಯಲ್ಲ. ಚುನಾವಣೆಯಲ್ಲಿ ರೈತ, ಕಾರ್ಮಿಕ ಪರ ಹೋರಾಡುವ ನಾಯಕರನ್ನು ಬೆಂಬಲಿಸಿ ಎಂದು ಮನವಿ ಮಾಡಿದರು.
ಅಧ್ಯಕ್ಷತೆ ವಹಿಸಿದ್ದ ಎಐಕೆಕೆಎಸ್ ರಾಷ್ಟ್ರೀಯ ಅಧ್ಯಕ್ಷ ಬಾಬುರಾಮ ಶರ್ಮಾ ಮಾತನಾಡಿದರು. ಸಿಪಿಐ(ಎಂಎಲ್) ರೆಡ್ ಸ್ಟಾರ್ ಪಕ್ಷದ ರಾಜ್ಯ ಕಾರ್ಯದರ್ಶಿ ಬಿ.ರುದ್ರಯ್ಯ, ಎಐಕೆಕೆಎಸ್ ರಾಷ್ಟ್ರ ಕಾರ್ಯದರ್ಶಿ ತೇಜುರಾಮ್ ವಿದ್ರೋಹಿ, ಸಿಪಿಐ(ಎಂಎಲ್) ಜಿಲ್ಲಾ ಕಾರ್ಯದರ್ಶಿ ಕೆ.ನಾಗಲಿಂಗಸ್ವಾಮಿ, ಟಿಯುಸಿಐ ರಾಜ್ಯ ಉಪಾಧ್ಯಕ್ಷ ಚಿನ್ನಪ್ಪ ಕೊಟ್ರಕಿ, ಕರ್ನಾಟಕ ರೈತ ಸಂಘದ ರಾಜ್ಯ ಕಾರ್ಯದರ್ಶಿ ಡಿ.ಎಸ್.ನಿರ್ವಾಣಪ್ಪ ಮಾತನಾಡಿದರು.
ಎಐಕೆಕೆಎಸ್ ರಾಜ್ಯಾಧ್ಯಕ್ಷ ಡಿ.ಎಚ್. ಪೂಜಾರ ಪ್ರಾಸ್ತಾವಿಕ ಮಾತನಾಡಿದರು. ಜನಸಂಗ್ರಾಮ ಪರಿಷತ್ ಮುಖಂಡ
ರಾಘವೇಂದ್ರ ಕುಷ್ಟಗಿ ಸ್ವಾಗತಿಸಿದರು. ಕೇರಳದ ಕುಹಿಕಣಾರನ್, ತೆಲಂಗಾಣದ ತಿರುಪತಿ, ಆಂಧ್ರಪ್ರದೇಶದ ಡಿ.ಎಚ್.ರಂಗನಾಥ, ಓರಿಸ್ಸಾದ ಶಂಕರ ಸಾಹು, ಪಶ್ಚಿಮ ಬಂಗಾಳದ ಸಿಬುಗಿರಿ, ರಾಜಸ್ತಾನದ ಮಹೇಶ ಜಾಕರ್, ರೈತ ಸಂಘದ ಜಿಲ್ಲಾಧ್ಯಕ್ಷ ಜಿ.ಶೇಖರಯ್ಯ, ಹೇಮರಾಜ, ಹಟ್ಟಿ ಚಿನ್ನದ ಗಣಿ ಕಾರ್ಮಿಕರ ಸಂಘದ ಪ್ರಧಾನ ಕಾರ್ಯದರ್ಶಿ ಎಂ.ಡಿ.ಅಮೀರ್ ಅಲಿ, ಟಿಯುಸಿಐ ಜಿಲ್ಲಾಧ್ಯಕ್ಷ ಜಿ.ಅಮರೇಶ, ಲಕ್ಷ್ಮೀ ಹೂನೂರು, ಅಕ್ಷಯ, ಹನುಮಂತಮ್ಮ ಒಳಗೊಂಡು ರಾಷ್ಟ್ರ ಮತ್ತು ರಾಜ್ಯದ ವಿವಿಧ ಭಾಗದ ರೈತ ಮುಖಂಡರು ಉಪಸ್ಥಿತರಿದ್ದರು. ಕೆಆರ್ಎಸ್ ರಾಜ್ಯ ಉಪಾಧ್ಯಕ್ಷ ಶ್ರೀನಿವಾಸ ಕಂದೇಗಾಲ ನಿರೂಪಿಸಿದರು. ರಾಜ್ಯದ ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ ಸಾವಿರಾರು ರೈತರು ಸಮ್ಮೇಳನದ ಬಹಿರಂಗ ಸಭೆಯಲ್ಲಿ ಭಾಗವಹಿಸಿದ್ದರು.
