ಅಪಾಯಕ್ಕೆ ಆಹ್ವಾನಿಸುತ್ತಿವೆ ನದಿ ಸೇತುವೆಗಳು
Team Udayavani, Jul 23, 2018, 1:24 PM IST
ಲಿಂಗಸುಗೂರು: ನಿರ್ವಹಣೆ ಕೊರತೆಯಿಂದಾಗಿ ಕೃಷ್ಣಾ ನದಿಗೆ ನಿರ್ಮಿಸಿರುವ ತಾಲೂಕಿನ ಜಲದುರ್ಗ ಸೇತುವೆ ಮತ್ತು ಯಳಗುಂದಿ-ಯರಗೋಡೆ ಮಧ್ಯದ ಸೇತುವೆ ಅಪಾಯಕ್ಕೆ ಕಾದು ನಿಂತಿವೆ.
ಸೇತುವೆಯ ತಡೆಗೋಡೆಗಳು ಕಿತ್ತಿಹೋಗಿದ್ದು, ಕಬ್ಬಿಣದ ಸರಳುಗಳು ಕಾಣುತ್ತಿವೆ. ಈ ಸೇತುವೆ ಮೇಲೆ ಸಂಚರಿಸುವಾಗ ಚಾಲಕರು ಸ್ವಲ್ಪ ಎಚ್ಚರ ತಪ್ಪಿದರೂ ನದಿ ಪಾಲು ಆಗುವುದು ಖಚಿತ. ಎರಡೂ ಸೇತುವೆಗಳನ್ನು ಕೃಷ್ಣಾ ನದಿಗೆ ಅಡ್ಡಲಾಗಿ ನಿರ್ಮಿಸಲಾಗಿದೆ. ಜಲದುರ್ಗ ಸೇತುವೆ ಸುಮಾರು ವರ್ಷಗಳ ಹಿಂದೆ ನಿರ್ಮಿಸಿದ್ದು, ನಿರ್ವಹಣೆ ಕೊರತೆಯಿಂದಾಗಿ ಶಿಥಿಲಾವಸ್ಥೆ ತಲುಪುತ್ತಿದೆ. ಇನ್ನು ಯಳಗುಂದಿ ಸೇತುವೆ ಇತ್ತೀಚಿನ ವರ್ಷಗಳಲ್ಲಿ ನಿರ್ಮಿಸಲಾಗಿದೆ.
ಲಿಂಗಸುಗೂರು ಪಟ್ಟಣದಿಂದ ಹಾಲಭಾವಿ ಗ್ರಾಮದ ಮಾರ್ಗವಾಗಿ ಜಲದುರ್ಗ ಗ್ರಾಮದ ಹತ್ತಿರ ಕೃಷ್ಣಾ ನದಿಗೆ ಸೇತುವೆ ನಿರ್ಮಿಸಲಾಗಿದೆ. ಈ ಸೇತುವೆ ಹಂಚಿನಾಳ ಗ್ರಾಮಕ್ಕೆ ಸಂಪರ್ಕ ಕಲ್ಪಿಸುತ್ತದೆ. ಯಳಗುಂದಿ ಗ್ರಾಮದ ಹತ್ತಿರ ಸೇತುವೆ ನಿರ್ಮಿಸಲಾಗಿದ್ದು, ಈ ಸೇತುವೆ ಯರಗೋಡೆ, ಕಡದರಗಡ್ಡಿ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುತ್ತದೆ. ಇದಲ್ಲದೇ ಶೀಲಹಳ್ಳಿ ಬಳಿ ಕೃಷ್ಣಾ ನದಿಗೆ ನಿರ್ಮಿಸಿದ ಸೇತುವೆ ಮುಳಗಡೆಯಾಗಿದ್ದು, ಅಭದ್ರತೆಯ ಭೀತಿ ಕಾಡುತ್ತಿದೆ.
ಅಪಾಯ: ಸೇತುವೆ ಮೇಲೆ ಸಂಚರಿಸುವಾಗ ಅಪಾಯವಾಗದಿರಲಿ ಎಂದು ಸೇತುವೆಯುದ್ದಕ್ಕೂ ಎರಡೂ ಬದಿ ತಡೆಗೋಡೆ ನಿರ್ಮಿಸಲಾಗಿತ್ತು. ಆದರೆ ಕೆಲವೆಡೆ ಮುರಿದು ಬಿದ್ದಿದೆ. ಯಳಗುಂದಿ ಸೇತುವೆಯಲ್ಲೂ ಇದೇ ದುಸ್ಥಿತಿ ಇದೆ. ಇದರಿಂದ ಸೇತುವೆ ಮೇಲಿನ ಸಂಚಾರ ಅಪಾಯದ ವಲಯವಾಗಿ ಏರ್ಪಟ್ಟಿದೆ.
ಸೇತುವೆಗಳ ಮೇಲ್ಪದರ ಶಿಥಿಲಗೊಂಡು, ಕಬ್ಬಿಣದ ಸರಳುಗಳು ಕಾಣುತ್ತಿವೆ. ಶೀಲಹಳ್ಳಿ ಸೇತುವೆ ಮುಳುಗಡೆಯಾಗಿದ್ದರಿಂದ ಜಲದುರ್ಗ ಗ್ರಾಮದ ಮುಖಾಂತರವೇ ಸಂಚಾರ ಹೆಚ್ಚಾಗಿದೆ. ನೂರಾರು ವಾಹನಗಳು ಸಂಚರಿಸುತ್ತಿವೆ. ಕೆಲ ಗ್ರಾಮಗಳ ಗ್ರಾಮಸ್ಥರು ಈ ಎರಡು ಸೇತುವೆಗಳನ್ನು ಹೆಚ್ಚಾಗಿ ಅವಲಂಬಿಸಿದ್ದಾರೆ.
ಜಲದುರ್ಗದಲ್ಲಿ ಐತಿಹಾಸಿಕ ಕೋಟೆ ಇರುವುದರಿಂದ ಪ್ರವಾಸಿಗರ ಸಂಖ್ಯೆ ಹೆಚ್ಚುತ್ತಿದೆ. ಪ್ರವಾಸಿಗರು ಜಲದುರ್ಗ ಸೇತುವೆಯಲ್ಲೇ ಸಂಚರಿಸಬೇಕು. ವಾಹನ ದಟ್ಟಣೆ ಹೆಚ್ಚಿರುತ್ತದೆ. ತಡೆಗೋಡೆಯಿಲ್ಲದ ಸೇತುವೆ ಅನಾಹುತಕ್ಕೆ ಕಾದು ಕುಳಿತಂತಿದೆ. ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಸೇತುವೆಗಳ ದುರಸ್ತಿಗೆ ಮುಂದಾಗಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
ಯಳಗುಂದಿ, ಜಲದುರ್ಗ ಸೇತುವೆಗಳು ದುರಸ್ತಿಗಾಗಿ ಕಾದಿವೆ. ಸಂಬಂಧಪಟ್ಟ ಇಲಾಖೆಗಳು ನಿರ್ವಹಣೆ ಮಾಡಬೇಕಾಗಿತ್ತು.
ಆದರೆ ಈವರೆಗೂ ಮಾಡುತ್ತಿಲ್ಲ, ಸೇತುವೆಗಳಲ್ಲಿ ಅಪಾಯ ಸಂಭವಿಸುವವರೆಗೂ ದುರಸ್ತಿಗೆ ಮುಂದಾಗುವಂತೆ ಕಾಣುತ್ತಿಲ್ಲ.
ಸಂಗಣ್ಣ ಹಾಲಭಾವಿ, ಜಲದುರ್ಗ ನಿವಾಸಿ