ರೈತರು-ಕಾರ್ಮಿಕರ ಬೃಹತ್ ರ್ಯಾಲಿ ರಾಷ್ಟ್ರೀಯ ಸಮ್ಮೇಳನದ ಅಂಗವಾಗಿ ನಗರದಲ್ಲಿ ರೈತರು ಹಾಗೂ ಕಾರ್ಮಿಕ ಸಂಘಟನೆ ಸದಸ್ಯರು ಬೃಹತ್ ರ್ಯಾಲಿ ನಡೆಸಿದರು.
ಜಿಲ್ಲಾ ಕ್ರೀಡಾಂಗಣದಿಂದ ಅಂಬೇಡ್ಕರ ವೃತ್ತ, ಕೇಂದ್ರ ಬಸ್ ನಿಲ್ದಾಣ, ನಗರಸಭೆ, ಏಕಮೀನಾರ್ ರಸ್ತೆ, ಸೂಪರ್ ಮಾರ್ಕೆಟ್, ತೀನ್ ಖಂದಿಲ್, ಬಟ್ಟೆ ಬಜಾರ್, ಮಹಾವೀರ ವೃತ್ತ, ಚಂದ್ರಮೌಳೇಶ್ವರ ವೃತ್ತ, ಗಂಜ್ ರಸ್ತೆ ಮಾರ್ಗವಾಗಿ ಬಹಿರಂಗ ಸಭೆ ನಡೆಯುವ ರಾಜೇಂದ್ರ ಗಂಜ್ ಆವರಣಕ್ಕೆ ಮೆರವಣಿಗೆ ಆಗಮಿಸಿತು.
ಸಾವಿರಾರು ರೈತರು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ರೈತ ವಿರೋಧಿ ನೀತಿಗಳ ವಿರುದ್ಧ ಘೋಷಣೆ ಕೂಗಿದರು. ಬೃಹತ್ ರ್ಯಾಲಿಯಲ್ಲಿ ಎಐಕೆಕೆಎಸ್ ರಾಷ್ಟ್ರೀಯ ಅಧ್ಯಕ್ಷ ಬಾಬುರಾಮ ಶರ್ಮಾ, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಪ್ರದೀಪ್ಸಿಂಗ್ ಠಾಕೂರ್, ಟಿಯುಸಿಐ ರಾಜ್ಯಾಧ್ಯಕ್ಷ ಆರ್.ಮಾನಸಯ್ಯ, ಸಿಪಿಐ(ಎಂಎಲ್) ಪಕ್ಷದ ರಾಜ್ಯ ಕಾರ್ಯದರ್ಶಿ ಬಿ.ರುದ್ರಯ್ಯ, ರೈತ ಸಂಘದ ರಾಜ್ಯಾಧ್ಯಕ್ಷ ಡಿ.ಎಚ್. ಪೂಜಾರ್ ಸೇರಿ ಸಾವಿರಾರು ಜನ ಭಾಗವಹಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Ballari; ಪ್ರತ್ಯೇಕ ಸ್ಥಳಗಳಲ್ಲಿ ಕರಡಿಗಳ ದಾಳಿ: ಇಬ್ಬರಿಗೆ ತೀವ್ರ ಗಾಯ
Mangaluru: ಕಳವು ಮಾಡಿದ ಯುವಕನಿಗೆ ಹಲ್ಲೆ… ವೀಡಿಯೋ ವೈರಲ್
Udupi: ಕಾರು ಢಿಕ್ಕಿ… ಗಂಭೀರ ಗಾಯಗೊಂಡಿದ್ದ ಸ್ಕೂಟರ್ ಸವಾರ ಮೃತ್ಯು
LS ಚುನಾವಣೆ ಬಳಿಕ ಬಿಜೆಪಿ ರಾಜ್ಯ ನಾಯಕತ್ವ ಬದಲಾವಣೆ ಕೂಗು: ಯತ್ನಾಳ್
Belthangady: ನಿಯಂತ್ರಣ ತಪ್ಪಿ ವಿದ್ಯುತ್ ಕಂಬಕ್ಕೆ ಢಿಕ್ಕಿ ಹೊಡೆದು ಕಾರು, ತಪ್ಪಿದ ದುರಂತ